ಮೈಸೂರು, ಜೂನ್‌ 29, 2021: ಎನ್‌ಆರ್ ಫೌಂಡೇಶನ್‌ನ ನೆರವಿನೊಂದಿಗೆ ವಾಸು ಅಗರಬತ್ತಿ ರಂಗರಾವ್‌ ಸ್ಮಾರಕ ಟ್ರಸ್ಟ್‌ನಿಂದ ನಡೆಸಲಾಗುವ ರಂಗರಾವ್ ಸ್ಮಾರಕ ವಿಕಲಚೇತನರ ಶಾಲೆಯು 2021–2022ರ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಿದೆ. 1ರಿಂದ 10ನೇ ತರಗತಿಗೆ ಅಂಧ ವಿದ್ಯಾರ್ಥಿಗಳಿಂದ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಅರ್ಜಿ ಆಹ್ವಾನಿಸಿದೆ. ಕರ್ನಾಟಕದ ಯಾವುದೇ ಭಾಗದ ಅಂಧ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
1988ರಲ್ಲಿ ಸ್ಥಾಪಿಸಲಾದ ಶಾಲೆಯು ಅಂದಿನಿಂದ ಮೈಸೂರು ಮತ್ತು ಸುತ್ತಮುತ್ತಲಿನ ಭಾಗದ ಆರ್ಥಿಕವಾಗಿ ಹಿಂದುಳಿದ ಅಂಧ ಬಾಲಕಿಯರಿಗೆ ಉಚಿತ ವಸತಿ ಮತ್ತು ಶಿಕ್ಷಣ ಹಾಗೂ ವೃತ್ತಿಪರ ತರಬೇತಿಗಳನ್ನು ನೀಡುತ್ತ ಬಂದಿದೆ. ಕರ್ನಾಟಕ ಸರ್ಕಾರದ ವಿಶೇಷ ಮಕ್ಕಳ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಬೆಂಬಲದಿಂದ ನಡೆಸಲಾಗುವ ಈ ಶಾಲೆಯು ಅಂಧ ಬಾಲಕಿಯರಿಗೆ ಸಂಪೂರ್ಣ ಉಚಿತ ವಸತಿ ಶಾಲೆಯಾಗಿದೆ.

 

2017-2018ರ ಶೈಕ್ಷಣಿಕ ವರ್ಷದಲ್ಲಿ ಈ ಶಾಲೆಯ ಗುಣಮಟ್ಟ ಹಾಗೂ ವಿಶೇಷ ಕಾಳಜಿಯನ್ನು ಗುರುತಿಸಿ ವಿಶ್ವ ಅಂಗವೈಕಲ್ಯ ದಿನದಂದು ಕರ್ನಾಟಕ ಸರ್ಕಾರದ ವಿಶೇಷ ಮಕ್ಕಳ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ‘ಅತ್ಯುತ್ತಮ ಸೇವಾ ಸಂಸ್ಥೆ’ ಪ್ರಶಸ್ತಿಯನ್ನು ನೀಡಲಾಗಿದೆ.

 

ಕೇವಲ ಇಬ್ಬರು ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾದ ಈ ಶಾಲೆಯು ಈಗ ನೂರಾರು ಅಂಧ ಬಾಲಕಿಯರ ಜೀವನವನ್ನು ಬದಲಿಸುವ ಒಂದು ದೊಡ್ಡ ವಸತಿ ಶಾಲೆಯಾಗಿ ರೂಪುಗೊಂಡಿದೆ. ಇದು ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಸುರಕ್ಷಿತ ಧಾಮವಾಗಿದೆ. ಮಾತ್ರವಲ್ಲ, ಶಾಲೆಯ ಹೊರಗೆ ಘನತೆಯಿಂದ ಜೀವನ ನಡೆಸಲು ಸಹಾಯಕವಾಗುವ ಜೀವನ ಕೌಶಲಗಳನ್ನು ಸಹ ಇಲ್ಲಿ ಕಲಿಸಲಾಗುತ್ತದೆ. ನೃತ್ಯ, ಯೋಗ ಕಾರ್ಯಾಗಾರಗಳು, ಪಕ್ಷಿ ವೀಕ್ಷಣೆ, ಗಾಯನ ಸ್ಪರ್ಧೆ, ವೃತ್ತಿ ತರಬೇತಿ ಮುಂತಾದ ಪಠ್ಯೇತರ ಚಟುವಟಿಕೆಗಳು ಶಾಲೆಯ ಭಾಗವಾಗಿವೆ. ಅರ್ಹ ಶಿಕ್ಷಕ ಸಿಬ್ಬಂದಿಯನ್ನು ಹೊಂದಿರುವ ಶಾಲೆಯಲ್ಲಿ ಬ್ರೈಲ್ ವ್ಯವಸ್ಥೆಯ ಮೂಲಕ ರಾಜ್ಯ ಪಠ್ಯಕ್ರಮವನ್ನು ಬೋಧಿಸಲಾಗುತ್ತದೆ. ತಂತ್ರಜ್ಞಾನದ ಉನ್ನತೀಕರಣ ಮತ್ತು ಕಂಪ್ಯೂಟರ್ ಕೌಶಲ್ಯಗಳನ್ನು ಸಹ ನೀಡಲಾಗುತ್ತದೆ.
ಇಷ್ಟೇ ಅಲ್ಲದೇ, ಅಂಧ ಬಾಲಕಿಯರಿಗೆ ಶೈಕ್ಷಣಿಕ ಮಹತ್ವ ಮತ್ತು ಅವಕಾಶಗಳ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲು ಪೋಷಕರ ಸಮಾಲೋಚನೆಗಾಗಿ ಮನೆ-ಮನೆ ಭೇಟಿಗಳನ್ನು ಸಹ ಒದಗಿಸಲಾತ್ತದೆ.

ವಿದ್ಯಾರ್ಥಿಗಳು ಎಲ್ಲಾ ವಲಯದಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವುದೇ ಆರ್‌ಎಂಎಸ್‌ಡಿ ಶಿಕ್ಷಕರು ಮತ್ತು ಸಿಬ್ಬಂದಿಯ ಸಮರ್ಪಣೆ ಮತ್ತು ಉನ್ನತ ಗುಣಮಟ್ಟದ ಸೇವೆಗೆ ಸಾಕ್ಷಿಯಾಗಿದೆ.

By admin