ಪ್ರತಿ ವರ್ಷವೂ ಹಳೆಯ ನೋವುಗಳಿಗೆ ವಿದಾಯ ಹೇಳಿ ಹೊಸ ಕನಸುಗಳೊಂದಿಗೆ ಹೊಸವರ್ಷಕ್ಕೆ ಹೆಜ್ಜೆಯಿಡುತ್ತಿದ್ದೆವು. ಆದರೆ ಈ ಬಾರಿ ಹಾಗಿಲ್ಲ. ವರ್ಷ ಪೂರ್ತಿ ಅನುಭವಿಸಿದ ನೋವುಗಳನ್ನು ಮರೆಯ ಬಹುದಷ್ಟೆ ಕೊರೋನಾದ ಭಯವಂತು ನಮ್ಮನ್ನು ಕಾಡುತ್ತಲೇ ಇದೆ. ಹೀಗಾಗಿ ಒಂದಷ್ಟು ಜಾಗ್ರತೆಯೊಂದಿಗೆ ಮುಂದಿನ ವರ್ಷಕ್ಕೆ ಪಾದಾರ್ಪಣೆ ಮಾಡುವುದು ಅನಿವಾರ್ಯವಾಗಿದೆ.

ಹಾಗೆನೋಡಿದರೆ ಇತಿಹಾಸದಲ್ಲಿ 2020ರಷ್ಟು ಕಷ್ಟ ಅನುಭವಿಸಿದ ವರ್ಷ ಇನ್ನೊಂದಿರಲಾರದು. ಇದುವರೆಗೆ ಜಿಲ್ಲೆ, ರಾಜ್ಯ, ದೇಶ ಹೀಗೆ ಸೀಮಿತ ಪ್ರದೇಶಗಳು ಪ್ರಾಕೃತಿಕ ವಿಕೋಪ, ಭೂಕಂಪ, ಪ್ರವಾಹ ಹೀಗೆ ತೊಂದರೆಗಳನ್ನು ಅನುಭವಿಸುತ್ತಿದ್ದವು. ಇನ್ನು ಜನರನ್ನು ತೆಗೆದುಕೊಂಡರೆ ಕೆಲವು ಕುಟುಂಬಗಳಿಗಷ್ಟೆ ಕಷ್ಟಗಳು ಬರುತ್ತಿದ್ದವು. ಅಂತಹ ಕಹಿ ಘಟನೆಗಳನ್ನು ಮರೆತು ಮುನ್ನಡೆಯಲು ಜನರಲ್ಲಿಯೂ ಶಕ್ತಿಯಿರುತ್ತಿತ್ತು. ಆದರೆ ಈ ವರ್ಷ ಹಾಗಾಗಲಿಲ್ಲ. ಇಡೀ ಪ್ರಪಂಚ ಕಷ್ಟ ಅನುಭವಿಸಿತು. ಬಡವ, ಶ್ರೀಮಂತ ಹೀಗೆ ಬೇಧಭಾವವಿಲ್ಲದೆ ಎಲ್ಲರೂ ನೋವುಂಡರು. ಸಾವು, ನೋವುಗಳು ಯಾರನ್ನು ಬಿಡಲಿಲ್ಲ.

ಕೊರೋನಾದಿಂದಾಗಿ ಹಲವರು ಅನಾಥ ಶವಗಳಾದರು. ತಬ್ಬಲಿಯಾದರು, ಹೊಟ್ಟೆಗೆ ಹಿಟ್ಟಿಲ್ಲದೆ ಬಳಲಿದರು, ಇದ್ದ ಕೆಲಸ ಕಳೆದುಕೊಂಡರು. ಕೈತುಂಬಾ ಬರುತ್ತಿದ್ದ ವೇತನಕ್ಕೆ ಕತ್ತರಿ ಬಿತ್ತು. ಹೀಗೆ ಒಂದೇ ಎರಡೇ ನೂರಾರು ಸಮಸ್ಯೆಗಳನ್ನು ಜನ ಎದುರಿಸಿದರು. ಕಾಯಿಲೆಗಳಿಂದ ಬಳಲಿದರು. ನಮ್ಮವರು ಎಂದು ಕೊಂಡವರಿಂದಲೇ ದೂರವಾಗಿ ಬದುಕಿದರು. ಒಂದು ಕೊರೋನಾ ವೈರಸ್ ಇಡೀ ಪ್ರಪಂಚವನ್ನು ಇನ್ನಿಲ್ಲದಂತೆ ಕಾಡಿದ್ದಂತು ನಿಜ. ಇದು ಕಾಡಿದ್ದು ಒಂದೆರಡು ದಿನವಲ್ಲ ಬರೋಬರಿ ಒಂಬತ್ತು ತಿಂಗಳು. ಈಗಲೂ ಎಲ್ಲವೂ ಸರಿಯಾಗಿಲ್ಲ. ಇದರ ಕೊಡುಗೆ ಮುಂದಿನ ವರ್ಷಕ್ಕೂ ಮುಂದುವರೆದಿದೆ.

ಹೊಸವರ್ಷಕ್ಕೆ ಬ್ರಿಟನ್ ರೂಪಾಂತರಿ ಕೊರೋನಾ ಇನ್ನೇನು ಗಂಡಾಂತರಗಳನ್ನು ತಂದೊಡ್ಡಲಿದೆಯೋ ಎಂಬ ಭಯವಂತು ಇದ್ದೇ ಇದೆ. ಹೀಗಿರುವಾಗ ನಾವೀಗ ಸ್ವಲ್ಪ ಎಚ್ಚರ ತಪ್ಪಿದರೂ ಅದಕ್ಕೆ ಕಂದಾಯ ಕಟ್ಟಲೇ ಬೇಕಾಗಿದೆ. ಹೀಗಿರುವಾಗ ಪ್ರತಿವರ್ಷದಂತೆ ಹೊಸ ವರ್ಷದ ಆಗಮನದ ಈ ಕಾಲದಲ್ಲಿ ನಮ್ಮಲ್ಲಿ ಹೊಸ ಹೊಸ ಕನಸುಗಳು ಚಿಗುರಿದರೂ ಅದನ್ನು ನನಸು ಮಾಡಿಕೊಳ್ಳುವುದಕ್ಕಿಂತ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕಾಗಿದೆ.

ಬಹಳಷ್ಟು ಜನರಲ್ಲಿ ಕಳೆದ ವರ್ಷ ಹಾಕಿ ಕೊಂಡ ಯೋಜನೆ ಕಾರ್ಯರೂಪಕ್ಕೆ ತರಲು ಸಾಧ್ಯವಾಗಿಲ್ಲ ಎಂಬ ಕೊರಗಿದೆ. ಕಳೆದ ವರ್ಷ ತಮ್ಮ ಬದುಕನ್ನು ಉಳಿಸಿಕೊಳ್ಳುವುದೇ ಎಲ್ಲರಿಗೂ ಮುಖ್ಯವಾಗಿತ್ತು, ಲಾಕ್ ಡೌನ್ ನಿಂದಾಗಿ ಬದುಕು ಬುಡಮೇಲಾಯಿತು. ತುತ್ತು ಅನ್ನಕ್ಕೂ  ಹಾಹಾಕಾರ ಪಡುವಂತಾಯಿತು. ಈಗಿನ ಪರಿಸ್ಥಿತಿಯಲ್ಲಿ ನಾವು ಹೊಸ ವರ್ಷದಿಂದ ಹೊಸ ಮನುಷ್ಯರಾಗುವ ದೃಢ ನಿರ್ಧಾರಕ್ಕೆ ಬರಬೇಕಿದೆ. ಕೊರೋನಾದ ಬಗ್ಗೆ ಜಾಗ್ರತೆ ವಹಿಸುತ್ತೇನೆ ಎಂಬ ಶಪಥ ಮಾಡಬೇಕಿದೆ. ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸುತ್ತೇನೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತೇನೆ. ಆ ಮೂಲಕ ತನ್ನನ್ನು ಮತ್ತು ತನ್ನ ಅವಲಂಭಿತ ಕುಟುಂಬವನ್ನು ಕೊರೋನಾದಿಂದ ಕಾಪಾಡುತ್ತೇನೆ ಎಂಬ ವಾಗ್ದಾನವನ್ನು ತಪ್ಪದೆ ಮಾಡಬೇಕಿದೆ.

ಕೊರೋನಾದಿಂದಾಗಿ ಬಡತನ ತಾಂಡವವಾಡುತ್ತಿದೆ. ಹೀಗಿರುವಾಗ ಸರಳ ಬದುಕು ಮತ್ತು ದುಶ್ಚಟಗಳಿಗೆ ಇತಿಶ್ರೀ ಹೇಳಿ ಇರುವ ಆದಾಯದಲ್ಲಿ ಬದುಕುವ ಪಣತೊಡಬೇಕಿದೆ. ಹಣ ಖರ್ಚು ಮಾಡಿ ಪಾರ್ಟಿ ಮಾಡಿ ಕುಣಿದು ಕುಪ್ಪಳಿಸುವುದು ಹೊಸವರ್ಷವಲ್ಲ. ಹೊಸವರ್ಷ ಬದುಕಿನಲ್ಲಿ ಹೊಸತನ ನೀಡುವಂತಿರಬೇಕು. ಮೋಜು ಮಸ್ತಿಯೇ ವರ್ಷಾಚರಣೆ ಎಂಬುದನ್ನು ತಲೆಯಿಂದ ತೆಗೆದುಹಾಕಿ ಮನೆಯಲ್ಲಿಯೇ ಕುಟುಂಬದೊಂದಿಗೆ ವರ್ಷಾಚರಣೆ ಮಾಡೋಣ, ನಮ್ಮ ಕುಟುಂಬಕ್ಕೆ ಮತ್ತು ಇಡೀ ಜಗತ್ತಿಗೆ ಒಳ್ಳೆಯದಾಗಲಿ ಎಂದು ಬಯಸೋಣ. ನಾವು ಸಮಾಜದ ನಡುವೆ ಬದುಕುತ್ತಿದ್ದೇವೆ. ಸಮಾಜ ಉತ್ತಮವಾಗಿದ್ದರೆ ಮಾತ್ರ ನಾವೆಲ್ಲರೂ ನೆಮ್ಮದಿಯಾಗಿ ಬದುಕಲು ಸಾಧ್ಯ. ಹೀಗಾಗಿ ನೆಮ್ಮದಿಯ ಜೀವನಕ್ಕೆ ಅಗತ್ಯವಾಗಿರುವುದು ಏನು ಎಂಬುದನ್ನು ಅರಿತು ಅದರಂತೆ ಬದುಕೋಣ. ಹೊಸವರ್ಷದಲ್ಲಿ ಒಳ್ಳೆಯ ಆಲೋಚನೆಗಳೊಂದಿಗೆ ಕೊರೋನಾದ ಬಗ್ಗೆ ಒಂದಷ್ಟು ಜಾಗ್ರತೆ ವಹಿಸುತ್ತಾ ಮುನ್ನಡೆಯೋಣ.. ಇದುವರೆಗೆ ಅನುಭವಿಸಿದ ಕಷ್ಟಗಳು ಇಲ್ಲಿಗೆ ಕೊನೆಯಾಗಿ ಮುಂದಿನ ವರ್ಷದ ದಿನಗಳು ಎಲ್ಲರ ಬಾಳಲ್ಲೂ ಸಂತೋಷ, ಸಡಗರ, ನೆಮ್ಮದಿಯನ್ನು ತರಲಿ ಎಂದು ಆಶೀಸೋಣ…

 

 

 

 

 

 

By admin