ನಾಟಕ ರಂಗದಿಂದ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿ ಹತ್ತಾರು ವರ್ಷ ಹಲವಾರು ಚಿತ್ರಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿ ಅತ್ಯಂತ ಯಶಸ್ವಿ ಜನಪ್ರಿಯ ಖಳನಾಯಕನಟ ಎನಿಸಿಕೊಂಡರು. ಪ್ರಾರಂಭದಲ್ಲಿ ಕನ್ನಡ ಡೈಲಾಗ್ ಡೆಲಿವರಿ ಮಾಡಲು ಬಹಳ ಕಷ್ಟಪಟ್ಟ ಪಕ್ಕಾ ಇಂಗ್ಲಿಷ್ ಮೀಡಿಯಂ ಹುಡುಗ! ಕಾಲಕ್ರಮೇಣ ಛಲದಿಂದ ಮತ್ತು ಇ(ಕ)ಷ್ಟಪಟ್ಟು ತನ್ನ ಮಾತೃಭಾಷೆಯನ್ನ ಅಚ್ಚುಕಟ್ಟಾಗಿ ಅಭ್ಯಾಸ ಮಾಡಿ ಬಲುಬೇಗ ಪ್ರತಿಯೊಂದು ಸಿನಿಮಾದಲ್ಲು ಸ್ಪಷ್ಟವಾಗಿ ಕನ್ನಡ ಸಂಭಾಷಣೆ ಹೇಳುವುದನ್ನು ಕಲಿತರು. ಶ್ರದ್ಧೆ ಮತ್ತು ಪ್ರಾಮಾಣಿಕ ಪ್ರಯತ್ನದಿಂದ ಹೀರೋ ಆಗಿ ಬಡ್ತಿಹೊಂದಿ ತಮ್ಮದೇ ಛಾಪು ಮೂಡಿಸಿದರು. ಇಂಥ ಡೈನಾಮಿಕ್ ಸ್ಟಾರ್ ಸ್ಯಾಂಡಲ್‌ವುಡ್ನಲ್ಲಿ ಬಲು ಅಪರೂಪ. ಖಳನಟನಾಗಿ ಪಾದಾರ್ಪಣೆಗೈದು ನಾಯಕನಟನಾಗಿ ಬಡ್ತಿ ಪಡೆದರು. ಆ ನಂತರ ಪ್ರಮುಖ ಪೋಷಕನಟನಾಗಿಯೂ ಜಯ ಸಾಧಿಸಿದರು. ಅತ್ಯುತ್ತಮ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಮತ್ತು ರಾಷ್ಟ್ರ ಪ್ರಶಸ್ತಿ ಜತೆಗೆ ಅಭಿಮಾನಿಗಳಿಂದಲೂ ಅನೇಕ ಬಿರುದು ಬಹುಮಾನ ಗಳಿಸಿ ಚಂದನವನದ ಮೈಲುಗಲ್ಲುಗಳಲ್ಲಿ ಒಂದು ಎನಿಸಿದರು. ಇವರ ಪುತ್ರ ಪ್ರಜ್ವಲ್‌ದೇವರಾಜ್ ಸಹ ಉದಯೋನ್ಮುಖ ಯುವ ನಾಯಕನಟನಾಗಿ ಎಂಟ್ರಿ ಕೊಟ್ಟರು. ಕಾಲಕ್ಕೆ ತಕ್ಕಂತೆ ಕರ್ನಾಟಕದ ಯುವ ಪೀಳಿಗೆಗೆ ಇಷ್ಟವಾಗುವ ಪಾತ್ರಗಳಲ್ಲಿ ಮಿಂಚುತ್ತ ಅಭಿಮಾನಿಗಳ ಬಳಗವನ್ನು ಹೊತ್ತು ಮುನ್ನುಗ್ಗುತ್ತಿದ್ದಾರೆ. ಒಟ್ಟಾರೆ ಅಪ್ಪ-ಮಗ ಚಂದನವನಕ್ಕೆ ತಮ್ಮದೆ ಆದ ವಿಶಿಷ್ಟ ಮತ್ತು ವಿಭಿನ್ನ ಕೊಡುಗೆ ನೀಡುತ್ತ ಅಪಾರ ಕಲಾಸೇವೆ ಮಾಡುತ್ತಿದ್ದಾರೆ. ಇವರಿಬ್ಬರಲ್ಲಿ ಮೊದಲು ಯಾರಿಗೆ ಕರ್ನಾಟಕರತ್ನ ಲಭಿಸುತ್ತದೆ? ಕಾದುನೋಡೋಣ!

ಕುಮಾರಕವಿ ಬಿ.ಎನ್.ನಟರಾಜ್
೯೦೩೬೯೭೬೪೭೧
ಬೆಂಗಳೂರು ೫೬೦೦೭೨