ಮೈಸೂರು: ಓಡಿಪಿ ಸಂಸ್ಥೆ ವತಿಯಿಂದ ತಾಲೂಕಿನ ಜಯಪುರಗ್ರಾಮ ಪಂಚಾಯಿತಿಯ ದಾರಿಹಳ್ಳಿ ಗ್ರಾಮದಲ್ಲಿ ರೈತರಿಗಾಗಿ ನಡೆದ ಜಾಲಬಂಧ ಕಾರ್ಯಕ್ರಮದಲ್ಲಿ ಆರು ಮಂದಿ ಮಾದರಿ ರೈತರಿಗೆ ಸಹಾಯಧನವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಓಡಿಪಿ ಸಂಸ್ಥೆಯ ಸಂಯೋಜಕ ಜಾನ್ ಬಿ.ರಾಡ್ರಿಗಸ್  ಮಾತನಾಡಿ, ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ಜರ್ಮನಿಯ ಅಂದೇರಿ ಹಿಲ್ಪೆ ಸಂಸ್ಥೆ ನೆರವಿನೊಂದಿಗೆ ಓಡಿಪಿ ಸಂಸ್ಥೆಯು ಮುಂದಾಗಿದ್ದು ಜಯಪುರಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತ ಕೂಟವನ್ನು ರಚಿಸಿದ್ದು, ಸರ್ಕಾರಿ ಮತ್ತು ಇತರ ಇಲಾಖೆಗಳ ಮೂಲಕ ರೈತರಿಗೆ ಬೇಕಾಗುವ ಅರಿವನ್ನು ನೀಡುವುದಲ್ಲದೆ, ರೈತರಿಗೆ ಅನುಕೂಲವಾಗುವಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು, ಇದರ ಪ್ರಯೋಜನವನ್ನು ರೈತರು ಪಡೆಯಬೇಕು ಎಂದು ಹೇಳಿದರು.

ಇದೇ ವೇಳೆ ಆರು ಮಾದರಿ ರೈತರಿಗೆ ತಮ್ಮ 10 ಗುಂಟೆ ಜಮೀನಿನಲ್ಲಿ ಸಾವಯವದಲ್ಲಿ ಪ್ರಾತ್ಯಕ್ಷಿಕೆ  ಮಾಡಲು  ಸಂಸ್ಥೆ ವತಿಯಿಂದ  5ಸಾವಿರ ರೂಗಳನ್ನು ನೀಡಲಾಗುವುದು. ಇದರ ಮೊದಲ ಕಂತು ರೂ 2.500 ರೂ. ಸಹಾಯಧನವನ್ನು ಚೆಕ್‌ನ್ನು ಜಯಪುರ ಗ್ರಾಮ ಪಂಚಾಯತಿ  ಮಾಜಿ ಅಧ್ಯಕ್ಷ ಬಸವಣ್ಣನವರ ಸಮ್ಮುಖದಲ್ಲಿ  ಓಡಿಪಿ ಸಂಸ್ಥೆಯ ಸಂಯೋಜಕ  ಜಾನ್.ಬಿ.ರಾಡ್ರಿಗಸ್ ವಿತರಿಸಿದರು

ಬಸವಣ್ಣ ಮತ್ತು ಸಿದ್ದೇಗೌಡ ಅವರು ತಮ್ಮ ಇಲಾಖೆಯ ಮೂಲಕ ರೈತರಿಗೆ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿ, ಜಯಪುರ ಹೋಬಳಿ ಮಟ್ಟದಲ್ಲಿ ರೈತ ಉತ್ಪನ್ನ ಕೂಟ ರಚನೆ ಮತ್ತು ಅದರಿಂದ ಆಗುವ ಪ್ರಯೋಜನದ ಬಗ್ಗೆ ತಿಳಿಸಿ ಈ ನಿಟ್ಟಿನಲ್ಲಿ ಓಡಿಪಿ ಸಂಸ್ಥೆಯು ಕೈಗೊಂಡಿರುವ ಕಾರ್ಯಕ್ರಮದ ಬಗ್ಗೆ ಶ್ಲಾಘಿಸಿದರು,

ಕಾರ್ಯಕ್ರಮದಲ್ಲಿ ಜಯಪುರ ಪಂಚಾಯಿತಿ  ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಬಸವಣ್ಣ, ಕೃಷಿ ಇಲಾಖೆ ಸಿದ್ದೆಗೌಡ  ಭಾಗವಹಿಸಿದ್ದರು. ಓಡಿಪಿ ಕಾರ್ಯಕರ್ತರಾದ ಪುಷ್ಪಮೇರಿ ಕಾರ್ಯಕ್ರಮ ನಿರ್ವಹಿಸಿದ್ದರು.  ಓಡಿಪಿ  ರೈತ ಸದಸ್ಯರಾದ ಸೋಮಣ್ಣ, ಬಸವಣ್ಣ, ಪುಟ್ಟಸ್ವಾಮಿ, ಊರಿನ ಮುಖಂಡರು ಮತ್ತು ರೈತ ಸದಸ್ಯರು ಭಾಗವಹಿಸಿದ್ದರು.

By admin