ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಸಂಭವಿಸಿರಬಹುದಾದ ಘಟನೆಯಿಂದ ಮೃತಪಟ್ಟ 24 ಕೋವಿಡ್ ಸೋಂಕಿತ ವ್ಯಕ್ತಿಗಳ ಪೈಕಿ 22 ಮೃತ ಕೋವಿಡ್ ಸೋಂಕಿತ ವ್ಯಕ್ತಿಗಳ ವಾರಸುದಾರರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ ಪರಿಹಾರ ಧನವನ್ನು ಆರ್.ಟಿ.ಜಿ.ಎಸ್ ಮೂಲಕ ಪಾವತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ತಿಳಿಸಿದ್ದಾರೆ.
ಕರ್ನಾಟಕದ ಉಚ್ಚನ್ಯಾಯಾಲಯದ ನಿರ್ದೇಶನದಂತೆ ಸರ್ಕಾರದ ಆದೇಶ ಸಂಖ್ಯೆ: ಕಂಇ 232 ಟಿಎನ್ಆರ್ 2021 ಬೆಂಗಳೂರು ದಿನಾಂಕ: 21-05-2021ರ ಅನ್ವಯ ಒಟ್ಟು ಮೃತಪಟ್ಟ 24 ಕೋವಿಡ್ ಸೋಂಕಿತ ವ್ಯಕ್ತಿಗಳ ವಾರಸುದಾರರ ಪೈಕಿ 22 ಕೋವಿಡ್ ಸೋಂಕಿತ ವ್ಯಕ್ತಿಗಳ ವಾರಸುದಾರರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂಗಳಂತೆ ಪರಿಹಾರ ಧನವನ್ನು ಆರ್.ಟಿ.ಜಿ.ಎಸ್ ಮೂಲಕ ಪಾವತಿಸಲಾಗಿದೆ. ಉಳಿದ ಇಬ್ಬರು ಮೃತ ವ್ಯಕ್ತಿಗಳು ಹಾಗೂ ಅವರ ಕಾನೂನು ಬದ್ದ ವಾರಸುದಾರರು ಬೆಂಗಳೂರು ಜಿಲ್ಲೆಗೆ ಸೇರಿದವರಾಗಿದ್ದಾರೆ. ಈ ಇಬ್ಬರು ಮೃತರ ಕಾನೂನು ಸಮ್ಮತ ವಾರಸುದಾರರ ವಿವರ ಹಾಗೂ ದಾಖಲೆಗಳ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿಯವರಿಂದ ವರದಿ ಕೇಳಿ ಪತ್ರ ಬರೆಯಲಾಗಿದೆ. ವರದಿ ಬಂದ ಕೂಡಲೇ ಬೆಂಗಳೂರು ಜಿಲ್ಲೆಯ ಇಬ್ಬರು ಮೃತರ ವಾರಸುದಾರರ ಕುಟುಂಬಕ್ಕೆ ಪರಿಹಾರ ಜಮೆ ಮಾಡಲಾಗುತ್ತದೆ.
ಈಗಾಗಲೇ 22 ಮೃತ ಕೋವಿಡ್ ಸೋಂಕಿತ ವ್ಯಕ್ತಿಗಳ ವಾರಸುದಾರರ ಕುಟುಂಬಕ್ಕೆ ಪರಿಹಾರ ಧನ ಪಾವತಿಸಿರುವ ಬಗ್ಗೆ ಉಚ್ಚನ್ಯಾಯಾಲಯದ ಅಡ್ವೋಕೇಟ್ ಜನರಲ್ ಅವರಿಗೆ ಮತ್ತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.