* ಸುಯೋಗ್ ಆಸ್ಪತ್ರೆಯಲ್ಲಿ ಉಚಿತ ಹೃದ್ರೋಗ, ಆ್ಯಂಜಿಯೋಪ್ಲಾಸ್ಟಿ ತಪಾಸಣಾ ಶಿಬಿರಕ್ಕೆ ಸಚಿವರ ಚಾಲನೆ

* ಸುಯೋಗ್ ಆಸ್ಪತ್ರೆಯ ಕಾರ್ಯವೈಖರಿಗೆ ಸಚಿವರ ಶ್ಲಾಘನೆ

* ಸೋಮಶೇಖರ್ ಅವರು ಅತ್ಯುತ್ತಮ ಉಸ್ತುವಾರಿ ಸಚಿವರು; ಡಾ. ಸುಯೋಗ್ ಯೋಗಣ್ಣ

ಮೈಸೂರು: ಇಂದು ರಾಜ್ಯದಲ್ಲಿ ಬಹಳಷ್ಟು ಖಾಸಗಿ ಆಸ್ಪತ್ರೆಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಸಾಮಾಜಿಕ ಬಾಧ್ಯತೆಯನ್ನೂ ಹೊತ್ತುಕೊಂಡಿವೆ. ಬಡ ರೋಗಿಗಳಿಗೆ ಸಹಾಯವಾಗುವಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಅದರಲ್ಲಿ ಮೈಸೂರಿನ ಸುಯೋಗ್ ಆಸ್ಪತ್ರೆ ಸಹ ಮುಂದಿದೆ. ಇದೇ ರೀತಿ ಖಾಸಗಿ ಆಸ್ಪತ್ರೆಗಳು ಮುಂದೆ ಬರಬೇಕು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಶ್ಲಾಘನೆ ವ್ಯಕ್ತಪಡಿಸಿದರು.

ಇಲ್ಲಿನ ಸುಯೋಗ್ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಉಚಿತ ಹೃದ್ರೋಗ ತಪಾಸಣೆ ಹಾಗೂ ಆ್ಯಂಜಿಯೋಪ್ಲಾಸ್ಟಿ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಸುಯೋಗ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಯೋಗಣ್ಣ ಅವರು ಹಾಗೂ ಅವರ ತಂಡ ಬಡ ರೋಗಿಗಳ ವಿಚಾರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇಂತಹ ಸಾಮಾಜಿಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಮೈಸೂರಿನಲ್ಲೇ ಮೊದಲ ಖಾಸಗಿ ಆಸ್ಪತ್ರೆಯಾಗಿದೆ ಎಂದು ಹೇಳಲು ಸಂತಸವಾಗುತ್ತದೆ ಎಂದು ತಿಳಿಸಿದರು.

ಕೇಂದ್ರದ ನಿಯಮದಂತೆ ಆಯುಷ್ಮಾನ್ ಭಾರತ ವಿಮಾ ಯೋಜನೆ ಜಾರಿಯಾಗಲಿ; ಸಂಸದ ಪ್ರತಾಪ್ ಸಿಂಹ

ಸಂಸದರಾದ ಪ್ರತಾಪ್ ಸಿಂಹ ಮಾತನಾಡಿ, ಆಯುಷ್ಮಾನ್ ಭಾರತ್ ಯೋಜನೆಯು ವಿಶ್ವದ ಅತಿದೊಡ್ಡ ಆರೋಗ್ಯ ವಿಮೆಯಾಗಿದೆ. ಆದರೆ, ಹಿಂದಿನ ಸರ್ಕಾರದ ಸಚಿವರು ಅದಕ್ಕೆ ಕೆಲವು ತಿದ್ದುಪಡಿ ತಂದಿದ್ದರಿಂದ ಜನಕ್ಕೆ ನೇರ ಲಾಭವಾಗುತ್ತಿಲ್ಲ. ಮೊದಲು ತಾಲೂಕು ಸರ್ಕಾರಿ ಆಸ್ಪತ್ರೆ, ಜಿಲ್ಲಾಸ್ಪತ್ರೆಗಳ ರೆಫರೆನ್ಸ್ ಸೆಂಟರ್ ಅನ್ನು ತೆಗೆದುಹಾಕಿ, ಖಾಸಗಿ ಆಸ್ಪತ್ರೆಗಳನ್ನು ಪಟ್ಟಿ ನೀಡುವ ಕೆಲಸವಾಗಬೇಕು. ಈ ಬಗ್ಗೆ ಉಸ್ತುವಾರಿ ಸಚಿವರಾದ ಸೋಮಶೇಖರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಲಾಗುವುದು. ಹೀಗಾಗಿ ಸರ್ಕಾರಿ ಆಸ್ಪತ್ರೆಗಳಿಂದ ಯಾವುದೇ ಅನುಮತಿ ಇಲ್ಲದೆ, ಮಾಡಿಕೊಡುವ ಬಗ್ಗೆ ತಿದ್ದುಪಡಿಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸೋಮಶೇಖರ್ ಅವರು ಅತ್ಯುತ್ತಮ ಉಸ್ತುವಾರಿ ಸಚಿವರು; ಡಾ. ಸುಯೋಗ್ ಯೋಗಣ್ಣ

ಸುಯೋಗ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸುಯೋಗ್ ಯೋಗಣ್ಣ ಮಾತನಾಡಿ, ಮೈಸೂರಿಗೆ ಒಬ್ಬ ಅತ್ಯುತ್ತಮ ಉಸ್ತುವಾರಿ ಸಚಿವರನ್ನು ಕಂಡಿದ್ದೇವೆ. ಸೋಮಶೇಖರ್ ಅವರು ಜನರಿಗೆ ಸುಲಭವಾಗಿ ಲಭ್ಯವಾಗುವಂತಹ ಜನನಾಯಕರಾಗಿದ್ದಾರೆ. ಜೊತೆಗೆ ಮೈಸೂರು ಜಿಲ್ಲೆಯ ಅಭಿವೃದ್ಧಿಗೂ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

ಆಯುಷ್ಮಾನ್ ಭಾರತ್ ಯೋಜನೆ ಬಹಳ ಉತ್ತಮವಾಗಿದ್ದು, ಕೇಂದ್ರದಿಂದ ಬಂದಂತೆಯೇ ನೀತಿಗಳನ್ನು ಅಳವಡಿಸಿದರೆ ನಿಜಕ್ಕೂ ಸಾರ್ವಜನಿಕರಿಗೆ ಉಪಯೋಗವಾಗಲಿದೆ. ಆದರೆ, ಹಿಂದಿನ ಸರ್ಕಾರ ಅದಕ್ಕೆ ತಿದ್ದುಪಡಿ ತಂದು ಬದಲಾವಣೆ ಮಾಡಿದ್ದರಿಂದ ಜನರಿಗೆ ತೊಂದರೆಯಾಗುತ್ತಿದೆ. ಇದನ್ನು ಉಸ್ತುವಾರಿ ಸಚಿವರಾದ ಸೋಮಶೇಖರ್ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಬಗೆಹರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್, ಮೈಸೂರು ಪತ್ರಕರ್ತರ ಸಂಘದ ಅಧ್ಯಕ್ಷರಾದ ರವಿಕುಮಾರ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ಉಚಿತ ತಪಾಸಣೆಯ ಫಲಾನುಭವಿಗಳು ಹಾಜರಿದ್ದರು

By admin