
ನಂಜನಗೂಡು: ಹುಲಿ ದಾಳಿಗೆ ತುತ್ತಾಗಿ ಸುಮಾರು 1 ಲಕ್ಷದ 20 ಸಾವಿರ.ರೂ.ಮೌಲ್ಯದ 2 ಇಲಾತಿ ಹಸುಗಳನ್ನು ಕಳೆದುಕೊಂಡು ಅತಂತ್ರರಾಗಿದ್ದ ರೈತ ಕುಟುಂಬಕ್ಕೆ ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಹಾಗೂ ಭೂಮಿಪುತ್ರ ರೈತಮಿತ್ರ ಸಂಸ್ಥೆಯ ಸಂಸ್ಥಾಪಕರಾದ ಚಂದನ್ ಗೌಡ ಸಾಂತ್ವನ ಹೇಳಿ, ಧನಸಹಾಯ ಮಾಡಿದರು.

ಘಟನೆ ನಡೆದಿದ್ದ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಹೋಬಳಿ ಬಂಡೀಪುರ ಅರಣ್ಯದ ಅಂಚಿನಲ್ಲಿ ಇರುವ ಮಹದೇವನಗರ ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ ಚಂದನ್ ಗೌಡ ಅವರು, ಕುಟುಂಬಕ್ಕೆ ಮೂಲಾಧಾರವಾಗಿದ್ದ ಹಸುಗಳನ್ನು ಕಳೆದುಕೊಂಡು ದುಖಿ:ತರಾಗಿದ್ದ ಸಾಕಮ್ಮ-ಪಾಪಣ್ಣ ದಂಪತಿಗಳಿಗೆ ಸಾಂತ್ವನ ಹೇಳಿ, ನಿಮ್ಮ ಜೊತೆ ನಾವಿದ್ದೇವೆ ಎಂದು ಭರವಸೆ ಮತ್ತು ಧೈರ್ಯ ತುಂಬಿದರಲ್ಲದೇ, ನೊಂದ ಕುಟುಂಬಕ್ಕೆ ವೈಯಕ್ತಿಕವಾಗಿ ಧನ ಸಹಾಯ ಮಾಡಿದರು.
ಬಳಿಕ ಮಾತನಾಡಿದ ಅವರು,ಕುಟುಂಬಕ್ಕೆ ಆಧಾರವಾಗಿದ್ದ ಹಸುಗಳು ಹುಲಿಗೆ ಬಲಿಯಾಗಿವೆ.ಇದೀಗ ಹಸುಗಳಿಲ್ಲದೇ ಈ ಕುಟುಂಬ ಕಂಗಾಲಾಗಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅರಣ್ಯ ಇಲಾಖೆಯವರು ಈ ಬಗ್ಗೆ ಗಮನಹರಿಸಿ, ಇವರಿಗೆ ಸರ್ಕಾರದಿಂದ ದೊರಕುವ ಪರಿಹಾರವನ್ನು ದೊರಕಿಸಿಕೊಡಬೇಕೆಂದು ಒತ್ತಾಯಿಸಿದರಲ್ಲದೇ, ಕಾಡಂಚಿನ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ದಾಳಿ ತಡೆಗಟ್ಟಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಭೂಮಿಪುತ್ರ ರೈತಮಿತ್ರ ಬಳಗದ ಹರೀಶ್. ಮೂರ್ತಿ. ಕಂದಸ್ವಾಮಿ ಹಾಗೂ ಶಿವಣ್ಣ ಇನ್ನಿತರರು ಹಾಜರಿದ್ದರು.