ತೀವ್ರ ರಕ್ತಹೀನತೆಯ ಹಿಂದಿತ್ತು ಕೊಲನ್ ಕ್ಯಾನ್ಸರ್; ಸಮಯೋಚಿತ ಚಿಕಿತ್ಸೆಯಿಂದ 64 ವರ್ಷದ ಮಹಿಳೆಗೆ ಹೊಸ ಬದುಕು
ಮೈಸೂರು, ಜು. 3: ತೀವ್ರ ರಕ್ತಹೀನತೆ, ಹೊಟ್ಟೆನೋವು, ಆಯಾಸ ಹಾಗೂ ತಲೆಸುತ್ತು ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ 64 ವರ್ಷದ ನಿವೃತ್ತ ಶಿಕ್ಷಕಿ ಶ್ರೀಮತಿ ಭಾಗ್ಯಮ್ಮ ಅವರಿಗೆ ಸಮಯೋಚಿತ ರೋಗನಿರ್ಣಯ ಹಾಗೂ ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ಹೊಸ ಬದುಕು ದೊರೆತಿದೆ.
ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ಕಾವೇರಿ ಹಾರ್ಟ್ & ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾದ ವೇಳೆ ಅವರ ಹಿಮೋಗ್ಲೋಬಿನ್ ಪ್ರಮಾಣ ಕೇವಲ 4 ಗ್ರಾಂ/ಡಿಸಿಲೀಟರ್ ಇದ್ದು, ತಕ್ಷಣ ನಾಲ್ಕು ಯೂನಿಟ್ ರಕ್ತ ನೀಡಲಾಯಿತು. ಹಿಮೋಗ್ಲೋಬಿನ್ ಮತ್ತೆ ಕುಸಿಯುತ್ತಿದ್ದ ಹಿನ್ನೆಲೆ ವೈದ್ಯರು ಹೆಚ್ಚಿನ ಪರೀಕ್ಷೆ ನಡೆಸಿದಾಗ, ಸಿಟಿ ಸ್ಕ್ಯಾನ್, ಕೊಲೊನೋಸ್ಕೋಪಿ ಹಾಗೂ ಪೆಟ್-ಸಿಟಿ ಮೂಲಕ ದೊಡ್ಡ ಕರುಳಿನಲ್ಲಿ ಸುಮಾರು 10 ಸೆಂ.ಮೀ. ಗಾತ್ರದ ಗಡ್ಡೆ ಪತ್ತೆಯಾಯಿತು.
ಸರ್ಜಿಕಲ್ ಆಂಕಾಲಜಿಸ್ಟ್ ಡಾ. ಕಿರಣ್ ಶಂಕರ್ ಅವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆ ಹಾಗೂ ಪರಿಣಾಮಿತ ಕರುಳಿನ ಭಾಗವನ್ನು ಯಶಸ್ವಿಯಾಗಿ ತೆಗೆದುಹಾಕಲಾಯಿತು. ಅಂತಿಮ ಪರೀಕ್ಷೆಯಲ್ಲಿ ಅದು ಕೊಲನ್ ಕ್ಯಾನ್ಸರ್ ಎಂಬುದು ದೃಢಪಟ್ಟರೂ, ಪರೀಕ್ಷಿಸಿದ 24 ಲಿಂಫ್ ನೋಡ್ಗಳಲ್ಲಿಯೂ ಕ್ಯಾನ್ಸರ್ ಹರಡದಿರುವುದು ವೈದ್ಯರಿಗೆ ನೆಮ್ಮದಿ ನೀಡಿದೆ. ಮುಂದಿನ ಚಿಕಿತ್ಸೆಗೆ ಅಗತ್ಯವಿರುವ ಎಂಎಂಆರ್ ಪರೀಕ್ಷೆಯ ವರದಿ ನಿರೀಕ್ಷಿಸಲಾಗುತ್ತಿದೆ.
ಆಸ್ಪತ್ರೆಯ ನಿರ್ದೇಶಕಿ ಡಾ. ಸರಳಾ ಚಂದ್ರಶೇಖರ್ ಮಾತನಾಡಿ, “ಸಮಯೋಚಿತ ರೋಗನಿರ್ಣಯ, ವಿವಿಧ ತಜ್ಞರ ಸಮನ್ವಯ ಚಿಕಿತ್ಸೆ ಹಾಗೂ ಮಾನವೀಯ ಕಾಳಜಿಯೇ ಈ ಯಶಸ್ಸಿಗೆ ಕಾರಣ. ಆರಂಭಿಕ ಹಂತದಲ್ಲಿ ಪತ್ತೆಯಾದರೆ ಕೊಲನ್ ಕ್ಯಾನ್ಸರ್ಗೆ ಪರಿಣಾಮಕಾರಿ ಚಿಕಿತ್ಸೆ ಸಾಧ್ಯ” ಎಂದು ಹೇಳಿದರು.

ಜನರಲ್ ಫಿಸಿಷಿಯನ್ ಡಾ. ಆದರ್ಶ್ ಎಸ್.ಪಿ. ಅವರು, “ತೀವ್ರ ರಕ್ತಹೀನತೆಯನ್ನು ಕೇವಲ ಕಬ್ಬಿಣದ ಕೊರತೆ ಎಂದು ಭಾವಿಸಬಾರದು. ಅದರ ಹಿಂದೆ ಜೀರ್ಣಾಂಗದ ರಕ್ತಸ್ರಾವ ಅಥವಾ ಕ್ಯಾನ್ಸರ್ನಂತಹ ಗಂಭೀರ ಕಾರಣಗಳಿರಬಹುದು. ವಿಶೇಷವಾಗಿ 50 ವರ್ಷ ಮೇಲ್ಪಟ್ಟವರು ಎಚ್ಚರಿಕೆ ವಹಿಸಬೇಕು” ಎಂದು ಸಲಹೆ ನೀಡಿದರು.
ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ವಿಜಯ್ ಕುಮಾರ್ ಟಿ.ಆರ್ ಅವರು ಕೊಲೊನೋಸ್ಕೋಪಿ ಪರೀಕ್ಷೆಯ ಮಹತ್ವವನ್ನು ಒತ್ತಿಹೇಳಿದರೆ, ಡಾ. ಕಿರಣ್ ಶಂಕರ್ ಅವರು ದೀರ್ಘಕಾಲದ ರಕ್ತಹೀನತೆ, ಮಲದಲ್ಲಿ ರಕ್ತ ಅಥವಾ ಮಲವಿಸರ್ಜನೆಯ ಅಭ್ಯಾಸದಲ್ಲಿ ಬದಲಾವಣೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.
22 ದಿನಗಳ ಚಿಕಿತ್ಸೆಯ ಬಳಿಕ ಶ್ರೀಮತಿ ಭಾಗ್ಯಮ್ಮ ಅವರು ಸಂಪೂರ್ಣ ಚೇತರಿಸಿಕೊಂಡು ಮನೆಗೆ ಮರಳಿದ್ದು, ಕುಟುಂಬದವರು ಆಸ್ಪತ್ರೆಯ ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿಯ ಸೇವೆಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.
