ಪರ್ವಗಳ ದೇಶವೆಂದರೆ ನಮ್ಮ ಭಾರತ. ಅನೇಕ ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸಿ ಆಚರಿಸಿಕೊಂಡು ಬಂದ ನಮ್ಮ ದೇಶದ ಪರ್ವಗಳಿಗೆ ತನ್ನದೇ ಆದ ವಿಶೇಷವಿದೆ. ಹಾಗೇ ಭಾರತೀಯರ ಪರ್ವಗಳಲ್ಲಿ ಉತ್ತರಾಯಣ ಪುಣ್ಯಕಾಲದಲ್ಲಿ ಪ್ರಾರಂಭವಾಗುವ ಮಕರ ಸಂಕ್ರಾಂತಿಯೂ ಒಂದು. ಇದು ಎಳ್ಳಿನ ದಾನಕ್ಕೆ ಹೆಸರಾದ ಒಂದು ಹಬ್ಬ. ಬೇರೆ ಸಮಯಗಳಲ್ಲಿ ಎಳ್ಳನ್ನು ದಾನವಾಗಿ ಕೊಡುವುದಿಲ್ಲ…ಆದರೆ ಈ ಹಬ್ಬ ಎಳ್ಳಿನ ದಾನಕ್ಕೆ ಶ್ರೇಷ್ಠವಾಗಿದೆ. ಇದು ಉತ್ತರಾಯಣನ ಪುಣ್ಯ ಕಾಲವಾದ್ದರಿಂದ ಇಡೀ ಉತ್ತರಾಯಣವೇ ದೇವತೆಗಳಿಗೆ ಪ್ರಿಯವಾಗಿದ್ದು, ದೇವಕಾರ್ಯಗಳಿಗೆ ಪ್ರಶಸ್ತವಾಗಿದೆ..ಉಪನಯನ,ಗೋದಾನ,ಮದುವೆ, ಚೌಲ, ಬ್ರಹ್ಮ ಚರ್ಯದ ಕೊನೆ ಘಟ್ಟ ವ್ರತಚತುಷ್ಟಯ ಇಂತಹ ಮುಂತಾದ ಶುಭಕಾರ್ಯಗಳನ್ನು ಈ ಸಮಯದಲ್ಲಿ ಮಾಡುವುದು ಅತ್ಯಂತ ಶ್ರೇಯಸ್ಕರ ಎಂದು ಪುರಾಣಗಳು ಸಾರುತ್ತವೆ. ಸಂಕ್ರಮಣವೆಂದರೆ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೆಜ್ಜೆ ಇಡುವಂತೆ ದರ್ಶನವಾಗುವುದು ಎಂದರ್ಥ ಕೊಡುತ್ತದೆ.

ಹಾಗೆಯೇ ಸೂರ್ಯನು ರಾಶಿಯಲ್ಲಿ ಅಷ್ಟೇ ಅಲ್ಲದೆ ಗ್ರಹಗಳು, ನಕ್ಷತ್ರಗಳು ಮತ್ತು ರಾಶಿಗಳಲ್ಲಿ ಪ್ರವೇಶಮಾಡುವುದು ಈ ಸಂಕ್ರಮಣ ಪುಣ್ಯಕಾಲದಲ್ಲೇ.. ಇಂತಹ ಸಂಕ್ರಾಂತಿಗಳು ಒಟ್ಟು ಹನ್ನೆರಡು.. ಮೇಷ, ವೃಷಭ,ಮಿಥುನ……ಮೀನ ಹೀಗೆ ಹನ್ನೆರಡು ಸಂಕ್ರಾಂತಿ. ಇವುಗಳಲ್ಲಿ ಕರ್ಕಾಟಕ ಮತ್ತು ಮಕರ ಸಂಕ್ರಾಂತಿಗಳು ಮಾತ್ರ ಆಯನ ಸಂಕ್ರಾಂತಿಗಳಾಗಿವೆ ಮೇಷ,ತುಲಾಸಂಕ್ರಮಣಗಳು ವಿಷುವ ಸಂಕ್ರಾಂತಿಗಳು, ಮಿಥುನ,ಕನ್ಯಾ, ಧನಸ್ಸು, ಮೀನ ಹೀಗೆ ಕೆಲವು ರಾಶಿಗಳಲ್ಲಿ ಸಂಕ್ರಮಣಗಳು ಷಡಶೀತಿ ಮುಖ ಸಂಕ್ರಾಂತಿಗಳು, ವೃಷಭ,ಸಿಂಹ, ವೃಶಿ,ಕುಂಭ ಸಂಕ್ರಮಣಗಳು ವಿಷ್ಣುಪದ ಸಂಕ್ರಾಂತಿಗಳೆಂದು ವಿಂಗಡಿಸಬಹುದು…. ಹೀಗೆ ಹನ್ನೆರಡು ಸಂಕ್ರಮಣಗಳಿದ್ದರೂ ಮಕರ ಸಂಕ್ರಾಂತಿಯನ್ನೇ ಸಂಕ್ರಾಂತಿ ಎಂದು ಕರೆಯಲು ಕಾರಣ ಇದು ಅತ್ಯಂತ ಪವಿತ್ರವಾದ ಸಂಕ್ರಾಂತಿಯಾಗಿದೆ. ಉಳಿದ ಸಂಕ್ರಾಂತಿಯನ್ನು ಆಚರಿಸಲು ಆಗದವರು ಈ ಸಂಕ್ರಾಂತಿಯನ್ನು ಅವಶ್ಯವಾಗಿ ಆಚರಿಸಲೇ ಬೇಕು.

‘ ಅಯನ ‘ ಎಂದರೆ ಮಾರ್ಗ. “ಅಯನಂವರ್ತ್ಮಮಾರ್ಗಾಧ್ವ ಪಂಥಾನಃ ಪದವೀ ಸ್ಮೃತಿಃ ” ಉತ್ತರಾಯಣದ ಎಂದರೆ ಉತ್ತರದ ಮಾರ್ಗ. ಉತ್ತರ ದಿಕ್ಕಿನಲ್ಲಿ ಸೂರ್ಯನು ಸಂಚರಿಸುವಂತೆ ಕಾಣುವ ಕಾಲವಿಶೇಷವನ್ನು ಪರಿಭಾಷಿಕವಾಗಿ ‘ಉತ್ತರಾಯಣ’ ಎನ್ನಲಾಗುತ್ತದೆ. ಉತ್ತರಾಯಣದ ವಿಶೇಷತೆ ಎಂದರೆ ‘ ದೇವತೆಗಳ ಹಗಲು’ ಎಂದು ಕರೆಯಲ್ಪಟ್ಟು ದೇವತೆಗಳಿಗೆ ಪ್ರೀತಿಕರವಾದ ವೇದವ್ರತ, ವಿವಾಹ, ಉಪನಯನ, ಚೂಡಾಕರ್ಮ ಇತ್ಯಾದಿಗಳಿಗೆ ಪ್ರಶಸ್ತ್ಯ. ಇದಕ್ಕೆ ವಿರುದ್ಧವಾಗಿ ದೇವತೆಗಳಿಗೆ ರಾತ್ರಿಯೆಂದು ಕರೆಯಲ್ಪಟ್ಟು ಪಿತೃದೇವತೆಗಳಿಗೆ ಪ್ರಿಯವಾದ ಶ್ರಾದ್ಧಾದಿಗಳಿಗೆ ಪ್ರಶಸ್ತವಾದದ್ದು ‘ ದಕ್ಷಿಣಾಯನ ‘ ಎನ್ನಲಾಗುತ್ತದೆ.
ಸೂರ್ಯನಾರಾಯಣನು ದಕ್ಷಿಣದಿಂದ ಉತ್ತರ ದಿಕ್ಕಿಗೆ ಹೆಜ್ಜೆ ಇಡಲು ಪ್ರಾರಂಭಿಸುವ ಪವಿತ್ರ ಸಮಯವಾಗಿದೆ.ವಿಶೇಷ ವಿಧಿಯಿಂದ ಹಾಲನ್ನು ಕಾಯಿಸಿ ಉಕ್ಕಿಸುವುದರಿಂದ ‘ ಪೊಂಗಲ್‘ ಹಬ್ಬಎಂದೂ,,,,,ಎಳ್ಳಿನೊಡನೆ ಬೇರೆಬೇರೆ ಉಪಸ್ಕರಗಳನ್ನು ಮಿಶ್ರ ಮಾಡಿ ದಾನ ಮಾಡುವುದರಿಂದ ಎಳ್ಳಿನ ಹಬ್ಬವೆಂಬ ಕರೆಯೇ ಘಟ್ಟಿಯಾಗಿ ಉಳಿಯಿತು. ಇದು ಸೌರಮಾನದ ಹಬ್ಬ. ಮಕರಮಾಸದ ಪ್ರಾರಂಭದ ಹಬ್ಬ. ಜನವರಿಯಲ್ಲಿ 12,13,ಅಥವಾ 14 ರಂದು ಬರುವ ಪರ್ವ. ಸೂರ್ಯನ ಪ್ರವೇಶಕಾಲವನ್ನು ಸಾಮಾನ್ಯರಿಗೆ ನಿರ್ಧರಿಸುವುದು ಕಷ್ಟ. ಇದನ್ನು ಯೋಗಿಗಳು ಮಾತ್ರವೇ ನಿರ್ಧರಿಸಬಲ್ಲರು. ಈ ಮುಖ್ಯ ಕಾಲವನ್ನು ತಿಳಿಯುವುದು ನಮ್ಮಂತಹ ಸಾಮಾನ್ಯ ಜನರಿಗೆ ಕಷ್ಟ ಎಂದೇ ಯಥೋಚಿತವಾಗಿ ಹಿಂದೆ ಮುಂದಿನ ಕಾಲಗಳಲ್ಲಿ ಆಚರಿಸುವೆವು. ಆದರೆ ಕರ್ಮಾಚರಣೆಯ ಕಾಲವು ಸಂಕ್ರಾಂತಿಗೆ ಎಷ್ಟೆಷ್ಟು ಹತ್ತಿರವಾಗಿದ್ದರೆ ಅಷ್ಟಷ್ಟು ಉತ್ತಮ ಎಂದು ಶಾಸ್ತ್ರಗಳು ಹೇಳುತ್ತವೆ.
ಸಂಕ್ರಮಣವು ಹುಟ್ಟುವುದಕ್ಕೆ ಹಿಂದಿನ ಮತ್ತು ಮುಂದಿನ ಮುವತ್ತು ನಾಡಿಗಳು ಪವಿತ್ರವಾದವು. ಷಡಶೀತಿ ಸಂಕ್ರಮಣಗಳಲ್ಲಿ ಅರವತ್ತು ಘಳಿಗೆಗಳೂ, ವಿಷ್ಣುಪದಿ ಸಂಕ್ರಮಣದಲ್ಲಿ ಹದಿನಾರು ಘಳಿಗೆಗಳೂ ಪವಿತ್ರವಾದವು.ಅದನ್ನು ಮೀರಬಾರದು ಎಂದು ಸಾಮಾನ್ಯ ಜನರಿಗೆ ಕಾಲವನ್ನು ನಿಗಧಿಮಾಡಲಾಗಿದೆ. ಅವೆಂದರೆ 3,4,5,7,8,9 ಅಥವಾ12 ಘಳಿಗೆಗಳೂ ಕ್ರಮವಾಗಿ ಪುಣ್ಯತಮ ಕಾಲ ಎಂದು ಹೇಳಲಾಗಿದೆ. ಹಲವು ಕಾಲಗಳು ನಿರ್ಣಯವಾದರೂ ನಾವು ಗಣನೆಗೆ ತೆಗೆದುಕೊಳ್ಳುವುದು ಮಕರ ಸಂಕ್ರಮಣ ಮಾತ್ರ. ಉತ್ತರಾಯಣ ( ಮಕರ ),ದಕ್ಷಿಣಾಯನ ( ಕರ್ಕಾಟಕ) ಕಾಲಗಳಲ್ಲಿ ಕರ್ಮಾಚರಣೆಯನ್ನು ದಕ್ಷಿಣ ಭಾರತದಲ್ಲಿ ಆಚರಿಸುವುದೆಂದರೆ ಉತ್ತರಾಯಣ ಪುಣ್ಯಕಾಲದಲ್ಲಿ ಪುಣ್ಯ ಕಾಲವು ಹುಟ್ಟಿದ ಆ ನಂತರ 20 ಘಳಿಗೆಯವರೆಗೂ…….ದಕ್ಷಿಣಾಯನದಲ್ಲಿ ಪುಣ್ಯ ಕಾಲವು ಹುಟ್ಟುವುದಕ್ಕೆ ಮೊದಲು 20 ಘಳಿಗೆಯವರೆಗೂ ಕರ್ಮವನ್ನು ಆಚರಿಸಬಹುದು. ಅಲ್ಲಿಗೆ ಎರಡರಲ್ಲೂ ಉತ್ತರಾಯಣದಲ್ಲೇ ಕರ್ಮಾಚರಣೆಯು ನಡೆಯುತ್ತದೆ. ” ಅಯನೇ ವಿಂಶತಿಃ ಪೂರ್ವಂ ಅಯನೇ ವಿಶಂತಿಃ ಪರಂ ” ಎನ್ನಲಾಗಿರುವುದನ್ನು ಗಮನಿಸಬಹುದು.

ಸಂಕ್ರಾಂತಿಯು ಹಗಲಿನಲ್ಲಿ ಸೂರ್ಯಾಸ್ತ ಸಮಯಕ್ಕೆ2 ಅಥವಾ ಅದಕ್ಕಿಂತ ಕಡಿಮೆ ಘಳಿಗೆ ಮಾತ್ರ ಇರುವಾಗ ಬಂದರೆ ಮಿಥುನ,ಕನ್ಯಾ, ಮೀನ, ಧನಸ್ಸು ಮತ್ತು ಮಕರ ಸಂಕ್ರಾಂತಿಗಳಲ್ಲಿ ಪುಣ್ಯಕಾಲವು ಸಂಕ್ರಾಂತಿಗೆ ಮೊದಲೇ ಎಂದು ತಿಳಿಯಬೇಕು. ಸಂಕ್ರಾಂತಿಯು ಪ್ರಾತಃಕಾಲದಲ್ಲಿ (ಸೂರ್ಯೋದಯ )ಬಂದರೆ ಉಳಿದ ರಾಶಿಗಳಲ್ಲಿ ಪುಣ್ಯಕಾಲವು ಆನಂತರ ಎಂದು ತಿಳಿಯಬೇಕು. ಇಲ್ಲಿ ತಿಳಿಸಿದ ಸಮಯದಲ್ಲಿ ಪುಣ್ಯ ಕಾಲವನ್ನು ನಿರ್ಧರಿಸಿ ಆ ಸಮಯದಲ್ಲಿ ಸ್ನಾನ, ಜಪ ಧ್ಯಾನ, ಶ್ರಾದ್ಧಾ ,ತರ್ಪಣಾದಿಗಳನ್ನು ಮಾಡಬೇಕಾಗುತ್ತದೆ.
ಈ ಸಂಕ್ರಾಂತಿಯು ಗ್ರಹಣದಷ್ಟೇ ಪುಣ್ಯಕಾಲವೆಂದು ಪರಿಗಣಿತವಾಗಿರುವುದರಿಂದ ಪುಣ್ಯ ತೀರ್ಥಗಳಲ್ಲಿ ಸ್ನಾನಮಾಡುವುದು ಅತ್ಯಂತ ಪವಿತ್ರ ಎಂದು ಹೇಳಲಾಗಿದೆ. ಇದು ಶರೀರದ ಕೊಳೆಯನ್ನು ತೊಳೆಯುವ ಮಲಾಪಕರ್ಷಣ ಸ್ನಾನವಲ್ಲ ; ಮಾನಸಿಕ ದೋಷಗಳನ್ನು ತೊಳೆಯುವ ಪುಣ್ಯಸ್ನಾನ. ಅಂದು ಬಿಸಿನೀರಿನಿಂದ ಅಭ್ಯಂಗ ಸ್ನಾನವನ್ನು ಮಾಡುವುದಕ್ಕಿಂತ ತಣ್ಣೀರಿನಲ್ಲಿ ಸ್ನಾನಮಾಡುವುದು ಶ್ರೇಯಸ್ಕರ. ಅಭ್ಯಂಗವು ಶುಭದ ಸಂಕೇತ….ಆದರೆ ಸಂಕ್ರಮಣವು ಪುಣ್ಯಕರ್ಮಗಳಿಗೆ ಸ್ಪೂರ್ತಿಯನ್ನು ನೀಡುವ ಸಂಕೇತ ದಿನ ಹಾಗಾಗಿ ತಣ್ಣೀರು ಸ್ನಾನ ಶ್ರೇಯಕರ. ಉಳಿದಂತೆ ಎಳ್ಳಿನ ಹಬ್ಬದ ಆಚರಣೆ ಎಂದಿನಂತೆ ಇರುತ್ತದೆ.
ಮಕರ ಸಂಕ್ರಾಂತಿಯಿಂದ ಪ್ರಾರಂಭವಾಗುವ ಉತ್ತರಾಯಣವು ದೇವತೆಗಳಿಗೆ ಪ್ರಿಯವಾಗಿ ಉಪನಯನ,ಚೂಡಕರ್ಮಾದಿ ಮಂಗಳಕಾರ್ಯಗಳಿಗೆ ಶುಭಸಮಯವಾಗಿದ್ದರೂ ಸಹಾ, ಮಕರಸಂಕ್ರಾಂತಿಯ ದಿನದಂದು ಉಪನಯನ, ಚೂಡಕರ್ಮಾದಿ ಶುಭ ಕಾರ್ಯಗಳನ್ನು ಇಟ್ಟು ಕೊಳ್ಳಬಾರದು. ಧ್ಯಾನ, ದಾನ,ಜಪ ಇತ್ಯಾದಿಗಳು ಮಾತ್ರ ಅಂದು ವಿಶೇಷ ಪ್ರಶಸ್ತವಾಗಿದೆ. ಪಿತೃಗಳು ದೇವತೆಡಳಿಗೂ ಪಿತೃಸ್ಥಾನದಲ್ಲಿ ಇರುವುದರಿಂದ ಪಿತೃಪೂಜೆಯು ದೇವಪೂಜೆಗಿಂತಲೂ ಮುಖ್ಯತರವಾದುದು. ಮಹಾಭಾರತದ ಶಾಂತಿಪರ್ವದಲ್ಲಿ ಯಜ್ಞ ವರಹ ಸ್ವಾಮಿಯು ಹೇಳಿರುವಂತೆ ” ದೇವಕಾರ್ಯಾತ್ ಪರತರಂ ಪಿತೃಕಾರ್ಯಂ ಪ್ರಚಕ್ಷತೆ ” ಅಂತ.ಒಂದೇ ದಿನದಲ್ಲಿ ಪಿತೃಶ್ರಾದ್ಧ ಮತ್ತು ದೇವತೆಗಳನ್ನು ಕುರಿತ ಹಬ್ಬ ಎರಡೂ ಬಂದು ಬಿಟ್ಟಾಗ ಅಂದು ಶ್ರಾದ್ಧವನ್ನೇ ಆಚರಿಸುತ್ತಾರೆ. ಪಿತೃಕಾರ್ಯದ ವಿಶೇಷ ಪ್ರಾಮುಖ್ಯತೆಯನ್ನು ಇದು ಸ್ಪಷ್ಟೀಕರಿಸುತ್ತದೆ. ಸಂಕ್ರಮಣದಿನದಂದು ಶುಭಕಾರ್ಯಗಳನ್ನು ಮಾಡಬಾರದು. ಅದು ಸಂಕ್ರಮಣದ ದಿನ. ಪಿತೃದೇವತೆಗಳ ಆಕರ್ಷಣೆಯು ಹೆಚ್ಚಾಗಿರುವ ಪುಣ್ಯದಿನ. ಪಿತೃಗಳ ಮಾರ್ಗವು ದೇವತೆಗಳ ಮಾರ್ಗಕ್ಕೆ ವಿರುದ್ಧವಾಗಿದೆ. ಅಂದು ಪಿತೃಮಾರ್ಗವೇ ತೆರೆದಿರುತ್ತದೆ. ಅದಕ್ಕೆ ತಕ್ಕ ತರ್ಪಣ,ದಾನ ಮುಂತಾದ ಕರ್ಮಗಳನ್ನು ಅಂದು ಮಾಡಬೇಕು. ಮಕರ ಸಂಕ್ರಾಂತಿಯ ಮರುದಿನದಿಂದ ಎಲ್ಲ ಮಂಗಳ ಕಾರ್ಯಗಳನ್ನು ಶುಭವಾದ ತಿಥಿ,ವಾರ,ನಕ್ಷತ್ರಗಳಲ್ಲಿ ಮಾಡಬಹುದು.
ಎಳ್ಳನ್ನು ಆರು ರೀತಿಗಳಲ್ಲಿ ಬಳಸಬಹುದು. ಎಳ್ಳಿನ ಎಣ್ಣೆಯನ್ನು ಹಚ್ಚಿಕೊಳ್ಳುವುದು , ಮತ್ತು ಹಚ್ಚಿ ಸ್ನಾನಮಾಡುವುದು, ಎಳ್ಳಿನ ಹೋಮ, ಎಳ್ಳಿನ ದಾನ,ಎಳ್ಳನ್ನು ತಿನ್ನುವುದು ಮತ್ತು ಬೀಜವಾಗಿ ಎರಚುವುದು. ” ತಿಲೋದ್ವರ್ತೀ ತಿಲಸ್ನಾಯಿ ತಿಲಹೋಮಿ ತಿಲ ಪ್ರದಃ ತಿಲಭುಕ್ ತಿಲವಾಪೀ ಚ ಷಟ್ ತಿಲೀ ನಾವಸೀದತಿ ” ಈ ವಾಕ್ಯದಿಂದ ಇದನ್ನು ತಿಳಿಯಬಹುದು. ಆದರೆ ಇಂದು ಸ್ನಾನ ನಿಶಿದ್ಧ, ಎಳ್ಳು ಎರಚುವುದೂ ನಿಶಿದ್ಧ, ಉಳಿದ ರೀತಿಯಲ್ಲಿ ಅಂದು ಅನಿಷ್ಟ ಪರಿಹಾರಾರ್ಥವಾಗಿ ಬಳಸಬೇಕು.
ಮಕರ ಸಂಕ್ರಮಣದ ಒಂದಷ್ಟು ಮಾಹಿತಿಗಳನ್ನು ನಿಮಗಾಗಿ ಹಂಚಿಕೊಂಡಿರುವೆ…ಒಂದಷ್ಟು ಕೇಳಿದ್ದು…ಒಂದಷ್ಟು ಓದಿದ್ದು… ಒಂದಷ್ಟು ತಿಳಿದದ್ದು..ನಿಮಗೆ ಉಪಯೋಗವಾಗುವುದೆಂದು ಭಾವಿಸುತ್ತಾ ಎಲ್ಲರಿಗೂ ಮಕರಸಂಕ್ರಾಂತಿಯ ಶುಭಾಶಯಗಳನ್ನು ತಿಳಿಸುತ್ತಿರುವೆ.
ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ,,