ಚಾಮರಾಜನಗರ: ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಇಬ್ಬರು ಕಳ್ಳರು ಪೊಲೀಸರು ಬೀಸಿದ ಬಲೆಗೆ 24 ಗಂಟೆಯೊಳಗೆ ಬಿದ್ದಿದ್ದು ಇದೀಗ ಜೈಲ್ ಸೇರಿದ್ದಾರೆ.
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದ ಮನೆಯಲ್ಲಿ ಕಳ್ಳತನ ಮಾಡಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣಗಳನ್ನು ಬೇರೆಡೆ ಮಾರಾಟ ಮಾಡಲು ತೆರಳುತ್ತಿದ್ದ ವೇಳೆ ಬೇಗೂರು ಠಾಣೆಯ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಮಾಡ್ರಳ್ಳಿ ಗ್ರಾಮದ ಪುನಿತ್ ಹಾಗೂ ಗುಂಡ್ಲುಪೇಟೆ ಪಟ್ಟಣದ ಕೆ.ಎಚ್.ಬಿ ಕಾಲೋನಿಯ ನಿವಾಸಿ ರೆಹಾನ್ ನಜೀರ್ ಎಂಬುವರೇ ಚಿನ್ನಾಭರಣ ಕದ್ದು ಜೈಲ್ ಸೇರಿದ ಕಳ್ಳರು. ಪೊಲೀಸರು ಇವರಿಂದ ಒಂದು ಬೈಕ್ ಹಾಗೂ ಸುಮಾರು 1,74,000 ರೂ.ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಹೆಗ್ಗಡಹಳ್ಳಿ ಗ್ರಾಮದ ನಿವಾಸಿ ನಾಗಮ್ಮ ಎಂಬುವರು ಕೆಲಸಕ್ಕೆ ಹೋಗಿದ್ದ ವೇಳೆ ಅವರ ಮನೆಗೆ ನುಗ್ಗಿದ ಕಳ್ಳರಾದ ಪುನೀತ್ ಮತ್ತು ರೆಹಾನ್ ನಜೀರ್ ಅವರ ಮನೆಯ ಬೀರುವನ್ನು ಮುರಿದು ಅದರಲ್ಲಿದ್ದ ಸುಮಾರು 64 ಗ್ರಾಂ. ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದರು. ಊಟಕ್ಕೆಂದು ಮನೆಗೆ ಬಂದ ನಾಗಮ್ಮರಿಗೆ ಮನೆಯಲ್ಲಿ ಕಳ್ಳತನವಾಗಿರುವ ಗೊತ್ತಾಗಿ ಬೇಗೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಬೇಗೂರು ಠಾಣೆಯ ಪೊಲೀಸರು ಬೆಂಡಗಳ್ಳಿ ಗೇಟ್ ಬಳಿ ಗಸ್ತಿನಲ್ಲಿದ್ದರು. ಅದೇ ವೇಳೆಗೆ ಬೈಕ್ ನಲ್ಲಿ ಬಂದ ಇಬ್ಬರು ಪೊಲೀಸರನ್ನು ನೋಡುತ್ತಿದ್ದಂತೆ ವಿಚಲಿತರಾದರು. ಇದನ್ನು ಗಮನಿಸಿದ ಪೊಲೀಸರು ಇಬ್ಬರು ಬೈಕ್ ಸವಾರರನ್ನು ಹಿಡಿದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ವೇಳೆ ಹೆಗ್ಗಡಹಳ್ಳಿ ಗ್ರಾಮದ ನಾಗಮ್ಮ ಅವರ ಮನೆಯಲ್ಲಿ ಕಳ್ಳತನ ಮಾಡಲಾಗಿದ್ದ ಚಿನ್ನಾಭರಣಗಳನ್ನು ಮಾರಾಟಮಾಡಲು ಗುಂಡ್ಲುಪೇಟೆಗೆ ತೆರಳುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.