ರಾಜೀನಾಮೆಗೆ ಮುಂದಾದ ಗುಂಡ್ಲುಪೇಟೆ ಪುರಸಭಾ ಉಪಾಧ್ಯಕ್ಷೆ

ಗುಂಡ್ಲುಪೇಟೆ: ಪಟ್ಟಣದ ಡಿ. ದೇವರಾಜ ಅರಸು ಕ್ರೀಡಾಂಗಣದಲ್ಲಿ ನಡೆದ 72ನೇ ಗಣರಾಜ್ಯೋತ್ಸವ ವೇದಿಕೆ ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷೆ ದೀಪಿಕಾ ಅಶ್ವಿನ್ ಅವರಿಗೆ ಸೂಕ್ತ ಗೌರವ ಸಿಗದ ಹಿನ್ನೆಲೆಯಲ್ಲಿ ಅವರು ತಮ್ಮ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

 

ಬುಧವಾರ ಗಣರಾಜ್ಯೋತ್ಸದ ಅಂಗವಾಗಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಪುರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ತಾಲ್ಲೂಕು ಆಡಳಿತ ಮತ್ತು ಪುರಸಭೆ ಅಧ್ಯಕ್ಷ ಹಾಗೂ ಸದಸ್ಯರು ತಮಗೆ ಸೂಕ್ತ ಗೌರವ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿ ರಾಜೀನಾಮೆಗೆ ಮುಂದಾಗಿದ್ದಾರೆ.

 

ವ್ಯಕ್ತಿಗೆ ಗೌರವ ಬೇಡ, ಉಪಾಧ್ಯಕ್ಷ ಸ್ಥಾನದ ಹುದ್ದೆಗಾದರೂ ಗೌರವ ನೀಡಿ ಮುಂದಿನ ಸಾಲಿನಲ್ಲಿ ಕೂರಿಸಬಹುದಿತ್ತು. ಪುರಸಭೆ ಸದಸ್ಯರು ಮುಂದೆ ಕುಳಿತು ಉಪಾಧ್ಯಕ್ಷರು ಹಿಂದೆ ಕುಳಿತು ಕೊಳ್ಳುವುದಾದರೇ ಪ್ರೋಟೋಕಾಲ್ ಉಲ್ಲಂಘನೆಯಾಗಿ ನಿಯಮ ಗಾಳಿಗೆ ತೂರಿದಂತಾಗುತ್ತದೆ. ಇದರಿಂದ ವೈಯಕ್ತಿಕವಾಗಿಯೂ ಮನಸ್ಸಿಗೆ ನೋವಾಗಿದೆ ಎಂದು ಉಪಾಧ್ಯಕ್ಷೆ ದೀಪಿಕಾ ಅಶ್ವಿನ್ ದೂರಿದರು.

 

ಬೇಸರದಿಂದ ಹೊರ ನಡೆದಾಗ ಶಾಸಕ ಸಿ.ಎಸ್. ನಿರಂಜನಕುಮಾರ್ ಆಗಲೀ, ಪುರಸಭೆ ಅಧ್ಯಕ್ಷ ಪಿ.ಗಿರೀಶ್, ತಾಲ್ಲೂಕು ರಾಷ್ಟ್ರಿಯ ಹಬ್ಬಗಳ ಆಚರಣಾ ಸಮಿತಿ, ತಹಸೀಲ್ದಾರ್ ಸೇರಿದಂತೆ ಯಾರು ಸಹ ಸಮಾಧಾನ ಪಡಿಸಲು ಮುಂದಾಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವರದಿ: ಬಸವರಾಜು ಎಸ್ ಹಂಗಳ

By admin