ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಮುಳಬಾಗಿಲು ಟೌನ್‌ನಲ್ಲಿ ೨೩.೮.೧೯೫೬ರಂದು ಜನಿಸಿದ ಮಧ್ಯಮದ ವರ್ಗದ ಈ ಕಿಲಾಡಿಯು ಪದವಿ ವಿದ್ಯಾಭ್ಯಾಸದ ಹಂತ ತಲುಪುವ ಮುನ್ನವೆ ಹೊಟೇಲ್ ಬಿಸಿನೆಸ್ ಕಡೆಗೆ ದೌಡಾಯಿಸಿದನು. ಉಪಾಹಾರ ಮಂದಿರದಲ್ಲಿ ಈತನನ್ನು ಗುರುತಿಸಿದ ಪ್ರಖ್ಯಾತ ನಾಟಕ-ಸಿನಿಮಾ ಕ್ಷೇತ್ರದ ದಿಗ್ಗಜ ಬಿ.ವಿ.ಕಾರಂತರು ರಂಗಭೂಮಿಗೆ ಕರೆತಂದರು. ಅನೇಕ ನಾಟಕಗಳಲ್ಲಿ ಅವಕಾಶ ನೀಡಿದ ಕಾರಂತರು ಈತನ ಅಭಿನಯವನ್ನು ಕಂಡು ಮನತುಂಬ ಕೊಂಡಾಡಿ ಕೈತುಂಬ ಆಶೀರ್ವದಿಸಿದರು! ಒಮ್ಮೆ ಆಕಸ್ಮಿಕವಾಗಿ ಮೋಹನ್‌ನ ಅಭಿನಯ ಚಾತುರ್ಯವನ್ನು ಗಮನಿಸಿದ ಭಾರತೀಯ ಚಿತ್ರರಂಗದ ಅತಿರಥ ಬಾಲುಮಹೇಂದ್ರ ೧೯೭೭ರಲ್ಲಿ ’ಕೋಕಿಲ’ ಕನ್ನಡ ಚಿತ್ರ ತಯಾರಿಸುವ ಮೂಲಕ ಈ ಹುಡುಗನಿಗೆ ಕಮಲಹಾಸನ್‌ರಷ್ಟೆ ಸರಿಸಮ ಪಾತ್ರ ನೀಡಿ ನಟಜನ್ಮವನ್ನು ದಯಪಾಲಿಸಿದರು! ೧೯೮೦ರಲ್ಲಿ ಮತ್ತೊಮ್ಮೆ ತಮ್ಮದೇ ಫಿಲಂ ’ಮೂಡುಪನಿ’ ತಮಿಳು ಚಿತ್ರದಲ್ಲಿ ಉತ್ತಮ ಅವಕಾಶ ನೀಡುವ ಮೂಲಕ ಭಾರತ ಚಿತ್ರರಂಗವು ಇವನತ್ತ ನೋಡುವಂತೆ ಮಾಡಿದರು! ಅಷ್ಟೊತ್ತಿಗಾಗಲೇ ೧೯೭೮ರಲ್ಲಿ ತೆರೆಕಂಡಿದ್ದ ’ಮದಾಲಸ’ ಮಲಯಾಳಮ್ ಸಿನಿಮಾದಲ್ಲಿ ಧೂಳೆಬ್ಬಿಸಿದ್ದ ಮೋಹನ್ ನಟನೆಯನ್ನು ಗಂಭೀರವಾಗಿ ಪರಿಗಣಿಸಿ ಚಿತ್ರೋದ್ಯಮಿಗಳು ’ಚೀಪ್-ಅಂಡ್-ಬೆಸ್ಟ್’ ಕಲಾವಿದನತ್ತ ಕ್ಯೂ ನಿಂತರೆಂಬುದು ನಿತ್ಯಸತ್ಯ?!

ಕೇವಲ ನಾಲ್ಕೈದು ವರ್ಷದೊಳಗೆ ಜೂನಿಯರ್ ಕಮಲಹಾಸನ್ ಎಂದು ಖ್ಯಾತಿ ಪಡೆದ ಕನ್ನಡದ ಹುಡುಗ. ದಕ್ಷಿಣ ಭಾರತದ ಸಿಲ್ವರ್ ಜ್ಯುಬ್ಲಿ ಹೀರೋ, ಮೆಘಾ ಸ್ಟಾರ್, ಯೂತ್ ಐಕಾನ್, ಮುಂತಾದ ಅನೇಕ ಬಿರುದು ಪಡೆದು ಹಿಂದಿ, ತಮಿಳು, ತೆಲುಗು, ಮಲಯಾಳಂ, ತುಳು, ಕೊಡವ, ಕೊಂಕಣಿ, ಬಂಗಾಳಿ, ಮುಂತಾದ ಹತ್ತಾರು ಭಾಷೆಗಳ ೧೦೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿ ಸುಮಾರು ೩೫ವರ್ಷ ಪರ್ಯಂತ ಭಾರತೀಯ ಸಿನಿ ಪ್ರಪಂಚದಲ್ಲಿ ಬಹುಭಾಷಾ ಯುವನಟನಾಗಿ ಸುಭದ್ರವಾಗಿ ತಳವೂರಿದ ಮೊಟ್ಟ ಮೊದಲ ತಾಂಡವಮೂರ್ತಿ! ಕಾಲಿವುಡ್ನ ಅಲ್ಟ್ರಾ ಸೂಪರ್ ಸ್ಟಾರ್ ಆಗಿ ತಮಿಳು ನಾಡಿನಾದ್ಯಂತ ಅಭಿಮಾನಿ ಬಳಗವನ್ನೆ ಪಡೆದುಕೊಂಡ ಅಚ್ಚ ಕನ್ನಡಿಗ. ಮೋಹನ್ ಪ್ರತಿಭೆಗೆ ಸಾಕ್ಷಿ ಎಂಬಂತೆ ೩ ಬೇರೆ ಬೇರೆ ರಾಜ್ಯಗಳಲ್ಲಿ ನೀಡುವ ಆಯಾ ಭಾಷೆಯ ಚಿತ್ರಗಳ ಅಭಿನಯಕ್ಕಾಗಿ ಮೂರು ಬಾರಿ ವರ್ಷದ ಅತ್ಯುತ್ತಮ ನಟ ಪ್ರಶಸ್ತಿ ಗಳಿಸಿದ್ದಾರೆ. ಎರಡು ಬಾರಿ ಫಿಲಂಫೇರ್ ಅವಾರ್ಡ್ ಪಡೆದಿರುವುದಲ್ಲದೆ ನಾಲ್ಕು ಸಲ ರಾಷ್ಟ್ರ ಪ್ರಶಸ್ತಿಯನ್ನು ಹಾಗೂ ಎರಡು ಪ್ರತಿಷ್ಠಿತ ಅಂತಾರಾಷ್ಟ್ರ ಬಹುಮಾನವನ್ನು ಗಳಿಸಿ ಹೊಸದೊಂದು ಇತಿಹಾಸ ಸೃಷ್ಟಿಸಿದ ನೈಜ ಕಲಾವಿದ! ಭಾರತ ಮಾತ್ರವಲ್ಲದೆ ಪ್ರಪಂಚದೆಲ್ಲೆಡೆ ಕನ್ನಡದ ಸೊಗಡನ್ನು ಪ್ರದರ್ಶಿಸಿದ ಧೀರ!

ಕನ್ನಡವೆ ತಾಯ್ನುಡಿಯು, ಕರುನಾಡು ತಾಯ್ನಾಡು, ಕನ್ನಡಿಗನು ನೀನೆಂಬ ಅಭಿಮಾನವಿರಲಿ ಎಂಬುದನ್ನು ಜಗಜ್ಜಾಹೀರು ಮಾಡಿದಂಥ ಕೋಲಾರದ ಕಲಾಕಾರ! ಇಂಥ ಕನ್ನಡ ಕಲಾವಿದನನ್ನು ಚಂದನವನದಲ್ಲಿ ಉಳಿಸಿಕೊಂಡು ಹೆಚ್ಚು ಬಳಸಿಕೊಳ್ಳಲು ಆಗಲಿಲ್ಲ ಎಂಬ ನೋವು ಕೋಟ್ಯಾಂತರ ಕನ್ನಡಿಗರ ಮನದ ಮೂಲೆಯಲ್ಲಿ ಈಗಲೂ ಆಗಾಗ್ಗೆ ಕಾಣಿಸಿಕೊಳ್ಳುವುದು ಸಹಜವೇನೋ?!