ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗಾಗಿ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ನೀಡಿದ ಕರೆಯ ಹಿನ್ನಲೆಯಲ್ಲಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರು ರಾಜ್ಯವ್ಯಾಪಿ ಆನ್ಲೈನ್ ಚಳುವಳಿ ನಡೆಸಿದ್ದಾರೆ.
ಪ್ರತಿಭಟನೆಗೆ ಮೈಸೂರು ಜಿಲ್ಲಾ ಸಮಿತಿ ಸಾಥ್ ನೀಡಿದ್ದು, ಕೊರೋನಾ ಪ್ಯಾಕೇಜ್ ಘೋಷಣೆ ಮಾಡಬೇಕು, ಕೊರೋನಾದಿಂದ ಮೃತಪಟ್ಟ ಅತಿಥಿ ಉಪನ್ಯಾಸಕರಿಗೆ ಸೂಕ್ತ ಪರಿಹಾರ ಒದಗಿಸಬೇಕು, ಈಗ ನಡೆಯುತ್ತಿರುವ ಆನ್ಲೈನ್ ತರಗತಿಗಳಿಗೆ ಈ ಹಿಂದೆ ನೇಮಿಸಿದ್ದ ಎಲ್ಲಾ ಉಪನ್ಯಾಸಕರನ್ನೂ ನಿಯೋಜಿಸಬೇಕು, ಅತಿಥಿ ಉಪನ್ಯಾಸಕರ ಸೇವಾಭದ್ರತೆ ಖಾತ್ರಿಪಡಿಸಬೇಕು ಎಂಬ ಬೇಡಿಕೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಯಿತು.
ರಾಜ್ಯದ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ 14447 ಅತಿಥಿ ಉಪನ್ಯಾಸಕರು ಕೋವಿಡ್-19ರ 2ನೇ ಅಲೆಯ ಲಾಕ್ಡೌನ್ನಿಂದಾಗಿ ಮತ್ತೆ ಪರದಾಡುವಂತಾಗಿದೆ. ಸರ್ಕಾರ ತುಂಬಾ ಹಗ್ಗಜಗ್ಗಾಟ ನಡೆಸಿ ಅವರಿಗೆ ಮತ್ತೇ ಕೆಲಸಕ್ಕೆ ಸೇರಿಸಿಕೊಂಡಿತ್ತು. ಆದರೆ ಈಗಿನ ಲಾಕ್ಡೌನ್ನಿಂದಾಗಿ ಮತ್ತೆ ಅವರ ಜೀವನ ಅತಂತ್ರವಾಗಿದೆ.
ಒಂದೆಡೆ ಉನ್ನತ ಶಿಕ್ಷಣ ಇಲಾಖೆ ಆನ್ಲೈನ್ ತರಗತಿಗಳಿಗೂ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಹೇಳಿದ್ದರೂ ಅದು ಕಾರ್ಯರೂಪಕ್ಕೆ ಬರುತ್ತಿಲ್ಲ. ಹಾಗೂ ಹಲವು ಬಾರಿ ಹೋರಾಟ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಕರೊನಾ ಅವಧಿಯ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಕೊರೊನಾದಿಂದಾಗಿ ಮೃತ ಪಟ್ಟ ಅತಿಥಿ ಉಪನ್ಯಾಸಕರ ಕುಟುಂಬಗಳಿಗೆ ಸೂಕ್ತ ಪರಿಹಾರ ನಿಧಿ ಒದಗಿಸಿಲ್ಲ. ಹಾಗೂ ಅತಿಥಿ ಉಪನ್ಯಾಸಕರಿಗೆ ಇಲ್ಲಿಯವರೆಗೂ ಯಾವುದೇ ರೀತಿಯ ಸೇವಾ ಭದ್ರತೆ ಖಾತ್ರಿಪಡಿಸಿಲ್ಲ. ಇದು ಸರ್ಕಾರದ ಅತ್ಯಂತ ನಿರ್ಲಕ್ಷ ಧೋರೆಣೆಯಾಗಿದೆ. ಇದರಿಂದಾಗಿ ಅವರ ಕುಟುಂಬಗಳು ಬೀದಿಗೆ ಬರುವಂತಾಗಿದೆ.
ಆದ್ದರಿಂದ ಸರ್ಕಾರ ಈ ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಇಂದು ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯ ನೇತೃತ್ವದಲ್ಲಿ ರಾಜ್ಯವ್ಯಾಪಿ ಆನ್ಲೈನ್ ಪ್ರತಿಭಟನೆಯನ್ನು ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಸಂಯೋಜಕರಾದ ಎಂ ಉಮಾದೇವಿ, ಜಿಲ್ಲಾ ಸಂಚಾಲಕ ಸುನಿಲ್ ಟಿ.ಆರ್. ಅತಿಥಿ ಉಪನ್ಯಾಸಕರಾದ ಪ್ರಕಾಶ್, ವಸಂತ್, ಯಶ್ವಂತ್, ನಂಜುಂಡ ಸ್ವಾಮಿ, ಸತೀಶ್, ಸುಪ್ರೀತ್,ಭರತ್,ಜಯಲಕ್ಷ್ಮಿ, ಬಾಬು, ಸಂತೋಷ್, ನವೀನ್,ಪ್ರದೀಪ್ ಸೌಮ್ಯ,ವಂದನ ಸೇರಿದಂತೆ 200 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು