ಬೆಂಗಳೂರು: ವರ್ಷಾಂತ್ಯದೊಳಗೆ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ರಾಜ್ಯಮಟ್ಟದ ಇ-ಚಿಂತನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಲಭ್ಯವಿರುವ ಕೋವಿಡ್ ಲಸಿಕೆಯಲ್ಲಿ ಶೇ.75ರಷ್ಟನ್ನು ಕೇಂದ್ರ ಸರ್ಕಾರವೇ ಖರೀದಿಸಿ ಉಚಿತವಾಗಿ ರಾಜ್ಯ ಸರ್ಕಾರಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸುತ್ತಿದೆ. ಲಸಿಕೆಯ ಲಭ್ಯತೆಯನ್ನು ತ್ವರಿತವಾಗಿ ಹೆಚ್ಚಿಸಲು ಭಾರತ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಭಾರತ್ ಬಯೋಟೆಕ್ ಸಂಪೂರ್ಣ ಸ್ವದೇಶಿಯವಾದ ‘ಕೊವ್ಯಾಕ್ಸಿನ್’ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಈ ಕಂಪನಿಯು ಸದ್ಯ ಮಾಸಿಕವಾಗಿ 1.7 ಕೋಟಿ ಡೋಸುಗಳನ್ನು ಉತ್ಪಾದಿಸುತ್ತಿದೆ. ‘ಕೊವ್ಯಾಕ್ಸಿನ್’ ಲಸಿಕೆಯನ್ನು ಇನ್ನಷ್ಟು ಘಟಕಗಳಲ್ಲಿ ಉತ್ಪಾದಿಸಲು ವ್ಯವಸ್ಥೆ ಮಾಡಲಾಗುತ್ತಿದ್ದು ಜುಲೈ ವೇಳೆಗೆ ಇದರ ಮಾಸಿಕ ಉತ್ಪಾದನೆ 7.5 ಕೋಟಿ ಡೋಸುಗಳಿಗೆ ಏರಿಕೆಯಾಗಲಿದೆ ಎಂದು ಅವರು ವಿವರಿಸಿದರು.

ಹಾಗೆಯೇ ಸೆರಮ್ ಇನ್ಸ್ಟಿಟ್ಯೂಟಿನ  ಕೋವಿಶೀಲ್ಡ್ ಲಸಿಕೆ ಉತ್ಪಾದನೆಯನ್ನು ಸೆಪ್ಟಂಬರ್ ವೇಳೆಗೆ 11 ಕೋಟಿ ಡೋಸಿಗೆ ಏರಿಸಲು ಕ್ರಮ ಕೈಗೊಳ್ಳಲಾಗಿದೆ. ರಷ್ಯಾದಿಂದ ಸ್ಪುಟ್ನಿಕ್-5 ಲಸಿಕೆಯ ಆಮದು ಈಗಾಗಲೇ ಆರಂಭಗೊಂಡಿದೆ. ಇದರ ಹೊರತಾಗಿ ಭಾರತದಲ್ಲಿಯೂ ಅದರ ಉತ್ಪಾದನೆ ಆರಂಭಿಸಲು 5 ಕಂಪನಿಗಳೊಂದಿಗೆ ಅಗತ್ಯ ಒಪ್ಪಂದವಾಗಿದೆ ಎಂದು ಅವರು ಹೇಳಿದರು.

ಹೈದರಾಬಾದ್ ಮೂಲದ ಬಯೋಲೊಜಿಕಲ್-ಇ ಕಂಪನಿಯ ಜೊತೆ ಕೋವಿಡ್ ಲಸಿಕೆ ಖರೀದಿಸುವ ಬಗ್ಗೆ ಚರ್ಚಿಸಲಾಗಿದ್ದು ಅದು ಡಿಸೆಂಬರ್ ಒಳಗಾಗಿ 30 ಕೋಟಿ ಡೋಸುಗಳನ್ನು ಪೂರೈಸಲಿದೆ. ಹೀಗೆ ಎಲ್ಲ ರೀತಿಯಿಂದಲು ಲಸಿಕೆಯ ಲಭ್ಯತೆ ಪ್ರಮಾಣವನ್ನು ಹೆಚ್ಚ್ಚಿಸಲಾಗುತ್ತಿದ್ದು ಡಿಸಂಬರ್ ಒಳಗಾಗಿ 18 ವರ್ಷ ಮೇಲ್ಪಟ್ಟ ಎಲ್ಲ ಭಾರತಿಯರಿಗೂ ಕೋವಿಡ್ ಲಸಿಕೆ ನೀಡಲು ಯೋಜಿಸಲಾಗಿದೆ ಎಂದು ತಿಳಿಸಿದರು.

ಕೋವಿಡ್ ಮೂರನೇ ಅಲೆ ಬರಬಹುದು ಮತ್ತು ಅದು ಮಕ್ಕಳನ್ನು ಹೆಚ್ಚು ಕಾಡಬಹುದು ಎಂದು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ಹಾಗಾಗಿ ಆದಷ್ಟು ಬೇಗ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂಬುದು ಪ್ರಧಾನಿ ಮೋದಿಯವರ ಇಚ್ಛೆಯಾಗಿದೆ. ಭಾರತದಲ್ಲಿಯೇ ಮಕ್ಕಳ ಕೊರೊನಾ ಲಸಿಕೆಯ ಅಭಿವೃದ್ಧಿ ಕೊನೆಯ ಹಂತ ಪಲುಪಿದ್ದು ಅದರ ಪರೀಕ್ಷೆಗೆ (ಮಕ್ಕಳ ಮೇಲೆ ಪ್ರಯೋಗ) ಅಗತ್ಯ ಅನುಮತಿ ನೀಡಲಾಗಿದೆ. ಪರೀಕ್ಷೆ ಯಶಸ್ವಿಯಾದರೆ ಮಕ್ಕಳಿಗೂ ಲಸಿಕಾಕರಣ ಶೀಘ್ರದಲ್ಲಿಯೇ ಆರಂಭವಾಗಲಿದೆ. ಕೊರೊನಾ ನಿರ್ಮೂಲನೆಗೆ ಲಸಿಕಾಕರಣವೊಂದೇ ಪರಿಹಾರವಾಗಿದೆ. ದೇಶದಲ್ಲಿಯೇ ತಯಾರಿಸಲಾದ ಲಸಿಕೆ ಅತ್ಯಂತ ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದ್ದು, ಜನರಲ್ಲಿ ತಿಳುವಳಿಕೆ ಮೂಡಿಸಬೇಕು ಎಂದು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಂಸದರು, ಜಿಲ್ಲಾಧ್ಯಕ್ಷರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

By admin