ಕನ್ನಡಬೆಳ್ಳಿತೆರೆ ಕ್ಲ್ಯಾಪ್-೫

ಮಹಾರಾಜ ಒಡೆಯರ್ ಕುಟುಂಬಕ್ಕೆ ಹತ್ತಿರವಾಗಿದ್ದ ಅರಸು ಮನೆತನಕ್ಕೆ ಸೇರಿದ ೬ಅಡಿ ಮೀರಿದ ಆಜಾನುಬಾಹು ಕೆಂಪರಾಜ್ಅರಸ್ ಶೋಕಿಗಾಗಿ ನಟನಾದವರು. ಮೈಸೂರು ರಾಜ್ಯವನ್ನು ‘ಕರ್ನಾಟಕ’ ಎಂದು ಪುನರ್ ನಾಮಕರಣ ಮಾಡಿದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜಅರಸ್ ಸೋದರ, ಹುಣಸೂರು ಬಳಿಯ ಕಲ್ಲಹಳ್ಳಿ ಗ್ರಾಮದಲ್ಲಿ ೫.೨.೧೯೧೭ರಂದು ಜನಿಸಿದರು. English Literature ಪದವೀಧರನಾದ ತಮ್ಮ ಮಗನನ್ನು ಅರಮನೆ/ಸರ್ಕಾರಿ ಹುದ್ದೆಗೆ ಸೇರಿಸಲು ಅಥವಾ ಲಾಯರ್, ಡಾಕ್ಟರ್, ಇಂಜಿನಿಯರ್, ಮಾಡಿಸಲು ಇವರ ತಂದೆತಾಯಿ ಆಸೆ ಪಟ್ಟಿದ್ದರು.
ಆದರೆ, ಪೋಷಕರ ಶ್ರಮವನ್ನು ವ್ಯರ್ಥಗೊಳಿಸಿ ಅವರ ಇಷ್ಟಕ್ಕೆ ವಿರುದ್ಧ ರೆಬೆಲ್ ಆಗಿ ನಿಂತು, ತಮ್ಮ ಇಷ್ಟದಂತೆ ಹೇ[ಕೇ]ಳದೆ ರಾತ್ರೋರಾತ್ರಿ ಬಾಂಬೆಗೆ ಪಯಣ ಬೆಳೆಸಿದ ಭೂಪ[ತಿ]. ಗೊತ್ತುಗುರಿಯಿಲ್ಲದ ಮುಂಬೈನಲ್ಲಿ ಹಲವಾರು ದಿನಗಳು ಅಲೆದಲೆದು ಕಡೆಗೆ ಮೆಹಬೂಬ್ ಫ಼ಿಲಂ ಸ್ಟುಡಿಯೊ ತಲುಪಿದರು. ಬಾಲಿವುಡ್ನ ಅತಿರಥ ಮಹಾರಥ ನಟರೂ ಬಾಯಿಮೇಲೆ ಬೆರಳು ಇಟ್ಟುಕೊಳ್ಳುವಂತೆ ಡೈಲಾಗ್ ಡೆಲಿವರಿ ಮತ್ತು ಆಕ್ಷನ್ ತೋರಿಸಿ ಶಹಬ್ಬಾಸ್ಗಿರಿ ಪಡೆದ ಕನ್ನಡಿಗ! ಅಂದಿನ ಕಾಲಕ್ಕೆ ಅಪರೂಪವಾಗಿದ್ದ ಸ್ಟಂಟ್ ಹೀರೋಗಳಲ್ಲಿ ಅಗ್ರಸ್ಥಾನ ಗಿಟ್ಟಿಸಿದ್ದ ಹವ್ಯಾಸಿ ಕಲಾವಿದ. ಹಿಂದಿ-ಮರಾಠಿ ಚಿತ್ರರಂಗದಲ್ಲಿ ಇವರನ್ನು tall fellow, real hero’ ಎಂದು ಕರೆಯುತ್ತಿದ್ದರು.

ಒಮ್ಮೆ, ಮುಂಬೈನ ಖ್ಯಾತ ನಿರ್ಮಾಪಕ–ನಿರ್ದೇಶಕರಾಗಿದ್ದ ಹಿಮಾಂಶುರಾಯ್ ಬಳಿ ಹಿಂದಿ ಚಿತ್ರದಲ್ಲಿ ನಟಿಸಲು ಛಾನ್ಸ್ ಕೇಳಿದಾಗ, ರಾಯ್ ಪತ್ನಿ(ಮೊಟ್ಟಮೊದಲ ಫ಼ಾಲ್ಕೆ ಪ್ರಶಸ್ತಿ ವಿಜೇತ ನಟಿ)ದೇವಿಕಾರಾಣಿಯು ಅರಸ್ರನ್ನು ದಿಟ್ಟಿಸಿ ನೋಡುತ್ತಾ “you are too tall”
ಎಂದಾಗ ತಕ್ಷಣವೆ ಕೆಂಪರಾಜ್ “no, no, madam, you are too short” ಎಂಬ ದಿಟ್ಟ ಉತ್ತರ ನೀಡಿ ಆಕೆಯನ್ನು ಆಶ್ಚರ್ಯ ಚಕಿತ ಗೊಳಿಸಿದ ಧೀರ! ಶಿಫ಼ಾರಸ್ಸು ಇತ್ಯಾದಿಗಳ ಆಧಾರದ ಮೇಲೆ ಮಣೆಹಾಕುತ್ತಿದ್ದ, ಪ್ರತಿಭೆಗೆ ಪುರಸ್ಕಾರ ಸಿಗದ, ಮುಂಬೈ ಚಿತ್ರರಂಗಕ್ಕೆ ಬೈ ಬೈ ಹೇಳಿದ ಕೆಂಪರಾಜ್ ಅರಸ್, ಬಂದ ದಾರಿಗೆ ಸುಂಖವಿಲ್ಲದಂತೆ ಮೈಸೂರಿಗೆ ಹಿಂದಿರುಗಿದರು. ಅನಿವಾರ್ಯವಾಗಿ ಟೈಗರ್ ವರದಾಚಾರ್ಯರ ನಾಟಕ ಕಂಪನಿ ಸೇರಿ ಹಳೇ ಮೈಸೂರು ರಾಜ್ಯದಾದ್ಯಂತ ಜನಪ್ರಿಯ ನಟರಾದರು. ಪೌರಾಣಿಕ ಐತಿಹಾಸಿಕ ಅಥವಾ ಸಾಮಾಜಿಕ ನಾಟಕದ ಯಾವುದೆ ಪಾತ್ರವನ್ನು ಬೊಂಬಾಟಾಗಿ ನಿರ್ವಹಿಸಿ ಎಲ್ಲರನ್ನು ಖುಷಿ ಪಡಿಸುತ್ತಿದ್ದ ಪ್ರತಿಭಾವಂತ. ಬ್ರಿಟಿಷ್ ಡಿಸ್ಟ್ರಿಕ್ಟ್ ಕಲೆಕ್ಟರಿಂದ Rare & Efficient Actor ಎಂದು ಪಬ್ಲಿಕ್ ಕಾಂಪ್ಲಿಮೆಂಟ್ಸ್ ಪಡೆದ ಟಿಪಿಕಲ್ ಆರ್ಟಿಸ್ಟ್! ನೂರಾರು ಪ್ರದರ್ಶನ ಕಂಡಿದ್ದ ರಾಜಾವಿಕ್ರಮ ನಾಟಕದ ‘ವಿಕ್ರಮ‘ ಪಾತ್ರದಿಂದ ದೇಶಾದ್ಯಂತ ಖ್ಯಾತರಾದರು! ಈ ನಾಟಕವು ಸಿನಿಮಾ ಆಗಿ ೧೯೫೪ರಲ್ಲಿ ಕನ್ನಡ ಮತ್ತು ತಮಿಳು ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಗೊಂಡಿತು. ಫ಼ಿಲಮ್ನಲ್ಲೂ ವಿಕ್ರಮನ ಪಾತ್ರದಲ್ಲಿ ಶ್ರೇಷ್ಠ ಅಭಿನಯ ನೀಡಿ ಪ್ರಶಸ್ತಿ ಪುರಸ್ಕಾರ ಪಡೆದರು! ಸ್ವತಃ ನಿರ್ಮಾಪಕ–ನಿರ್ದೇಶಕರಾಗಿ ‘ಕಾರ್ಕೋಟ್ಟೈ‘ ಮತ್ತು ‘ಅಳಗರ್ ಮಲೈ ಕಳವನ್‘ ತಮಿಳು ಚಿತ್ರಗಳನ್ನು ಹಾಗೂ ‘ನಳದಮಯಂತಿ‘ ಚಿತ್ರವನ್ನು ಕನ್ನಡ, ತೆಲುಗು, ತಮಿಳ್ ಮೂರು ಭಾಷೆಗಳಲ್ಲಿ ನಿರ್ಮಿಸಿ–ನಿರ್ದೇಶಿಸಿ–ನಟಿಸಿ ಬಿಡುಗಡೆ ಗೊಳಿಸಿ ನೂತನ ದಾಖಲೆ ನಿರ್ಮಿಸಿದರು. ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕನ್ನಡಪುತ್ರ, ಚಂದನವನದ ಧೀಮಂತ ಚಾಣಾಕ್ಷ ನಾಯಕನಟ, ದಿನಾಂಕ ೧೮.೫.೧೯೮೨ ರಂದು ತಮ್ಮ ೬೬ನೇ ವಯಸ್ಸಲ್ಲಿ ಬೆಂಗಳೂರಲ್ಲಿ ನಿಧನರಾದರು!
ಕೆಂಪರಾಜ್ ಅರಸ್ ನಟಿಸಿದ ಕನ್ನಡ ಚಿತ್ರಗಳು
ಕ್ರ.ಸಂ. ಫ಼ಿಲಂ ಹೆಸರು/ಇಸವಿ ಕ್ರ.ಸಂ. ಫ಼ಿಲಂ ಹೆಸರು/ಇಸವಿ
೧ ಜೀವನ ನಾಟಕ/೧೯೪೨ ೮ ರಾಜಾವಿಕ್ರಮ/೧೯೫೪
೨ ಕೃಷ್ಣಲೀಲ/೧೯೪೭ ೯ ಜಲದುರ್ಗ /೧೯೫೪
೩ ಮಹಾನಂದ/೧೯೪೭ ೧೦ ನಳ ದಮಯಂತಿ/೧೯೫೭
೪ ಭಕ್ತ ರಾಮದಾಸ/೧೯೪೮ ೧೧ ರತ್ನಗಿರಿ ರಹಸ್ಯ/೧೯೫೭
೫ ಶಿವ ಪಾರ್ವತಿ/೧೯೫೦ ೧೨ ರಾಜಾ ಸತ್ಯವ್ರತ/೧೯೬೧
೬ ತಿಲೋತ್ತಮೆ/೧೯೫೧ ೧೩ ನವಕೋಟಿ ನಾರಾಯಣ/೧೯೬೪
೭ ಶ್ರೀನಿವಾಸ ಕಲ್ಯಾಣ/೧೯೫೨ ೧೪ ನವಜೀವನ/೧೯೬೪

ಕುಮಾರಕವಿ ನಟರಾಜ್ [೯೦೩೬೯೭೬೪೭೧]
ಬೆಂಗಳೂರು–೫೬೦೦೭೨