: ಮಹೇಶ್ ನಾಯಕ್
maheshyoga10@gmail.com
9448980010
ಪಾರಂಪರಿಕ ಕ್ರೀಡೆಯಿಂದ ಸಮಾಜ ಸೇವೆಯ ವೃತ್ತಿಗೆ ರೂಪಾಂತರವಾಗಿರುವ ಸಾಧಕರಲ್ಲಿ ಪೈಲ್ವಾನ್ ಭಾಸ್ಕರ್ ದಾಸ್ ಪ್ರಮುಖರು. ಕುಸ್ತಿ ಎಂಬ ಪಾರಂಪರಿಕ ಕ್ರೀಡೆಯತ್ತ ಬಾಲ್ಯದಿಂದಲೇ ಆಸಕ್ತಿ ಬೆಳೆಸಿಕೊಂಡ ಅವರು, ಕ್ರೀಡೆಯ ತಂತ್ರಗಳ ಜೊತೆಗೆ ಅದರ ಅಂತರಂಗದಲ್ಲಿರುವ ದೇಹದ ರಚನೆ, ಸ್ನಾಯುಗಳ ಕಾರ್ಯವಿಧಾನ ಹಾಗೂ ಮೂಳೆ ಜೋಡಣೆ ಕುರಿತ ಜ್ಞಾನವನ್ನು ಆಳವಾಗಿ ಅರಿತುಕೊಂಡಿದ್ದಾರೆ.
ಕುಸ್ತಿ ಪಟ್ಟು ಸಂದರ್ಭಗಳಲ್ಲಿ ಉಂಟಾಗುವ ಮೂಳೆ ಜೋಡಣೆ ಹಾಗೂ ಸ್ನಾಯು ಸಮಸ್ಯೆಗಳನ್ನು ಸರಿಪಡಿಸುವ ಪಾರಂಪರಿಕ ವಿಧಾನಗಳನ್ನು ಹಿರಿಯ ಪೈಲ್ವಾನರು ಅನುಸರಿಸುತ್ತಿದ್ದುದನ್ನು ನೋಡಿ ಅವರು ಪ್ರೇರಣೆ ಪಡೆದರು. ಹಿರಿಯರಿಂದ ಪಡೆದ ಅನುಭವ, ನಿರಂತರ ಅಭ್ಯಾಸ ಮತ್ತು ಶಿಸ್ತಿನ ಬದುಕು ಇಂದು ಅವರನ್ನು ಸಮಾಜಕ್ಕೆ ಉಪಯುಕ್ತವಾಗುವ ಸೇವಾ ಮಾರ್ಗದತ್ತ ಕರೆದೊಯ್ದಿದೆ.
ಕಾಲಕ್ರಮೇಣ ಈ ಕಲೆ ಕೇವಲ ವೈಯಕ್ತಿಕ ಆಸಕ್ತಿಯಾಗಿ ಉಳಿಯದೇ, ಒಂದು ಜವಾಬ್ದಾರಿಯುತ ಸಮಾಜ ಸೇವೆಯಾಗಿ ಹಾಗೂ ವೃತ್ತಿಯಾಗಿ ರೂಪಾಂತರಗೊಂಡಿದೆ. ಕುಸ್ತಿಯ ಮೂಲಕ ಆರೋಗ್ಯ, ಶಿಸ್ತು ಮತ್ತು ಸೇವಾಭಾವವನ್ನು ಸಮಾಜಕ್ಕೆ ನೀಡುತ್ತಿರುವ ಭಾಸ್ಕರ್ ದಾಸ್ ಪಾರಂಪರಿಕ ಕ್ರೀಡೆಗೆ ಹೊಸ ಗೌರವ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದೇ ವೇಳೆ ಪೈಲ್ವಾನ್ ದೀಪಕ್ ದಾಸ್ ಅವರ ಸ್ಫೂರ್ತಿಯ ಕಥೆಯೂ ಗಮನಾರ್ಹವಾಗಿದೆ. ಒಂದು ವೇಳೆ ಖಾಸಗಿ ಸಂಸ್ಥೆಯಲ್ಲಿ ದ್ವಿಚಕ್ರ ವಾಹನಗಳ ಗೋದಾಮಿನ ಇನ್ಚಾರ್ಜ್ ಆಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ, ರಸ್ತೆ ಅಪಘಾತಕ್ಕೊಳಗಾದ ಒಂದು ನಾಯಿಯ ಮೂಳೆ ಮುರಿದು ನೋವಿನಿಂದ ನರಳುತ್ತಿರುವುದನ್ನು ಕಂಡ ಅವರು, ಅದನ್ನು ನಿರ್ಲಕ್ಷಿಸದೆ ಮಾನವೀಯತೆಯಿಂದ ಚಿಕಿತ್ಸೆ ನೀಡಿದರು. ಮೂಳೆ ಜೋಡಣೆ ಕುರಿತು ಹೊಂದಿದ್ದ ಪ್ರಾಥಮಿಕ ಜ್ಞಾನದಿಂದ ಆ ಪ್ರಾಣಿಗೆ ನೆರವಾದರು.
ಈ ಸೇವಾಭಾವಕ್ಕೆ ಅವರಿಗೆ ಪ್ರೇರಣೆಯಾದದ್ದು, ಸಾಮಾಜಿಕ ಜಾಲತಾಣದಲ್ಲಿ ಕಂಡ ಪೈಲ್ವಾನ್ ದೀಪಕ್ ದಾಸ್ ಅವರ ಸೇವಾ ಕಾರ್ಯದ ವೀಡಿಯೊ. ಅದರಿಂದ ಪ್ರಭಾವಿತರಾಗಿ, ತಮ್ಮ ಸೇವಾ ಕಾರ್ಯದ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸೇವಾ ಕಾರ್ಯಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಒಂದು ವೇಳೆ ಕ್ರೀಡಾ ಮೈದಾನದಲ್ಲಿ ಆಟದ ಸಮಯದಲ್ಲಿ ಒಬ್ಬ ಕ್ರೀಡಾಪಟುವಿಗೆ ಸ್ವಲ್ಪ ಮಟ್ಟಿನ ಉಳುಕು ಸಂಭವಿಸಿದಾಗ, ಅಲ್ಲೇ ಇದ್ದ ಭಾಸ್ಕರ್ ದಾಸ್ ತಕ್ಷಣ ನೆರವಿಗೆ ಮುಂದಾಗಿ ಸಮಸ್ಯೆಯನ್ನು ಸರಿಪಡಿಸಿದರು. ಆ ಘಟನೆಯ ನಂತರ ನೋವು ಹಾಗೂ ಮೂಳೆ ಸಮಸ್ಯೆಗಳಿಂದ ಬಳಲುತ್ತಿದ್ದ ಹಲವರು ಅವರನ್ನು ಹುಡುಕಿಕೊಂಡು ಬರಲಾರಂಭಿಸಿದರು.
ಇಂದು ಹೆಬ್ಬಾಳು ಪ್ರದೇಶದಲ್ಲಿ ತಮ್ಮ ಮನೆಯ ಮುಂದೆ ಸಣ್ಣ ಕ್ಲಿನಿಕ್ ನಡೆಸುತ್ತಾ ಜನರಿಗೆ ಚಿಕಿತ್ಸೆ ನೀಡುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಕೆಲವರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಅವರು, ಕೆಲವರಿಂದ ಕೇವಲ ಸಣ್ಣ ಗೌರವಧನ ಮಾತ್ರ ಸ್ವೀಕರಿಸುತ್ತಾರೆ.
ಭಾಸ್ಕರ್ ದಾಸ್ ಅವರ ಜೀವನ ಪಯಣವೂ ಸುಲಭವಾಗಿರಲಿಲ್ಲ. ಬಾಲ್ಯದಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡ ಅವರು, ಮುಂದಿನ ಜೀವನ ಹೇಗೆ ಎಂಬ ಆತಂಕದಲ್ಲಿ ಕಷ್ಟದ ದಿನಗಳನ್ನು ಎದುರಿಸಿದರು. ಉದ್ಯೋಗವಿಲ್ಲದೆ ಪರದಾಡಿದ ಸಂದರ್ಭಗಳೂ ಎದುರಾದವು. ಆದರೆ ಸಂಕಷ್ಟಗಳನ್ನೇ ಮೆಟ್ಟಿಲು ಮಾಡಿಕೊಂಡು ತಮ್ಮ ಪರಿಶ್ರಮ ಮತ್ತು ಆಸಕ್ತಿಯಿಂದ ಬದುಕಿನಲ್ಲಿ ಹೊಸ ದಾರಿ ಕಂಡುಕೊಂಡಿದ್ದಾರೆ.
ಇನ್ನು ಹೆಚ್ಚಿನ ತರಬೇತಿ ಪಡೆಯಲು ಹಾಗೂ ಇನ್ನಷ್ಟು ಜ್ಞಾನ ಗಳಿಸಲು ವಿದೇಶಗಳಿಗೆ ತೆರಳಿ ಕಲಿಕೆಯನ್ನು ಮುಂದುವರಿಸಬೇಕೆಂಬ ಆಸೆಯೂ ಅವರಿಗೆ ಇದೆ.
ಇಂದು ಪಾರಂಪರಿಕ ಕಲೆ, ಮಾನವೀಯತೆ ಮತ್ತು ಸೇವಾಭಾವ ಒಂದಾಗಿದಾಗ ಸಮಾಜಕ್ಕೆ ಎಷ್ಟು ಉಪಕಾರವಾಗಬಹುದು ಎಂಬುದಕ್ಕೆ ಪೈಲ್ವಾನ್ ಭಾಸ್ಕರ್ ದಾಸ್ ಉತ್ತಮ ಉದಾಹರಣೆಯಾಗಿದ್ದಾರೆ.
ಮೊಬೈಲ್ ನಂಬರ್.+917760187978
