“ನಮಃಶಿವಾಯ” ಪಂಚಾಕ್ಷರಿ ಮಂತ್ರದಲ್ಲಿ
ಆರೋಗ್ಯ ಸೌಖ್ಯ ಶಾಂತಿ ನೆಮ್ಮದಿ ಹಾಗೂ ಆಧ್ಯಾತ್ಮಿಕದ ಮೋಡಿ ಇದೆ ಎಂಬುದು ಲೋಕಮಾನ್ಯ ಸತ್ಯ!
ಪ್ರತಿ ವರ್ಷವೂ ಛಳಿ ಅಂತ್ಯದ ಬೇಸಿಗೆ ಆರಂಭದ ಕಾಲಗಳ ನಡುವೆ ಬರುವ ಮಾಘಮಾಸದ ಬಹುಳ ಚತುರಮಾವಾಸ್ಯೆ ಹಿಂದಿನ ದಿನ ಪ್ರಾರಂಭವಾಗಿ 24 ತಾಸಿನವರೆಗೆ ದ್ರವ-ಫಲಾಹಾರ ಪೂಜೆ ಪುನಸ್ಕಾರ ಹರಿಕಥೆ ಶಿವಕಥೆ ಹವನ ಹೋಮ ಉಪವಾಸ ಜಾಗರಣೆ ಮುಂತಾದ ಕೈಕಂಕರ್ಯಗಳನ್ನು ಹ[ರಿ]ರ ಭಕ್ತರು ಮಾತ್ರವಲ್ಲದೆ ಪ್ರತಿಯೊಂದು ಹಿಂದೂ ಕುಟುಂಬವು ಶ್ರದ್ಧಾ ಭಕ್ತಿಯಿಂದ ಸಂಪ್ರದಾಯ ಬದ್ಧರಾಗಿ ಆಚರಿಸುವ ಶಿಷ್ಟಾಚಾರ ಶಿವಾಚಾರದ ಪದ್ಧತಿಯುಳ್ಳ ಹಬ್ಬವೆ ‘ಮಹಾಶಿವರಾತ್ರಿ’!ಭೂಲೋಕದ ಮೊಟ್ಟಮೊದಲ ಕಥೆ-ಸಾಹಿತ್ಯ-ಗ್ರಂಥ
ಶಿವಪುರಾಣ!
ಜಗತ್ ಸೃಷ್ಟಿಕರ್ತ ಬ್ರಹ್ಮನ ತಂದೆ ಶ್ರೀಮನ್ ನಾರಾಯಣ. ಇಂಥ ವಿಷ್ಣುವಿನ ಪಿತಾಮಹ ಓಂ ಕಾರಮೂರ್ತಿ ಶಿವ?! ಪರಂಜ್ಯೋತಿ ಪರಶಿವಂಗೆ ಪಿತನು[ಯಾರು?]ಇದ್ದ
ಎಂಬುದಕ್ಕೆ ಯಾವ ಪುರಾಣದ ಹಿನ್ನೆಲೆಯೂ ಇಲ್ಲ! ಆದ್ದರಿಂದ ಆದಿದೇವ ಶಿವನನ್ನು
ತ್ರಿಮೂರ್ತಿ ಜೇಷ್ಠನೂ ತ್ರಿಲೋಕ ಶ್ರೇಷ್ಠನೂ ಎಂದು ಕೊಂಡಾಡುತ್ತಾರೆ. ವಿಶ್ವದಾದ್ಯಂತ ಪ್ರಥಮ ಪೂಜಿತ [ಗಣೇಶ]ನ ತಂದೆಯಾಗಿ ಸ(ಪ)ರ್ವಕಾಲದಲ್ಲು ಅತ್ಯುನ್ನತ ಪೂಜಾಸ್ಥಾನ ದಲ್ಲಿ ಇರುತ್ತಾನೆ ವಿಶ್ವನಾಥ! ಗೌರಿಪುತ್ರನಿಗೆ
ಈಶ್ವರಪಟ್ಟದ ವರನೀಡಿ ವಿಘ್ನೇಶ್ವರನ್ನಾಗಿಸಿದ ಅಖಿಲಾಂಡ ಕೋಟಿ ಬ್ರಹ್ಮಾಂಡ ಪಾಲಕ ಅಖಿಲೇಶ್ವರ ಅಮೃತೇಶ್ವರ ಜ್ಞಾನೇಶ್ವರ ಜಗದೀಶ್ವರ ವಿಶ್ವೇಶ್ವರ ಮುಂತಾದ ಸಹಸ್ರ ನಾಮದಿಂದ ಸುರಾಸುರ ವಂದ್ಯನಾಗಿ ಅನವರತ ಆರಾಧಿಸಲ್ಪಡುವ ಏಕಮೇವ ಅದ್ವಿತೀಯ ದೈವ ಮಹಾದೇವ!
ಹಿಂದೂಧರ್ಮದ ಮಹಾನ್ಗ್ರಂಥ ಭಗವದ್ಗೀತೆಯ ಉದಾ:- ಅಧ್ಯಾಯ-9,ಶ್ಲೋಕ-34:ಮನ್ಮನಾಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕರು, ಮಾಮೇವ ಏಷ್ಯಸಿ ಯುಕ್ತ್ವಾ ಏವಮಾತ್ಮಾನಂ ಮತ್ಪರಾಯಣಃಕನ್ನಡತಾತ್ಪರ್ಯ:
“ನನ್ನಲ್ಲಿ ಮನಸ್ಸುಳ್ಳವನಾಗಿರು, ನನ್ನ ಭಕ್ತನಾಗಿರು, ನನ್ನನ್ನೆ ಪೂಜಿಸುತ್ತಿರು, ನನಗೆ ನಮಸ್ಕರಿಸುತ್ತಿರು, ನನ್ನನ್ನು ಪರಮಗತಿ ಎಂದರಿತು ನನ್ನಲ್ಲಿ ನಿನ್ನ ಮನಸ್ಸನ್ನು ಲೀನವಾಗಿಸು ಆಗಮಾತ್ರ ನೀನು ನನ್ನನ್ನು ಪಡೆಯುವೆ”
ಅಧ್ಯಾಯ-18, ಶ್ಲೋಕ-66:ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂವ್ರಜ ಅಹಂ ತ್ವಾ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾಶುಚಃ. ಇದರ ಕನ್ನಡ ತಾತ್ಪರ್ಯ
“ಎಲ್ಲಾ ದೇಶ/ಧರ್ಮ ತ್ಯಜಿಸಿ ನನಗೊಬ್ಬನಿಗೆ ಶರಣಾಗು, ನಿನ್ನ ಸಕಲ ಪಾಪಕರ್ಮದಿಂದ ನಿನಗೆ ಮುಕ್ತಿ ನೀಡುವೆ ಆದ್ದರಿಂದ ನೀನು ದು:ಖಿಸಬೇಡ”
ವೇದೋಪನಿಷತ್ಗಳಲ್ಲಿ ಶಿವನ ಮಹಿಮೆಯನ್ನು ಹೀಗೆ ಕೊಂಡಾಡಿದ್ದಾರೆ:-
“ಯಂ ಬ್ರಹ್ಮಾ ವರುಣೇಂದ್ರ ರುದ್ರಮರುತಃ ಸ್ತುನ್ವಂತಿ ದಿವೈಯಃ ಸ್ತವೈಃ//ವೇದೈಃ ಸಾಂಗಪದಕ್ರಮ ಉಪನಿಷದೈಃ ಗಾಯಂತಿ ಯಃ ಯೋಗಿನೋ//ಧ್ಯಾನಾವಸ್ಥಿತ ತದ್ಗತೇನ ಮನಸಾ ಪಶ್ಯಂತಿ ಯಃ ಸಾಮಗಾಃ// ಯಸ್ಯಾಂತಃ ನ ವಿದುಃ
ಸುರಾಸುರ ಗಣಾದೇವಾಯ ತಸ್ಮೈನಮಃ”
ಇದರ ಕನ್ನಡ ತಾತ್ಪರ್ಯ:-‘ಯಾರನ್ನು: ಬ್ರಹ್ಮ ವರುಣ ಇಂದ್ರ ರುದ್ರ ಮಾರುತ ಗಣಗಳು ತಮ್ಮ ದಿವ್ಯ ಮಂತ್ರಗಳಿಂದ ಕಿರು ಭಕ್ತಿಯಿಂದ ಸ್ತುತಿಸುವರೊ; ಯಾರನ್ನು: ಸಾಮಗರು ಅಂಗ- ಪದಕ್ರಮ, ಉಪನಿಷತ್ತು-ವೇದಗಳಿಂದ ಹಾಡುವರೊ; ಯಾರನ್ನು: ಯೋಗಿಗಳು ಧ್ಯಾನಸ್ಥಿತಿಯಲ್ಲಿ ತಲ್ಲೀನರಾದ ಮನಸ್ಸಿಂದ ಕಾಣುವರೋ; ಯಾರ ಅಂತ್ಯವನ್ನು ಸುರಾಸುರರು ಅರಿಯಲು ಅಸಾಧ್ಯವೊ ಅಂಥ ಪರಮಾತ್ಮನಿಗೆ ಅನಂತ ವಂದನೆಗಳು!
ವಚನಕಾರರೆಲ್ಲರೂ ಶಿವನ ಭಕ್ತರೆಂಬುದು ಅದ್ಭುತಾಶ್ಚರ್ಯ! ಇವರು ಕೇವಲ ತಮ್ಮ ರಚನೆಗಳಿಂದ ಶಿವನನ್ನು ಹಾಡಿ ಹೊಗಳಿದವರಷ್ಟೆ ಅಲ್ಲ, ದಿಟ ಭಕ್ತಿಯಿಂದ ಶಿವನನ್ನು ಸಾಕ್ಷಾತ್ಕಾರ ಮಾಡಿಕೊಂಡ ಪರಮಪಾವನರೂ ಹೌದು! ಬಸವಣ್ಣನವರ“ಉಳ್ಳವರು ದೇವಾಲಯ ಮಾಡುವರು..” “ಕಳಬೇಡ, ಕೊಲಬೇಡ….” “ಕಾಯಕವೇ ಕೈಲಾಸ”
ಮುಂತಾದ ವಚನಾಮೃತಗಳಿಂದ ವೈದಿಕ ಧರ್ಮದ ಮೂಢ ನಂಬಿಕೆ ವಿರುದ್ಧ ವೈಚಾರಿಕ ಕ್ರಾಂತಿ ಮಾಡಿದ್ದು ಇತಿಹಾಸ! ತನ್ಮೂಲಕ ಮಾನವೀಯತೆ-ಜಾತ್ಯಾತೀತ ಸಮಾಜದ ರೂವಾರಿಯಾದರು. ಆಗಿನ ಕಾಲಕ್ಕೆ ಅದು ಸಾಧ್ಯವಾಗಿದ್ದು
ಕೂಡಲ ಸಂಗಮದೇವನ ಕೃಪೆಯಿಂದಲೆ ಎಂಬುದು ಅಣ್ಣನ ವಿಶ್ವಾಸ ಮಾತ್ರವಲ್ಲ ಪ್ರತಿಯೊಬ್ಬ ಶಿವಭಕ್ತನ ನಂಬಿಕೆಯೂ ಆಗಿತ್ತು! ಬಸವಣ್ಣನ ಅಚಲ ವಿಶ್ವಾಸಕ್ಕೆ ಉಧಾಹರಣೆ:-
“ಎನಗೆ ನಿಮ್ಮ ನೆನಪಾದಾಗಲೆ ಉದಯ!
ಎನಗೆ ನಿಮ್ಮ ಮರೆವಾದಾಗಲೆ ಅಸ್ತಮಾನ!
ಎನಗೆ ನಿಮ್ಮ ನೆನಪೇ ಜೀವ!
ಎನಗೆ ನಿಮ್ಮ ನೆನಪೇ ಪ್ರಾಣ ಕಾಣಾ ತಂದೆ!
ಎನ್ನ ಹೃದಯದಲ್ಲಿ ನಿಮ್ಮ ಚರಣದುಂಡಿಗೆ ನೊತ್ತಯ್ಯಾ! ವದನದಲಿ ಷಡಕ್ಷರಿಯ ಬರೆಯಯ್ಯಾ ಸ್ವಾಮಿ ಕೂಡಲ ಸಂಗಮದೇವಾ!”
ಶಿವಶರಣೆ ಅಕ್ಕಮಹಾದೇವಿ ತಮ್ಮ ವಚನಗಳಲ್ಲಿ ಶಿವನನ್ನು ಹೊಗಳಿರುವುದು ಹೀಗೆ:-
“ಶರಣೆಂಬೆ ನಾ ಶಶಿಭೂಷಣ, ಗೌರಿಪ್ರಿಯ ಜಗನ್ಮೋಹನ// ಕೆಂಜೆಡೆ ಮುಡಿಯ ಕಾಪಾಲಿಕನೆ,ನಂಜುನುಂಗಿದನಂಜುಂಡೇಶನೆ// ನಂಬಿದಬಾಲನ ಅಪ್ಪಿ ಮುದ್ದಾಡಿದ, ಮೃತ್ಯುಂಜಯ ನೀ ದಯಾಮಯ // ಬೇಡರಕಣ್ಣನ ಪೂಜೆಗೆ ನೀನೊಲಿದೆ, ಅಲ್ಲಮಪ್ರಭುವಾಗಿ ಮಾಯೆಯ ಗೆಲಿದೆ// ಬಲ್ಲಿದ ಬಸವಂಗೆ ಕುಲದೈವ ನೀನಾದೆ//ಮಹಾದೇವಿ ಅಕ್ಕನ ಚೆನ್ನ ಮಲ್ಲಿಕಾರ್ಜುನ”.
ಕಾಯಾ-ವಾಚಾ-ಮನಸಾ ತನ್ನನ್ನು ಶಿವನಿಗೆ ಸಮರ್ಪಿಸಿಕೊಂಡ ಅಕ್ಕನು ಶಿವನ ಭಕ್ತರು ಹೇಗಿರಬೇಕೆಂದು ಸೂಚಿಸಿದ್ದಾರೆ:-
“ತನು ಕರಗದವರಲ್ಲಿ ಪುಷ್ಪವನು ಒಲ್ಲೆಯಯ್ಯ ನೀನು// ಮನ ಕರಗದವರಲ್ಲಿ ಗಂಧಾಕ್ಷತೆಯನು ಒಲ್ಲೆಯಯ್ಯ ನೀನು// ಅರಿವು ಕಣ್ತೆರೆಯದವರಲ್ಲಿ ಆರತಿಯನು ಒಲ್ಲೆಯಯ್ಯ ನೀನು// ಭಾವಶುದ್ಧ ಇಲ್ಲದವರಲ್ಲಿ ಧೂಪವನು ಒಲ್ಲೆಯಯ್ಯ ನೀನು// ಹರ ನಾಮಿಗಳಲ್ಲದವರಲ್ಲಿ ನೈವೇದ್ಯವ ಒಲ್ಲೆಯಯ್ಯ ನೀನು// ಹೃದಯಕಮಲ ಇಲ್ಲದವರಲ್ಲಿ ಇರಲೊಲ್ಲಯ್ಯ ನೀನು//
ಎನ್ನಲ್ಲಿ ಏನುಂಟೆಂದು ಕರಸ್ಥಲದಲ್ಲಿ ಇಂಬುಗೊಂಡೆ
ಹೇಳಾ ಚೆನ್ನಮಲ್ಲಿಕಾರ್ಜುನ…..”
ಈ ವಚನದ ಗೂಢಾರ್ಥ:-
ಶಿವನನ್ನು ಒಲಿಸಲು ಬಣ್ಣಬಣ್ಣದ ಹೂಮಾಲೆ ತುಳಸಿ ಕರ್ಪೂರ ಗಂಧದಕಡ್ಡಿ ಹಣ್ಣು ಹಂಪಲು ಷಡ್ರಸ ನೈವೇದ್ಯ ಡೋಲು ಢಮರುಗ ತಮಟೆ ನಾದಸ್ವರ ಒಡವೆ ವಸ್ತ್ರ ಒನಪು ವಯ್ಯಾರ ಅಂತಸ್ತು ಆಡಂಬರ ಡೌಲು ಢಂಬಾಚಾರ ಮುಂತಾದ ಲೌಕಿಕ ಆಮಿಷಗಳ ಗೊಡ್ಡುಭಕ್ತಿ ಶಿವನಿಗೆ ಬೇಡ, ಬದಲಿಗೆ ಕಿಂಚಿತ್ ದೃಢಭಕ್ತಿಯಿಂದ ಒಂದು ಬಿಲ್ವಪತ್ರೆ ಅರ್ಪಿಸಿದರು ಸಾಕು!
ದೇಶದಾದ್ಯಂತ ಪ್ರತಿಯೊಂದು ದೇವಾಲಯ ಗಳಲ್ಲಿ ವಿಶೇಷವಾಗಿ ಶಿವದೇವಾಲಯಗಳಲ್ಲಿ ಅನನ್ಯ ಆಸಕ್ತಿಯಿಂದ ಭಕ್ತಿ ಪರಾಕಾಷ್ಠೆಯ ಷಡಕ್ಷರಿ (ಓಂ ನಮಃಶಿವಾಯ) ಮಂತ್ರದೊಡನೆ ಪ್ರತಿಯೊಂದು ಶಿವಲಿಂಗಕ್ಕೂ 11/101/1001 ಬಿಲ್ವ ಪತ್ರೆ ಸಮರ್ಪಿಸುವರು. ಇಡೀ ರಾತ್ರಿ ಅರ್ಚನೆ ಭಜನೆ ಶಿಸ್ತು ಶುಚಿತ್ವ ಸಂಭ್ರಮ ನಿರಂತರ ಮೊಳಗುತ್ತದೆ. ಮಹಾಶಿವಯಾಗ ರುದ್ರಾಭಿಷೇಕ ಸಂಕೀರ್ತನೆ ಭಕ್ತಿಪಾರಾಯಣ ಶಿವಲೀಲಾಮೃತ ಕಥಾವಾಚನ ಗೀತಗಾಯನ ತಾಂಡವ (ನಟರಾಜ) ನೃತ್ಯ, ನಾಟಕ ಸಿನಿಮ ಸಂಗೀತ ಕಚೇರಿ ಮುಂತಾದ ಭಕ್ತಿಪ್ರಧಾನ ಕಾರ್ಯಕ್ರಮ ಆಚರಿಸುತ್ತಾರೆ. ನಾಸ್ತಿಕಾಸ್ತಿಕ ಆದಿಯಾಗಿ ಎಲ್ಲರೂ ಕೈಗೊಳ್ಳುವ ಉಪವಾಸ ಜಾಗರಣೆ ಶಿವಧ್ಯಾನಗಳ ಸಂಗಮವೆ ಮಹಾ ಶಿವರಾತ್ರಿಯ ಧ್ಯೇಯೋದ್ದೇಶ!
ಕೈಲಾಸದಲ್ಲಿ ಒಮ್ಮೆ ಪರಶಿವನ ಪತ್ನಿಯರಾದ ಗಂಗೆ-ಗೌರಿಯರು ಸ್ವಪ್ರತಿಷ್ಠೆಗಾಗಿ ಕಾದಾಡಿಕೊಂಡು ಶಿವನಮೇಲೆ ಆಣೆಮಾಡಿ ಪರಸ್ಪರ ಶಪಿಸಿಕೊಂಡು ಭೂಲೋಕದಲ್ಲಿ ಜನಿಸುತ್ತಾರೆ. ಗಂಗೆ ಮತ್ತು ಗೌರಿ ಭೂಲೋಕ ವಾಸಿಯಾದರು ಎಂಬುದನ್ನು ತಿಳಿದು ಈಶ್ವರನೂ ಸಹ ಭೂಲೋಕದಲ್ಲಿ ಮಾನವ ಜನ್ಮ ತಾಳುವನು. ಗೌರಿಯುರಾಜಕುಮಾರಿಯಾಗಿ, ಗಂಗೆಯುಮೀನುಗಾರ್ತಿಯಾಗಿ ಜನಿಸುತ್ತಾರೆ. ಸುದೈವದಿಂದ ಇಬ್ಬರೂ ಒಂದಾಗಿ ಸೇರಿಕೊಂಡು ಶಿವರಾತ್ರಿಯಂದು ಉಪವಾಸ-ಜಾಗರಣೆ-ಭಜನೆ ಮಾಡುತ್ತಾ ಶಿವನನ್ನು ಅನನ್ಯ ಆರಾಧಿಸುತ್ತಾರೆ. ವ್ರತ ಆಚರಿಸಿದ ಫಲವಾಗಿ ಶಾಪ ವಿಮೋಚನೆಗೊಂಡು ಪುನಃ ಕೈಲಾಸಕ್ಕೆ ಹಿಂದಿರುಗುವರು.
ಈ ಕತೆಯನ್ನಾಧರಿಸಿ 1967ರಲ್ಲಿ ನಟ-ನಿರ್ಮಾಪಕ-ನಿರ್ದೇಶಕ
ಬಿ.ಆರ್.ಪಂತುಲುರವರು ರಾಜ್ಕುಮಾರ್ ಲೀಲಾವತಿ ಭಾರತಿ ತಾರಾಗಣದ ಗಂಗೆ-ಗೌರಿ ಕನ್ನಡ ಚಿತ್ರ ತೆರೆಗರ್ಪಿಸಿ ಪ್ರೇಕ್ಷಕರೂ ಶಿವನ ಭಕ್ತರಾಗುವಂತೆ ಮಾಡಿದ್ದು ಎಂದಿಗೂ ಮರೆಯುವಂತಿಲ್ಲ!
ಇತ್ತೀಚಿನ ವರ್ಷಗಳಲ್ಲಿ ಕಿಡಿಗೇಡಿಗಳು ಜಾಗರಣೆ ನೆಪದಲ್ಲಿ ರಾತ್ರಿಯಿಡೀ ಮನೆಯೊಳ[ಹೊರ]ಗೆ ಮದ್ಯಪಾನ, ನಡುರಸ್ತೇಲಿ ಜೂಜು, ಅಶ್ಲೀಲಚಿತ್ರ [ಪ್ರ]ದರ್ಶನ, ದೇವಸ್ಥಾನ(ಸಾರ್ವಜನಿಕ) ಸ್ಥಳದಲ್ಲಿ ಅಸಭ್ಯ ವರ್ತನೆ, ಬೈಕ್ ವೀಲಿಂಗ್, ಅಡ್ಡಾ ದಿಡ್ಡಿ ಡ್ರೈವಿಂಗ್, ನಿಯಮ-ಕಾನೂನು-ಸುವ್ಯವಸ್ಥೆ ಉಲ್ಲಂಘನೆ ಮಾಡುತ್ತಾರೆ?! ಇಂಥ ಸಮಾಜಘಾತುಕ ಚಟುವಟಿಕೆಗಳಿಂದ ಪಬ್ಲಿಕ್-ಪ್ರೈವೇಟ್ ಆಸ್ತಿಪಾಸ್ತಿ ನಷ್ಟ, ಸಮಾಜದ ಶಾಂತಿ-ನೆಮ್ಮದಿ
ಭಂಗ ಮಾಡುತ್ತಿರುವುದು ಶಿಕ್ಷಾರ್ಹ ಅಪರಾಧ?!
ನಾಡನ್ನು ಕಾಪಾಡಲು ಹಗಲು-ರಾತ್ರಿ ಶ್ರಮಿಸುತ್ತಿರುವ ಧೀರ ಆರಕ್ಷಕರ/ಅಧಿಕಾರಿಗಳ ಜತೆಗೆ ಕೆಲವು ಸಮಾಜ ಕಂಟಕ ಶಕ್ತಿ (ಪುಢಾರಿ)ಗಳು ದುರ್ ವರ್ತನೆಯಿಂದ ನಡೆದುಕೊಳ್ಳುತ್ತಾರೆ. ಸಾಮಾಜಿಕ ಅಶಾಂತಿಗೆ ಕಾರಣರಾಗುವ ಉದ್ಧಟತನದಿಂದ ಕಾನೂನು ಕೈಗೆ ತೆಗೆದುಕೊಳ್ಳುವ ಯಾರೇಆಗಲಿ, ಶಿಕ್ಷೆಗೆ ಗುರಿ ಪಡಿಸಬೇಕು. ಈವಿಷಯದಲ್ಲಿ ಎಲ್ಲರ ಸಹಾಯ-ಸಹಕಾರ ಇದ್ದೇ ಇರಬೇಕು?! ಬೇಡರಕಣ್ಣಪ್ಪ, ಭಕ್ತಸಿರಿಯಾಳ, ಶ್ರೀಮಂಜುನಾಥ,
ಶಿವರಾತ್ರಿಮಹಾತ್ಮೆ, ಮುಂತಾದ ನೂರಾರು ಶಿವಲೀಲೆ ಮಹಿಮೆ ಗಳಿವೆ. ಆ ಪೈಕಿ ಒಂದೆರಡನ್ನಾದರೂ ಸಿನಿಮ-ನಾಟಕದ ಮೂಲಕ
ಕಂಡು-ಕೇಳಿ ನಂಬಿದ್ದೇವೆ. ಆದ್ದರಿಂದ ಮಹಾಶಿವರಾತ್ರಿಯ ದಿನ ಎಲ್ಲರೂ ಯಥಾಶಕ್ತಿ ಭಕ್ತಿಯಿಂದ ಶಿವನನ್ನು ಪೂಜಿಸಿದರೆ ಪ್ರತಿಫಲ ಖಂಡಿತವಾಗಿ ದೊರಕುತ್ತದೆ!
ಈಶ್ವರ ಅಲ್ಲಾ ತೇರೆ ನಾಮ್ ಸಬ್ ಕೊ ಸನ್ಮತಿ ದೇ ಭಗವಾನ್……?!

ಕುಮಾರಕವಿ ನಟರಾಜ 9036976471
ಬೆಂಗಳೂರು
[12/02, 04:04] B N NATARAJA: ಆತ್ಮೀಯ ಗೆಳೆಯArticle ಶಿವರಾತ್ರಿ ಹಬ್ಬದ ಲೇಖನ
ಪ್ರಕಟಿಸಿದ ನಂತರ..link ಕಳಿಸಿ