ಚಿದ್ರೂಪ ಅಂತಃಕರಣ

ನಗುವುದು ಸಹಜ ಧರ್ಮ; ನಗಿಸುವುದು ಪರಧರ್ಮ| ನಗುವ ಕೇಳುತ ನಗುವುದತಿಶಯದ ಧರ್ಮ|| ನಗುವ ನಗಿಸುವ ನಗಿಸಿ ನಗುತ ಬಾಳುವ ವರವ| ಮಿಗೆ ನೀನು ಬೇಡಿಕೊಳೊ -ಮಂಕುತಿಮ್ಮ||. ಡಿ.ವಿ.ಜಿ ಅವರ ಈ ಕಗ್ಗದ ನುಡಿ ಬಹಳ ಅರ್ಥಪೂರ್ಣವಾಗಿದೆ. ನಗುವಿನ ಮಹತ್ವವನ್ನು ಸಾರುವ ಈ ಕಗ್ಗದಲ್ಲಿ ಸಂತೋಷವೆನ್ನುವುದು ಸಹಜ ಭಾವ ಮತ್ತು ಚೈತನ್ಯರೂಪ. ಮನುಷ್ಯರ ಚೈತನ್ಯ ರೂಪವಾದ ಈ ಸಂತೋಷವು  ಸಹಜ ಬಗೆಯಾಗಿ ಹೊರಹೊಮ್ಮುವುದು ಮಾತ್ರವಲ್ಲದೆ ಇತರರ ಸಂತೋಷವನ್ನೂ ಸಹ ಬಯಸಬೇಕು. ಜೊತೆಗೆ ಆ ಸಂತೋಷ ಇತರರಿಗೆ ಹಿತವನ್ನುಂಟು ಮಾಡುವ ರೀತಿಯಾಗಿರಬೇಕೇ ವಿನಃ ನೋವನ್ನುಂಟು ಮಾಡಬಾರದು ಎನ್ನುವುದರ ಸಾರ ಈ ಕಗ್ಗವಾಗಿದೆ. ಹಾಗೆಯೇ ಇನ್ನೊಬ್ಬರ ಸಂತೋಷವನ್ನು ನಮ್ಮ ಸಂತೋಷವನ್ನಾಗಿ ಪರಿಗಣಿಸಿ ನಾವು ಆ ಪರರ ಆನಂದದಲ್ಲಿ ಬೆರೆಯಬೇಕು ಎಂಬುದನ್ನು ತಿಳಿಸಲಾಗಿದೆ. ನಗುವುದು ಉತ್ತಮ, ನಾವು ನಗುತ ಇತರರನ್ನು ನಗಿಸುವುದು ಇನ್ನೂ ಉತ್ತಮ ಇತರರ ಸಂತೋಷವನ್ನು ನಮ್ಮ ಸಂತೋಷವಾಗಿ ಭಾವಿಸುವುದು ಸರ್ವ ಉತ್ತಮ. ಈ ಬಗೆಯಾದ ಸಂತೋಷವನ್ನು ತಮ್ಮದಾಗಿಸಿಕೊಳ್ಳುವಂತೆ ಪ್ರಾರ್ಥಿಸಿ ಎನ್ನುವ ಮಾರ್ಗದರ್ಶನವನ್ನು ಡಿ.ವಿ.ಜಿ ಅವರು ಸರಳವಾಗಿ ಉಪದೇಶಿಸಿದ್ದಾರೆ.

ನಗುವುದು ಯಾರಿಗೆ ಬೇಡ ಹೇಳಿ? ಎಲ್ಲರೂ ನಗುವಿಗಾಗಿ ತುಡಿಯುವವರೇ. ಈ ನಗುವನ್ನು ಕಾಣಲು ಮನುಷ್ಯರು ಹಲವಾರು‌ ಜೀವನ ಶೈಲಿಗಳಲ್ಲಿ ಮತ್ತು ಮನರಂಜನೆಯ ಚಟುವಟಿಕೆಗಳಲ್ಲಿ ನಿತ್ಯ ತೊಡಗುತ್ತಿರುತ್ತಾರೆ. ಆದರೆ ಪ್ರಸ್ತುತ ಜಗತ್ತು ಒತ್ತಡ ಕಾರ್ಯ ಪ್ರವೃತ್ತಿಯ ಚಕ್ರವ್ಯೂಹಕ್ಕೆ, ವೇಗದ ಉದ್ವಿಗ್ನಕ್ಕೆ  ಸಿಲುಕಿರುವುದರಿಂದ ಈ ನಗುವೆಂಬುವುದು ಹಲವರಿಗೆ ಸಹಜವಾಗಿರದೆ ಕೃತಕ ಆಮ್ಲಜನಕ ಪಡೆದು ಬದುಕಿದಂತೆ ಕೃತಕ ನಗುವನ್ನು ಪಡೆದು ನಗುವಂತಾಗಿದೆ. ಈ ಹಲವರಲ್ಲಿ ಕೆಲವರು ಆ ಕೃತಕ ನಗುವಿಗೂ ಮುಗಿಬೀಳದೆ ದುಃಖ, ಬೇಸರ, ನಿರಾಸೆ, ತಾತ್ಸರಗಳಿಂದ ತುಂಬಿ ಹೋಗಿ ಈ ಜಗತ್ತೇ ಸರಿಯಿಲ್ಲ ಎಂದು ನಿತ್ಯ ಗುಣಗಾಡುತ್ತ, ಎಣಗಾಡುತ್ತ ಇದೊಂದು ನರಕ ಸಾದೃಶ್ಯ ಬದುಕು ಎಂದು ಭಾವಿಸಿ ಸತ್ತಂತೆ ಜೀವಿಸುತ್ತಿದ್ದಾರೆ. ಮನುಷ್ಯನಿಗೆ ಇಲ್ಲಿ ಎಲ್ಲವೂ ಸಮವಾಗಿ ದೊರಕಿದರೆ ಒಂದು ಲೆಕ್ಕಕ್ಕೆ ಸಂತೃಪ್ತಿ ಬದುಕೆನಿಸುತ್ತದೆ. ಸುಃಖ – ದುಃಖಗಳೆರಡೂ ಜೀವನದಲ್ಲಿ ಅತಿಮುಖ್ಯ. ಇಲ್ಲವಾದರೆ ಈ ಬದುಕು ನರಕ ಸಾದೃಶ್ಯವೇ ಆಗುತ್ತದೆ. 

ಮಹತ್ವವಿರುವ ಈ ನಗುವು ತನ್ನದೇ ಒಂದು ತೆರನಾದ ಶೀಲವಂತಿಕೆಯನ್ನು ಅಥವಾ ಮಡಿವಂತಿಕೆಯನ್ನು ಹೊಂದಿದೆ. ಹಾಸ್ಯದಲ್ಲಿ ಉಂಟಾಗುವ ಪರಿ ಈ ನಗುವಿನ ಶೀಲವಂತಿಕೆಯನ್ನು ಹೆಚ್ಚು ಬಿಂಬಿಸುತ್ತದೆ. ಅಪಹಾಸ್ಯದಲ್ಲಿ ಉಂಟಾಗುವ ಪರಿ ಈ ಮಡಿವಂತಿಕೆಯನ್ನು ಕಳಚುತ್ತದೆ. ಈ ನಗುವಿಗೆ ನೈತಿಕ ಬದುಕನ್ನು ಕರುಣಿಸುವ ಅಗಾಧವಾದ ಶಕ್ತಿ ಇದೆ ಏಕೆಂದರೆ ಇದೊಂದು ಚೈತನ್ಯ ಭಾವ ಮತ್ತು ಕ್ರಿಯಾಶೀಲತೆಗೆ ಒತ್ತಾಸೆ ಎನಿಸುವ ಸ್ವರೂಪ. ಆದರೆ ಈ ನಗುವನ್ನು ಅಪಹಾಸ್ಯ ಸಂಗತಿಗಳಲ್ಲಿ ಕಂಡುಕೊಂಡಾಗ ಅನೈತಿಕ ಬದುಕನ್ನು ದೊರಕಿಸುವ ಕುರೂಪವೂ ಇದೆ. ಪ್ರಸ್ತುತ ಸಮಾಜದಲ್ಲಿ ಈ ಅನೈತಿಕ ಮಾರ್ಗವೇ ಹೆಚ್ಚು ಪುನರಾವರ್ತಿತವಾಗುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ. 

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಲೈಂಗಿಕತೆಗೆ ಒಂದು ರೀತಿಯ ಕಟ್ಟಳೆಯಿದೆ. ಸಮಾಜದ ವ್ಯವಸ್ಥೆಗಳಾದ ವಿವಾಹ, ಕುಟುಂಬ, ಸಹಮತ ಸಂಬಂಧ ಇವುಗಳಲ್ಲಿ ಸೃಷ್ಟಿಯ ಒಳಿತಿನ ಬಯಕೆಯಾಗಿ, ನೈತಿಕ ಸುಃಖವಾಗಿ ಲೈಂಗಿಕ ಕ್ರಿಯೆ ಮತ್ತು ಅದರ ವಿಚಾರಗಳು ಸಹಜವಾಗಿದ್ದು ತೀವ್ರವಾಗಿರದೆ ಗೌಪ್ಯವಾಗಿ ಬಳಕೆಯಾಗಬೇಕಿದೆ. ಆದರೆ ಇದೀಗ ಎಗ್ಗಿಲ್ಲದೇ ಲೈಂಗಿಕ ವಿಚಾರಗಳು ವಿಜೃಂಭಿಸುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ನಿರ್ಬಂಧ ಮತ್ತು ಅನೈತಿಕ ಎನಿಸುವ ಲೈಂಗಿಕ ವಿಚಾರಗಳನ್ನೇ ಮುಂದಿಟ್ಟುಕ್ಕೊಂಡು ಹಾಸ್ಯವೆಂದು ಅಪಹಾಸ್ಯಗಳನ್ನು ಮಾಡುತ್ತ ಜನತೆಯಲ್ಲಿ ಜೀವನದ ಕೇವಲ ಒಂದು ಭಾಗವಾಗಿರುವ ಲೈಂಗಿಕತೆಯನ್ನು ಇಡೀ ಜೀವನವೇ ಆ ಲೈಂಗಿಕತೆ ಎನಿಸುವ ಹಾಗೆ ಕಾರ್ಯಕ್ರಮಗಳನ್ನು ಕೊಡುತ್ತಿರುವ ಕೆಲ ಹಾಸ್ಯತಂಡಗಳ, ಸಿನಿತಂಡಗಳ, ಪುಂಡರ ಕಾರ್ಯಪ್ರವೃತ್ತಿ ಹೆಚ್ಚಾಗಿವೆ. 

ಈ ರೀತಿಯಾದ ಮನರಂಜನಾ ಗುಂಪುಗಳು ಶೃಂಗಾರದ ಹೆಸರಿನಲ್ಲಿ, ಪ್ರೀತಿ ಪ್ರೇಮದ ಹೆಸರಿನಲ್ಲಿ ಲೈಂಗಿಕ ವಿಷಯವನ್ನೇ ಪ್ರಧಾನಗೊಳಿಸಿ ಜನತೆಯಲ್ಲಿರುವ ನಾಚಿಕೆ, ಸಂಕೋಚಗಳಿಗೆ ತೆರೆ ಎಳೆದು ಬೆತ್ತಲೆ ಜಗತ್ತಿಗೆ ಪರೋಕ್ಷವಾಗಿ ಹಾಗೂ ಕೆಲವೊಮ್ಮೆ ನೇರವಾಗಿಯೇ ಸೆಳೆಯುವ ಪ್ರಯತ್ನಗಳೊಂದಿಗೆ ಹಣದ ಲಾಭ ಗಿಟ್ಟಿಸಿಕೊಳ್ಳುವ ಸ್ಪರ್ಧೆಗಿಳಿದಿರುವುದು ಹೆಚ್ಚಾಗಿದೆ. ಈ ರೀತಿಯ ಹೆಚ್ಚಳ ಸಮಾಜದ ಸ್ವಾಸ್ಥ್ಯ ಕೆಡಿಸುವಲ್ಲಿ ಪ್ರಮುಖವಾಗಿದೆ. “ಹಣವನ್ನೇನು ಒಬ್ಬ ಸೂಳೆ ಕೂಡ ಸಂಪಾದನೆ ಮಾಡುತ್ತಾಳೆ; ನ್ಯಾಯ ಮಾರ್ಗದಲಿದ್ದು ಮನುಷ್ಯತ್ವ ಹೊಂದಬೇಕು” ಎನ್ನುವ ಜನಪದರ ಅನುಭವ ನುಡಿ ತಾತ್ಪರ್ಯವನ್ನೇ ಬಿಟ್ಟು ಅದರಲ್ಲಿ ಉದಾಹರಿಸಿರುವ ವೇಶ್ಯೆಯ ವ್ಯವಹಾರವನ್ನೇ ತಮ್ಮೆಲ್ಲಾ ಸಹಜ ವ್ಯವಹಾರಗಳಲ್ಲಿ ತಂದು ಹಣವನ್ನು ಸಂಪಾದನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹಣಕ್ಕಾಗಿ ಅನೈತಿಕ ಮಾರ್ಗಗಳನ್ನು ಹಿಡಿಯುವ ತಂತ್ರಗಾರಿಕೆಯನ್ನು ಬಳಕೆಮಾಡಿಕೊಳ್ಳುತ್ತಿದ್ದಾರೆ. ಇಲ್ಲಿ ವ್ಯೇಶ್ಯೆ ವೃತ್ತಿಯನ್ನು ಮತ್ತು ಆ ವೃತ್ತಿಯಲ್ಲಿರುವವರನ್ನು ಅವಮಾನಿಸುವ ಮತ್ತು ಕೀಳಾಗಿ ಕಾಣುವ ಚಿಂತನೆಯಲ್ಲ ಬದಲಾಗಿ ನಮ್ಮ ಪೂರ್ವಿಕರ ಜೀವನಾನುಭವದ ಅಭಿಪ್ರಾಯಗಳ ಸಮರ್ಥನೆ ಮತ್ತು ವಾಸ್ತವದಲ್ಲಿ ಕಸಗಳೇ ಎಲ್ಲೆಡೆ ಹೆಚ್ಚಿದ್ದು ಅದನ್ನು ಶುದ್ಧಗೊಳಿಸುವ ನಿಲುವಷ್ಟೆ. 

ಕೆಲ ಹಾಸ್ಯ ವೃತ್ತಿಪರರು ತಾವು ದುಃಖದಲ್ಲಿದ್ದರೂ ತಮ್ಮ ಹಾಸ್ಯ ವೃತ್ತಿಯ ಮೂಲಕ ಇನ್ನೊಬ್ಬರನ್ನು ನಗಿಸಿ ತೃಪ್ತಿ ಕಾಣುತ್ತಿರುತ್ತಾರೆ ಮತ್ತು ತಾವು ಕಳೆದುಕೊಂಡ ಸಂತೋಷವನ್ನು ಇತರರ ಸಂತೋಷದಲ್ಲಿ ಕಂಡುಕೊಳ್ಳುತ್ತಿರುತ್ತಾರೆ. ಇತರರನ್ನು ನಗಿಸುವುದನ್ನೇ ತಮ್ಮ ಹೊಟ್ಟೆಪಾಡನ್ನಾಗಿಸಿಕೊಂಡು ನೈತಿಕತೆ ಇರುವ ಸಾಮಾಜಿಕ ಹಾಸ್ಯ ಸಂಗತಿಗಳನ್ನು ತೋರ್ಪಡಿಸಿ ಹೊಟ್ಟೆ ಹೊರೆಯುತ್ತಿರುತ್ತಾರೆ. ಈ ರೀತಿ ಹೊಟ್ಟೆ ಹೊರೆಯುವುದು ಅಪರಾಧವೇನಲ್ಲ. ಇನ್ನೊಬ್ಬರ ದುಃಖದಲ್ಲಿ; ಸಮಾಜದ ಸ್ವಾಸ್ಥ್ಯ ಕೆಡಿಸುವಲ್ಲಿ ತಮ್ಮ ಸ್ವಾರ್ಥ ಸಾಧಿಸುವುದನ್ನು ಕಾಣಬಯಸುವುದೊಂದೇ ಬಹುದೊಡ್ಡ ಅಪರಾಧ. 

ಮೇಲೆ ತಿಳಿಸಿದ ಅಂಶಗಳ ಬೆನ್ನಲ್ಲೇ ಹೇಳುವುದಾದರೆ ಅಶ್ಲೀಲ ನಗೆಚಟಾಕಿಗಳನ್ನು ಹಾಸ್ಯ ಪ್ರಸಂಗಗಳಲ್ಲಿ ಹೆಚ್ಚಾಗಿ ತಂದು ಹಣ ಸಂಪಾದನೆಯ ಮಾರ್ಗಕ್ಕೆ ಇಳಿದಿರುವುದು ಬಹುವಾಗಿ ಈ ಸಿನಿಮಾ ಜಗತ್ತು ಮತ್ತು ದೂರದರ್ಶನ ಕಾರ್ಯಕ್ರಮಗಳು ಹಾಗೂ ಪ್ರಸ್ತುತ ದಶಮಾನದ ಸಾಮಾಜಿಕ ಜಾಲತಾಣಗಳ ಸ್ಫೋಟದಲ್ಲಿ ಕಾಣಬಹುದು. ಈ ಮಾಧ್ಯಮಗಳಲ್ಲಾಗುತ್ತಿರುವ ಈ ವಿಕೃತ ಬೆಳೆವಣಿಗೆ ಸಮಾಜದಲ್ಲಿ ಅತ್ಯಾಚಾರಗಳಾಗುತ್ತಿರುವುದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಎನ್ನಬಹುದು. ಕೆಟ್ಟ ಪ್ರಚೋದನಕಾರಿ ಅಶ್ಲೀಲ ಡ್ರಾಮಾಗಳು ಅಫೀಮಿನಂತೆ ಎಲ್ಲರಿಗೂ ಚಟವಾಗುತ್ತಿವೆ. ಈ ಚಟ ಒಳ್ಳೆಯದಲ್ಲ. ಈಗಿನ ಭಾಷೆಯಲ್ಲೇ ಹೇಳುವುದಾದರೆ ಡಬಲ್ ಮೀನಿಂಗ್ ಡೈಲಾಗ್ ಗಳ ಬಳಕೆ; ಹೆಣ್ಣನ್ನು ಭೋಗದ ವಸ್ತುವಾಗಿ ತೋರ್ಪಡಿಸುವ ಸೀನ್’ಗಳು ಯುವ ಸಮುದಾಯವನ್ನು ದಿಕ್ಕೆಡಿಸುತ್ತಿವೆ. ಹಾಸ್ಯ ನಟರ ವೇಶದಲ್ಲಿರುವ ಕೊಚ್ಚೆ ಮನಸ್ಸಿನ ತಿಳಿಗೇಡಿಗಳನ್ನು ಸಮಾಜದ ಮುಖ್ಯವಾಹಿನಿಯಿಂದ ದೂರವಿಡದ ಹೊರತು ನೈತಿಕ ಸಮಾಜದ ನಿರ್ಮಾಣ ಅಸಾಧ್ಯ. ತಿಳಿದವರೇ ಮತ್ತು ಸಮಾಜದ ಮುಖ್ಯರೇ ಈ ವಿಕೃತ ಹಾದಿಯನ್ನು ತುಳಿದು ನಡೆಯುತ್ತಿರುವುದು ಅಪಾಯಕಾರಿ ಬೆಳೆವಣಿಗೆ. ಈ ಚಿಂತನೆಯಲ್ಲಿ ಜಾಗೃತ ಜನಾಂದೋಲನವಾಗಲಿ.

ಚಿಮಬಿಆರ್ (ಮಂಜುನಾಥ ಬಿ.ಆರ್)*

ಯುವಸಾಹಿತಿ, ವಿಮರ್ಶಕ, ಸಂಶೋಧಕ.*

ಹೆಚ್.ಡಿ ಕೋಟೆ. ಮೈಸೂರು.

ದೂರವಾಣಿ ಸಂಖ್ಯೆ :-8884684726

Gmail;- manjunathabr709@gmail.com.