
ಚಾಮರಾಜನಗರ: ಹರದನಹಳ್ಳಿ ಹಾಗೂ ಬಂಡಿಗೇರಿ ಗ್ರಾಮದಲ್ಲಿ ಕಾಮಾಕ್ಷಮ್ಮ ದಿವ್ಯಲಿಂಗೇಶ್ವರ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಇಂದು ವಿಜೃಂಭಣೆಯಿಂದ ನೆರವೇರಿತು.
ಗ್ರಾಮದ ದಿವ್ಯ ಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಿನ್ನೆಯಿಂದಲೇ ದೇವರಿಗೆ ವಿಶೇಷ ಅಭಿಷೇಕ ಪೂಜೆ ಪೂಜೆಗಳನ್ನು ನಡೆಸಲಾಯಿತು. ವಿವಿಧ ಪುಷ್ಪಾಲಂಕಾರಗಳನ್ನು ಮಾಡಲಾಗಿತ್ತು. ದೇವಸ್ಥಾನವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಇಂದು ಬೆಳಿಗ್ಗೆ ೧೧:೩೦ಕ್ಕೆ ದೇವರ ಉತ್ಸವ ಮೂರ್ತಿಯನ್ನು ರಥದ ಸುತ್ತ ಪ್ರದಕ್ಷಿಣೆ ಮಾಡಲಾಯಿತು ಬಳಿಕ ಉತ್ಸವಮೂರ್ತಿಯನ್ನು ರಥದ ಮೇಲೆ ಕೂರಿಸಿ ವಿಶೇಷ ಪೂಜೆ ಸಲಿಸಿದರು. ನಂತರ ರಥೋತ್ಸವಕ್ಕೆ ಆಗಮಿಸಿದ ಸಾವಿರಾರು ಭಕ್ತರು೧೨:೧೫ ರ ವೇಳೆಯಲ್ಲಿ ತೇರನ್ನು ಎಳೆಯುವ ಮೂಲಕ ಭಕ್ತಿ ಮೆರೆದರು. ರಥೋತ್ಸವದ ಹಿನ್ನೆಲೆಯಲ್ಲಿ ಹರದನಹಳ್ಳಿ ಬಂಡಿಗೆರೆ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಭಕ್ತರು ಹರ್ಷೊದ್ಘಾರದಿಂದ ರಥ ಎಳೆದು ಸಂಭ್ರಮಿಸಿದರು.
ರಥೋತ್ಸವ ಗ್ರಾಮದ ಎರಡು ಪ್ರಮುಖ ಬೀದಿಗಳಲ್ಲಿ ರಥೋತ್ಸವದ ಹಿನ್ನೆಲೆಯಲ್ಲಿ ದಾರಿಯುದ್ದಕ್ಕೂ ಭಕ್ತರಿಗೆ ಮಜ್ಜಿಗೆ ಪಾನಕ ಹೆಸರುಬೇಳೆ ವಿತರಿಸಲಾಯಿತು. ಬೀಸುಕಂಸಾಳೆ, ಡೊಳ್ಳು ಕುಣಿತ, ಹುಲಿ ವೇಷಾದಾರಿಗಳು, ನಂದಿ ಧ್ವಜ ಕುಣಿತ ಸೇರಿದಂತೆ ಇತರೆ ಕಲಾ ತಂಡಗಳು ಪಾಲ್ಗೊಂಡು ರಥೋತ್ಸವಕ್ಕೆ ಮತ್ತಷ್ಟು ಮೆರುಗು ನೀಡಿದವು. ಯುವಕರು ಡಾಕ್ಟರ್ ಪುನೀತ್ ರಾಜಕುಮಾರ್ ಭಾವಚಿತ್ರ ಹಿಡಿದು ಜೈಕಾರ ಹಾಕಿದರು.

ಈ ಸಂದರ್ಭದಲ್ಲಿ ಹರದನಹಳ್ಳಿ ಹಾಗೂ ಬಂಡಿಗೆರೆ ಯಜಮಾನರು, ಮುಖಂಡರು ಹಾಗೂ ಯುವಕರು ಸೇರಿ ಹರದನಹಳ್ಳಿ ನಾಡ ಕಛೇರಿ ಉಪತಹಸೀಲ್ದಾರ್ ಮಹದೇವಪ್ಪ, ಶೇಖಾದಾರಾರದ ಗುರುಸಿದ್ದಪ್ಪಚಾರ್, ಗ್ರಾಮಲೆಕ್ಕಿರಾದ ನಾಗರಾಜ್, ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು.
