ಮೈಸೂರು: ಸರಗೂರು ತಾಲೂಕಿನ ಸಾಗರೆ ಗ್ರಾಮದ ಎಸ್.ಎಂ. ನಂಜೇಗೌಡ ಅವರ ಕುಟುಂಬಕ್ಕೆ ಗ್ರಾಮದ ಹಲವರು ಒಟ್ಟುಗೂಡಿ ಕ್ಷಲ್ಲಕ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ, ಎಸ್ಪಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ವಿಳಂಬ ಮಾಡಿದರೆ ಅಲ್ಲಿನ ಗ್ರಾಪಂ ಕಚೇರಿ ಎದುರು ಕರ್ನಾಟಕ ಪ್ರಜಾಪಾರ್ಟಿ(ರೈತ ಪರ್ವ) ವತಿಯಿಂದ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ರಾಜ್ಯಾಧ್ಯಕ್ಷ ಡಾ.ಬಿ. ಶಿವಣ್ಣ ಎಚ್ಚರಿಸಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಗ್ರಾಮದ ನಂಜೇಗೌಡ ಹಾಗೂ ಇವರ ಕುಟುಂಬದ ದೊಡ್ಡತಾಯಮ್ಮ ಸತತವಾಗಿ ಸಾಗರೆ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರಾಗಿ ಗ್ರಾಮಕ್ಕೆ ಮಾತ್ರವಲ್ಲದೆ, ಇತರರಿಗೂ ನೆರವಾಗಿದ್ದಾರೆ. ಇದನ್ನು ಗ್ರಾಮದ ಕೆಲ ಸಮುದಾಯ ಸಹಿಸುತ್ತಿಲ್ಲ. ಹೀಗಾಗಿ ನಂಜೇಗೌಡ ಅವರು ಮನೆ ನಿರ್ಮಿಸಿಕೊಂಡಿರುವ ಜಾಗ ಖರಾಬು ಎಂದು ಸುಳ್ಳು ಹೇಳುತ್ತ, ೩ ತಿಂಗಳೊಳಗಾಗಿ ಮನೆ ಖಾಲಿ ಮಾಡಿ, ಜಾಗ ನೀಡಬೇಕು ಎಂದು ಬೆದರಿಕೆ ಹಾಕಿದ್ದರು. ಇದಕ್ಕೆ ಇವರು ಜಗ್ಗದಿದ್ದಾಗ ಈಗ ಇವರ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ, ಎಸ್ಪಿ, ತಹಶೀಲ್ದಾರರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಹೀಆಗಿ ಸಂಬ0ಧಿಸಿದವರು ಕ್ರಮ ಕೈಗೊಳ್ಳದಿದ್ದರೆ ಸಾಗರೆ ಗ್ರಾಪಂ ಎದುರು ಪ್ರತಿಭಟನೆ ನಡೆಸಿ, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು.
ಬಹಿಷ್ಕಾರಕ್ಕೆ ಒಳಗಾಗಿರುವ ಎಸ್.ಎಂ. ನಂಜೇಗೌಡ, ದೊಡ್ಡತಾಯಮ್ಮ ಸಹಾ ತಮ್ಮ ನೋವು ತೋಡಿಕೊಂಡರು. ನಂಜೇಗೌಡರ ಪುತ್ರ ವಕೀಲ ಸಾಗರೆ ಶಿವಕುಮಾರ್, ಪಕ್ಷದ ಪದಾಧಿಕಾರಿಗಳಾದ ಭಾಗ್ಯಮ್ಮ, ವರಕೋಡು ಕೃಷ್ಣೇಗೌಡ, ಸಿಂಧುವಳ್ಳಿ ಶಿವಕುಮಾರ್, ಪ್ರದೀಪ್ಕ ಶ್ರೀನಿವಾಸ್ ಇನ್ನಿತರರು ಇದ್ದರು.