ಯಾವುದಾದರೇನು?
ಪ್ರತಿ ವರ್ಷವು
ಬಂದು ಹೋಗುವ
ಸಂವತ್ಸರ!
ಕಿತ್ತೊಗೆ ಮನದೊಳಗಣ
ಮದ ಮತ್ಸರ..?
ಆಗ ಮಾತ್ರ
ಉಕ್ಕುವುದೆಲ್ಲೆಡೆ
ಶಾಂತಿ ನೆಮ್ಮದಿಯ
ಮಹಾಪೂರ…!
ಹಳೇ ಶುಭಕೃತುವಿಗೆ
ವಿದಾಯ ಹೇಳೋಣ
ಹೊಸಾ ಶ್ರೀಶೋಭಕೃತ
ಸಂವತ್ಸರವನ್ನ
ಸಂತಸ ಸಂಭ್ರಮದೆ
ಸ್ವಾಗತಿಸೋಣ
ಬೇವು ಬೆಲ್ಲ ತಿನ್ನುವ ಮುನ್ನ
ಒಳ್ಳೆಯ ಪ್ರತಿಜ್ಞೆ ಮಾಡೋಣ
ಹೆಣ್ಣು ಹೊನ್ನು ಮಣ್ಣು ಕಾಣ
ತಾಯಿಭಾಷೆ ತಾಯ್ನಾಡು ಯಾನ
ಗೌರವಾಭಿಮಾನ ಇರಿಸೋಣ
ಕಾಯಾ ವಾಚಾ ಮನಸಾ ತ್ರಿಕರಣ
ಶುದ್ಧಿಯಿಂ ಬದುಕಿ ಅನ್ಯರನ್ನೂ
ಬದುಕಲು ಬಿಡೋಣ
ವಾಟ್ಸಾಪ್ ಟ್ವಿಟರ್ ಫೇಸ್ಬುಕ್
ಅವಲಂಬಿಸಿ ವ್ಯಸನಿಯಾಗದೆ
ದೇಶ ಸುತ್ತಿ ಕೋಶ ಓದೋಣ
ಸನ್ನಡೆ ಚೆನ್ನುಡಿ
ಸಂಸ್ಕೃತಿ ನಾಗರಿಕತೆ
ಕಲಿತೂ ಕಲಿಸೋಣ
ಸರಳ ಸಜ್ಜನಿಕೆಯ ಜೀವನ
ನಡೆಸುತಾ ಮಾನವ ಜನುಮ
ಪಾವನ ಗೊಳಿಸೋಣ….?!
ಇನ್ನೂ ಮುಂತಾದ
ಸರಿ ಯೋಚನೆಯಲ್ಲಿ
ಇರುವಾಗಲೇ ಗಾಳಿಯಲ್ಲಿ
ಬರುತ್ತಿತ್ತು ತೇಲಿ…..ತೇಲಿ
ಆಕಾಶವಾಣಿಯಿಂದ:
“ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ……
ಹೊಸ ವರುಷದ ಹೊಸ ಹರುಷಕೆ
ಹೊಸತು ಹೊಸತು ತರುತಿದೆ…….
ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ……”
* ಕುಮಾರಕವಿ ಬೋ.ನಾ.ನಟರಾಜ
9036976471
ಬೆಂಗಳೂರು
