– ಹಂತ ಹಂತವಾಗಿ ಎಲ್ಲಾ ಕೆರೆಗಳಿಗೂ ನೀರು: ಶಾಸಕ ನಿರಂಜನಕುಮಾರ್

ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರು ಹೋಬಳಿಯ ರೈತರ ಬಹುದಿನಗಳ ಬೇಡಿಕೆಯಾಗಿದ್ದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ರಾಘವಾಪುರ ಕೆರೆಗೆ ನೀರು ಬಿಡುವ ಮೂಲಕ ಚಾಲನೆ ನೀಡಿದರು. ಶಾಸಕ ಸಿ.ಎಸ್. ನಿರಂಜನಕುಮಾರ್ ಸಾಥ್ ನೀಡಿದರು.

ತಾಲ್ಲೂಕಿನ ಕಮರಹಳ್ಳಿ ಕೆರೆಯಿಂದ ರಾಘವಾಪುರ ಕೆರೆಗೆ ನೀರು ಹರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನೆರೆದಿದ್ದ ರೈತರು ಸಂತೋಷದಿಂದ ಹರ್ಷೋದ್ಗಾರ ವ್ಯಕ್ತಪಡಿಸಿದರು.

ನಂತರ ರಾಘವಪುರ ಕೆರೆ ಆವರಣದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಸಾರ್ವಜನಿಕ ಸೇವೆಯಲ್ಲಿ ಇರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಾಳಿಗೆ ಬದ್ದತೆ ಇರಬೇಕು. ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದೆ ಎಟಿಎಂನಲ್ಲಿ ಹಣ ಹೇಗೆ ಬರುವುದಿಲ್ಲವೋ, ಹಾಗೇ ಅಂತರ್ಜಲ ವೃದ್ದಿ ಮಾಡದೇ ಕೊಳವೆ ಬಾವಿಗಳಿಂದ ನೀರು ಬರುವುದಿಲ್ಲ, ಅಂತರ್ಜಲ ವೃದ್ಧಿ ಮಾಡಿಸುವ ಕೆಲಸವನ್ನು ಶಾಸಕ ಸಿ.ಎಸ್. ನಿರಂಜನ ಕುಮಾರ್ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಮಾಡುವುದಿಲ್ಲ, ಚಾಮರಾಜನಗರ ನಗರ ಜಿಲ್ಲೆ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಿತ್ತುಹಾಕಬೇಕಿದೆ. ಜಿಲ್ಲೆಯ ಸರ್ವಂಗಿಣ ಅಭಿವೃದ್ಧಿಗೆ ಮುಖ್ಯಮಂತ್ರಿ ಪಣತೊಟ್ಟಿದ್ದಾರೆ. ಅಂತೆಯೇ ತಾವು ಕೂಡ ಹೆಚ್ಚಿನ ಶ್ರಮವಹಿಸುತ್ತಿದ್ದು, ಅಂತೆಯೇ ಗುಂಡ್ಲುಪೇಟೆ ಅಭಿವೃದ್ಧಿಗೆ ಶಾಸಕ ನಿರಂಜನಕುಮಾರ್ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

ರಾಜಕಾರಣಿಗಳು ಹೇಳಿದ ಮಾತಿನಂತೆ ನಡೆದುಕೊಳ್ಳುವುದಿಲ್ಲ ಎಂದು ಜನರು ಹೇಳುತ್ತಾರೆ. ಆದರೆ ಶಾಸಕ ನಿರಂಜನಕುಮಾರ್ ಅದಕ್ಕೆ ತದ್ವಿರುದ್ದವಾಗಿದ್ದು, ಹಿಂದೆ ಹೇಳಿದಂತೆ ಇಂದು ಕೆರೆಗಳಿಗೆ ನೀರು ಹರಿಸುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ರೈತರು ನೆಮ್ಮದಿಯ ಜೀವನ ನಡೆಸಬಹುದು ಎಂದರು.

ಶಾಸಕ ಸಿ.ಎಸ್. ನಿರಂಜನ ಕುಮಾರ್ ಮಾತನಾಡಿ, ತಾಂತ್ರಿಕ ದೋಷದಿಂದ ಕೆರೆಗಳಿಗೆ ನೀರು ತುಂಬಿಸುವುದು ತಡವಾಗಿದೆ. ಈ ಬಗ್ಗೆ ಹಲವರು ತಮ್ಮ ವಿರುದ್ದ ಅನುಮಾನ ವ್ಯಕ್ತಪಡಿಸಿದ್ದರು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ಈ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ತಮಗೆ ಹೆಚ್ಚಿನ ಸಹಕಾರ ನೀಡಿದ್ದಾರೆ. ಹಿಂದೆಯಿದ್ದ ಸರ್ಕಾರ ನೀರು ತುಂಬಿಸುವ ಮೊದಲ ಹಂತದ ಯೋಜನೆಗೆ ಚಾಲನೆ ನೀಡಿತ್ತು. ಅದನ್ನು ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದು ತಿಳಿಸಿದರು.

ಕಮರಹಳ್ಳಿ ಕೆರೆಗೆ ನೀರು ತುಂಬಲು ಇಂದು ಚಾಲನೆ ನೀಡಲಾಗಿದ್ದು, ಹಂತ ಹಂತವಾಗಿ ಮುಂದಿನ ದಿನಗಳಲ್ಲಿ ರಾಘವಪುರ, ಚಿಕ್ಕಾಟಿ, ಬೆಳಚವಾಡಿ ಕೆರೆ ಸೇರಿದಂತೆ ಐದು ಕೆರೆಗಳಿಗೆ ನೀರು ಹರಿದು ಬರಲಿದೆ. ಕೆರೆಗಳು ತುಂಬುವವರೆಗೂ ನಿಲ್ಲುವ ಮಾತೇ ಇಲ್ಲ ಎಂದರು.

ತಾಲ್ಲೂಕಿನಲ್ಲಿ 220ಕೆವಿ ಸಾಮರ್ಥ್ಯದ ವಿದ್ಯುತ್ ಉತ್ಪಾದನ ಸ್ಥಾವರ ಘಟಕಕ್ಕೆ ಇಂದು ಚಾಲನೆ ನೀಡಲಾಗಿದ್ದು, ಇದರಿಂದ ವಿದ್ಯುತ್ ಸಮಸ್ಯೆ ಬಗೆಹರಿದಂತಾಗಿದೆ. ಜೊತೆಗೆ ಬೇಗೂರು ಠಾಣೆ ಸುಸಜ್ಜಿತವಾಗಿ ನಿರ್ಮಾಣವಾಗಿದ್ದು, ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೇಗೂರು ಗ್ರಾಮದಲ್ಲಿ ನೂತನವಾಗಿ ನಿರ್ಮಮಾಣವಾಗಿರುವ ಪೊಲೀಸ್ ಠಾಣೆ ಹಾಗೂ 220ಕೆವಿ ಸಾಮಾರ್ಥ್ಯದ ವಿದ್ಯುತ್ ಸ್ಥಾವರ ಘಟಕ ಉದ್ಘಾಟಿಸಿದರು.

ಬಿಜೆಪಿ ಚಿಹ್ನೆ ಬ್ಯಾನರ್ ತೆರವು:
ತಾಲ್ಲೂಕಿನ ಬೇಗೂರು ಹೋಬಳಿಯ ಐದು ಕೆರೆಗಳಿಗೆ ನೀರು ತುಂಬಿಸುವ ಸರ್ಕಾರದ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಚಿಹ್ನೆ ಇರುವ ಬ್ಯಾನರ್ ಬಳಸಲಾಗಿದೆ ಎಂದು ಕಾಂಗ್ರೆಸ್ ಜನಪ್ರತಿನಿಧಿಗಳು ವೇದಿಕೆ ಏರಲು ನಿರಾಕರಿಸಿದರು.

ರಾಘವಾಪುರ ಕೆರೆ ಆವರಣದಲ್ಲಿ ಗುರುವಾರ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಈ ಘಟನೆ ನಡೆಯಿತು.

ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಅಶ್ವಿನಿ ವಿಶ್ವನಾಥ್, ಉಪಾಧ್ಯಕ್ಷೆ ಶಶಿಕಲಾ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಮಧುಶಂಕರ್, ಉಪಾಧ್ಯಕ್ಷೆ ಸುಮಿತ್ರಾ ಮಹೇಶ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳು ವೇದಿಕೆ ಏರಲು ನಿರಾಕರಿಸಿ ಹೊರಗೆ ನಿಲ್ಲುವುದಾಗಿ ತಿಳಿಸಿದಾಗ ಬ್ಯಾನರ್ ತೆಗೆದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಮತ್ತು ಶಾಸಕ ಸಿ.ಎಸ್.ನಿರಂಜನ ಕುಮಾರ್ ಎದುರಲ್ಲೆ ಬ್ಯಾನರ್ ತೆಗೆದರು. ಈ ವಿಷಯದ ಬಗ್ಗೆ ಶಾಸಕರನ್ನು ಸಚಿವರು ಕೇಳಿದರು. ಶಾಸಕರು ಸಚಿವರ ಕಿವಿಯಲ್ಲಿ ಪಿಸುಗುಟ್ಟಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಧುಂಕರ್ ಮಾತನಾಡಿ, ಸರ್ಕಾರಿ ಕಾರ್ಯಕ್ರಮಕ್ಕೆ ಬಿಜೆಪಿ ಪಕ್ಷದ ಚಿಹ್ನೆ ಇರುವ ಬ್ಯಾನರ್ ಹಾಕಿರುವುದು ಖಂಡನೀಯ ಎಂದು ವಿರೋಧ ವ್ಯಕ್ತಪಡಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಎಸ್ಪಿ ದಿವ್ಯಾ ಸಾರಾ ಥಾಮಸ್, ಎಎಸ್ಪಿ ಅನಿತಹದ್ದಣ್ಣವರ್, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಅಶ್ವಿನಿವಿಶ್ವನಾಥ್, ಉಪಾಧ್ಯಕ್ಷೆ‌ ಶಶಿಕಲಾ ಸೋಮಲಿಂಗಪ್ಪ, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಎಸ್.ಎಸ್.ಮಧುಶಂಕರ್, ಉಪಾಧ್ಯಕ್ಷೆ ಸುಮಿತ್ರಮಹೇಶ್, ಸದಸ್ಯ ಶಿವನಾಗು, ಮಹೇಶ್ವರಿ,ಚಾಮುಲ್ ನಾಮ ನಿರ್ದೇಶನ ನಿರ್ದೇಶಕ ಕಿಲಗೆರೆ ಶಶಿಕುಮಾರ್, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ.ನಂದೀಶ್, ರಾಘವಾಪುರ ದೇವಯ್ಯ, ತಹಸೀಲ್ದಾರ್ ಎಂ.ನಂಜುಂಡಯ್ಯ, ತಾಲ್ಲೂಕು ಪಂಚಾಯತಿ ಇಒ ವಿ.ಪಿ.ಕುಲದೀಪ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಸಿ.ಶಿವಮೂರ್ತಿ, ಸಂಪನ್ಮೂಲ ಸಮನ್ವಯಾಧಿಕಾರಿ ನಂದೀಶ್ ಹಾಜರಿದ್ದರು.

ವರದಿ: ಬಸವರಾಜು ಎಸ್ ಹಂಗಳ

By admin