ದೀಪದಿಂದ ದೀಪ ಹಚ್ಚೋಣ! ಕತ್ತಲೆಯಿಂದ ಬೆಳಕಿನೆಡೆಗೆ ಸಾಗೋಣ!
ಆಶ್ವಯುಜ ಅಮಾವಾಸ್ಯೆ ಹಿಂದಿನಾದಿನ ನರಕಾಸುರನ ಸಂಹಾರಗೈದ ಪ್ರಯುಕ್ತ ನರಕ ಚತುರ್ದಶಿಯಂದು ಕಷ್ಟಕಾರ್ಪಣ್ಯ ನಷ್ಟನೋವು
ಎಂಬ ನರಕಗಳನ್ನು ನಾಶಗೊಳಿಸಿ, ದರಿದ್ರಲಕ್ಷ್ಮಿ ಯನ್ನು ಓಡಿಸಿ, ಹಳೆಕೊಳೆ ತೆಗೆದೊಗೆದು, ಮನ-ಮನೆ ಶುದ್ಧಗೊಳಿಸಿ, ಸುಖ ಸಂತೋಷ ಶಾಂತಿ ನೆಮ್ಮದಿ ಬರಮಾಡಿಕೊಳ್ಳಲು ಧನಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಅಮಾವಾಸ್ಯೆ ಮರುದಿನ ಕಾರ್ತಿಕ ಮಾಸದ ಪಾಡ್ಯಮಿಯಂದು ವಿಷ್ಣು ಅವತಾರದ ವಾಮನನಿಂದ ವರವನ್ನು ಪಡೆದ ಬಲಿ ಚಕ್ರವರ್ತಿಯ ಆಸೆಯಂತೆ ಅಜ್ಞಾನ ಅಹಂಕಾರದ ಅಂಧಕಾರ ಅಳಿಸಿ, ಸುಜ್ಞಾನ ಸದಾಚಾರ ಎಂಬ ಬೆಳಕು ಮೂಡಿಸಲು, ಪ್ರತಿ ಮನೆಯ ಒಳಗೂ ಹೊರಗೂ ಹಣತೆಗಳನ್ನು ಬೆಳಗುವ ಪ್ರಕಾಶಮಾನದ ಈ ದೀಪಾವಳಿಯ ಹಬ್ಬವು ಕಣ್ಮನ ತನುಮನ ಸೂರೆಗೊಳ್ಳುತ್ತದೆ.
“ತಮಸೋಮ ಜ್ಯೋತಿರ್ಗಮಯ….. ” ಎಂಬ
ಪವಮಾನ ಮಂತ್ರವು ೧೦೮ ಆದಿಮೂಲ ಉಪನಿಷತ್ಗಳ ಪೈಕಿ ಒಂದಾದ ‘ಬೃಹದಾರಣ್ಯಕ’ ಉಪನಿಷತ್ತಿನ ಪವಿತ್ರ ಶ್ಲೋಕ. ಪ್ರತಿಯೊಂದು ಯಜ್ಞ-ಯಾಗ ಕೈಗೊಳ್ಳುವಾಗ ಅಗ್ನಿದೇವನಿಗೆ ಅರ್ಪಿಸುವ ಗೌರವ ವಂದನೆ. ಇದು ಅನಾದಿ ಕಾಲದಿಂದ ಪ್ರತೀತಿಯಲ್ಲಿರುವ ವೇದಿಕಾ ಪದ್ಧತಿ ಗಳಲ್ಲೊಂದು. ದಾನವ-ಮಾನವರು ತ್ರಿಮೂರ್ತಿಗಳಿಗೆ, ಕೋಟಿದೇವತೆಗಳಿಗೆ ಯಾವುದಾದರು ಹರಕೆ ಸಲ್ಲಿಸಲು ಅಥವ ಅವರಿಂದ ಏನಾದರು ವರ ಪಡೆಯಲು ಅಗ್ನಿಯ ಮೂಲಕವೆ ಎಂಬುದು ಯಾರ ಉವಾಚ?! ಈನಿಯಮ ಪಾಲಿಸದೆ ತಮ್ಮ ಭಕ್ತಿಶಕ್ತಿಯಿಂದ ನೇರವಾಗಿ ದೈವ ಸಾಕ್ಷಾತ್ಕಾರ ಕಂಡುಕೊಂಡ; ಗೋರಕುಂಬಾರ, ಬೇಡರಕಣ್ಣಪ್ಪ, ಕನಕದಾಸ, ಕಾಳಿದಾಸ, ಪುರಂದರದಾಸ ಮುಂತಾದವರು ನಿಜಭಕ್ತರಾದರು! ಅಗ್ನಿಹಾದಿಯನ್ನು ಹಿಂದಿಕ್ಕಿ ಮುಕ್ತಿ ಪಡೆದವರಲ್ಲಿ ಮಂತ್ರಾಲಯದ ಗುರು ರಾಘವೇಂದ್ರ, ಜಾತ್ಯಾತೀತಗುರು ಶಿರಡಿ ಸಾಯಿಬಾಬ, ನಿಸ್ವಾರ್ಥಸಂತ ಶಿಶುನಾಳಷರೀಫ಼ ಮುಂತಾದವರಲ್ಲದೇ ಅನೇಕಸಾಧಕರು ಅವರದೇ ಹಾದಿಯ ಮೂಲಕ ಲೋಕ ಕಲ್ಯಾಣಕ್ಕೆ ಸಕಲವನ್ನ ಸಮರ್ಪಿಸಿ ನಿಸ್ವಾರ್ಥಮೂರ್ತಿಗಳಾಗಿ ಮುಕ್ತಿ ಪಡೆಯಲಿಲ್ಲವೆ? ಇಂಥ ಸಾರ್ಥಕರಲ್ಲಿ ಇನ್ನಷ್ಟು ಉತ್ತಮ ಉದಾಹರಣೆ: ರಾಮಕೃಷ್ಣಪರಮಹಂಸ, ಸ್ವಾಮಿವಿವೇಕಾನಂದ, ಕಿತ್ತೂರುಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಲಾಲ್-ಬಾಲ್-ಪಾಲ್, ಗಾಂಧೀಜಿ, ನೇತಾಜಿ, ಸುಭಾಶ್ ಚಂದ್ರಬೋಸ್ ಸರ್ದಾರ್ಪಟೇಲ್, ಲಾಲಬಹದ್ದೂರಶಾಸ್ತ್ರಿ, ರವೀಂದ್ರನಾಥಠಾಗೂರ್, ಕುವೆಂಪು, ಕೆಂಗಲ್ ಹನುಮಂತಯ್ಯ, ನರೇಂದ್ರಮೋದಿ, ಮುಂತಾದ ಕೆಲವರು ಯಾವುದೇ ಪರಮಆತ್ಮಕ್ಕಿಂತಲೂ ಕಡಿಮೆಯೇನಲ್ಲ? ಇವರೆಲ್ಲರೂ ಒಂದಿಲ್ಲೊಂದು ರೀತಿ ಕತ್ತಲೆಯಲ್ಲಿದ್ದವರನ್ನು ಬೆಳಕಿನೆಡೆಗೆ ಕರೆತಂದವರಾಗಿದ್ದು, ಭಕ್ತಿ ಶಕ್ತಿ ಮುಕ್ತಿ ಪಾವಿತ್ರತೆ ಪಾತಿವ್ರತ್ಯ ದೇಶಪ್ರೇಮ ಇವೆಲ್ಲವೂ ಯಾವುದೇ ಮಾರುಕಟ್ಟೆಯಲ್ಲಿ ಸಿಗುವಂಥದ್ದಲ್ಲ ಎಂದು ಸರಳವಾಗಿ ತೋರಿಸಿಕೊಟ್ಟವರು!
ಇದನ್ನು ಪುಷ್ಟೀಕರಿಸುವಂಥ ವಿವೇಕಾನಂದವಾಣಿ:[೧]ಸಾಧನೆ ಮಾಡಲು ಹೊರಡುವ ಹಾದಿಯಲ್ಲಿ ಬೆಕ್ಕುಗಳಿಗಿಂತ ಹೆಚ್ಚಾಗಿ ಜನಗಳೆ ಅಡ್ಡ ಬರುತ್ತಾರೆ.[೨]ನಿಮ್ಮನ್ನು ನೀವು ಜಯಿಸಿದಾಗ ಜಗತ್ತೇ ನಿಮ್ಮದಾಗುತ್ತದೆ. [೩]ಮಾನವನಲ್ಲಿ ಅಡಗಿರುವ ದೈವತ್ವ ಪ್ರಕಾಶನ ಪಡಿಸುವುದೇ ಧರ್ಮ
[೪]ಬಡವರು-ಅಶಕ್ತರು-ರೋಗಿಗಳಲ್ಲಿ ಶಿವನನ್ನು ಕಾಣುವವರೇ ನಿಜವಾದ ಶಿವಭಕ್ತರು [೫]ಜ್ಞಾನಿಗಳು ಮೊದಲು ತಮ್ಮಲ್ಲಿರುವ ದೋಷವನ್ನು ಕಂಡುಕೂಳ್ಳುವರು.ಜಾನಪದ ರೀತಿಯ ಅಥವ ಆದಿನಿವಾಸಿಗಳ ಅಥವ ಸ್ಥಳೀಯ ಪದ್ಧತಿ ಪ್ರಕಾರ ೩ದಿನದಹಬ್ಬ:
ಮೊದಲದಿನ ಎಲ್ಲ ಬಗೆಯ ಕಸ ಕಲ್ಮಶ ತೆಗೆದುಬಿಸಾಡುವ ಶುಚಿತ್ವ ದಿನ, ಎರಡನೇ ದಿನ ನೀರು ತುಂಬಿಸಿ ಲಕ್ಷ್ಮಿಯನ್ನು ಬರಮಾಡಿ ಕೊಳ್ಳುವ ದಿನ, ೩ನೇ ದಿನ ದೀಪಗಳ ಹಚ್ಚುವ ಮೂಲಕ ನವಜ್ಯೋತಿ ಬೆಳಗಿಸಿ ಹೊಸಬಟ್ಟೆ
ಧರಿಸಿ ಸಿಹಿ ತಿಂಡಿ ಹಂಚಿ ಸವಿಮಾತುಗಳಾಡಿ
ಶುಭಲಾಭ ಕೋರುತ್ತ ಸಂಭ್ರಮಿಸುವ ದಿನ!ಪ್ರತಿಯೊಬ್ಬ ಮನುಷ್ಯನು ಕಳೆದುಹೋದ ಹಳೇ ವರ್ಷದ ದುಃಖ ದುಮ್ಮಾನ ಮಾಯವಾಗಿಸಿ, ಕತ್ತಲೆಯನ್ನು ಹೋಗಲಾಡಿಸಿ, ಹೊಸ ವರ್ಷದಲ್ಲಿ ಹರ್ಷದ ಹೊನಲು ಹರಿಸುವಂತೆ ದೇವರನ್ನು ಬೇಡುತ್ತ ದೀಪದಿಂದ ದೀಪ ಹಚ್ಚುವ ಸಡಗರ ಸಂಭ್ರಮದ ಬೆಳಕಿನ ಹಬ್ಬ.
ಜಾತಿ-ಮತ-ಧರ್ಮ-ವರ್ಣಗಳ ಭೇದ ತೊರೆದು
ಒಬ್ಬರು ಮತ್ತೊಬ್ಬರಿಗೆ ತಮ್ಮ ಕೈಲಾದಷ್ಟು ಸಹಾಯ ಸಹಕಾರ ನೀಡಲು ಪ್ರತಿಜ್ಞೆ ಮಾಡುವ ಹಬ್ಬವೇ ದೀಪಾವಳಿ?! ಒಳಿತು-ಕೆಡಕುಗಳ ಪರಿಧಿಯಲ್ಲಿ ವಿವೇಕ ಚಿತ್ತರಾಗಿ ಸಹಬಾಳ್ವೆ ನಡೆಸುವ ಬದಲು ವಾಯುಮಾಲಿನ್ಯ ಶಬ್ಧಮಾಲಿನ್ಯ ಜಲಮಾಲಿನ್ಯ ಪರಿಸರ ಹಾಳು ಮಾಡುವ ಕಾರ್ಯದ ಜತೆಗೆ ವೃದ್ಧರ ಮಕ್ಕಳು ಮಹಿಳೆಯರ ವಿಶೇಷವಾಗಿ ದುರ್ಬಲ(ಹೃದಯ) ರೋಗಿಗಳ ಸಾವಿಗೂ ಕಾರಣವಾಗುವ, ಟನ್ ಗಟ್ಟಲೆ ಪಟಾಕಿ ಸುಟ್ಟು ಬೂದಿಮಾಡುವ ಮೂಲಕ ಆಚರಿಸುವುದು ಅದೆಷ್ಟು ಸಾರ್ಥಕ? ವಿಕಾರದ ಅಕಾರ್ಯವನ್ನು ಅಹಂಕಾರದಿಂದ, ಡೌಲು-ಡಂಭಾಚಾರದಿಂದ ಯಾವುದನ್ನು ಬಹಿರಂಗ ಪಡಿಸಲು ಅಥವ ಯಾರನ್ನು ಮೆಚ್ಚಿಸಲು, ಈ ಘನಂದಾರಿ ಕಾರ್ಯ ಕೈಗೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಇದರಿಂದ ಯಾರು ಯಾರನ್ನು ಯಾವ ಕತ್ತಲೆಯಿಂದ ಯಾವ ಬೆಳಕಿನೆಡೆಗೆ ಕರೆದೊಯ್ದ ಅರ್ಥ ಬರುತ್ತದೆ? ಶ್ರೀಸಾಮಾನ್ಯನಿಗೆ ಜೀವವಾಗಿರುವ ಗಾಳಿ ನೀರು ಹಸಿರು ಪ್ರಕೃತಿ ಇವುಗಳ ಜತೆ ಚೆಲ್ಲಾಟವಾಡುತ್ತ, ಸುಖ ಸಂತೋಷ ನೆಮ್ಮದಿ ಹಾಳುಮಾಡುವುದು ಯಾವನ್ಯಾಯ? ಹೀಗೆಲ್ಲ ಮಾಡಬೇಕೆಂದು ಯಾವ ಧರ್ಮಗ್ರಂಥ ವೇದೋಪನಿಷತ್ನಲ್ಲಿ ಬರೆಯಲಾಗಿದೆ?
ಇತ್ತೀಚೆಗಿನ ಯುವ ಪೀಳಿಗೆಯು ಹತ್ತುಹಲವು ಅಡ್ಡದಾರಿ ಹಿಡಿದು ಬೆಳಕಿನಿಂದ ಕತ್ತಲೆಯೆಡೆಗೆ ಸಾಗುತ್ತಿರುವುದು ವಿಷಾದನೀಯ! ಇಂತಹ ದುರಂತಕ್ಕೆ ಕಾರಣವಾದ ಕೆಲವು ಉದಾ:-
ಅತಿಯಾದ ಟಿವಿ, ಮೊಬೈಲ್, ಮುಂತಾದವುಗಳ ಬಳಕೆಯಿಂದ ಯುವಕರಲ್ಲಿ ವ್ಯಸನತೆ, ಮಕ್ಕಳಲ್ಲಿ ಖಿನ್ನತೆ, ದಿನೇದಿನೇ ಹೆಚ್ಚಾಗುತ್ತಿದೆ! ಹದಿವಯಸ್ಸಲ್ಲೆ ಧೂಮಪಾನ ಮದ್ಯಪಾನ ತಂಬಾಕುಸೇವನೆ ಡ್ರಗ್ಸ್ ಮುಂತಾದ ಅನಿಷ್ಟ ದುಷ್ಟಚಟಕ್ಕೆ ಬಲಿಯಾಗಿ ಅಕಾಲಮರಣಕ್ಕೆ/ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ! ಎಲ್ಲಕ್ಕೂ ಮಿಗಿಲಾಗಿ ಭಯೋತ್ಪಾದಕ ಮತ್ತು ದೇಶ ದ್ರೋಹದ ಸಂಘ-ಸಂಸ್ಥೆ ಸೇರಿ ತರಬೇತಿ ಪಡೆದು ತನ್ನ ದೇಶ ಭಾಷೆ ಸಂಸ್ಕೃತಿ ಪರಂಪರೆ ಬಂಧು ಬಳಗಕ್ಕೆ ತಾನೇ ಕಂಟಕನಾಗುವುದು? ಇಂಥ ದುಷ್ಕೃತ್ಯಗಳು ಯಾವ ವಿಧದಲ್ಲಿ “ದೀಪದಿಂದ ದೀಪಬೆಳಗು” ವಾಕ್ಯಕ್ಕೆ ಅನ್ವರ್ಥವಾಗುತ್ತದೆ?
ಉತ್ತರ ಭಾರತದಲ್ಲಿ ದೀವಾಲಿ ಹೆಸರಲ್ಲಿ
ರಾವಣ ಸಂಹಾರ ದಿನವನ್ನಾಗಿ ಆಚರಿಸುವ
ಪದ್ಧತಿಯುಂಟು?! ರಾವಣ ಒಬ್ಬನನ್ನೇ ಏಕೆ ಟಾರ್ಗೆಟ್ ಮಾಡಬೇಕು? ಹಾಗೆ ನೋಡಿದರೆ ರಾವಣನು ಅತಿಯಾದ ಮಾತೃಭಕ್ತಿಉಳ್ಳ, ತನ್ನ ಕುಟುಂಬದ, ಪ್ರಜೆಗಳ ಕ್ಷೇಮ ಕಾಪಾಡುವ ಉತ್ತಮ ಚಕ್ರವರ್ತಿಯಾಗಿದ್ದ. ಇಂಥ ದಶಕಂಠ ನಿಗಿಂತಲೂ ಕೆಟ್ಟಚಾರಿತ್ರ್ಯವುಳ್ಳ ಕಂಸ, ಜರಾಸಂಧ, ಶಿಶುಪಾಲ, ಮುಂತಾದವರನ್ನ ಹೊರಗಿಟ್ಟಿದ್ದೇಕೆ? “ಮೂರು ಲೋಕಕ್ಕು ನಾನೇ ದೇವರು, ಎಲ್ಲರೂ ನನ್ನನ್ನೇ ಪೂಜಿಸಬೇಕು” ಎಂದ ಲೋಕ ಕಂಟಕ ಹಿರಣ್ಯಾಕ್ಷ, ಹಿರಣ್ಯಕಶ್ಯಪ ಸೋದರರ ಪುತ್ಥಳಿ ಸುಡುವ ಪದ್ಧತಿ ಜಾರಿಯಲ್ಲಿಲ್ಲವೇಕೆ? ಕೇವಲ ರಾವಣನನ್ನೇ ಏಕೆ ಸುಟ್ಟು ಬೂದಿ ಮಾಡುವರು? ಈ ಬಗ್ಗೆ ಅದೇನೇ ತರ್ಕವಿರಲಿ, ಪ್ರಸ್ತುತ ನಾವು ಭಾರತೀಯರೆಲ್ಲ ಒಂದಾಗಿ ಬಾಳುತ್ತ ಮಾನವತೆ ಯಿಂದ ಬದುಕೋಣ, ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಸಂಕಲ್ಪದಿಂದ ಈ ವರ್ಷದ ದೀಪಾವಳಿ ಆಚರಿಸೋಣ!
-ಕುಮಾರಕವಿ ಬಿ.ಎನ್. ನಟರಾಜ
9036976471, ಬೆಂಗಳೂರು 560072