ಮೈಸೂರು, ಡಿಸೆಂಬರ್ 18- ಕರ್ನಾಟಕ ಸರ್ಕಾರದ ಆದೇಶದಂತೆ ಕನಿಷ್ಠ ಬೆಂಬಲ ಯೋಜನೆಯಡಿ 2021-22ನೇ ಸಾಲಿನ ಮುಂಗಾರು ಋತುವಿನಲ್ಲಿ ರೈತರು ಬೆಳೆದ ಭತ್ತ ಹಾಗೂ ರಾಗಿಯನ್ನು2022ರ ಜನವರಿ 01 ರಿಂದ ರೈತರಿಂದ ನೇರವಾಗಿ ಖರೀದಿಸಲು ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾಮಂಡಳಿಗೆ ಸೂಚಿಸಲಾಗಿದ್ದು, ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮೈಸೂರು ಜಿಲ್ಲಾ ಟಾಸ್ಕ್ಪೋರ್ಸ್ ಸಮಿತಿಯ ಅಧ್ಯಕ್ಷರೂ ಹಾಗೂ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರೈತರಿಂದ ಭತ್ತ ಮತ್ತು ರಾಗಿಯನ್ನು ಮೈಸೂರಿನ ಎ.ಪಿ.ಎಂ.ಸಿ ಆವರಣ, ಬಂಡಿಪಾಳ್ಯ, ನಂಜನಗೂಡಿನ ಎ.ಪಿ.ಎಂ.ಸಿ ಆವರಣ, ಬಿಳಿಗೆರೆ ಖರೀದಿ ಕೇಂದ್ರ, ಟಿ.ನರಸೀಪುರದ ಎ.ಪಿ.ಎಂ.ಸಿ ಆವರಣ, ಬನ್ನೂರು ಎ.ಪಿ.ಎಂ.ಸಿ ಆವರಣ, ಹುಣಸೂರು ಎ.ಪಿ.ಎಂ.ಸಿ ಆವರಣ, ರತ್ನಪುರಿ ಎ.ಪಿ.ಎಂ.ಸಿ ಆವರಣ, ಕೆ.ಆರ್.ನಗರದ ಚುಂಚನಕಟ್ಟೆ ಪ್ರವಾಸಿ ಮಂದಿರ (ಶ್ರೀರಾಮ ದೇವಸ್ಥಾನದ ಹತ್ತಿರ), ಸಾಲಿಗ್ರಾಮದ ಎ.ಪಿ.ಎಂ.ಸಿ ಆವರಣ, ಹೆಚ್.ಡಿ.ಕೋಟೆ ಎ.ಪಿ.ಎಂ.ಸಿ ಆವರಣ, ಸರಗೂರು ಎ.ಪಿ.ಎಂ.ಸಿ ಆವರಣ ಮತ್ತು ಪಿರಿಯಾಪಟ್ಟಣ ಎ.ಪಿ.ಎಂ.ಸಿ ಆವರಣ, ಬೆಟ್ಟದಪುರ ಎ.ಪಿ.ಎಂ.ಸಿ ಆವರಣದಲ್ಲಿ ಖರೀದಿ ಮಾಡಲಾಗುವುದು ಎಂದು ಹೇಳಿದರು.
ಭತ್ತ ಖರೀದಿ ನಿಯಮಾವಳಿಗಳು: ರೈತರಿಂದ ಬೆಳೆದ ಸಾಮಾನ್ಯ ಭತ್ತವನ್ನು ಪ್ರತಿ ಕ್ವಿಂಟಾಲ್ಗೆ 1490 ರೂ. ಗ್ರೇಡ್ `ಎ’ ಭತ್ತವನ್ನು 1960 ರೂ. ಅಂತೆ ಖರೀದಿ ಮಾಡಲಾಗುತ್ತದೆ. ರೈತರಿಗೆ ಕೃಷಿ ಇಲಾಖೆಯಿಂದ ನೀಡಿರುವ ಪ್ರೂಟ್ಸ್ ಐಡಿಯನ್ನು (ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) ನೊಂದಣಿ, ಖರೀದಿ ಕೇಂದ್ರಕ್ಕೆ ತಂದು ಬೆಂಬಲ ಬೆಲೆಯ ಯೋಜನೆಯಡಿ ಭತ್ತ ಮಾರಾಟ ಮಾಡಲು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.

ನೊಂದಣಿ ಮಾಡಿದ ರೈತರು ಇಲಾಖೆಯಿಂದ, ಖರೀದಿ ಏಜೆನ್ಸಿಯಿಂದ ಕಳುಹಿಸುವ ಎಸ್.ಎಂ.ಎಸ್ ಆಧಾರದ ಮೇಲೆ ಸಂಬಂಧಪಟ್ಟ ಅಕ್ಕಿಗಿರಣಿಗಳಿಗೆ ಭತ್ತದ ಮಾದರಿಯನ್ನು (ಸ್ಯಾಂಪಲ್) ಕಡ್ಡಾಯವಾಗಿ ನೀಡಬೇಕು. ಅಕ್ಕಿಗಿರಣಿ ಮಾಲೀಕರು ರೈತರಿಂದ ಸ್ವೀಕರಿಸಿದ ಭತ್ತದ ಮಾದರಿಯನ್ನು ಗುಣಮಟ್ಟದ ಪರಿವೀಕ್ಷಕರು, ಗ್ರೇಡರ್ಗಳು ಪರಿಶೀಲಿಸಿ ಗುಣಮಟ್ಟ ದೃಢೀಕರಣ ನೀಡಿದÀ ನಂತರವೇ ಭತ್ತವನ್ನು ಖರೀದಿಸಿ ಸಂಗ್ರಹಣೆ ಮಾಡಬೇಕು ಎಂದರು.
ಹೆಸರನ್ನು ನೊಂದಾಯಿಸಿಕೊಂಡ ರೈತರು ತಾವು ಭತ್ತ ಸರಬರಾಜು ಮಾಡುವ ದಿನಾಂಕದ ಬಗ್ಗೆ ಖರೀದಿ ಕೇಂದ್ರದಿಂದ ಸರಬರಾಜು ಚೀಟಿಯನ್ನು ಪಡೆದು ರೈತರಿಗೆ ನಿಗಧಿ ಪಡಿಸಿರುವ ದಿನಾಂಕದಂದು ಭತ್ತ ಸರಬರಾಜು ಮಾಡಬೇಕು.ರೈತರಿಂದ ಭತ್ತವನ್ನು ಪಡೆದ ಅಕ್ಕಿಗಿರಣಿ ಮಾಲೀಕರು ಮಾಹಿತಿಯನ್ನು ಆನ್ಲೈನ್ನಲ್ಲಿ ನಮೂದಿಸಬೇಕು. ಹೀಗೆ ನಮೂದಿಸುವಾಗ ಗುಣಮಟ್ಟ ಪರಿಶೀಲನಾ ಅಧಿಕಾರಿ ನೀಡಿರುವ ಒಪ್ಪಿಗೆ ಪತ್ರವನ್ನು ಆನ್ಲೈನ್ನಲ್ಲಿ ಸ್ಕ್ಯಾನ್ ಮಾಡಿ ಅಪಲೋಡ್ ಮಾಡಬೇಕು ಎಂದು ಹೇಳಿದರು.
ರೈತರು ಭತ್ತವನ್ನು ಮ್ಯಾಪ್ ಮಾಡಿದ ಅಕ್ಕಿಗಿರಣಿಗಳಿಗೆ ತಮ್ಮ ಸ್ವಂತ ಖರ್ಚಿನಿಂದ ಸರಬರಾಜು ಮಾಡಬೇಕು ಯಾವುದೇ ಕಾರಣಕ್ಕೂ ಮಧ್ಯವರ್ತಿ ಅಥವಾ ಏಜೆಂಟರ್ಗಳನ್ನು ಬೆಂಬಲಿಸಬಾರದು. ಖರೀದಿಯಲ್ಲಿ ಮಧ್ಯವರ್ತಿಗಳು ಅಥವಾ ಏಜೆಂಟ್ಗಳು ಭಾಗವಹಿಸುವುದು ಕಾನೂನು ಬಾಹಿರವಾಗಿರವಾಗಿದ್ದು, ರೈತರಿಂದ ಖರೀದಿಸುವ ಭತ್ತದ ಸರಕಿನ ಮೌಲ್ಯವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಪಾವತಿಸಲಾಗುವುದು ಎಂದು ಹೇಳಿದರು.
ರಾಗಿ ಖರೀದಿ ನಿಯಾಮಾವಳಿಗಳು:ರಾಗಿಯನ್ನು ಪ್ರತಿ ಕ್ವಿಂಟಾಲ್ಗೆ 3377 ರೂ. ಅಂತೆ ಖರೀದಿ ಮಾಡಲಾಗುವುದು.ರೈತರಿಗೆ ಕೃಷಿ ಇಲಾಖೆಯಿಂದ ನೀಡಿರುವ “ಪ್ರೂಟ್ಸ್” ಐಡಿಯನ್ನು (ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) ನೊಂದಣಿ, ಖರೀದಿ ಕೇಂದ್ರಕ್ಕೆ ತಂದು ಬೆಂಬಲ ಬೆಲೆಯ ಯೋಜನೆಯಡಿ ರಾಗಿ ಮಾರಾಟ ಮಾಡಲು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು.
ನೊಂದಾಯಿಸಿಕೊಂಡ ರೈತರು ತಾವು ರಾಗಿ ಸರಬರಾಜು ಮಾಡುವ ದಿನಾಂಕವನ್ನು ಖರೀದಿ ಕೇಂದ್ರವು ನಿಗಧಿ ಪಡಿಸಿರುವ ದಿನಾಂಕದಂದೇ ಸರಬರಾಜು ಮಾಡಬೇಕು. ರೈತರು ಸರಬರಾಜು ಮಾಡುವ ರಾಗಿಯ ಗುಣಮಟ್ಟವನ್ನು ಗುಣಮಟ್ಟ ಪರಿವೀಕ್ಷಕರು, ಗ್ರೇಡರ್ಗಳು ಪರಿಶೀಲಿಸಿ ದೃಢೀಕರಿಸಿದ ನಂತರವೇ ಖರೀದಿಸಲಾಗುವುದು ಎಂದರು
ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಖರೀದಿ ಕೇಂದ್ರಕ್ಕೆ ರಾಗಿಯನ್ನು ಸರಬರಾಜು ಮಾಡಬೇಕು. ನೊಂದಾಯಿಸಿಕೊಂಡ ರೈತರು ಒಂದು ಬಾರಿ ಉಪಯೋಗಿಸಿದ 50 ಕೆ.ಜಿ ತೂಕದ ಗೋಣಿ ಚೀಲದಲ್ಲಿ ರಾಗಿಯನ್ನು ಸರಬರಾಜು ಮಾಡಬೇಕು. ಗೋಣಿ ಚೀಲ ಖರೀದಿ ವೆಚ್ಚ ಪ್ರತಿ 50 ಕೆ.ಜಿ ಚೀಲಕ್ಕೆ 22ರೂ.ರಂತೆ ಪಾವತಿಸಲಾಗುವುದು.
ರೈತರು ರಾಗಿಯನ್ನು ಖರೀದಿ ಕೇಂದ್ರಗಳಿಗೆ ನೇರವಾಗಿ ಸರಬರಾಜು ಮಾಡಬೇಕು ಯಾವುದೇ ಕಾರಣಕ್ಕೂ ಮಧ್ಯವರ್ತಿ ಅಥವಾ ಏಜೆಂಟರ್ಗಳನ್ನು ಬೆಂಬಲಿಸಬಾರದು. ಖರೀದಿಯಲ್ಲಿ ಮಧ್ಯವರ್ತಿಗಳು ಅಥವಾ ಏಜೆಂಟ್ಗಳು ಭಾಗವಹಿಸುವುದು ಕಾನೂನು ಬಾಹಿರವಾಗಿದ್ದು, ರೈತರಿಂದ ಖರೀದಿಸುವ ರಾಗಿ ಸರಕಿನ ಮೌಲ್ಯವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಪಾವತಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎ.ಎಂ.ಯೋಗೀಶ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ ಕುಮುದಾ ಶರತ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಮಹಂತೇಶಪ್ಪ ಸೇರಿದಂತೆ ಇತರರು ಹಾಜರಿದ್ದರು