ಸುಮಾಲಿಯ ಮಗ ಅಗ್ನಿಶರ್ಮ/ರತ್ನಾಕರನಾಗಿ ಜನಿಸಿ, ಬಹಳ ವರ್ಷದ ನಂತರ ನಾರದಮುನಿಯ ಉಪದೇಶದಿಂದ ತಪಸ್ಸನ್ನಾಚರಿಸಿ ವಾಲ್ಮೀಕಿ ಆದುದು ಪುರಾಣೇತಿಹಾಸ?! ಈತನು ಶ್ರೀವಿಘ್ನೇಶ್ವರನಿಂದ ಬರೆ[ಸಿ]ದ ಮಹಾನ್ಗ್ರಂಥ ರಾಮಾಯಣ’?! ಕೋಸಲದೇಶದ [ರಾಜಧಾನಿಯಾದ ಅಯೋಧ್ಯೆಯನ್ನು ದೇವೇಂದ್ರನ ಅಮರಾವತಿ ಸ್ವರ್ಗಲೋಕವು ಕಣ್ಮುಂದೆ ಕಾಣುವಂತೆ ಬಣ್ಣಿಸಿದ್ದಾರೆ] ರಾಜಕುಮಾರ ರಾಮಚಂದ್ರನ ಜೀವನಚರಿತ್ರೆ. ದಶರಥ ಮಹಾರಾಜನ ಮೂವರು ಮಡದಿಯರಿಗೆ ಐವರು ಮಕ್ಕಳು. ಕೌಸಲ್ಯಾಗೆ ಶಾಂತಾ[ಏಕೈಕ ಹೆಣ್ಣುಮಗಳಿದ್ದಳು, ಎಂಬ ಬಗ್ಗೆ ಬಹುಶಃ ಮೊಟ್ಟಮೊದಲ ಮಾಹಿತಿ ನೀಡಿದ್ದೇ ವಾಲ್ಮೀಕಿ?!] ಮತ್ತು ರಾಮ, ಕೈಕೇಯಿಗೆ ಭರತ, ಸುಮಿತ್ರಾಗೆ ಲಕ್ಷ್ಮಣ-ಶತ್ರುಘ್ನ. ರಾಣಿಯರು ಪಾಯಸ ಕುಡಿದು ಪಡೆದ ಈ ಜನ್ಮರಹಸ್ಯ ಮತ್ತು ಸೋದರರ ಅನುಕ್ರಮ ಜೇಷ್ಠತೆಯನ್ನು ಬರೆದಿರುವ ವಾಲ್ಮೀಕಿಯು ಓದುಗರನ್ನು ಅಂದಿನ ಕಾಲಘಟ್ಟಕ್ಕೆ ಕರೆದೊಯ್ದು ಆಗಿನ ಚಕ್ರವರ್ತಿಗಳಲ್ಲಿದ್ದ ರಸಿಕತೆ ಮತ್ತು ಬಹುಪತ್ನಿತ್ವದ ತತ್ವ ಹೇಗಿತ್ತು? ಎಂಬುದನ್ನು ಸುಲಲಿತವಾಗಿ ವರ್ಣಿಸಿದ್ದಾರೆ! ಇಂಥ ಸಹಜ/ವಾಸ್ತವ ವರ್ಣನೆಯ ತಾಕತ್ ವಾಲ್ಮೀಕಿಗೆ ಮಾತ್ರವಿತ್ತು ಎಂದು ಧಾರಾಳವಾಗಿ ಹೇಳಬಹುದು! ರಘುಕುಲ ತಿಲಕರಲ್ಲಿ ಜೇಷ್ಠನೂ ಶ್ರೇಷ್ಠನೂ ಆದ ಶ್ರೀರಾಮ ಭೂದೇವಿಸುತೆ ಸೀತೆಯನ್ನು ಮಿಥಿಲೆಯಲ್ಲಿ ವಿವಾಹವಾಗಿ ಸೀತಾರಾಮನಾಗುವ ಸನ್ನಿವೇಶಗಳನ್ನು ಕಣ್ಣಿಗೆಕಟ್ಟುವಂತೆ ಶೃಂಗಾರಮಯವಾಗಿ ಬರೆದಿದ್ದಾರೆ.

ಭರತನಿಗೆ ಪಟ್ಟಕಟ್ಟುವ ಕೈಕೇಯಿ ಆಸೆ ಈಡೇರಿಸಲು ಎಂದೋ ನೀಡಿದ ಆಣೆಯ [ದುರ್]ಉಪಯೋಗದ ಸನ್ನಿವೇಶವನ್ನು ಅಸಾಧು ಎಂದು ಪ್ರತಿಪಾದಿಸುವಂತೆ, ಜನಸಾಮಾನ್ಯರಿಗೆ ತಿಳುವಳಿಕೆ ನೀಡುವಂತೆ ಸಮಾಜಕ್ಕೆ ಸಂದೇಶ ಸಾರುವಂತೆಯೂ ಮಾರ್ಗದರ್ಶನ ಮಾಡಿಸಿದ್ದಾರೆ ಕವಿಮಹರ್ಷಿ. ತಂದೆಯ ಆಜ್ಞೆಯಂತೆ ೧೪ವರ್ಷ ವನವಾಸಕ್ಕೆ [ಪತ್ನಿ ಮತ್ತು ತಮ್ಮನ ಜತೆಗೆ]ಹೊರಡುತ್ತಾನೆ. ಕಾಡಿನ ಕುಟೀರದಲ್ಲಿದ್ದ ತನ್ನ[ಲಕ್ಷ್ಮಣನ]ನ್ನು ಮೋಹಿಸಲು ಬಂದ ಶೂರ್ಪನಖಿಗೆ ನಿರಾಶೆ-ಅವಮಾನ ಪಡಿಸಿದ ಕಾರಣಕ್ಕೆ ಪ್ರತ್ಯಕ್ಷವಾದ ಚಿನ್ನದ ಮಾಯಾಜಿಂಕೆ ಬೆನ್ನತ್ತಿದಾಗ, ಲಂಕೇಶ್ವರನು ಜಾನಕಿಯನ್ನು ಅಪಹರಿಸುವನು. ಈ ಸಂದರ್ಭದಲ್ಲಿದ್ದ ಕಾಮಾತುರಾಣಾಂ ನಭಯಂ ನಲಜ್ಜಾಃ ಕ್ರೋಧ, ಹೆಣ್ಣಿನಹಠ, ಗಂಡಿನಛಟ, ಸೇಡು ಶತ್ರುತ್ವದ ಹುಟ್ಟು ಇವುಗಳು ಅತಿಯಾದಾಗ ಒಂದು ದೊಡ್ಡ ದುರಂತವೆ ನಡೆಯುತ್ತದೆ, ರಾಜ್ಯ- ಸಾಮ್ರಾಜ್ಯಗಳು ಅಕ್ಷೋಹಿಣಿ ಸೇನೆಗಳು ಸರ್ವನಾಶವಾಗುತ್ತದೆ; ಎಂಬುದರ ಬಗ್ಗೆ ಸುಧೀರ್ಘವಾಗಿ ಬಣ್ಣಿಸಿದ್ದಾರೆ. ಜಠಾಯುವಿನಿಂದ ಸುದ್ದಿತಿಳಿದ ಸೋದರರು ಆಕೆಯನ್ನು ಹುಡುಕುತ್ತ ಕಿಷ್ಕಿಂಧೆರಾಜ್ಯ ತಲುಪುತ್ತಾರೆ. ವೀರಹನುಮಂತನ, ಧೀರಸುಗ್ರೀವನ ಪರಿಚಯವಾಗಿ ಶೂರವಾಲಿಯನ್ನು ಕೊಂದು, ವಾನರಸೇನೆ[ರಾಮಸೇತುವೆ] ಸಹಾಯದಿಂದ ದಶಕಂಠ ರಾವಣಾಸುರ ಕುಂಭಕರ್ಣನನ್ನು ವಧಿಸಿ ವಿಭೀಷಣನಿಗೆ ಪಟ್ಟಕಟ್ಟಿದ ನಂತರ ಲಕ್ಷ್ಮಣ-ಆಂಜನೇಯ-ಸೀತಾಸಮೇತ ಅಯೋಧ್ಯೆಗೆ ಹಿಂತಿರುಗಿ ಪಟ್ಟಾಭಿಷಕ್ತನಾಗಿ ವಿಜಯೋತ್ಸವ ಆಚರಿಸುತ್ತಾನೆ. ಇವೆಲ್ಲ ಸಂದರ್ಭದಲ್ಲಿನ ಶಿಷ್ಟರಿಗೆರಕ್ಷೆ, ದುಷ್ಟರಿಗೆಶಿಕ್ಷೆ, ಒಗ್ಗಟ್ಟಿನಲ್ಲಿಬಲ, ಸ್ನೇಹ, ವಿಶ್ವಾಸ, ಬಂಧುತ್ವ ಹೇಗಿರಬೇಕು, ಅವುಗಳ ಶಕ್ತಿಯೆಷ್ಟು, ಉಪಯೋಗವೇನು? ಎಂಬುದನ್ನು ಒತ್ತಿಹೇಳುವ ಜತೆಗೇ ಒಂದು ಸಮುದಾಯದ/ಸಾಮ್ರಾಜ್ಯದ ಉದ್ಧಾರ ಅಥವ ಸರ್ವನಾಶ ಎರಡಕ್ಕೂ ಹೆಣ್ಣು ಕಾರಣವಾಗುತ್ತಾಳೆ;
ಎಂಬುದನ್ನು ಎಳೆಎಳೆಯಾಗಿ ಬಿಡಿಸಿಬರೆದಿದ್ದಾರೆ. ಇಷ್ಟೊಂದು ದೊಡ್ಡ ಇತಿಹಾಸವನ್ನು ೭ಕಾಂಡಗಳ, ೨೪೦೦೦ಶ್ಲೋಕಗಳ ೪೮೨೦೦೦ಪದಗಳ ಮೂಲಕ ಸವಿವರವಾಗಿ ಸಚಿತ್ರವಾಗಿ ಬರೆದು ವಿರಮಿಸುತ್ತಾರೆ ವಾಲ್ಮೀಕಿ! ಆ..ದ..ರೆ…
ಶ್ರೀರಾಮಪಟ್ಟಾಭಿಷೇಕ ಮಹೋತ್ಸವ ಸಂದರ್ಭದಲ್ಲೆ ಶುಭಂ ಹಾಡಿ ಮುಗಿಸಿದ್ದ ವಾಲ್ಮೀಕಿಗೆ ಸೀತಾರಾಮಚರಿತ್ರೆಯನ್ನು ‘ಉತ್ತರಕಾಂಡ’ ಅಥವಾ ‘ಶೇಷ[ಉತ್ತರ]ರಾಮಾಯಣ’ ಶೀರ್ಷಿಕೆಯಡಿ ಮತ್ತೆ ಮುಂದುವರೆಸುವ ಅನಿವಾರ್ಯ ಸಂದರ್ಭ ಒದಗಿಬರುತ್ತದೆ!ರಾವಣ ಸಂಹಾರ ನಂತರ ಅಶೋಕವನದಲ್ಲಿದ್ದ ಜಾನಕಿಯನ್ನು ಮರಳಿ ಅಯೋಧ್ಯೆಗೆ ಕರೆತರುವ ಮುನ್ನ ಶ್ರೀರಾಮನೆದುರು ದೇವಾಧಿದೇವತೆಗಳ ಸಾಕ್ಷಿಯಾಗಿ ಋಷಿಮುನಿಗಳ ಸಮ್ಮುಖದ ಅಗ್ನಿಪರೀಕ್ಷೆಯಲ್ಲಿ ಉತ್ತೀರ್ಣಳಾದ ಸೀತೆಯು ಪರಮಪಾವನೆ ಎಂದು ನಿರ್ಧರಿಸದ ಸನ್ನಿವೇಶವನ್ನು ವಾಲ್ಮೀಕಿ ಅಧಿಕಾರವಾಣಿಯಿಂದ ಪುಷ್ಟೀಕರಿಸುತ್ತಾರೆ. ಪರಿ ಶುದ್ಧಗೊಂಡ ಜಾನಕಿಯು ಮಹಾರಾಣಿಯಾಗಿ ಅರಮನೆಯಲ್ಲಿ ಕುಟುಂಬದವರೊಡನೆ ಸಂತಸದೆ ಕಾಲಕಳೆಯುತ್ತಿದ್ದಾಗ; ಆಕಸ್ಮಿಕವಾಗಿ ರಾಜ ಧಾನಿಯ ಪ್ರಜೆಯೊಬ್ಬ ಆಡಿದ ವ್ಯಂಗ್ಯದ ಮಾತಿನಿಂದಾಗಿ ನೊಂದ ಶ್ರೀರಾಮನು ಅನಿರೀಕ್ಷಿತವಾಗಿ ಲಕ್ಷ್ಮಣನ ಮೂಲಕ ಜಾನಕಿಯನ್ನು ನಿಗೂಢವಾಗಿ ಕಾನನಕ್ಕೆ ಬಿಟ್ಟು ಬರುವಂತೆ ಆಜ್ಞಾಪಿಸಿ ತಾನು ಕಣ್ಣೀರಿಡುತ್ತ ಏಕಾಂತದಲ್ಲಿ ತಲ್ಲೀನನಾಗುವ ಸಂದರ್ಭವನ್ನು ವಾಲ್ಮೀಕಿ ಹೀಗೆ ವರ್ಣಿಸುತ್ತಾರೆ: ಚಕ್ರವರ್ತಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ಮನೆಮಡದಿ ಕಳೆದುಕೊಂಡು ನಿಸ್ಸಹಾಯಕನಾಗಿ ನಿರ್ಲಿಪ್ತನಾಗಿ ನಿದ್ರಾಹಾರ ತೊರೆದು ಶೋಕ ಸಾಗರದಲ್ಲಿ
ಮುಳುಗುವುದೆನಿತು ಸರಿ? ಆಳುವದೊರೆ ತಂದೆಇದ್ದಂತೆ, ತಿಳಿದೊ ತಿಳಿಯದೆಯೊ ತಪ್ಪು ಮಾಡಿದವನಿಗೆ ಮನವರಿಕೆ ಮಾಡಿಕೊಟ್ಟು ಕ್ಷಮಿಸಿ ಅವನ ಸಣ್ಣಮಾತನ್ನು ಗೌಣವಾಗಿಸಬಹುದು? ತುಂಬುಗರ್ಭಿಣಿ ಗಂಭೀರದ ಬೌತಿಕ-ಬೌದ್ಧಿಕ ಸ್ಥಿತಿಯಲ್ಲಿರುವಾಗ [ವಿ]ನಾಕಾರಣ? ಅರಣ್ಯದಲ್ಲಿ ಅನಾಥಳನ್ನಾಗಿಸಿದ್ದು ಅದೆಷ್ಟು ನ್ಯಾಯ? ಧರ್ಮ? ಸರಿ? ಎಂಬುದು ಮೂರು ಲೋಕವೂ ಪ್ರಶ್ನಿಸುವಂಥ, ತ್ರಿಮೂರ್ತಿಗಳೂ ಆಶ್ಚರ್ಯ ಪಡುವಂಥ ಸಂದರ್ಭವನ್ನು ವಾಲ್ಮೀಕಿಯು ಅತ್ಯಂತ ದಾರುಣ ಸ್ಥಿತಿಯೆಂದು ಕರೆದು ಸ್ವಯಂ ಮನನೊಂದ ಪದಗಳಿಂದ ವರ್ಣಿಸಿ ಓದುಗರು ಬಿಕ್ಕಿಬಿಕ್ಕಿ ಅಳುವಂತೆ ಮಾಡಿದ್ದಾರೆ!ಮಹಾಕವಿ ಮಹರ್ಷಿ ವಾಲ್ಮೀಕಿಗೆ ಸರಿಸಾಟಿ ಆಗುವಂಥವರು ಬೇರಾರಿಲ್ಲ ಹಾಗೂ ರಾಮಾಯಣ ಮಹಾಕಾವ್ಯಕ್ಕೆ ಸರಿಗಟ್ಟುವಂಥ ಮತ್ತೊಂದು ಕಾವ್ಯವಿಲ್ಲ ಎಂಬುದೂ ಶತಸತ್ಯ!,

ಸಾಮ್ರಾಟನಸತಿ, ಧರಣಿದೇವಿಪುತ್ರಿಯು ದುಸ್ಥಿತಿಯಲ್ಲಿದ್ದಾಗ ವಾಲ್ಮೀಕಿಯ ಆಶ್ರಯ ದೊರಕುವ ದೃಶ್ಯವನ್ನು ಮನಕಲಕುವಂತೆ ಬರೆದಿದ್ದಾರೆ. ಕಾಲಕ್ರಮೇಣ ಲವ-ಕುಶ ಅವಳಿ ಪುತ್ರರತ್ನರಿಗೆ ಜನ್ಮ ನೀಡಿದ್ದನ್ನು ತಮ್ಮ ಶಿಷ್ಯರಾಗಿ ಸಕಲ ವಿದ್ಯಾ ಪಾರಂಗತರಾಗಿ ರಾಮಾಯಣ ಕಥಾ ಸಾರಾಂಶವನ್ನು ಕೇಳುಗರು ತಲೆತೂಗುವಂತೆ ಹಾಡಿಹೊಗಳುವ ಅದಮ್ಯ ಶಕ್ತಿವಂತರಾದುದನ್ನು ಅಯೋಧ್ಯಾನಗರದ ಜನಸ್ತೋಮಕ್ಕೆ, ಅರಮನೆಯ ಶ್ರೀರಾಮನ ಕುಟುಂಬಕ್ಕೆ ಸೀತಾರಾಮರ ಕಥೆಯನ್ನು ಪ್ರಸ್ತುತಪಡಿಸಿ ಆಶ್ಚರ್ಯ ಚಕಿತರನ್ನಾಗಿಸಿದ್ದನ್ನು ಅಪ್ರತಿಮ ಅಮೂಲ್ಯ ಪದ ಪುಂಜಗಳಿಂದ ಪುಂಕಾನುಪುಂಕವಾಗಿ ಬಣ್ಣಿಸಿದ್ದಾರೆ. ಬಹುಮಾನ ಪಡೆದು ಮಹರ್ಷಿ ಕುಟೀರಕ್ಕೆ ಹಿಂದಿರುಗಿ ಸೀತಾಮಾತೆಗೆ ನಡೆದ ಘಟನೆಯನ್ನು ವಿವರಿಸಿದ ತನ್ನ ಮಕ್ಕಳಿಗೆ ‘ಶ್ರೀರಾಮಚಂದ್ರನೆ ನಿಮ್ಮತಂದೆ’ ಎಂಬ ಸತ್ಯವನ್ನು ಹೇಳಲಾರದ/ಹೇಳದೇಇರಲಾರದ ಅಸಹನಾ ಸಂದರ್ಭದಲ್ಲಿ ಸೀತೆಯು ಅನುಭವಿಸುವ ಮೂಕಯಾತನೆ, ವಿಧಿಯಾಟದ ಸು-ದುಃಖದ [ಆನಂದ]ಬಾಷ್ಪ ಮುಂತಾದುವನ್ನು ವಾಲ್ಮೀಕಿಯು ಭಾವನಾತ್ಮಕವಾಗಿ, ಅಸಾಮಾನ್ಯವಾಗಿ ತನುತಟ್ಟುವಂತೆ ಮನಮುಟ್ಟುವಂತೆ ಕರುಳುಚುರುಕ್ ಎನ್ನುವಂತೆ ವರ್ಣಿಸಿ
ಎಂಥ ಕಲ್ಲುಮನಸ್ಸಿನವರೂ ಗಳಗಳನೆ ಅಳುವಂತೆ ಮಾಡಿದ್ದಾರೆ. ಶ್ರೀರಾಮನ ‘ಅಶ್ವಮೇಧಯಾಗ‘ ಪ್ರಾರಂಭ, ಎಳೆಯ ಮಕ್ಕಳು ಕುದುರೆಯನ್ನು ಕಟ್ಟಿಹಾಕುವುದು, ಲಕ್ಶ್ಮಣನಾದಿಯಾಗಿ ಸೋದರರು ಯುದ್ಧದಲ್ಲಿ ಸೋತು ಕಡೆಗೆ ಪ್ರಜ್ಞೆತಪ್ಪುವ ಶೋಚನೀಯ ಸ್ಥಿತಿ! ಅಂತಿಮವಾಗಿ ಸ್ವಯಂ ಶ್ರೀರಾಮಚಂದ್ರ ಚಕ್ರವರ್ತಿಯೇ ಆಗಮಿಸಿ ಲವ–ಕುಶ ರೊಡನೆ ಅಧ್ಬುತ ವಾಗ್ಯುದ್ಧ ನಡೆಸಿದ ನಂತರ ಇನ್ನೇನು ತಂದೆ–ಮಕ್ಕಳ ಅವಸಾನದ ಕಟ್ಟಕಡೆಯ ಸಂದರ್ಭ ಒದಗಿಬರುವ ವೇಳೆಯಲ್ಲಿ ಜಾನಕಿ ಆಗಮಿಸಿ ತಂದೆ–ಮಕ್ಕಳನ್ನು ಪರಸ್ಪರ ಪರಿಚಯಿಸುತ್ತಾಳೆ. ನಂತರ ತನ್ನ ಜನನಿಯಾದ ಧರಣಿಯೊಡಲು ಸೇರಿಕೊಳ್ಳುವ ದುರಂತ… ದುರಾದೃಷ್ಟವಂತ ಶ್ರೀರಾಮನು ವ್ಯಥೆಯಿಂದ ದುಃಖಿಸುತ್ತ ಕಣೀರಧಾರೆಯ ಕೋಡಿಹರಿಸುವ ದೃಷ್ಟಾಂತ.. ಓ..ಎಂಥಾ ಕ್ಲೈಮ್ಯಾಕ್ಸ್, ಎಲ್ಲವನ್ನು ಮನ ಕಲಕುವಂತೆ ಅವಿಸ್ಮರಣೀಯವಾಗಿಸಿ ಅಜರಾಮರವಾಗಿಸಿ ಚಿರಂಜೀವವಾಗಿಸಿ ವರ್ಣಿಸಿದ ಏಕೈಕ ಕವಿ ವಾಲ್ಮೀಕಿ!! ಇಡೀ ರಾಮಾಯಣದ ಪ್ರತಿಯೊಂದು ಘಟನೆ, ಪ್ರತಿಯೊಂದು ಪಾತ್ರ, ಪ್ರತಿಯೊಂದು ಸಂದರ್ಭವನ್ನು ರಮಣೀಯ, ರೌದ್ರ ಶೃಂಗಾರ ಮುಂತಾದ ನವರಸಭರಿತ ಪದ ಗಳಿಂದರಚಿಸಿ ಹೊಸಹೊಸ ವಾಕ್ಯಗಳನ್ನು ಅವ್ಯಾಹತವಾಗಿ ಅನಂತವಾಗಿ ಅಮೋಘವಾಗಿ ಸಾದರಪಡಿಸಿ ಸ್ವಯಂ ಅನುಭವಿಸುತ್ತ ಬರೆಯಲು ಜಗತ್ತಿನ ಬೇರಾವ ಕವಿಯಿಂದಲೂ ಸಾಧ್ಯವಿಲ್ಲ?!

ಮತ್ತೊಮ್ಮೆ ಮತ್ತೊಬ್ಬ ವಾಲ್ಮೀಕಿಯ ಜನನ ಖಂಡಿತ ಅಸಾಧ್ಯ?! ಇಷ್ಟು ದೊಡ್ಡ ಇತಿಹಾಸವನ್ನು ೭ಕಾಂಡಗಳ, ೨೪೦೦೦ಶ್ಲೋಕಗಳ ೪೮೨೦೦೦ಪದಗಳ ಮೂಲಕ ಸವಿವರವಾಗಿ ಸಚಿತ್ರವಾಗಿ ಬರೆದು ವಿರಮಿಸಿದ್ದಾರೆ! ರವಿ–ಚಂದ್ರ–ಭೂಮಿ ಇರುವತನಕ ಉಳಿಯುವ ಏಕಮೇವಕಾವ್ಯ ‘ರಾಮಾಯಣ‘ ಬದುಕಿರುವ ಏಕೈಕಕವಿ ‘ವಾಲ್ಮೀಕಿ‘!!
ಕ್ರಿ.ಶ.೧೩೨೧ರಿಂದ ಇದುವರೆಗೆ ಭಾರತವೂ ಸೇರಿದಂತೆ ಪ್ರಪಂಚದಾದ್ಯಂತ ಮೂಲ ‘ವಾಲ್ಮೀಕಿ ರಾಮಾಯಣ‘ ಗ್ರಂಥದ ಆಧಾರದಿಂದ/ ಪ್ರೇರಣೆಯಿಂದ ಜಗತ್ತಿನಾದ್ಯಂತ ೧೨೩ ಭಾಷೆಗಳಲ್ಲಿ ೧೨೬೦ ಲೇಖಕರು ಬರೆದು ಪ್ರಕಟಿಸಿರುವ ಒಟ್ಟು ಕೃತಿಗಳ [ಪ್ರತಿಗಳ]ಸಂಖ್ಯೆ ೪೨೨ ಕೋಟಿ. ಡಿಸೆಂಬರ್ ೨೦೧೦ಕ್ಕೆ ಅನ್ವಯವಾದಂತೆ ಓದುಗರ ಸಂಖ್ಯೆ ೨೨೫ಕೋಟಿ. ಒಟ್ಟು ಶ್ರೀರಾಮಮಂದಿರಗಳ ಸಂಖ್ಯೆ ೫.೧೭ ಕೋಟಿ, ವಾಲ್ಮೀಕಿಯ ಶಿಲೆ/ಗೋಪುರ/ಮೂರ್ತಿ/ದೇವಾಲಯದ ಸಂಖ್ಯೆ ೨೯,೦೦೦.
ಪ್ರಕಟಗೊಂಡ ರಾಮಾಯಣಗಳಲ್ಲಿ ಕೆಲವು ಉದಾಹರಣೆ:-
ಕುವೆಂಪು ವಿರಚಿತ ‘ರಾಮಾಯಣ ದರ್ಶನಂ’೧೯೫೪[ಕನ್ನಡ+೧೨ಭಾಷೆಗಳಲ್ಲಿ- ಜ್ಞಾನಪೀಠ ಪುರಸ್ಕೃತ]ತುಳಸೀದಾಸ ವಿರಚಿತ ‘ತುಲಸೀ ರಾಮಾಯಣ್’ ೧೫೬೨
[ಸಂಸ್ಕೃತ+೨೧ ಭಾಷೆಗಳಲ್ಲಿ ಲಭ್ಯ]
ಆರ್.ಕೆ.ನಾರಾಯಣ್ – ದಿ ರಾಮಾಯಣ್ [೧೯೭೨]
ಪೋಲಂಕಿ ರಾಮಮೂರ್ತಿ – ಸೀತಾಯಣ ೧೯೭೭[ಕನ್ನಡ+ಇಂಗ್ಲಿಷ್]
ಆನಂದನೀಲಕಂಠನ್ – ಅಸುರ [೧೯೮೧]
ಪಿ.ಎಸ್.ಸುಂದರಂ – ಕಂಬರಾಮಾಯಣ [೧೯೯೨]
ಅಶೋಕ್ ಕೆ.ಬ್ಯಾಂಕರ್ – ಸೀಜ಼್ ಆಫ಼್ ಮಿಥಿಲಾ [೨೦೦೪]
ಸಂಹಿತಾ ಅರ್ಣಿ – ಸೀತಾ‘ಸ್ ರಾಮಾಯಣ್ [೨೦೧೨]
ಜೋನ್ ರಫ಼್ಗಾರ್ಡನ್– ರಾಮ್ [೨೦೨೦/ಇಂಗ್ಲಿಷ್/ಫ಼್ರೆಂಚ್]
ವಾಲ್ಮೀಕಿ ಬಗ್ಗೆ ತಯಾರಿಸಿದ ಚಲನಚಿತ್ರಗಳು:-
೧. ಜಿ.ವಿ.ಸಾಣೆಯವರ – ವಾಲ್ಮೀಕಿ [೧೯೨೧]
೨. ಸುರೇಂದ್ರನಾರಾಯಣರವರ – ರತ್ನಾಕರ [೧೯೨೨]
೩. ಎಲ್ಲಿಸ್ ಡಂಗನ್ರವರ – ವಾಲ್ಮೀಕಿ [೧೯೪೬]
೪. ಭಾಲ್ಜಿ ಪೆಂಢಾರ್ಕರ್ರವರ – ವಾಲ್ಮೀಕಿ [೧೯೪೬]
೫. ಸುಂದರರಾವ್ ನಾಡಕರ್ಣಿಯವರ – ವಾಲ್ಮೀಕಿ [೧೯೪೬]
೬. ಸಿ.ಎಸ್.ಆರ್.ರಾವ್ರವರ – ವಾಲ್ಮೀಕಿ [೧೯೬೩/ಕನ್ನಡ–ಡಾ||ರಾಜ್]
೭. ಸಿ.ಎಸ್.ಆರ್.ರಾವ್ರವರ – ವಾಲ್ಮೀಕಿ [೧೯೬೪/ತೆಲುಗು–ಎನ್.ಟಿ.ಆರ್.]
೮. ಅರವಿಂದ್ಭಟ್ರವರ – ಸಂತ ವಾಲ್ಮೀಕಿ [೧೯೯೧]

ಕುಮಾರಕವಿ ಬಿ.ಎನ್.ನಟರಾಜ್(೯೦೩೬೯೭೬೪೭೧)
ಬೆಂಗಳೂರು–೫೬೦೦೭೨