ಗುಂಡ್ಲುಪೇಟೆ: ಕನ್ನಡ ನೆಲ, ಜಲ, ಭಾಷೆಗೆ ಗೌರವ ನೀಡುವ ಮೂಲಕ ನಿತ್ಯವೂ ರಾಜ್ಯೋತ್ಸವ ಆಚರಿಸಬೇಕು ಎಂದು ಶಾಸಕ ಸಿ.ಎಸ್. ನಿರಂಜನ ಕುಮಾರ್ ತಿಳಿಸಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಕೇಬಲ್ ಟಿವಿ ನೆಟ್ವರ್ಕ್ ಮತ್ತು ಹಿಂದೂಸ್ಥಾನ್ ಗ್ರೂಪ್ಸ್ ವತಿಯಿಂದ ಹಮ್ಮಿಕೊಂಡಿದ್ದ ‘ಕನ್ನಡದ ಹೆಮ್ಮೆಯ ಸೈನಿಕ ಪ್ರಶಸ್ತಿ ಪ್ರದಾನ’ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಿತ್ಯ ಜೀವನದ ಅವಿಭಾಜ್ಯ ಅಂಗವಾಗಿರುವ ಕನ್ನಡ ಭಾಷೆಗೆ ಸಮಾಜದ ಎಲ್ಲಾ ಕ್ಷೇತ್ರಗಳ ಜನರು ಕನ್ನಡ ರಾಜ್ಯೋತ್ಸವದ ಹೆಸರಿನಲ್ಲಿ ಕೃತಜ್ಞತೆ ಸಲ್ಲಿಸುವುದು ಉತ್ತಮ ವಿಚಾರ ಎಂದರು.
ತಾವು ಬದುಕಿರುವುದೇ ಸಮಾಜಕ್ಕಾಗಿ ಎಂಬಂತೆ ಸಾಕಷ್ಟು ಮಂದಿ ನಮ್ಮ ನಡುವೆ ಕೆಲಸ ನಿರ್ವಹಿಸಿರುತ್ತಾರೆ. ಕಲೆ, ಸಾಹಿತ್ಯ, ಸಂಸ್ಕಂತಿ, ಸಮಾಜ ಸೇವೆ, ಶಿಕ್ಷಣ ಇನ್ನೂ ಹಲವು ಕ್ಷೇತ್ರಗಳಲ್ಲಿ ಇಂತಹ ನಿಶ್ವಾರ್ಥಿಗಳನ್ನು ನೋಡಬಹುದಾಗಿದೆ. ಇಂತಹವರನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ. ತಾಲೂಕಿನಲ್ಲಿ ಇಂತಹ ಕಾರ್ಯಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಲಿ ಎದು ತಿಳಿಸಿದರು.
ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಿರೀಶ್ ಬಾಬು, ಬಂಗಾರ್ ಆಚಾರಿ, ವಿರೂಪಾಕ್ಷ ಸ್ವಾಮಿ, ಆರ್.ಕೆ. ಮಧು, ಕೆಂಪರಾಜು, ಎನ್.ಎಂ. ಸರಸ್ವತಿ, ಪಾರಸ್ಮಲ್, ಸೌಮ್ಯ ಹೆಗ್ಗಡಹಳ್ಳಿ, ಆರ್. ರಘುರಾಂ, ಲೋಕೇಶ್ ದೊಡ್ಡಹುಂಡಿ, ಎ.ಎಂ. ಪ್ರಭಾಕರ, ಆರ್. ದೊಡ್ಡಪ್ಪಾಜಿ, ಉಮೇಶ್, ಸಂಕಲ್ಪ ಶಿಕ್ಷಕರ ವೇದಿಕೆಯವರನ್ನು ಶಾಸಕರು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಶಾಸಕ ಸಿ.ಎಸ್. ನಿರಂಜನ್ಕುಮಾರ್ ಮತ್ತು ಕನ್ನಡದ ಹೆಮ್ಮೆಯ ಸೈನಿಕರು ಕುರಿತಾದ ಕಿರುಚಿತ್ರಗಳು ಮತ್ತು ವಿವಿಧ ಸಾಂಸ್ಕಂತಿಕ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆಯಿತು.
ಪುರಸಭೆ ಅಧ್ಯಕ್ಷ ಪಿ.ಗಿರೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ. ಶಿವಮೂರ್ತಿ, ಹಿಂದೂಸ್ಥಾನ್ ಸಮೂಹ ಸಂಸ್ಥೆಗಳ ಮಾಲೀಕ ಆರ್. ಮಧು, ಶಿಕ್ಷಕ ಚಂದ್ರಶೇಖರ್ ಮೊದಲಾದವರು ಹಾಜರಿದ್ದರು.
ವರದಿ: ಬಸವರಾಜು ಎಸ್ ಹಂಗಳ