
ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಡಿವಾಳ ಮಾಚಿದೇವರ ಜಯಂತಿಯನ್ನು ಇಂದು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೆಯ ಕೆ.ಡಿ.ಪಿ ಸಭಾಂಗಣದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ ನಟರಾಜು ಅವರು ಉದ್ಘಾಟಿಸಿದರು.

ಇದೇ ವೇಳೆ ಮಾತನಾಡಿದ ನಗರಸಭಾ ಅಧ್ಯಕ್ಷರಾದ ಸಿ.ಎಂ. ಆಶಾ ನಟರಾಜು ಅವರು ಮಡಿವಾಳ ಮಾಚಿದೇವರು ಸಮಾಜದಲ್ಲಿನ ಅಸಮಾನತೆ, ಕಂದಾಚಾರ ತೊಡೆಯಲು ಬಹುವಾಗಿ ಶ್ರಮಿಸಿದರು. ಬಸವಣ್ಣನವರ ಜೊತೆಗೂಡಿದ್ದ ಅವರು ಅನೇಕ ವಚನಗಳ ಮೂಲಕ ಉತ್ತಮ ವಿಚಾರ ಧಾರೆಗಳನ್ನು ತಿಳಿಸಿಕೊಟ್ಟಿದ್ದಾರೆ. ಇಂತಹ ಶ್ರೇಷ್ಠ ವಚನಕಾರರ ಜಯಂತಿಯನ್ನು ಆಚರಿಸುವ ಮೂಲಕ ಅವರ ಮೌಲ್ಯಯುತ ಮಾರ್ಗದರ್ಶನದಲ್ಲಿ ನಡೆಯಬೇಕಿದೆ ಎಂದರು.
ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಶಾಂತಮೂರ್ತಿ ಕುಲಗಾಣ ಅವರು ಮಾತನಾಡಿ ಕಾಯಕವೇ ಕೈಲಾಸ ಎನ್ನುವ ಮಾರ್ಗದಲ್ಲಿ ಮುನ್ನಡೆದ ಮಡಿವಾಳ ಮಾಚಿದೇವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ತಿದ್ದುವ ಪ್ರಯತ್ನ ಮಾಡಿದರು. ಮನಸ್ಸಿನ ಮಲಿನವನ್ನು ದೂರ ಮಾಡಬೇಕು. ಅರಸುತನ ಮೇಲಲ್ಲ, ಅಗಸತನ ಕೀಳಲ್ಲ ಎಲ್ಲಾ ಸಮುದಾಯಗಳನ್ನು ಸಮಾನವಾಗಿ ಕಾಣಬೇಕೆಂಬ ತತ್ವವನ್ನು ಸಾರಿದರು ಎಂದರು.
೧೨ನೇ ಶತಮಾನದಲ್ಲಿ ಸಮಾಜದ ವ್ಯವಸ್ಥೆಯನ್ನು ಸರಿಪಡಿಸುವಲ್ಲಿ ಮುಂದಾದರು. ಸಮಾಜದಲ್ಲಿದ್ದ ಅಜ್ಞಾನ, ಅನಿಷ್ಟ ಪಿಡುಗುಗಳ ವಿರುದ್ದ ಜಾಗೃತಿಗೊಳಿಸಿದರು. ಸಮಾಜದ ಹಿತ ಒಳತಿಗೋಸ್ಕರ ತಮ್ಮದೇ ಆದ ಅಮೂಲ್ಯ ಕೊಡುಗೆಯನ್ನು ಶಿವಶರಣರಾದ ಮಡಿವಾಳ ಮಾಚಿದೇವರು ನೀಡಿದ್ದಾರೆ ಎಂದು ಶಾಂತಮೂರ್ತಿ ಕುಲಗಾಣ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಗೂಡೂರು ಭೀಮಸೇನ ಅವರು ಮಾತನಾಡಿ ಮಡಿವಾಳ ಮಾಚಿದೇವರು ಇತರೆ ಶರಣರಿಗಿಂತ ವಿಭಿನ್ನವಾಗಿದ್ದವರು. ವೀರಭದ್ರನ ಅವತಾರವೆಂದೇ ಎನಿಸಿರುವ ಮಡಿವಾಳ ಮಾಚಿದೇವರ ವಚನಗಳಲ್ಲಿ ಮನಮುಟ್ಟುವ ತೀಕ್ಷ್ಣತೆ ಇದೆ. ಮಹಿಳೆಯರ ಸಬಲೀಕರಣದ ಬಗ್ಗೆಯೂ ಅಂದೇ ಮಾಚಿದೇವರು ಪ್ರತಿಪಾದಿಸಿದ್ದರು ಎಂದು ತಿಳಿಸಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಚಂದ್ರಶೇಖರ್ ಮಾತನಾಡಿ ಮೇಲು ಕೀಳು ತೊರೆಯಬೇಕೆಂಬ ವಿವೇಕದ ನುಡಿಗಳನ್ನಾಡಿದ ಮಡಿವಾಳ ಮಾಚಿದೇವರು ತಮ್ಮ ವಚನಗಳ ಮೂಲಕ ಹೆಚ್ಚಿನ ಅರಿವು ಉಂಟುಮಾಡಿದ್ದಾರೆ. ಕಾಯಕದ ಮೂಲಕ ದೇವರನ್ನು ಕಾಣಬೇಕು ಎಂಬ ಅಮೂಲ್ಯ ವಿಚಾರಗಳನ್ನು ತಿಳಿಯಬಹುದಾಗಿದೆ ಎಂದರು.
ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಅವರು ಮಾತನಾಡಿ ಆಶಾದಾಯಕ ಮನೋಭಾವನೆ ರೂಢಿಸಿಕೊಳ್ಳಲು ಧನಾತ್ಮಕ, ಆಧ್ಯಾತ್ಮಕ ಚಿಂತನೆ ವಿಚಾರಗಳು ಅವಶ್ಯಕ. ಶರಣರು ದಾರ್ಶನಿಕರು, ಮಹಾನ್ ಪುರುಷರು, ಸಾಧಕರ ಜಯಂತಿಯನ್ನು ಆಚರಣೆಗಷ್ಟೇ ಸೀಮಿತಗೊಳಿಸದೇ ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದರೆ ಸಾರ್ಥಕವಾಗುತ್ತದೆ ಎಂದು ಸಲಹೆ ಮಾಡಿದರು.
ಸಮಾಜದ ಮುಖಂಡರಾದ ಸಿದ್ದಯ್ಯ ಅವರು ಸಹ ಮಾತನಾಡಿದರು. ಇದೇ ವೇಳೆ ಕರ್ನಾಟಕ ರಾಜ್ಯ ಮಡಿವಾಳ ಸಂಘದ ಜಿಲ್ಲಾ ಶಾಖೆಯ ವತಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರಿಗೆ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಜಾನಪದ ಅಕಾಡೆಮಿ ಸದಸ್ಯರಾದ ಸಿ.ಎಂ. ನರಸಿಂಹಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಅನಿತಾ, ಸಮಾಜದ ಮುಖಂಡರಾದ ದುಂಡುಮಹದೇವ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
