ಚಾಮರಾಜನಗರ: ಕನ್ನಡ ಸಾಹಿತ್ಯ ಲೋಕಕ್ಕೆ ವಿಶ್ವವಿಖ್ಯಾತಿಯನ್ನು ಬೂಕರ್ ಪ್ರಶಸ್ತಿ ಮೂಲಕ ತಂದುಕೊಟ್ಟ ಶ್ರೀಮತಿ ಭಾನು ಮುಸ್ತಾಕ್ ಮತ್ತು ದೀಪಾ ಬಾಸ್ತಿರವರಿಗೆ ಅಭಿನಂದನೆಗಳನ್ನು ಕನ್ನಡಿಗರು ಸಲ್ಲಿಸುವ ಮೂಲಕ ಸಂತೋಷಪಡಬೇಕು ಹಾಗು ಸಾಹಿತ್ಯ ಲೋಕಕ್ಕೆ ಮತ್ತಷ್ಟು ಕೊಡುಗೆಯನ್ನು ನೀಡುವ ದೃಢಸಂಕಲ್ಪವನ್ನು ಕನ್ನಡಿಗರು ಹೊಂದಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಲೋಕಕ್ಕೆ ಭೂಕರ್ ಪ್ರಶಸ್ತಿ ಸಂಭ್ರಮಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ಶ್ರೀಮತಿ ಭಾನು ಮುಸ್ತಾಕ್ ಕನ್ನಡ ಭಾಷೆ ಮತ್ತು ಸಾಹಿತ್ಯದ ರಚನೆಯ ಮೂಲಕ ಕನ್ನಡದ ಸೊಗಡು ಹಾಗೂ ಸಾಮರಸ್ಯದ ಚಿಂತನೆಯ ಮೂಲಕ ಎದೆಯ ಹಣತೆ ಕಥಾಸಂಕಲನವು ಇಂದು ಅಂತರಾಷ್ಟ್ರೀಯ ಭೂಕರ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದು ಕನ್ನಡಿಗರಿಗೆ ಮಾತ್ರವಲ್ಲದೆ ಇಡೀ ಭಾರತಕ್ಕೆ ಗೌರವ ಸಲ್ಲುವ ಪ್ರಾದೇಶಿಕ ಭಾಷೆಗೆ ಮತ್ತಷ್ಟು ಸಂಶೋಧನೆ ಮತ್ತು ಸ್ಪೂರ್ತಿಯ ಸಂಕೇತವಾಗಿದೆ. ಕನ್ನಡಿಗರ ಸಾಹಿತ್ಯವು ಮತ್ತಷ್ಟು ವಿಶ್ವವಿಖ್ಯಾತಿಯನ್ನು ಪಡೆಯಲಿ. ಯುವಕರು ಮತ್ತು ವಿದ್ಯಾರ್ಥಿಗಳು ಕನ್ನಡ ಪುಸ್ತಕಗಳನ್ನು ಅಧ್ಯಯನ ಮಾಡುವ ಮೂಲಕ ಪುಸ್ತಕಗಳ ರಚನೆಗೆ ಮುಂದಾಗ ಬೇಕಾಗಿದೆ. ಭಾವನೆಗಳಿಗೆ ಅಕ್ಷರ ರೂಪದ ಮೂಲಕ ಹೊಸ ಚಿಂತನೆಯ ದೃಷ್ಟಿಕೋನವನ್ನು ಯುವ ಪೀಳಿಗೆ ಬೆಳೆಸಿಕೊಳ್ಳಬೇಕು. ಪ್ರಶಸ್ತಿಗಳು ಸರ್ವರಿಗೂ ಆನಂದವನ್ನು ಉಂಟು ಮಾಡುವ ಪ್ರಕ್ರಿಯೆಯಾಗಿದೆ . ಶ್ರೀಮತಿ ಬಾನು ಮುಸ್ತಾಕ್ ಹಾಗೂ ದೀಪಾಬಾಸ್ತಿಯವರಿಗೆ ಕನ್ನಡಿಗರ ಅಭಿನಂದನೆ ಸದಾ ಕಾಲ ಇರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಹಿರಿಯ ಕಲಾವಿದರಾದ ಹರದನಹಳ್ಳಿ ಘಟಂ ಕೃಷ್ಣರವರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸುವ ಮೂಲಕ ಉದ್ಘಾಟಿಸಿ ಕಲೆ ,ಸಾಹಿತ್ಯ, ಸಂಗೀತ, ರಂಗಭೂಮಿ, ನಾಟಕ, ಸಿನಿಮಾ ,ಜನಪದ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕನ್ನಡದ ಹೊಸತನ, ಕನ್ನಡಿಗರ ಪ್ರತಿಭೆ, ಕನ್ನಡದ ಶ್ರೇಯಸ್ಸು ಹೊರ ಜಗತ್ತಿಗೆ ಅನಾವರಣಗೊಳ್ಳಬೇಕು. ಹೊಸತನದ ಮೂಲಕ ಯೋಚನೆ, ಚಿಂತನೆ ನಡೆಸಿ ನಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು. ಸಾಧಕರಿಗೆ ಭಾನು ಮುಸ್ತಾಕ್ ಹಾಗೂ ದೀಪಾ ಬಾಸ್ಥಿ ಮಾದರಿ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ರವಿಚಂದ್ರ ಪ್ರಸಾದ್ ರವರು ಶ್ರೀಮತಿ ಭಾನು ಮುಸ್ತಾಕ್ ಹಾಗೂ ದೀಪಾಭಾಸ್ತಿ ರವರ ಕುರಿತು ಪ್ರಾಸ್ತಾವಿಕ ನುಡಿಗಳನ್ನು ನುಡಿದು ಕನ್ನಡದ ಹೋರಾಟಗಾರರಾಗಿ ಸಾಹಿತಿಗಳಾಗಿ ,ಚಿಂತಕರಾಗಿ ಸದಾಕಾಲ ಕನ್ನಡಿಗರ ಏಕತೆಯ ಬಗ್ಗೆ ಚಿಂತಿಸುವ ಭಾನು ಮುಸ್ತಾಕ್ ರವರ ದೀಪದ ಹಣತೆಗೆ ಭೂಕರ್ ಪ್ರಶಸ್ತಿ ದೊರೆತಿರುವುದು ನಮ್ಮೆಲ್ಲರಿಗೂ ಸಂತೋಷವಾಗಿದೆ. ಕನ್ನಡಿಗರು ಮತ್ತಷ್ಟು ಕ್ರಿಯಾಶೀಲರಾಗಲು ಇದು ಅವಕಾಶ ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬಿಕೆ ಆರಾಧ್ಯ ,ಶ್ರೀಮತಿ ಸರಸ್ವತಿ , ಶಿವಲಿಂಗ ಮೂರ್ತಿ,ಸುನಿತಾ, ಕೃಷ್ಣ ಉಪಸ್ಥಿತರಿದ್ದರು

Leave a Reply