ಚಾಮರಾಜನಗರ: ಚಾಮರಾಜನಗರ ತಾಲೂಕಿನ ಗೂಳಿಪುರ ಗ್ರಾಮದಲ್ಲಿ ಎನ್.ಆರ್.ಎಲ್.ಎಂ ಯೋಜನೆಯ ವನ್ಧನ್ ವಿಕಾಸ ಕಾರ್ಯಕ್ರಮದಡಿ ಕಾಡಂಚಿನ, ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಸ್ಥಳೀಯವಾಗಿ ದೊರೆಯುವ ನೈಸರ್ಗಿಕ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಅವುಗಳನ್ನು ಉತ್ಪನ್ನಗಳನ್ನಾಗಿ ಮಾರ್ಪಡಿಸುವ ಕುರಿತ ಸಾಮಾರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಇಂದು ನಡೆಯಿತು.
ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಗೂಳಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಚಿಸಲಾಗಿರುವ ವನಸಿರಿ ವಿಕಾಸ ಕೇಂದ್ರಕ್ಕೆ ೭.೫೦ ಲಕ್ಷ ರೂ. ಗಳ ಪ್ರೋತ್ಸಾಹಧನವನ್ನು ಮೊದಲನೇ ಕಂತಿನಲ್ಲಿ ಬಿಡುಗಡೆ ಮಾಡಲಾಗಿದೆ. ವನಸಿರಿ ವಿಕಾಸ ಕೇಂದ್ರದ ೩೨೩ ಮಹಿಳಾ ಸದಸ್ಯರ ಪೈಕಿ ೧೭೩ ಮಹಿಳಾ ಸದಸ್ಯರಿಗೆ ಬಾಳೆ ನಾರಿನ ಕರಕುಶಲ ಉತ್ಪನ್ನಗಳ ತಯಾರಿಕೆ ಹಾಗೂ ಉಳಿದ ೧೫೦ ಮಹಿಳಾ ಸದಸ್ಯರಿಗೆ ಬಾಳೆ ಚಿಪ್ಸ್ ತಯಾರಿಕೆ ತರಬೇತಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ವನಧನ್ ವಿಕಾಸ ಕಾರ್ಯಕ್ರಮದಡಿ ಶೇ. ೬೦ರಷ್ಟು ಪರಿಶಿಷ್ಟ ಪಂಗಡದ ಮಹಿಳಾ ಸದಸ್ಯರಿಗೆ ಹಾಗೂ ಶೇ.೪೦ ರಷ್ಟು ಇತರೆ ವರ್ಗದ ಸ್ವ ಸಹಾಯ ಸಂಘದ ಮಹಿಳೆಯರಿಗೆ ಸಾಮಾರ್ಥ್ಯಾಭಿವೃದ್ಧಿ ತರಬೇತಿಯನ್ನು ನೀಡಿ ಆದಾಯವನ್ನು ದ್ವಿಗುಣಗೊಳಿಸಿ ಸುಸ್ಥಿರ ಜೀವನೋಪಾಯವನ್ನು ಸೃಜಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಸಿಇಒ ಅವರು ತಿಳಿಸಿದರು.
ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಸಲುವಾಗಿ ಮಹಿಳಾ ಸಂಘದ ಸದಸ್ಯರಿಗೆ ಹುಣಸೆ, ಜೇನುತುಪ್ಪ ತಯಾರಿಕೆ ಹಾಗೂ ಲಂಟಾನದಿಂದ ಕರಕುಶಲ ವಸ್ತುಗಳನ್ನು ತಯಾರಿಸುವ ಬಗ್ಗೆ ಜಿಲ್ಲೆಯ ಹಲವು ಕಡೆಗಳಲ್ಲಿ ಈಗಾಗಲೇ ತರಬೇತಿಗಳನ್ನು ನೀಡಲಾಗಿದೆ. ಸ್ಥಳೀಯ ಮಹಿಳೆಯರು ಸಹ ತರಬೇತಿಯ ಸದುಪಯೋಗ ಪಡೆದುಕೊಂಡು ಉತ್ತಮ ಗುಣಮಟ್ಟದ ಹಾಗೂ ವಿಭಿನ್ನ ರೀತಿಯ ಉತ್ಪನ್ನಗಳನ್ನು ತಯಾರಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಸಲಹೆ ಮಾಡಿದರು.
ಖಾದಿ ಮತ್ತು ಗ್ರಾಮೋದ್ಯೋಗ ಉಪ ನಿರ್ದೇಶಕರಾದ ರಾಜೇಂದ್ರಪ್ರಸಾದ್, ಇತರೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
