ಚಾಮರಾಜನಗರ: ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಡಕಗೊಳಿಸಿರುವ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಅಂಶಗಳು ದೇಶದ ಅಭಿವೃದ್ಧಿಯ ದಿಕ್ಸೂಚಿಯಾಗಿದೆ ಎಂದು ಬೆಂಗಳೂರು ಕ್ರೈಸ್ಟ್ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ಹ.ರಾ. ಮಹೇಶ್ ಅವರು ಅಭಿಪ್ರಾಯಪಟ್ಟರು.
ನಗರದ ಪೇಟೆ ಪ್ರೈಮರಿ ಶಾಲೆಯ ಅವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸಂವಿಧಾನಶಿಲ್ಪಿ, ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ ೧೩೧ನೇ ಜನ್ಮ ದಿನಾಚರಣೆ ವೇದಿಕೆ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿ ಮಾತನಾಡಿದರು.
ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಕೇವಲ ದಲಿತರ ಹಕ್ಕು, ಅವಕಾಶಗಳಿಗಾಗಿ ಮಾತ್ರ ಹೋರಾಟ ಮಾಡಿದವರಲ್ಲ. ತಮ್ಮ ವೈಯಕ್ತಿಕ ಬದುಕನ್ನು ಬದಿಗಿಟ್ಟು, ಶೋಷಿತರು, ಹಿಂದುಳಿದ ವರ್ಗಗಳು, ಮಹಿಳೆಯರು  ಸೇರಿದಂತೆ ದೇಶದ ಎಲ್ಲಾ ಸಮುದಾಯಗಳ ಸರ್ವಾಂಗೀಣ ಪ್ರಗತಿಗಾಗಿ ಹೋರಾಡಿದರು. ಅಂಬೇಡ್ಕರ್ ಅವರು ಜ್ಞಾನ, ವ್ಯಕ್ತಿತ್ವ, ರಾಜೀಯಾಗದ ಹೋರಾಟದ ಮೂಲಕ ಭಾರತಕ್ಕೆ ನೀಡಿದ ಸಂವಿಧಾನ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದೆ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ದಲಿತರ ಮಾತ್ರ ಆಚರಿಸುವ ಕಾಲವೊಂದಿತ್ತು. ಪ್ರಸ್ತುತ ದಿನಗಳಲ್ಲಿ ವಿಶ್ವದ ಎಲ್ಲೆಡೆ ಅಂಬೇಡ್ಕರ್ ಜನ್ಮದಿನವನ್ನು ವಿಶ್ವ ಜ್ಞಾನ ದಿನವನ್ನಾಗಿ ಆಚರಿಸಿ ಗೌರವ ಸಲ್ಲಿಸಲಾಗುತ್ತಿದೆ. ಕೊಲಂಬಿಯಾ ವಿಶ್ವವಿದ್ಯಾಲಯವು ಗುರುತಿಸಿದ ಜಗತ್ತಿನ ೧೦೦ ಮಹಾಜ್ಞಾನಿಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮೊದಲಿಗರಾಗಿದ್ದಾರೆ. ವಿಶ್ವದ ೧೪೬ ದೇಶಗಳು ಅಂಬೇಡ್ಕರ್ ಜಯಂತಿ ಆಚರಿಸುತ್ತಿವೆ ಇದು ಎಲ್ಲಾ ಸಮುದಾಯಗಳು ಅರಿಯಬೇಕಾದ ವಿಷಯವಾಗಿದೆ ಎಂದು ತಿಳಿಸಿದರು.
ದೇಶದ ಎಲ್ಲಾ ಸಮಾಜ, ಸಮುದಾಯಗಳ ಆಶಯಗಳನ್ನು ಈಡೇರಿಸಲು ಪಣ ತೊಟ್ಟಿದ್ದರು. ಎಲ್ಲರು ಎಲ್ಲಾ ಹಕ್ಕುಗಳನ್ನು ಅನುಭವಿಸಲು ಅಂಬೇಡ್ಕರ್ ರಚಿಸಿದ ಸಂವಿಧಾನವೇ ಕಾರಣವಾಗಿದೆ. ಸಂವಿದಾನವನ್ನು ಪ್ರತಿಯೊಬ್ಬರು ಗೌರವಿಸಬೇಕು. ದೇಶದ ಎಲ್ಲರು ಸಂವಿದಾನವನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ಸಂವಿಧಾನ ಎಲ್ಲರ, ಎಲ್ಲಾ ಸಮುದಾಯಗಳಿಗೆ ಕೇಳದೆಯೇ ಎಲ್ಲವನ್ನು ಕೊಡುವ, ಉತ್ತಮ ಬದುಕು, ಜೀವನವನ್ನು ನಿರ್ಧರಿಸುವ ಶ್ರೇಷ್ಠ ಉದ್ಗ್ರಂಥವಾಗಿದೆ ಎಂದು ಪ್ರೊ. ಹ.ರಾ. ಮಹೇಶ್ ಅವರು ತಿಳಿಸಿದರು.
ಇದೇ ವೇಳೆ ವಸತಿ, ಮೂಲಸೌಲಭ್ಯ ಅಭಿವೃದ್ದಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯ ಶುಭ ಸಂದರ್ಭದಲ್ಲಿ ನೀಡಿರುವ ಸಂದೇಶವನ್ನು ವಾಚಿಸಲಾಯಿತು. 
ಡಾ. ಬಿ.ಆರ್. ಅಂಬೇಡ್ಕರ್ ಅವರು ವ್ಯಕ್ತಿಯಲ್ಲ. ಜ್ಞಾನದ ಶಿಖರ. ಕಠಿಣ ಪರಿಶ್ರಮ ಮತ್ತು ಸ್ವ ಸಾಮರ್ಥ್ಯದಿಂದ ದೇಶದ ಅಗ್ರಗಣ್ಯ ನಾಯಕರಾಗಿ ಹೊರಹೊಮ್ಮಿದ ಮೇರುಪುರುಷ. ಸಾಮಾಜಿಕ ಮತ್ತು ಆರ್ಥಿಕ ಸಂಘರ್ಷಗಳನ್ನು ಮೀರಿನಿಂತು ಅನೇಕ ಪ್ರಥಮಗಳನ್ನು ಸಾಧಿಸಿದ ಧೀಮಂತ ನಾಯಕ ಎಂದು ತಿಳಿಸಿದ್ದಾರೆ. 
ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತದ ಸಂವಿಧಾನ ಶಿಲ್ಪಿಯಾಗಿದ್ದಾರೆ. ನಿರ್ಲಕ್ಷ್ಯಕ್ಕೆ ಒಳಗಾದವರು ಮತ್ತು ಸವಲತ್ತುಗಳು ಇಲ್ಲದವರನ್ನು ಮೇಲೆತ್ತಿ ಉದ್ಧರಿಸುವ ಕಾರ್ಯದಲ್ಲಿ ತೊಡಗಿರುವವರಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಹೋರಾಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರು ನಿರಂತರ ಸ್ಪೂರ್ತಿ ಸೆಲೆಯಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಸಂದೆಶದಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಪೂರ್ವದಲ್ಲಿ ಬಸವಣ್ಣ, ಕನಕದಾಸರು, ಸೇರಿದಂತೆ ಮಹಾನ್ ಸಾಧಕರ ಸಿದ್ದಾಂತಗಳನ್ನು ಅಳವಡಿಸಿಕೊಂಡು ದೇಶದ ಇಡೀ ಸಮಾಜ, ಸಮುದಾಯವನ್ನು ಮುಂಚೂಣಿಯಲ್ಲಿ ತರಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅಂಬೇಡ್ಕರ್ ಅವರ ಆದರ್ಶ ಸಿದ್ದಾಂತಗಳು ಇಂದಿಗೂ ಎಲ್ಲರಿಗೂ ಅನುಕರಣೀಯವಾಗಿವೆ ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಮಾತನಾಡಿ ಇಡೀ ವಿಶ್ವವೇ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸಿ ಗೌರವ ನೀಡುತ್ತಿದೆ. ಶಿಕ್ಷಣ, ಸಂಘಟನೆ, ಹೋರಾಟ ಅಂಬೇಡ್ಕರ್ ಅವರ ಧ್ಯೇಯವಾಗಿತ್ತು. ದೇಶದಲ್ಲಿ ಶೋಷಿತರು ಸೇರಿದಂತೆ ಎಲ್ಲ ಹಿಂದುಳಿದವರು ಆಡಳಿತ ಚುಕ್ಕಾಣಿ ಹಿಡಿಯುವ ಆಶಯಗಳ ಈಡೇರಿಕೆಗಾಗಿ ಶಿಲ್ಪಿ ವಿಗ್ರಹ ಕೆತ್ತುವ ಮಾದರಿಯಲ್ಲಿ ಶ್ರೇಷ್ಠ ಸಂವಿಧಾನವನ್ನು ಭಾರತಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಟಿ. ನರಸೀಪುರ ನಳಂದ ಬುದ್ಧವಿಹಾರದ ಪೂಜ್ಯ ಬೋಧಿರತ್ನ ಬಂತೇಜಿಯವರು ಮಾತನಾಡಿ ನಾವು ಹಕ್ಕುಗಳನ್ನು ಚಲಾಯಿಸಿ, ಕರ್ತವ್ಯವನ್ನು ಮರೆಯುತ್ತಿದ್ದೇವೆ. ಅಂಬೇಡ್ಕರ್ ಅವರ ಚಿಂತನೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳುವ ಮೂಲಕ ಸಾಮಾಜಿಕ ಪರಿವರ್ತನೆಗೆ ಅಡಿಪಾಯ ಹಾಕಬೇಕು ಎಂದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್,ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಹಾಗೂ ಅಂತರ್ಜಾತಿ ವಿವಾಹವಾದ ದಂಪತಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. 
ನಗರಸಭೆ ಅಧ್ಯಕ್ಷರಾದ ಆಶಾನಟರಾಜು, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪಿ.ಬಿ. ಶಾಂತಮೂರ್ತಿ ಕುಲಗಾಣ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ  ಅಧಿಕಾರಿ ಕೆ.ಎಂ. ಗಾಯಿತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರರಾಜು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಎಚ್.ಸಿ. ಭಾಗೀರಥಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಕೆರೆಹಳ್ಳಿ ನವೀನ್, ಎ.ಆರ್. ಬಾಲರಾಜು ಇತರರು ಉಪಸ್ಥಿತರಿದ್ದರು.