ಮೈಸೂರು: ಸಾಹಿತ್ಯ ಸರಸ್ವತಿಗೆ ಸಮ ಎಂದು ಸಿರಿಗನ್ನಡ ವೇದಿಕೆಯ ಮಾಜಿ ರಾಜ್ಯಾಧ್ಯಕ್ಷೆ ಹಾಗೂ ಕವಯಿತ್ರಿ ಎ.ಹೇಮಗಂಗಾ ತಿಳಿಸಿದರು.ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ. ಸುಹಾಸ್ ಅವರ ಮೌನಗೀತೆ ಎಂಬ ಕವನ ಸಂಕಲನವನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.

ಪ್ರತಿಯೊಬ್ಬ ಕವಿಯೂ ಕವನ ರಚಿಸಿ, ಪುಸ್ತಕ ಪ್ರಕಟಿಸಲು ಬಹಳ ಕಷ್ಟಪಟ್ಟಿರುತ್ತಾರೆ. ಆ ಪುಸ್ತಕಗಳನ್ನು ಎಲ್ಲೊ ಬಿಸಾಡಬೇಡಿ. ಅದರ ಬಗ್ಗೆ ಗಮನ ಕೊಡಿ. ಪುಸ್ತಕವನ್ನು ಓದಿ ಕವಿಗಳಿಗೆ ಅಭಿಪ್ರಾಯ ತಿಳಿಸುವ ಸೌಜನ್ಯ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.

ಕೃತಿ ಕುರಿತು ಸಾಹಿತಿ ಕೆ.ಶ್ರೀಧರ್ ಮಾತನಾಡಿ, ಎಲ್ಲರೂ ಬರೆಯಬಹುದು. ಆದರೆ, ಆ ಪುಸ್ತಕವನ್ನು ಮುದ್ರಣ ಮಾಡಬೇಕು. ಲೋಕಾರ್ಪಣೆ ಮಾಡಬೇಕು, ಸಮಾನ ಮನಸ್ಕರನ್ನು ಕರೆತರಬೇಕು. ಇದೆಲ್ಲದನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ಸುಲಭದ ಮಾತಲ್ಲ ಎಂದರು.

ಸುಹಾಸ್ ನನಗೆ ನಾಲ್ಕು ವರ್ಷಗಳಿಂದ ಪರಿಚಯ. ಸುಹಾಸ್ ಜಾಸ್ತಿ ಮಾತನಾಡಿದ್ದನ್ನು ನಾನು ನೋಡಿಯೇ ಇಲ್ಲ. ಆದರೆ, ಕವನ ಸಂಕಲನದಲ್ಲಿ ೯೧ ಕವಿತೆಗಳಿವೆ. ಇದರಲ್ಲಿ ಎಲ್ಲಾ ಕವಿತೆಗಳಲ್ಲಿ ಸುಹಾಸ್ ಮಾತನಾಡಿದ್ದು, ಇದೇ ಕವಿತೆ ಮತ್ತು ಸಾಹಿತ್ಯಕ್ಕೆ ಇರುವಂತಹ ಶಕ್ತಿ ಎಂದು ಅವರು ಹೇಳಿದರು.

ಸಮಿತಿ ಅಧ್ಯಕ್ಷ ಎಂ.ಬಿ. ಸಂತೋಷ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಮೊಹಮ್ಮದ್ ಜಾಫರ್, ಆಮ್ವೆ ಡೈರೆಕ್ಟ್ ಸೆಲ್ಲರ್ ಪಾರ್ಟನರ್ ರಾಜು ಆಡ್ಯ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷೆ ಎನ್.ಸಿ. ಮಮತ, ಪ್ರಧಾನ ಕಾರ್ಯದರ್ಶಿ ಬಿ. ಶೋಭಾ, ಕವಿ ಎಂ. ಸುಹಾಸ್ ಮೊದಲಾದವರು ಇದ್ದರು.