ಅಗ್ರಪೂಜಿತ, ಆದಿಪೂಜಿತ, ಪ್ರಥಮಪೂಜಿತ, ಸಕಲಕಲಾವಲ್ಲಭ, ಸುಗುಣವಂತ, ನಿರ್ವಿಘ್ನಕಾರಕ, ಅಖಿಲ ವರಪ್ರದಾಯಕ, ಸಂಕಷ್ಟಹರ, ಮುಂತಾದ ಕೋಟಿಕೋಟಿ ಹೆಸರಿನಿಂದ ಸ್ತುತಿಸಲ್ಪಡುವ ಭೂಲೋಕದ ಭವ್ಯಭವಿತವ್ಯ ಭಗವಂತನೇ ಗಣೇಶನು. ಪ್ರತಿವರ್ಷ ಭಾದ್ರಪದ ಮಾಸ ಅಮಾವಾಸ್ಯೆ ನಂತರದ ೩ನೇದಿನ ಗೌರಮ್ಮನ ಪಾದಾರ್ಪಣೆ, ೪ನೇದಿನ ಗಣೇಶಾಗಮನ. ಅಪರೂಪಕ್ಕೆ, ತಾಯಿ-ಮಗ ಇಬ್ಬರೂ ಒಟ್ಟಾಗೆ ಧರೆಗಿಳಿವ ಸಂದರ್ಭವುಂಟು! ಅಂದು ಇಂದು ಮುಂದು ಎಂದೆಂದೂ ೨೧ ಲೋಕದಲ್ಲಿ ದೇವ ಮಾನವ ದಾನವ ಮೊದಲ್ಗೊಂಡು ಪ್ರಪಂಚದಾದ್ಯಂತ ಪ್ರತಿಯೊಬ್ಬ ಧರ್ಮೀಯರು ಆರಾಧಿಸುವ ಏಕೈಕ ದೈವ! ಅನಾದಿ ಕಾಲದಿಂದ ಜಗತ್ತಿನಾದ್ಯಂತ ಯಾವುದೇ ದೇವರ ಪ್ರತಿ ದೇವಸ್ಥಾನದಲ್ಲೂ ಪ್ರಥಮ ಪೂಜಿತನ ದೇವಾಲಯ ಅಥವ ವಿಗ್ರಹಮೂರ್ತಿ ಇದ್ದೇ ಇರುತ್ತದೆ. ಇದಕ್ಕೆ ಕಾರಣ; ನಾರದ ಮುನಿ ಏರ್ಪಡಿಸಿದ್ದ ಪ್ರಪಂಚ ಪರ್ಯಟನೆ ಸ್ಫರ್ಧೆಯಲ್ಲಿ ಬಾಲಗಣೇಶ ತೋರಿದ ಮಾತಾ ಪಿತೃ ಭಕ್ತಿಯ ಪ್ರತಿಫ಼ಲವಾಗಿ ಪಾರ್ವತಿ ಪರಮೇಶ್ವರ ಹಾಗೂ ಸುಬ್ರಮಣ್ಯ ನೀಡಿದ ಸಿದ್ಧಿ, ಬುದ್ಧಿ, ವಿದ್ಯೆ, ಶಕ್ತಿ, ಎಲ್ಲಾ ಮಿಶ್ರಣದ ವರಪ್ರಸಾದ!
ಭಕ್ತಾದಿಗಳು ಅವರವರ ಯೋಗ್ಯತೆ ಯಥಾಶಕ್ತಿ ಅನುಸಾರ, ೧,೩,೫,೭,೯ದಿನ ಅಥವ ತಿಂಗಳ ಪೂರ್ತಿ ಅವಧಿಗೆ ಮಣ್ಣಿನ ಗಣೇಶ ತಂದು ಭವ್ಯ ಮಂಟಪದಲ್ಲಿ ಕೂರಿಸಿ ದಿವ್ಯ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಾಡಿ ದಿನವೂ ಮಹಾ ಮಂಗಳಾರತಿ ಪ್ರಸಾದ ವಿನಿಯೋಗದ ಪೂಜೆ ಕೈಗೊಳ್ಳುವರು. ಆಧ್ಯಾತ್ಮ ನೆಲೆಗಟ್ಟಿನ ಅಡಿಯಲ್ಲಿ ವೈಭವದಿಂದ ’ಗಣೇಶೋತ್ಸವ’ ಆಚರಿಸುವಾಗ ಸಾಮಾಜಿಕ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು, ಕಾನೂನು-ಸುವ್ಯವಸ್ಥೆಗೆ ಚ್ಯುತಿಬಾರದಂತೆ, ಅನ್ಯಧರ್ಮೀಯರಿಗೆ ನೋವುಂಟಾಗದಂತೆ, ಪ್ರಕೃತಿ ಪರಿಸರಕ್ಕೆ ನಷ್ಟವಾಗದಂತೆ, ಶುಚಿತ್ವ ಕಾಪಾಡಿಕೊಂಡು ಆರೋಗ್ಯಕ್ಕೆ ಧಕ್ಕೆಯಾಗದಂತೆ, ನೆರೆಹೊರೆ ಸುಖ ಶಾಂತಿ ನಿದ್ರೆ ಭಂಗವಾಗದಂತೆ, ಮಕ್ಕಳು ಮಹಿಳೆ ರೋಗಿ ವೃದ್ಧರಿಗೆ ಊನವಾಗದಂತೆ, ಸಾರ್ವಜನಿಕ ಸಭೆ ಸಮಾರಂಭಕ್ಕೆ ಅಡ್ಡಿಪಡಿಸದೆ, ಅರೆ/ಸರ್ಕಾರಿ ಖಾಸಗಿ ಆಸ್ತಿಪಾಸ್ತಿಗೆ ಹಾನಿಯಾಗದಂತೆ, ನೋಡಿಕೊಳ್ಳಬೇಕು. ಸಭ್ಯತೆ ಮೀರದ ಅಶ್ಲೀಲ-ಅಸಹ್ಯ [ಪ್ರ]ದರ್ಶನ ಇಲ್ಲದ ಸಾಂಸ್ಕೃತಿಕ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ಬಹಳ ಎಚ್ಚರಿಕೆಯಿಂದ ಆಯೋಜಿಸಿ ’ಭೇಷ್’ ಎನಿಸಿ ಕೊಳ್ಳಬೇಕು! ಈ ಮಾಸದಲ್ಲಿ ಜರುಗುವ ಎರಡು ಪ್ರಮುಖ ವಿಶೇಷ ಸಂದರ್ಭಗಳು:- ಗಣೇಶನ ಪ್ರಾಣಪ್ರತಿಷ್ಟೆಯ ದಿನ ಮತ್ತು ವಿಸರ್ಜನಾ ಮೆರವಣಿಗೆ ದಿನದಲ್ಲಿ ಪರಾಕಾಷ್ಟೆ ಮುಟ್ಟುವ ಡೋಲು ತಮ್ಮಟೆ ವಾದ್ಯ ಪಟಾಕಿಗಳ ಭರ್ಜರಿ ಶಬ್ಧ ಅಣ್ಣ[ಮಾರ]ಮ್ಮನ ಟಪ್ಪಾಂಗುಚ್ಚಿ ಕುಣಿತ ನಯನಮನೋಹರ, ಭಜನೆ ಕೀರ್ತನೆಯಂತೂ ಅದ್ಭುತ ಅಮೋಘ ಅಪೂರ್ವ ಚಿರಸ್ಮರಣೀಯ!
ಗಣೇಶ ಬಂದ, ಕಾಯಿಕಡಬು ತಿಂದ, ತಥಾಸ್ತು ಅಂದ, ಚಿಕ್ಕಕೆರೆಯಲ್ಲಿ ಬಿದ್ದ, ದೊಡ್ಡಕೆರೆಯಲ್ಲಿ ಎದ್ದ ಮುಂತಾದ ಚಿನ್ನಾರಿಚಿಣ್ಣರ ಹರ್ಷಮಯ ಮುಗ್ಧತೆಯ [ಅನು]ಪಲ್ಲವಿಯನ್ನೂ; ಮುತ್ತುಸ್ವಾಮಿ ದೀಕ್ಷಿತರ ’ವಾತಾಪಿ ಗಣಪತಿಂ ಭಜೇ ಹಂ’ ಸಂಸ್ಕೃತ ಕೀರ್ತನೆಯನ್ನೂ; ವೇದೋಪನಿಷತ್ನ ಶುಕ್ಲಅಂಬರಧರಂ[ಬಿಳಿವಸ್ತ್ರಧಾರಿ] ವಿಷ್ಣುಂ[ಬೆಳಕುಹರಡುವ] ಶಶಿ ವರ್ಣಂ[ಚಂದ್ರಬಣ್ಣದ] ಚತುರ್ಭುಜಂ[೪ಭುಜದ] ಪ್ರಸನ್ನವದನಂ[ಶಾಂತಮುಖದ]ಧ್ಯಾಯೇತ್[ದೇವರ ಧ್ಯಾನ ಮಾಡಲು] ಸರ್ವವಿಘ್ನೋಪ[ಎಲ್ಲ್ಲವಿಘ್ನಗಳು] ಶಾಂತಯೆ[ನಿವಾರಣೆಯಾಗುತ್ತೆ] ದೈವಶ್ಲೋಕವನ್ನೂ; ಲಕ್ಷಗಟ್ಟಲೆ ಪದ್ಯ ರಚಿಸಿದ ಕರ್ನಾಟಕ ಸಂಗೀತ ಪಿತಾಮಹ ಶ್ರೀಪುರಂದರದಾಸರ ಶ್ರೀಗಣನಾಥ[ಗಣಗಳ ಒಡೆಯ], ಸಿಂಧೂರವರ್ಣ[ಪ್ರಕಾಶಮಾನಬಣ್ಣದ] ಕರುಣಸಾಗರ[ಸಹಾನುಭೂತಿಸಮುದ್ರದ] ಕರಿವದನ[ಆನೆಮುಖದ] ಲಂಬೋದರ [ದೊಡ್ಡಹೊಟ್ಟೆಯ] ಲಕುಮಿಕರ[ಲಕ್ಷ್ಮಿಯನ್ನುಕೈಯಲ್ಲಿಹಿಡಿದ], ಅಂಬಾಸುತ[ಪಾರ್ವತೀಪುತ್ರ], ಸಿದ್ಧಚಾರಣ[ಸಿದ್ಧರು-ಆಕಾಶಕಾಯಗಳು] ಗಣಸೇವಿತ[ದೇವ,ದಾನವ ಮಾನವಗಣಗಳೆಲ್ಲರೂಪೂಜಿಸುವ]ಸಿದ್ಧಿವಿನಾಯಕ ತೇ ನಮೊನಮೋ [ಅಡೆತಡೆ ನಿವಾರಿಸಿ ವಿಜಯ ದೊರಕಿಸುವ ನಿನಗೆ ನಮಸ್ಕಾರಗಳು]. ಈ ಕೀರ್ತನೆಯನ್ನು ಮರೆಯುವಂತಿಲ್ಲ?! ಇವುಗಳಲ್ಲದೆ ರೈತ ಯೋಧ ವಾಸುದೇವಾಚಾರ್ಯ ಅಣ್ಣಮಾಚಾರ್ಯ ಚಿ.ಉದಯಶಂಕರ್ ಆರ್ರೆನ್ ಜಯಗೋಪಾಲ್ ಹಂಸಲೇಖ ಮುಂತಾದ ಲಕ್ಷಾಂತರ ಭಕ್ತರು ಅಮಾಯಕರು, ನೂರಾರು ಭಾಷೆಗಳಲ್ಲಿ ರಚಿಸಿದ ಕೋಟ್ಯಾಂತರ ಭಕ್ತಿಗೀತೆ ಜಾನಪದನುಡಿಗಟ್ಟು, ಲಾವಣಿ ಕೇಳಲು ಕರ್ಣಾನಂದಕರ. ಭಕ್ತರ ನೃತ್ಯಕುಣಿತ ನೋಡಿ ಆನಂದಿಸಿ ಮೈಮರೆಯಲು ಸುವರ್ಣಾವಕಾಶ ಇರುತ್ತದೆ ಗಣೇಶಹಬ್ಬದ ದಿನಗಳಲ್ಲಿ ನಯನಮನೋಹರ! ಇದಕ್ಕೆ ಪುಷ್ಟೀಕರಿಸುವ ಹರಿಕಥೆ ನಾಟಕ ಸಂಗೀತಕಛೇರಿ ಭರತನಾಟ್ಯ ಮುಂತಾದ ಕಾರ್ಯಕ್ರಮಗಳು ಆಪ್ಯಾಯಮಾನ.
ಪ್ರಥಮಪೂಜೆ ಮಾಡದೆ ಕಷ್ಟ ನಷ್ಟ ಶಿಕ್ಷೆ ಅನುಭವಿಸಿದ ದೇವ,ದಾನವ,ಮಾನವರ ಉದಾಹರಣೆ:-
*ದೇವಲೋಕದಲ್ಲಿ;- ಬ್ರಹ್ಮನು ತನ್ನದೊಂದು ಮುಖವನ್ನು ಕಳೆದುಕೊಂಡನು. ಶಿವನು ಬ್ರಹ್ಮ ಕಪಾಲ ಹಿಡಿದು ಭಿಕ್ಷೆ ಬೇಡಿದನು. ವಿಷ್ಣುವು ಶರಭನಿಂದ ಸೋಲು ಅನುಭವಿಸಿದನು. ನಾರದನು ತುಂಬುರು ಮುನಿಯಿಂದ ಪರಾಜಿತನಾದನು. ದೇವೇಂದ್ರನು ದಾಸಿಯಿಂದ ಛೀಮಾರಿ ಹಾಕಿಸಿಕೊಂಡನು. ಜಯ-ವಿಜಯ ದ್ವಾರಪಾಲಕರು ಸಪ್ತ ಮಹರ್ಷಿಗಳ ಶಾಪಕ್ಕೆ ಗುರಿಯಾದರು.
*ಕೃತ[ಸತ್ಯ]ಯುಗದಲ್ಲಿ;- ಮಹಾವಿಷ್ಣುವು ಮತ್ಸ್ಯ, ಕೂರ್ಮ, ವರಾಹ, ನರಸಿಂಹ ೪ಬಾರಿ ಅವತಾರ ತಾಳಿದನು. ಹಿರಣ್ಯಾಕ್ಷ ಹಿರಣ್ಯಕಶ್ಯಪ ಸೋದರರು ದುರಹಂಕಾರದಿ ಮೆರೆಯುತ್ತ ಅನೇಕ ಯುದ್ಧಗಳನ್ನು ಜಯಿಸಿದ್ದರೂ ಪ್ರಥಮ ಪೂಜೆ ಸಲ್ಲಿಸಲು ಮರೆತ ದಿನವೇ ಹತರಾದರು. ಸೂರ್ಯದೇವನು ಶನಿಯ ವಕ್ರದೃಷ್ಟಿಗೆ ಬಿದ್ದು ಕಳಾಹೀನತೆ ಹೊಂದಿದನು. ಪತಿ ನಿಂದನೆಗೆ ಒಳಪಟ್ಟು ಅಗ್ನಿಪ್ರವೇಶ ಮಾಡಿದ ದಾಕ್ಷಾಯಣಿಯಿಂದ ದಕ್ಷರಾಜನ ಯಜ್ಞವು ವಿಫಲವಾಯಿತು.
*ತ್ರೇತಾಯುಗದಲ್ಲಿ;- ಸತ್ಯಹರಿಶ್ಚಂದ್ರನು ಸಾಮ್ರಾಜ್ಯ ಬಂಧುಬಳಗ ಎಲ್ಲವನ್ನು ಕಳೆದುಕೊಂಡು ಸತಿ-ಸುತ-ಸ್ವಯಂ ತಾನೇ ಮಾರಿ ಕೊಂಡು ಸ್ಮಶಾನ ಕಾಯ್ದನು. ರಘುರಾಮ ೧೪ವರ್ಷ ವನವಾಸಕ್ಕೆ ತೆರಳಿದಾಗ ಸೀತಾಪಹರಣವಾಗಿ ವಿರಹ ತಾಪದಿಂದ ನೊಂದು ಬಳಲಿದನು. ವಾಲಿಯನ್ನು ಕೊಂದು ಮೋಸಗಾರನೆಂದು ಕೆಟ್ಟಹೆಸರು ಪಡೆದನು. ಲಕ್ಷ್ಮಣನೂ ಪ್ರಜ್ಞೆ ಕಳೆದುಕೊಳ್ಳುವನು! ರಾಮಲಕ್ಷ್ಮಣರಿಗೆ ತಪ್ಪಿನರಿವಾಗಿ ಪ್ರಾಯಶ್ಚಿತ ಮಾಡಿಕೊಳ್ಳಲು ೨೧ ಬಾರಿ ಗಣಪತಿಯನ್ನು ಪೂಜಿಸುವರು. ಹನುಮಂತ ಸುಗ್ರೀವನ ಆಸರೆ ಮತ್ತು ವಾನರ ಸಹಾಯ ದೊರಕುತ್ತದೆ. ಸೇತುವೆ ನಿರ್ಮಾಣ ಲಂಕಾ ದಹನ ಸೀತಾ-ರಾಮ ಪುನರ್ಮಿಲನ. ಪ್ರಥಮಪೂಜೆ ಮರೆತದ್ದರಿಂದ ರಾವಣನಿಂದ ಶಿವನಾತ್ಮಲಿಂಗ ಪಡೆದು ಧರೆಗಿರಿಸಿ ಗೋಕರ್ಣವನ್ನು ಭೂಕೈಲಾಸ ಕ್ಷೇತ್ರವನ್ನಾಗಿ ಮಾಡಿದ್ದು ಮಹಾಗಣಪ. ಪ್ರಥಮಪೂಜೆ ಮರೆತ ಕಾರಣ ಕೋದಂಡ ರಾಮನಿಂದ ದಶಕಂಠನು ಹತನಾದ.
ವಿಶ್ವದ ಪ್ರಪ್ರಥಮ ಶೀಘ್ರಲಿಪಿಗಾರನಾಗಿ ೨೪೦೦೦ ಶ್ಲೋಕಗಳ ವಾಲ್ಮೀಕಿರಾಮಾಯಣ ಮತ್ತು ೨೯೦೦೦ ತತ್ವಶಾಸ್ತ್ರ ಶ್ಲೋಕಗಳ ಯೋಗವಸಿಷ್ಠ ಕೃತಿಗಳನ್ನು ಬರೆದವನು ಬಾಲಗಣೇಶ. ಇವುಗಳನ್ನು ಬರೆಯುವ ಮುನ್ನ ಗಣೇಶ-ವಾಲ್ಮೀಕಿ ಪರಸ್ಪರ ಪಣ ಕಟ್ಟಿಕೊಳ್ಳುತ್ತಾರೆ; ’ಹೇಳುವುದನ್ನು/ಬರೆಯುವುದನ್ನು’ ಇಬ್ಬರಲ್ಲಿ ಮೊದಲು ನಿಲ್ಲಿಸುವವರು ಸೋಲೊಪ್ಪಿದಂತೆ ಎಂದು. ಆದರೆ ಯಾರೊಬ್ಬರೂ ಸೋಲಲೇ ಇಲ್ಲ ಎಂಬುದು ವಿನೋದ ಪರಮಾಶ್ಚರ್ಯದ ಸತ್ಯ!
*ದ್ವಾಪರಯುಗದಲ್ಲಿ;- ನಳಮಹಾರಾಜನು ಶನೈಶ್ಚರನ ಅವಕೃಪೆಗೆ ಬಲಿಯಾಗಿ ಸರ್ವಸ್ವವನ್ನೂ ಕಳೆದುಕೊಂಡು ನರಕಯಾತನೆ ಅನುಭವಿಸಿದನು. ಪಾಂಡವರು ವನ[ಅಜ್ಞಾತ]ವಾಸ, ಅನುಭವಿಸಿದರು. ಸುಯೋಧನನು ಯುದ್ಧವನ್ನು ಸೋತು ಸಾವನ್ನಪ್ಪಿದನು. ಶ್ರೀಕೃಷ್ಣನೂ ಸಹ ವಿನಾಯಕ ಚೌತಿಯ ಚಂದ್ರದರ್ಶನದಿಂದ ಶಮಂತಕಮಣಿಯ ಕಳ್ಳನೆಂಬ ನಿಂದೆಗೆ ಗುರಿಯಾಗುವನು! ಋಷಿಮುನಿ ವೇದವ್ಯಾಸರ ’ಮಹಾಭಾರತ’ ಎಂಬ ಪಂಚಮವೇದದ ಲಿಪಿಗಾರನು ಶ್ರೀವಿದ್ಯಾಗಣಪತಿ!
*ಕಲಿಯುಗದಲ್ಲಿ;- ಮಹಾವಿಷ್ಣು ಭೃಗುಮುನಿಯ ಶಾಪಕ್ಕೆ ಗುರಿಯಾಗಿ ಶ್ರೀನಿವಾಸನ ಅವತಾರವೆತ್ತಿ ಕಷ್ಟ ಕಾರ್ಪಣ್ಯ ಎದುರಿಸಿ! ಕುಬೇರನಿಗೆ ಸಾಲಗಾರನಾದನು. ಅಜೇಯಅಶೋಕ ಇಮ್ಮಡಿಪುಲಿಕೇಶಿ, ಶ್ರೀಕೃಷ್ಣದೇವರಾಯ ಮುಂತಾದ ಅನೇಕ ಚಕ್ರವರ್ತಿಗಳು ಅವನತಿ ಹೊಂದಿದರು. ಈಕಾರಣಕ್ಕೆ ಅಂದಿನ ಆಚಾರ್ಯತ್ರಯರು, ವಚನಗಾರರು, ದಾಸವರೇಣ್ಯರು, ಪವಾಡಪುರುಷರು, ಸರ್ವಜ್ಞರು, ರಾಜಮಹಾರಾಜರು, ಮತ್ತು ಇಂದಿನ ಮಠಪೀಠಾಧಿಪತಿಗಳು, ರಾಜಕಾರಣಿಗಳು, [ವಿ]ಜ್ಞಾನಿಗಳು ಆದಿಯಾಗಿ ಪ್ರತಿಯೊಬ್ಬರೂ ಪ್ರಥಮ ಪೂಜಿತನನ್ನು ಆರಾಧಿಸುತ್ತಾ ನಿರ್ವಿಘ್ನವಾಗಿ ತಮ್ಮ ಕಾರ್ಯಗಳನ್ನು ಮುಗಿಸಿಕೊಂಡು, ಕೀರ್ತಿ ಹಣ ಯಶಸ್ಸು ಆನಂದ ನೆಮ್ಮದಿ ತೃಪ್ತಿ ಇತ್ಯಾದಿ ಪಡೆಯುತ್ತಿದ್ದಾರೆ!
’ಬೆನಕಬೆನಕ ಏಕದಂತ…..೨೧ನಮಸ್ಕಾರಗಳು…’ ಏಕೆ? – ೨೧ರ ಮಹತ್ವ ಏನು? :-
೨೧ಲೋಕದಲ್ಲೂ ೪ಯುಗದಲ್ಲೂ ಅಸ್ತಿತ್ವದಲ್ಲಿರುವ ಅಯೋನಿಜ, ಅಜಾತಶತ್ರು, ಅಮರಶಕ್ತಿ, ನಿರಂಕುಶಪ್ರಭು, ದೇವಾಧಿದೇವ, ಶೀಘ್ರವರ ಪ್ರದಾಯಕ, ಕ್ರಿಯಾಶೀಲ ದೈವ, ೨೧ಬಾರಿ ಶನಿಯ [ವಕ್ರ]ದೃಷ್ಟಿಗೆ ಸಿಲುಕದ ಏಕೈಕ ನಾಯಕ ನಮ್ಮ ವಿನಾಯಕ! ಕೈಲಾಸ, ವೈಕುಂಠ, ಸತ್ಯಲೋಕ, ಮುಂತಾದ ೧೩ ಲೋಕದೊಡನೆ ಅಷ್ಟ ದಿಕ್ಪಾಲಕರ ೮ ಲೋಕ ಸೇರಿ ಒಟ್ಟು ೨೧ ಲೋಕಗಳು ಇರುತ್ತವೆ. ೨೧ನೇ ’ಶೂನ್ಯ’ ಲೋಕವನ್ನು ದಾಟಿದರೆ ೨೨ನೇ ಲೋಕ ಶ್ರೀವಿಘ್ನೇಶ್ವರಸ್ವಾಮಿಯ ’ಸ್ವಾನಂದಲೋಕ’ ಸಿಗುತ್ತದೆ. ಈ ಲೋಕದ ಏಕಮೇವ ಅದ್ವಿತೀಯ ಚಕ್ರವರ್ತಿಯಾದ ಸ್ವಾನಂದೇಶ (ವಿನಾಯಕ) ನಿವಾಸದ ಸು[ಅ]ರಮನೆ ಹೆಸರು ’ಆನಂದಭವನ’ ಕಾಣಿಸುತ್ತದೆ! ಇಲ್ಲಿನ ರಾಜಧಾನಿಗೆ ೨೧ ಮುಖ್ಯದ್ವಾರಗಳಿದ್ದು, ಅರಮನೆಯ ಕೋಟೆಗೂ ೨೧ಪ್ರಮುಖ ಬಾಗಿಲುಗಳಿವೆ. ಅವುಗಳಿಗೆ ಇಟ್ಟಿರುವ ೨೧ಹೆಸರುಗಳು:- ಶ್ರೀಮುಖ, ಸುಮುಖ, ಅಥರ್ವ, ಪ್ರಣವ, ಬೆನಕ, ವಿಶ್ವಮೂರ್ತಿ, ವಿಶಿಷ್ಟಕೀರ್ತಿ, ಅಧಿಪತಿ, ಗಣಪತಿ, ಗಣೇಶ, ಲಂಬೋದರ, ಗೌರೀವರ, ವಿಘ್ನೇಶ್ವರ, ಗಣೇಶ್ವರ, ಅಜರಾಮರ, ಅತಿರಥ, ಅಖುರಥ, ಅಮಿತ, ಅಚ್ಯುತ, ಅನಂತ, ಅಗಣಿತ. ಶ್ರೀಗಣೇಶ ಸಹಸ್ರನಾಮ ಜಪಿಸುವಾಗ ಕೇಳಿಬರುವ ಗಣೇಶನ ಇನ್ನೊಂದು ಹೆಸರೇ ಸ್ವಾನಂದೇಶ! ಈ ನಾಮಧೇಯವು ಅಪರೂಪದ ಸ್ಮರಣೆ ಎಂಬುದು ಅಕ್ಷರಷಃ ಸತ್ಯ! ವಿಘ್ನಹರ್ತ ವಾಸಿಸುವ ಸ್ವಾನಂದ ಲೋಕವು ೫ಸಾವಿರ ಯೋಜನೆಯಷ್ಟು ವಿಸ್ತಾರವುಳ್ಳ ನವರತ್ನಖಚಿತ ಸುವರ್ಣ ಧರಣಿಯ ಸಾಮ್ರಾಟನಾಗಿ ಪಂಚಮುಖಿ ಗಣಪತಿಯು ೨೧ಕೋಟಿ ಸೂರ್ಯನ ತೇಜಸ್ಸಿನಿಂದ ಸಮಷ್ಟಿ ವೃಷ್ಟಿರೂಪನಾಗಿ ಸಕಲ ಭೋಗ ಭಾಗ್ಯದ ವೈಭೋಗ ದರ್ಬಾರ್-ಆಳ್ವಿಕೆ ನಡೆಸುತ್ತಿದ್ದಾನೆ. ರವಿ ಚಂದ್ರ ನಕ್ಷತ್ರ ಅಷ್ಟ ದಿಕ್ಪಾಲಕರ ರಹಿತದ ಲೋಕದಲ್ಲಿ ಶೇ.೧೦೦ರಷ್ಟು ಪುಣ್ಯಜೀವಿಗಳೇ ಇದ್ದು ಇವರೆಲ್ಲರ ಸ್ವಯಂ ಪ್ರಭೆಯಿಂದಲೆ ಇಲ್ಲಿನ ದಶದಿಕ್ಕುಗಳು ಪ್ರಕಾಶಮಾನವಾಗಿ ಬೆಳಗುತ್ತವೆ! ಪ್ರತಿಯೊಬ್ಬ ಪ್ರಜೆಯೂ ಸುಖ ಶಾಂತಿ ನೆಮ್ಮದಿ ಸುಭಿಕ್ಷುತೆಯಿಂದ ಹಸಿವು ಬಾಯಾರಿಕೆ ಇಲ್ಲದೆ ರಾರಾಜಿಸಿ ಪ್ರತಿದಿನವೂ ೨೧ಬಾರಿ ಗಣೇಶನ ಭಜನೆ ಪೂಜೆ ಮಾಡುತ್ತಾ ಚಿರಂಜೀವಿಯಾಗಿದ್ದಾರೆ!
೨೧ನಿತ್ಯಸತ್ಯಸಾರ್ಥಕಗಳು:- [೧]ಶ್ರೀವಾರಿಪಿಳ್ಳೆಯಾರ್ [೨]ವಿಘ್ನನಿವಾರಣಾಇಷ್ಟಾರ್ಥಪ್ರದಾಯಕ [೩]ಗೂಳೂರುಗಣಪ [೪]ಬಸವನಗುಡಿಬೃಹತ್ಗಣೇಶ [೫]ಕಡಲೆಕಾಳುಗಣಪತಿ [೬]ಶೋಣಭದ್ರಶಿಲಾಮೂರ್ತಿ [೭]ಯೋಗಶಾಸ್ತ್ರಚಕ್ರಸ್ಥಾನಿಕ [೮]ಸಂಕಷ್ಟಹರವ್ರತ [೯]ಹಾಸ್ಯರಸಾಧಿಪತಿ [೧೦]ಪೋಷಕಾರಾಧ್ಯಸುಜ್ಞಾನಮೂರ್ತಿ [೧೧]ಪೂನಾಕ್ಷೇತ್ರಅಷ್ಟವಿನಾಯಕ [೧೨]ಗಣೇಶಪುರಾಣ-ಮುದ್ಗಲಪುರಾಣ [೧೩]ತಾರಕಾಸುರಸಂಹಾರ ಮುರುಗನ್ಪೂಜಿತ [೧೪]ತ್ರಿಪುರಾಸುರ ಸಂಹಾರಸಂದರ್ಭ ಕಾಲಭೈರವಂಗೆ ಶ್ರೀಸಹಸ್ರನಾಮೋಪದೇಶಪೂಜ್ಯ [೧೫]ಕಾಶೀಕ್ಷೇತ್ರದುಂಢಿರಾಜ [೧೬]ಇಂಡೊನೇಷ್ಯಕಾಂಚಾಣಗಣೇಶ [೧೭]ಭಾದ್ರಪದಶುಕ್ಲಚೌತಿಮೌರ್ಯ [೧೮]ಸಿದ್ಧಿಬುದ್ಧಿಮೂಶಿಕ ಗಣಾಧಿಪತಿ [೧೯]ತ್ರಿಮೂರ್ತಿಗಳಿಂರಚಿಸಲ್ಪಟ್ಟ’ಅಜಂನಿರ್ವಿಕಲ್ಪಂ…..’ಸ್ತೋತ್ರಪೂಜಿತ [೨೦]ಬ್ರಹ್ಮಚರ್ಯವುಳ್ಳಸಂಸಾರಿ [೨೧]’ಗಜವದನ ಹೇರಂಭ’ ಆದಿಯಾಗಿ ೧೨೬ಭಾಷೆಗಳಲ್ಲಿ ೮ಕೋಟಿ ಭಕ್ತಿಗೀತೆಯುಳ್ಳ ಏಕೈಕದೈವ!
ಮೇಲ್ಕಂಡ ೨೧ದೃಷ್ಟಾಂತದಿಂದ ತಿಳಿಯಬೇಕಾದ್ದು ಇಷ್ಟೆ: ಗಣೇಶನಿಗೆ ನಿಷ್ಕಪಟ ಭಕ್ತಿಯಿಂಭಜಿಸಿ, ನಿಸ್ವಾರ್ಥದಿಂಪೂಜಿಸಿ ೨೧ನಮಸ್ಕಾರದಿಂದ ಗರಿಕೆ ನೀಡಿದರೆ ಸಾಕು ಉದ್ಯೋಗ ಆರೋಗ್ಯ ಆಹಾರ ಆನಂದ ಜೀವನ ದೊರಕಿ, ಸುಖ ಶಾಂತಿ ನೆಮ್ಮದಿ ಸಿಗುವುದರ ಜತೆಗೆ ಅಕಾಲದ ದುರ್ಮರಣ-ದುರಂತ ತಪ್ಪಿಸಿಕೊಂಡು? ಸಕಾಲದ ಅಂತ್ಯ-ಮುಕ್ತಿ ಕಾಣಬಹುದು!
ನನ್ನದೇನಿದೆ ಬೆನಕ? ನಿನ್ನದಹುದಿಹುದೆಲ್ಲ ಕೊನೆತನಕ!
ಕುಮಾರಕವಿ ಬಿ.ಎನ್.ನಟರಾಜ್[೯೦೩೬೯೭೬೪೭೧]
ಬೆಂಗಳೂರು-೫೬೦೦೭೨