ಚಾಮರಾಜನಗರ: ವಿದ್ಯಾರ್ಥಿಗಳು ಪರೀಕ್ಷೆಯನ್ನು ಯಾವುದೇ ಅತಂಕವಿಲ್ಲದೇ ಧೈರ್ಯದಿಂದ ಎದುರಿಸುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರಮೋದಿಯವರು ಅವರು ಏಪ್ರಿಲ್ ೧ರಂದು ನಡೆಸಿಕೊಡಲಿರುವ 'ಪರೀಕ್ಷಾ ಪೇ ಚರ್ಚಾ ಪ್ರಧಾನ ಮಂತ್ರಿಗಳೊಂದಿಗೆ ವಿದ್ಯಾರ್ಥಿಗಳ ಸಂವಾದ' ಕಾರ್ಯಕ್ರಮಕ್ಕೆ ಜಿಲ್ಲೆಯ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿ ಶ್ರೇಯಾ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಈ ವಿಷಯ ತಿಳಿಸಿದರು.
ಪ್ರಸ್ತುತ ಪರೀಕ್ಷಾ ಪೇ ಚರ್ಚಾ ಸಂವಾದವು ೫ನೇ ಸಂವಾದವಾಗಿದೆ. ಏಪ್ರಿಲ್ ೧ ರಂದು ಬೆಳಗ್ಗೆ ೧೧ ಗಂಟೆಗೆ ನವದೆಹಲಿಯ ತಾಳ್ಕಟೋರಾ ಕ್ರೀಡಾಂಗಣದಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ. ಸಂವಾದಕ್ಕೆ ದೇಶಾದ್ಯಂತ ೧೫.೭ ಲಕ್ಷ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದು, ಪರೀಕ್ಷಾ ಪೇ ಚರ್ಚಾ ಸಂವಾದ ಕಾರ್ಯಕ್ರಮವು ದೂರದರ್ಶನದಲ್ಲಿ ನೇರ ಪ್ರಸಾರವಾಗಲಿದೆ. ಅಲ್ಲದೇ ಆಕಾಶವಾಣಿ, ಯೂಟ್ಯೂಬ್, ಪಿಎಂಒ ಇಂಡಿಯಾ, ರಾಜ್ಯಸಭಾ ಟಿವಿ, ಸ್ವಯಂಪ್ರಭಾ ಟಿವಿ ಸೇರಿದಂತೆ ಇತರೆ ಮಾಧ್ಯಮಗಳ ಮೂಲಕ ಪ್ರಸಾರವಾಗಲಿದೆ ಎಂದರು.
ಶ್ರೇಯಾ ಅವರು ಚಾಮರಾಜನಗರ ಪಟ್ಟಣದ ನಿವಾಸಿಯಾಗಿದ್ದು, ಕೇಂದ್ರೀಯ ವಿದ್ಯಾಲಯದಲ್ಲಿ ೯ನೇ ತರಗತಿಯಲ್ಲಿ ಓದುತ್ತಿದ್ದಾರೆ. ಸುಂದರ ಹಾಗೂ ಸೃಜನಾತ್ಮಕ ಬರವಣಿಗೆ (ಕ್ರಿಯೇಟಿವ್ ರೈಟಿಂಗ್) ಸ್ಪರ್ಧೆಯಲ್ಲಿ ಶ್ರೇಯಾ ಸಂವಾದ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ. ಡಿಜಿಟಲ್ ಇಂಟರ್ಯಾಕ್ಷನ್ ಇನ್ ಕ್ಲಾಸ್ ರೂಂ ಸಂಬಂಧ ಸಂವಾದದಲ್ಲಿ ಶ್ರೇಯಾ ಪ್ರಧಾನಮಂತ್ರಿಯವರೊಂದಿಗೆ ಮಾತನಾಡಲಿದ್ದಾರೆ.
ವಿದ್ಯಾರ್ಥಿಗಳು ಪರೀಕ್ಷಾ ಕಾರ್ಯವನ್ನು ನಿರ್ಭಯವಾಗಿ ನಿಭಾಯಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಪರೀಕ್ಷಾ ಪೇ ಚರ್ಚಾ ಸಂವಾದ ಕಾರ್ಯಕ್ರಮವನ್ನು ಕಾರ್ಯಕ್ರಮವನ್ನು ಜಿಲ್ಲೆಯ ಹೆಚ್ಚಿನ ಜನರು ನೇರವಾಗಿ ವೀಕ್ಷಣೆ ಮಾಡುವ ಮೂಲಕ ಪರೀಕ್ಷೆ ಕುರಿತು ಮಕ್ಕಳಲ್ಲಿರುವ ಭಯ, ನ್ಯೂನತೆಯನ್ನು ದೂರ ಮಾಡಲು ಹಾಗೂ ಮಕ್ಕಳಿಗೆ ಪರೀಕ್ಷೆ ಸಂಬಂಧ ಉಂಟಾಗುವ ಒತ್ತಡವನ್ನು ನಿವಾರಿಸಲು ಸಂವಾದ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಎಸ್. ಕಾತ್ಯಾಯಿನಿದೇವಿ ಅವರು ತಿಳಿಸಿದರು.
ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ನಿರ್ಮಲಾಕುಮಾರಿ ಅವರು ಮಾತನಾಡಿ ಕೋವಿಡ್ನಿಂದಾಗಿ ಆನ್ಲೈನ್ ಮೂಲಕ ವಿದ್ಯಾರ್ಥಿಗಳು ಪಾಠ ಪ್ರವಚನ, ಪರೀಕ್ಷೆಗಳನ್ನು ಎದುರಿಸಿ ಈಗ ಆಫ್ಲೈನ್ ಪರೀಕ್ಷೆಗಳಿಗಾಗಿ ತಯಾರಿಯಲ್ಲಿದ್ದಾರೆ. ಹಾಗಾಗಿ ಪರೀಕ್ಷಾ ಪೇ ಚರ್ಚಾ ಪ್ರಧಾನಮಂತ್ರಿ ಮೋದಿಯವರ ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಬಹಳ ಉಪಯೋಗವಾಗಲಿದೆ. ಸೃಜನಾತ್ಮಕ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾದ ಮಕ್ಕಳಿಗೆ ಪ್ರಧಾನ ಮಂತ್ರಿಗಳ ವಿಶೇಷ ಪ್ರಶಸ್ತಿ ಪತ್ರ ಹಾಗೂ ಪರೀಕ್ಷಾ ಪೇ ಚರ್ಚಾ ಕಿಟ್ ಸಿಗುತ್ತದೆ ಎಚಿದು ತಿಳಿಸಿದರು.
ಹೊಂಡರಬಾಳು ನವೋದಯ ಶಾಲೆಯ ಹಿರಿಯ ಕುರಿಯನ್ ಥಾಮಸ್, ವೈ.ಕೆ. ಬೈಯುಪ್ಪುರ್ ಸುದ್ದಿಗೋಷ್ಠಿಯಲ್ಲಿ ಇದ್ದರು.