ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)
ಮಲೆನಾಡಿನ ಸುಂದರಿ ತೀರ್ಥಹಳ್ಳಿ. ಅವಳ ಸೊಬಗಿಗೆ ಕಣ್ಣು ಹಾಯಿಸಿ, ಅವಳ ಸೌಂದರ್ಯ ವರ್ಣಿಸಿ ಹೊಗಳದೇ ಸುಮ್ಮನೆ ಬರುವವರಿಲ್ಲ. ಎತ್ತ ನೋಡಿದರೂ ಎತ್ತರದ ವಿಧವಿಧವಾದ ಸಹ್ಯಾದ್ರಿಯ ನಿತ್ಯಹರಿದ್ವರ್ಣದ ಮರಗಳು. ತೆಂಗು, ಅಡಿಕೆ ತೋಟಗಳು. ಅಲ್ಲಿನ ಮನೆಗಳು ಹಸಿರು ಹೂಪಾಚಿಯ ಸೊಬಗಿನಿಂದ ಅಲಂಕರಿಸಿರುತ್ತವೆ. ಅಲ್ಲಿನ ಜನಗಳ ಕನ್ನಡ ಭಾಷಾ ಶೈಲಿಯೂ ಸೊಬಗು. ಅಮೋಘವೆನಿಸುವ ತುಳು ಸಂಸ್ಕೃತಿಯ ಮೆರುಗು. ಅಲ್ಲಿನ ದೇವಾಳಗಳು ಸಂಸ್ಕೃತಿಯ ಹೊತ್ತು ನಿಂತ ಭಾರತದ ತವರುಮನೆಯಂತಿವೆ. ಶಿವಮೊಗ್ಗ ಜಿಲ್ಲೆಯಿಂದ ನೈರುತ್ಯ ದಿಕ್ಕಿನಲ್ಲಿರುವ ತೀರ್ಥಹಳ್ಳಿಗೆ ಸರಿ ಸುಮಾರು ಅರವತ್ತೊಂದು ಕಿ.ಮೀ. ಆಗುತ್ತದೆ. ಅಗ್ರಹಾರ, ಆಗುಂಬೆ, ತೀರ್ಥಮುತ್ತೂರು, ಮಂಡಗದ್ದೆ ಇವು ತೀರ್ಥಹಳ್ಳಿ ತಾಲ್ಲೂಕಿನ ಹೋಬಳಿಗಳು. ಇನ್ನೊಂದು ಹೆಮ್ಮೆಯ ವಿಶೇಷ ಎಂದರೆ, ರಾಷ್ಟ್ರಕವಿ ಕುವೆಂಪು ಅವರ ಬಾಲ್ಯದ ಊರು ಕುಪ್ಪಳಿ ಇರುವ ತಾಲ್ಲೂಕು ತೀರ್ಥಹಳ್ಳಿಯಾಗಿದೆ. ತೀರ್ಥಹಳ್ಳಿಯ ಹೃದಯಭಾಗದಿಂದ ಎಂಟು ಕಿ.ಮೀ. ದೂರದಲ್ಲಿರುವ ಕುಪ್ಪಳಿ, ಕವಿಮನೆಯ ತಾಣವಾಗಿದೆ. 150 ವರ್ಷಗಳಷ್ಟು ಹಳೆಯದಾದ, ಮಲೆನಾಡ ಶೈಲಿಯ, ಕುವೆಂಪು ಅವರು ನಲಿದಾಡಿದ ಮನೆಯನ್ನು 2001 ರಲ್ಲಿ ಮರುವಿನ್ಯಾಸಗೊಳಿಸಲಾಗಿದೆ. ಆಗಿನಿಂದ ಕಿಂಚಿತ್ತೂ ಒಡಕು ಕಾಣದೆ ಹೊಸತನ್ನು ಕಾಪಾಡಿಕೊಂಡಿದೆ. ಕವಿಮನೆಯ ಹೊರಾಂಗಣವು ಹೂದೋಟ, ಹಸಿರು ಮೈದಾನದಿಂದ ಕೂಡಿದ್ದು ಬರುವ ಪ್ರವಾಸಿಗರಿಗೆ ಒಂದು ಸುಂದರ ಅನುಭೂತಿಯ ಸ್ವಾಗತಕ್ಕೆ ಸಾಕ್ಷಿಯಾಗುತ್ತದೆ. ಮೂರು ಅಂತಸ್ಥಿನ ಹೆಂಚಿನ ಮನೆ 19 ಮತ್ತು 20ನೇ ಶತಮಾನದ ಭವ್ಯತೆಯನ್ನು ಸಾರಿ ಹೇಳುವ; ಮಲೆನಾಡ ಸಂಸ್ಕೃತಿಯ ವಸ್ತುಗಳಿಂದ ಸಂಗ್ರಹಗೊಂಡು, ಒಂದು ವಿಭಿನ್ನ ಶೈಲಿಯ ಮೂರು ತಲೆಮಾರಿನ ಜೀವನ ರೀತಿಯನ್ನು ಬರುವವರಿಗೆ ಅಕ್ಷರಶಃ ಉಣಬಡಿಸುತ್ತಿದೆ. ಕವಿಮನೆಯ ಹಿಮ್ಮಗ್ಗುಲಲ್ಲಿರುವ ಕವಿಶೈಲ, ಕವಿಯ ಸಮಾಧಿ. ಬೆಟ್ಟದ ಸ್ವರೂಪ ಇರುವ ಕವಿಶೈಲದ ದಾರಿ ಉದ್ದಕ್ಕೂ ಕಲ್ಲಿನ ಮಂಟಪಗಳನ್ನು ಕಾಣಬಹುದು. ಕುವೆಂಪು ಅವರು ಆ ಕವಿಶೈಲದ ತಳದಲ್ಲಿಯೇ ಕುಳಿತು ಅದೆಷ್ಟೋ ವಿಷಯಗಳಿಗೆ ಲೇಖನಿ ಹಿಡಿದ ಪರಿಣಾಮ ಅವರ ಕೃತಿಗಳು ನಮಗೆಲ್ಲರಿಗೂ ಬಹುದೊಡ್ಡ ಕೊಡುಗೆಯಾಗಿದೆ. ತೇಜಸ್ವಿ ಸ್ಮಾರಕ , ಶತಮಾನೋತ್ಸವ ಭವನ, ಕಲಾನಿಕೇತನ, ಕುವೆಂಪು ಸ್ಮಾರಕ ಅರಣ್ಯ, ದೇಸಿ ವಸ್ತು ಸಂಗ್ರಹಾಲಯ ಕುಪ್ಪಳಿಯ ಮತ್ತಿತ್ತರ ವಿಶೇಷತೆಗಳು; ವರ್ಷಪೂರ್ತಿ ದೇಶ ವಿದೇಶಗಳಿಂದ ಇಲ್ಲಿಗೆ ಬರುವ ಪ್ರವಾಸಿಗರಿಗೆ ಹೊಸದಿಗಂತದ ಅನುಭವ ನೀಡಿ ಮತ್ತೆ ಬನ್ನಿ ಎನ್ನುವ ಬೀಳ್ಕೊಡುಗೆ ಕೊಡುತ್ತಿದೆ. ಪಶ್ಚಿಮ ಘಟ್ಟದಲ್ಲಿರುವ ಆಗುಂಬೆ, ತೀರ್ಥಹಳ್ಳಿ ವ್ಯಾಪ್ತಿಯ ಒಂದು ಸುಂದರ ಪ್ರವಾಸಿ ತಾಣ. ದಕ್ಷಿಣದ ಚಿರಾಪುಂಜಿ ಎಂದು ಕರೆಸಿಕೊಳ್ಳುವ ಆಗುಂಬೆ ಹೆಚ್ಚು ಮಳೆ ಬೀಳುವ ಸ್ಥಳವಾಗಿದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ರಮಣೀಯ ಸಾದೃಶ್ಯಕ್ಕೆ ಅದ್ವಿತೀಯವಾಗಿ ಸಾಕ್ಷಿಯಾಗಿದೆ. ಆಗುಂಬೆ ಪ್ರದೇಶ ದಟ್ಟ ಅರಣ್ಯರಾಶಿಯನ್ನು ಹೊಂದಿರುವುದರ ಜೊತೆಗೆ ಅನೇಕ ಸರಿಸೃಪಗಳಿಗೆ ಉತ್ತಮ ವಾತಾವರಣವನ್ನು ಹೊಂದಿರುವುದರಿಂದ ಇಂಬುಳ, ಮರಚಾರಟೆ, ರಕ್ತಹೀರುವ ವಿವಿಧ ಜಾತಿಯ ಕೀಟಗಳಿಂದ ಕೂಡಿದೆ. ಕಾಳಿಂಗಸರ್ಪದ ಸಂತಾನೋತ್ಪತ್ತಿಗೆ ಆಗುಂಬೆ ಪರಿಸರ ಸೂಕ್ತವಾಗಿದ್ದು ಕಾಳಿಂಗಸರ್ಪಗಳು ಹೇರಳವಾಗಿ ಕಂಡುಬರುತ್ತದೆ. ಹಾಗಾಗಿ ಆಗುಂಬೆಯನ್ನು ‘ಕಾಳಿಂಗಸರ್ಪಗಳ ರಾಜಧಾನಿ’ ಎಂಬ ಬಿರುದಿನಿಂದ ಕರೆಯಲಾಗಿದೆ. ಸಹ್ಯಾದ್ರಿಶ್ರೇಣಿಗಳಿಂದ ಹರಿಯುವ ಜಲಪಾತಗಳು ಇಲ್ಲಿನ ಮುಖ್ಯ ವನ್ಯಸೌಂದರ್ಯದ ಆಕರ್ಷಣೆ ಎಂದು ಹೇಳಬಹುದು. ಬರ್ಕಣ ಜಲಪಾತವು ಸೀತಾ ನದಿಯಿಂದ ಹುಟ್ಟನ್ನು ಪಡೆಯುತ್ತದೆ. ಇದರ ಎತ್ತರ ಸು.850 ಅಡಿಗಳಷ್ಟು. ಈ ಜಲಪಾತ, ಆಗುಂಬೆಯಿಂದ 10 ಕಿ.ಮೀ ಅಂತರದಲ್ಲಿದ್ದರೂ, ಆಗುಂಬೆಯ ಎತ್ತರ ತಿರುವಿನಿಂದ ನಿಂತು ನೋಡಿದರೆ; ಆ ವನದೇವಿಯು ಮುಡಿದ ಮೊಗ್ಗಿನ ಜಡೆಯ ಹಾಗೆ ಕಾಣಿಸುತ್ತದೆ. ಭಾರತದ ಏಕೈಕ ಹರಿದ್ವರ್ಣವನ ಸಂಶೋಧನಾ ಕೇಂದ್ರ ಇರುವಲ್ಲಿಯೇ ಇಲ್ಲಿನ ಅರಣ್ಯ ಸಂಪತ್ತಿನ ಮಹತ್ವವನ್ನು ಊಹಿಸಿಕೊಳ್ಳಬಹುದು. ಮಳೆಗಾಲದಲ್ಲಿ ಸಿಡಿಲು, ಗುಡುಗು, ಮಿಂಚು, ಮಳೆಗಳಿಂದ ಭಯಂಕರವೆನಿಸುವ ಆಗುಂಬೆ; ಶಾಂತತೆಯ ಸ್ಥಿತಿಯಲ್ಲಿ ಸ್ವರ್ಗ ಲೋಕದ ಅನುಭವ ತಂದೊಡ್ಡುತ್ತದೆ. ಆಗುಂಬೆಯು ತೀಕ್ಷ್ಣ14 ತಿರುವುಗಳ ಸರ್ಪಲೋಕದ ದಾರಿ ಹೊಂದಿರುವುದು ಸಾವಿರಾರು ವೀಕ್ಷಕರನ್ನು ತನ್ನತ್ತ ಸೆಳೆಯುವುದಕ್ಕೆ ಮುಖ್ಯ ಕಾರಣ. ಆ ತಿರುವುಗಳಲ್ಲಿ ಆ ಸಣ್ಣ ಮಳೆಯ ಜೊತೆಗೆ ಹಿಮದೂಳಿನಿಂದ ಆವೃತ್ತವಾದ ಆ ವನರಾಶಿಯನ್ನು ನೋಡುತ್ತ ವಾಹನಗಳಲ್ಲಿ ಬೆಟ್ಟವನ್ನು ಏರವುದು ಮತ್ತು ಇಳಿಯುವುದೇ ಒಂದು ಅದ್ಭುತ ಪಯಣ. ಎಚ್ಚರ ತಪ್ಪಿದರೆ ಅಪಾಯವಿರುವ ಆಗುಂಬೆಯನ್ನು ಕಂಡರೆ ಭಯ ಎನ್ನುವವರಿಗಿಂತ, ಆ ಸೊಬಗಿಗಿ ಅಷ್ಟೂ ತೊಂದರೆ ತೆಗೆದುಕೊಳ್ಳಲಿಲ್ಲ ಎಂದರೆ ಹೇಗೆ? ಎನ್ನುವವರೇ ಹೆಚ್ಚು. ತೀರ್ಥಹಳ್ಳಿಯಿಂದ ಸಾಲೂರು ಮಾರ್ಗವಾಗಿ 18 ಕಿ.ಮೀ ಆ ದಟ್ಟ ಕಾಡಿನ ಸಹ್ಯಾದ್ರಿ ಶ್ರೇಣಿಯಲ್ಲಿ ಸಾಗಿದಾಗ ಕವಲೇದುರ್ಗ ಎದುರಾಗುತ್ತದೆ. ಕವಲೇದುರ್ಗ ಐತಿಹಾಸಿಕ ಮತ್ತು ಪೌರಾಣಿಕ ನೆಲೆಯಾಗಿದೆ. ಕೆಳದಿ ಸಂಸ್ಥಾನದ ನಾಲ್ಕನೆಯ ಮತ್ತು ಕೊನೆಯ ರಾಜಧಾನಿಯಾಗಿದ್ದ ಇಲ್ಲಿ 9ನೇ ಶತಮಾನದ ಕೋಟೆ ಇದೆ. ಈ ಕೋಟೆಯು ಕೆಳದಿ ಅರಸರ ವಾಸ್ತುಶಿಲ್ಪ ಕಲೆ ಮತ್ತು ಸಂಸ್ಕೃತಿಗೆ ಸಾಕ್ಷಿಯಾಗಿ ಗತಕಾಲದ ಭವ್ಯತೆಯನ್ನು ಪೀಳಿಗೆಯುದ್ದಕ್ಕೂ ಸಾರಿಬರುತ್ತಿದೆ. ಕವಲೇದುರ್ಗ ಮೂರು ಸುತ್ತಿನ ಕೋಟೆಯಾಗಿದ್ದು, ಇದರ ಗಟ್ಟಿತನಕ್ಕೆ ದೊಡ್ಡಗಾತ್ರದ ಪೆಡಸುಕಲ್ಲುಗಳ ಇಟ್ಟಿಗೆಗಳು ಕಾರಣವಾಗಿದೆ. ಮೂರು ಸುತ್ತಿನಲ್ಲೂ ಮಹಾದ್ವಾರಗಳಿದ್ದು ದುರ್ಗದ ತುದಿಯಲ್ಲಿ ಶಿಖರೇಶ್ವರ ದೇವಾಲಯವಿದೆ. ಅಲ್ಲಿರುವ ನಾಗತೀರ್ಥವೆಂಬ ಕೊಳವು ಇಂದಿಗೂ ಗಾಜಿನ ಕನ್ನಡಿಯಂತಿದೆ. ನಮ್ಮ ಮುಖಬಿಂಬ ಪ್ರತಿರೂಪ ಪಡೆಯುವಷ್ಟು ಶುದ್ಧವಾಗಿದೆ. ಅಲ್ಲಿನ ಪ್ರಶಾಂತತೆಗೆ ಧ್ವನಿಗೂಡಿಸುವ ಬೆಳ್ಳಕ್ಕಿ ಸದ್ದು ಆ ಕೋಟೆಯಿಂದ ಪ್ರವಾಸಿಗರನ್ನು ಹೊರಹೋಗದಂತೆ ಮೃದುವಾಗಿ ಬಂಧಿಸುತ್ತದೆ. ಸಿಂಧೂಬಯಲಿನ ನಾಗರಿಕತೆಯ ಉತ್ಖನನದಲ್ಲಿ ಪತ್ತೆಯಾದ ಮನೆ, ಕಟ್ಟಡಗಳು, ಕಂಬದ ಜಗುಲಿ, ಇನ್ನಿತರ ಗೃಹಪಯೋಗಿ ವಸ್ತುಗಳ ರೀತಿ ಇಲ್ಲಿಯೂ ಉತ್ಖನನದ ವೇಳೆ ದೊರಕಿದೆ. ಇಲ್ಲಿನ ಅವಶೇಷಗಳ ಒಟ್ಟು ಭವ್ಯತೆಗೆ ತೀರ್ಥಹಳ್ಳಿ ನಾಗರಿಕತೆ ಎಂದರೆ ತಪ್ಪಾಗಲಾರದು. ಇನ್ನೂ ಅನೇಕ ವಿಸ್ಮಯಗಳನ್ನು ಹೊಂದಿರುವ ಕವಲೇದುರ್ಗ ತಣ್ಣನೆಗಾಳಿಯೊಂದಿಗೆ ಪ್ರವಾಸಿಗರಿಗೆ ಕೈಬೀಸಿ ಕರೆಯುತ್ತಿದೆ. ಜೈನರ ಪವಿತ್ರ ಸ್ಥಳವಾದ ಮತ್ತು 1343ಮೀ ಎತ್ತರವಿರುವ ಕುಂದಾದ್ರಿ ಬೆಟ್ಟವು ತೀರ್ಥಹಳ್ಳಿಯಿಂದ ಆಗುಂಬೆ ಮಾರ್ಗವಾಗಿ ಹೋಗುವಾಗ ಗುಡ್ಡಕೇರಿ ಎಂಬ ಗ್ರಾಮದಿಂದ 6 ಕಿ.ಮೀ ಅಂತರದಲ್ಲಿ ತೀರ್ಥಹಳ್ಳಿಯ ಕಿರೀಟವಾಗಿ ಕಾಣಿಸುತ್ತದೆ. ಬೆಟ್ಟದ ಮೇಲೆ ಪಾಶ್ರ್ವನಾಥ ಚೈತ್ಯಾಲಯವಿದೆ. ಈ ಬೆಟ್ಟದಲ್ಲಿ ಜೈನಮುನಿ ಕುಂದಕುಂದಚಾರ್ಯ ಮಹರ್ಷಿಗಳು ತಪಸ್ಸು ಮಾಡಲಾಗಿ ಈ ಬೆಟ್ಟಕ್ಕೆ ಕುಂದಾದ್ರಿಬೆಟ್ಟ ಎಂದು ಹೆಸರು ಬಂದಿರುವುದಾಗಿ ಜನಜನಿತ ಮಾತಿದೆ. ಇಲ್ಲಿಗೆ ಪ್ರತೀವರ್ಷ ನೂರಾರು ಚಾರಣಿಗರು ಬಂದು ಚಾರಣ ಮಾಡಿ ಹೋಗುತ್ತಾರೆ. ಈ ಬೆಟ್ಟಕ್ಕೆ ಕಿರಿದಾದ ದಾರಿಯಿದೆ. ಮುಗಿಲೆತ್ತರದ ಮರಗಳು ಚಪ್ಪರ ಹಾಸಿದಂತೆ ದಾರಿ ಉದ್ದಕ್ಕೂ ಆಕಾಶವನ್ನು ಮರೆಮಾಡಿ ಅಂಟಿ ನಿಂತಿವೆ. ಮಳೆಯ ಸ್ಪರ್ಶಕ್ಕೆ ಮೆದುವಾದ ಮಣ್ಣು ಘಮಗುಟ್ಟುವಾಗ ತಣ್ಣನೆಯ ಗಾಳಿ ಮರಗಿಡಗಳ ಬಳಸಿ ಹಿತಮಿತವಾಗಿ ಪ್ರವಾಸಿಗರತ್ತ ಸುಳಿದು ಮೈಮನಗಳನ್ನು ಆಹ್ಲಾದಗೊಳಿಸುತ್ತದೆ. ತೀರ್ಥಹಳ್ಳಿಯ ಸೊಬಗು ನಮ್ಮ ಕರ್ನಾಟಕದ ಹಿರಿಮೆ. ನಮ್ಮ ಭಾರತದ ಸಂಪನ್ಮೂಲ. ಇದನ್ನು ಅನುದಿನ ನೋಡಿ ಆ ಅನುಭೂತಿಯನ್ನು ಅನುಭವಿಸುತ್ತಿರುವವರೇ ಪುಣ್ಯವಂತರು. ನಮಗೂ ಅಲ್ಲಿಗೆ ಹೋಗುವ ಅವಕಾಶವಿರುವುದೇ ಅದೃಷ್ಟವು. ನಿಸರ್ಗದ ಮಡಿಲಿನಲ್ಲಿ ಮನತಣಿಯ ಬಯಸುವವರಿಗೆ ಇದು ತವರುಮನೆ.

ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)
ಯುವಸಾಹಿತಿ,ವಿಮರ್ಶಕ, ಸಂಶೋಧಕ.
ಎಚ್.ಡಿ.ಕೋಟೆ, ಮೈಸೂರು.
ದೂರವಾಣಿ ಸಂಖ್ಯೆ:-8884684726
Gmail I’d:-manjunathabr709@gmail.com