ಹಾಸನ: ರಾಜ್ಯದಲ್ಲಿ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷರ ಮತ್ತು ವಿವಿಧ ಸಮಿತಿಗಳ ಪದಾಧಿಕಾರಿಗಳ ಬದಲಾವಣೆ ಮಾಡುವುದು ಕೆಪಿಸಿಸಿ ಅಧ್ಯಕ್ಷರ ನಿರ್ಧಾರವಾಗಿದ್ದು, ಅದನ್ನು ಅವರು ಮಾಡುತ್ತಾರೆ ಎಂದು ಹಾಸನ ಜಿಲ್ಲಾ ಕಾಂಗ್ರೇಸ್ ಪಕ್ಷದ ಉಸ್ತುವಾರಿ ‌ಹಾಗೂ‌ ಸಂಸದ ಡಿ.ಕೆ. ಸುರೇಶ್ ಹೇಳಿದರು

ಅವರು ದುದ್ದ ಗ್ರಾಮದಲ್ಲಿ ಕಾಂಗ್ರೇಸ್ ಪಕ್ಷದ ವತಿಯಿಂದ ಬುಧವಾರ  ಏರ್ಪಡಿಸಿದ್ದ ಆಹಾರ ಕಿಟ್ ವಿತರಣಾ ಕಾರ್ಯಕ್ರಮಕ್ಕೂ ಮುನ್ನಾ‌ ಸುದ್ದಿಗಾರರೊಂದಿಗೆ ಮಾತನಾಡಿ ಮುಂದೆ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಮುಖ್ಯ ಮಂತ್ರಿಗಳ ಆಯ್ಕೆ ಪಕ್ಷದ ಹೈ ಕಮಾಂಡ್ ನಿಂದ ನಿರ್ಧಾರ ವಾಗುತ್ತದೆ ಈ ಬಗ್ಗೆ ಪ್ರಸಕ್ತ ಎದ್ದಿರುವ ಬೆಳವಣಿಗೆಗಳು ಅಪ್ರಸ್ತುತ. ಅದಕ್ಕಿಂತ ಹೆಚ್ಚಾಗಿ ಮುಂದಿನ ಮುಖ್ಯ ಮಂತ್ರಿ ಮಾಡುವ ಅಧಿಕಾರ ನಾಡಿನ ಮತದಾರರ  ಕೈಯಲ್ಲಿದ್ದು ಅವರು ಮಾಡಲಿದ್ದಾರೆ ಎಂದರು.

ಇದೇ ವೇಳೆ ಹೆಚ್.ಡಿ.ರೇವಣ್ಣ  ಅವರು ಮಾಡಿದ್ದ ಕಾಂಗ್ರೆಸ್ ಬಾಲ ಕಟ್ ಮಾಡುವುದು ಹೇಗೆ ಎನ್ನುವುದು ನನಗೆ ಗೊತ್ತು ಎನ್ನುವ ಟೀಕೆಗೆ ಉತ್ತರ ನೀಡಿದ ಅವರು,  ಜೆಡಿಎಸ್ ಪಕ್ಷದ ಬಾಲ ಯಾರ ಬಳಿ ಇದೆ ಎನ್ನುವುದನ್ನು ಹೆಚ್.ಡಿ.ರೇವಣ್ಣ  ಸ್ವಲ್ಪ ಅರಿತು ಮಾತನಾಡಿದರೆ ಒಳಿತು. ಕೋವಿಡ್ ಸಂದರ್ಭದಲ್ಲಿ ರಾಜಕೀಯಮಾಡುವುದ ಸರಿಯಲ್ಲ. ನೊಂದವರಿಗೆ ನೆರವಾಗುವುದು ಮುಖ್ಯ. ಈ ಕೆಲಸವನ್ನು ನಾಯಕರು ಮಾಡಬೇಕೆಂದು ಹೇಳಿದರು.

ಡಿಕೆಶಿ ಜೊತೆ ರಾಜಕೀಯ ನಂಟು ಇಲ್ಲ ಎಂಬ  ಸಿ.ಪಿ.ಯೋಗೀಶ್ವರ್ ಹೇಳಿಕೆಗೆ ಉತ್ತರಿಸಿದ ಅವರು, ನಮಗೆ ನೆಂಟಸ್ತನವಿಲ್ಲ. ಅವರು ರಾಜಕೀಯ ವೈರಿನೂ ಅಲ್ಲ. ಹಿಂದೆ ನಮ್ಮ ಪಕ್ಷದಲ್ಲಿಯೇ ಇದ್ದವರು ಪಕ್ಷದಿಂದ ಹೊರ ಹೋದ ಮೇಲೆ ರಾಜಕೀಯದ ಯಾವ ಸಂಬಂಧ ಇಲ್ಲ. ಅವರು ನಾಯಕರಾಗಬೇಕು ಎನ್ನುವ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಅವರ ಹೆಸರು ಬಳಸಿಕೊಳ್ಳೋಕೆ ಪ್ರಯತ್ನ ಮಾಡುತ್ತಾರೆ ಅಷ್ಟೆ ಎಂದರು.

ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಬಾಗೂರು ಮಂಜೇಗೌಡ, ಎಂ.ಎಲ್.ಸಿ. ಗೋಪಾಲಸ್ವಾಮಿ, ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ದುದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್ ಇತರರು ಇದ್ದರು.

By admin