ಮೈಸೂರು: ಫೋಟೋ ಜರ್ನಲಿಸ್ಟ್ ಹಾಗೂ ವಿಡಿಯೊ ಜರ್ನಲಿಸ್ಟ್ ಹಾಗೂ ಪತ್ರಕರ್ತರ ಸ್ನೇಹಿತರು ಇತ್ತೀಚೆಗೆ ಅಕಾಲಿಕ ನಿಧನರಾದ ಮೈಸೂರಿನ ಪ್ರಸಿದ್ಧ, ಹಿರಿಯ ಪತ್ರಿಕಾ ಛಾಯಾಗ್ರಾಹಕ ನೇತ್ರ ರಾಜು ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಮೈಸೂರಿನ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು. ಕಾರ್ಯಕ್ರಮದಲ್ಲಿ ಲಾ ಗೈಡ್ ಕಾನೂನು ಪತ್ರಿಕೆಯ ಸಂಪಾದಕ ವೆಂಕಟೇಶ್ ಮಾತನಾಡಿ, ಪತ್ರಿಕಾ ಹಿರಿಯ ಛಾಯಾಗ್ರಾಹಕ ನೇತ್ರ ರಾಜು ಅವರ ಸೇವೆ ಅವಿಸ್ಮರಣೀಯ. ನೇತ್ರ ರಾಜು ಅವರ ಹೆಸರನ್ನು ಅಮರ ವಾಗಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಪತ್ರಿಕಾ ಛಾಯಾಗ್ರಾಹಕರು ಹಾಗೂ ವಿಡಿಯೊ ಜರ್ನಲಿಸ್ಟ್ ಕುಟುಂಬದ ಮಕ್ಕಳು ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ 10 ಸಾವಿರ ರೂ. ನಗದು ಹಾಗೂ ಪ್ರಮಾಣ ಪತ್ರ ನೀಡಲು ಲಾಗೈಡ್ ಮಾಸಪತ್ರಿಕೆ ಉದ್ದೇಶಿಸಿದೆ ಎಂದು ಘೋಷಿಸಿದರು.
ಎಸಿಐಸಿಎಂ ಸಂಚಾಲಕ ಎಂ ಲಕ್ಷ್ಮಣ್ ಮಾತನಾಡಿ , ನೇತ್ರ ರಾಜು ಅವರ ಬದ್ಧತೆ ಎಲ್ಲರಿಗೂ ಮಾದರಿಯಾಗಬೇಕು.ಅವರ ಅಕಾಲಿಕ ನಿಧನ ಪತ್ರಿಕಾರಂಗಕ್ಕೆ ನಷ್ಟವನ್ನುಂಟು ಮಾಡಿದೆ ಎಂದು ವಿಷಾದಿಸಿದರು.
ಪತ್ರಿಕಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಪ್ರಗತಿ ಗೋಪಾಲಕೃಷ್ಣ ಮಾತನಾಡಿ, ನೇತ್ರ ರಾಜು ಅವರ ಬದ್ಧತೆ ಕಾರ್ಯವೈಖರಿ ಕಿರಿಯ ಛಾಯಾಗ್ರಹಣಕ್ಕೆ ಮಾರ್ಗದರ್ಶನವಾಗಿದೆ. ವೃತ್ತಿ ಪರತೆ, ಕ್ರಿಯೇಟಿವಿಟಿ ಎಲ್ಲಾ ಛಾಯಾಗ್ರಾಹಕರಿಗೂ ಅನುಸರಿಸಬೇಕಾದ ಮಾರ್ಗವನ್ನು ಅವರು ತಿಳಿ ಹೇಳಿ ಕೊಟ್ಟಿದ್ದಾರೆ. ಅವರು ಇನ್ನಷ್ಟು ವರ್ಷ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಬೇಕಾಗಿತ್ತು. ಅವರು ದೈಹಿಕವಾಗಿ ಮಾನಸಿಕವಾಗಿ ಹಾಗೂ ಅವರ ಛಾಯಾಚಿತ್ರದ ಮೂಲಕ ಸದಾ ನಮ್ಮ ನೆನಪಿನಲ್ಲಿ ಇರುತ್ತಾರೆ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಂ .ಎಸ್. ಬಸವಣ್ಣ, ಪತ್ರಿಕಾ ಛಾಯಾಗ್ರಾಹಕರಾದ ಎಂ.ಎ. ಶ್ರೀರಾಮ್, ಹಂಪಾ ನಾಗರಾಜ್, ಎಂ. ಎನ್. ಲಕ್ಷ್ಮಿನಾರಾಯಣ ಯಾದವ್, ಎಸ್. ಉದಯಶಂಕರ್, ಟಿವಿ ವರದಿಗಾರರಾದ ರಾಮ್, ಕೆ. ಪಿ. ನಾಗರಾಜ್ , ನವೀನ್, ಕಾರ್ತಿಕ್, ವಾಟಾಳ್ ಆನಂದ್, ಎಂ.ಟಿ.ಯೋಗೇಶ್ ಕುಮಾರ್ ಹಾಗೂ ಇನ್ನಿತರರು ಪಾಲ್ಗೊಂಡು ಮೃತರ ಆತ್ಮಕ್ಕೆ ಶಾಂತಿ ಕೋರಿದರು.