ಚಾಮರಾಜನಗರ: ಯಳಂದೂರು ತಾಲೂಕಿನ ಅಗರ ಹೋಬಳಿಯ ಗೌಡಳ್ಳಿ ಗ್ರಾಮದಲ್ಲಿಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಗ್ರಾಮವಾಸ್ತವ್ಯ ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಆಲಿಸಿದರು.
ಗೌಡಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿಯ ಅವರಣದಲ್ಲಿಂದು ?ಜಿಲ್ಲಾಧಿಕಾರಿಗಳ ನಡೆ-ಗ್ರಾಮದ ಕಡೆಗೆ? ಕಾರ್ಯಕ್ರಮದಡಿಯಲ್ಲಿ ಆಯೋಜಿಸಲಾಗಿದ್ದ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಹೆಚ್ಚುವರಿ ಜಿಲ್ಲಾಧಿಕಾರಿಯವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. 
ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಸಾರ್ವಜನಿಕರ ಅಹವಾಲು ಆಲಿಸಿ ಸರ್ಕಾರದ ವಿವಿಧ ಸೌಲಭ್ಯ, ಸವಲತ್ತುಗಳನ್ನು ತಲುಪಿಸುವ ಸಲುವಾಗಿ ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ ಕಾರ್ಯಕ್ರಮವನ್ನು ಜಿಲ್ಲಾಡಳಿತದಿಂದ ಆಯೋಜನೆ ಮಾಡಲಾಗಿದೆ. ಸಾರ್ವಜನಿಕರು ತಮ್ಮ ಸಮಸ್ಯೆ, ಕುಂದುಕೊರತೆ, ಅಹವಾಲುಗಳನ್ನು ಲಿಖಿತವಾಗಿ ನೀಡಿ ಪರಿಹಾರ ಪಡೆಯಬಹುದಾಗಿದೆ ಎಂದರು.
ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬನ್ನಿಸಾರಿಗೆ ಹಾಗೂ ಟಿ. ಹೊಸೂರು ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗದ ಕೊರತೆಯಾಗಿದ್ದು, ಈಗಿರುವ ಸ್ಮಶಾನದ ಜಾಗ ಒತ್ತುವರಿಯಾಗಿದೆ. ಶವ ಹೂಳಲು ತೊಂದರೆಯಾಗುತ್ತಿದೆ. ಇದನ್ನು ಕೂಡಲೇ ಸರ್ವೇ ಮಾಡಿಸಿ ಜಾಗ ದೊರಕಿಸಿಕೊಡಬೇಕಾಗಿ ಗ್ರಾಮಸ್ಥರು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಜಿಲ್ಲಾಧಿಕಾರಿಯವರು ಸ್ಮಶಾನಕ್ಕೆ ಸಮಸ್ಯೆಯಾಗಿರುವ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನರೇಗಾದಡಿ ಫೆನ್ಸಿಂಗ್ ಅಳವಡಿಸುವ ಕಾರ್ಯವನ್ನು ತುರ್ತಾಗಿ ಮಾಡಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಗೌಡಳ್ಳಿ ಗ್ರಾಮ ಪಂಚಾಯಿತಿ ದೊಡ್ಡ ಪಂಚಾಯಿತಿಯಾಗಿದ್ದು, ಕಂದಾಯ ಇಲಾಖೆ ವತಿಯಿಂದ ಪೌತಿ ಖಾತೆ ಆಂದೋಲನ ಆಯೋಜಿಸಿ ಈ ಭಾಗದಲ್ಲಿ ಯಾರಿಗೆ ಪೌತಿ ಖಾತೆ ಅವಶ್ಯವಿದೆಯೋ ಅವರಿಗೆ ಪೌತಿ ಖಾತೆಗಳನ್ನು ಮಾಡಿಕೊಡಬೇಕು. ಅಲ್ಲದೇ ಆರ್.ಟಿ.ಸಿ ಯಲ್ಲಿ ತಿದ್ದುಪಡಿ ಅಗತ್ಯವಿರುವವರಿಂದ ದಾಖಲೆಗಳನ್ನು ಪಡೆದು ಆರ್.ಟಿ.ಸಿ ಸರಿಪಡಿಸಿಕೊಡುವ ಕಾರ್ಯವನ್ನು ಆದ್ಯತೆ ಮೇರೆಗೆ ಮಾಡಿಕೊಡುವಂತೆ ಹೆಚ್ಚುವರಿ ಜಿಲ್ಲಾಧಿಕಾರಿಯವರು ತಿಳಿಸಿದರು.
ಗೌಡಳ್ಳಿ ಗ್ರಾಮದ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು ಗ್ರಾಮದಲ್ಲಿರುವ ಶಾಲೆಗೆ ಜಾಗವನ್ನು ದಾನಿಗಳು ನೀಡಿದ್ದು, ಆ ಜಾಗವು ಸಹ ಒತ್ತುವರಿಯಾಗಿದೆ. ಒತ್ತುವರಿ ಜಾಗವನ್ನು ಅದಷ್ಟು ಬೇಗನೇ ತೆರವುಗೊಳಿಸಬೇಕೆಂದು ಕೋರಿದ ಮೇರೆಗೆ ಹೆಚ್ಚುವರಿ ಜಿಲ್ಲಾಧಿಕಾರಿಯವರು ತಹಶೀಲ್ದಾರ್, ಎ.ಡಿ.ಎಲ್.ಆರ್. ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯವರು ದಾಖಲೆಗಳನ್ನು ಸಮರ್ಪಕವಾಗಿ ಪರಿಶೀಲಿಸಿ ಸರ್ವೇ ನಡೆಸಿ ಶಾಲೆಗೆ ಸೇರಬೇಕಾದ ಜಾಗವನ್ನು ಗುರುತಿಸುವಂತೆ ಸೂಚಿಸಿದರು.
ಅಲ್ಕೆರೆ ಅಗ್ರಹಾರ ಗ್ರಾಮದಲ್ಲಿ ಅನಧೀಕೃತವಾಗಿ ಜ್ಯೂಸ್ ಅಂಗಡಿ ಹೆಸರಿನಲ್ಲಿ ಬಾರ್ ತೆರೆಯಲಾಗಿದ್ದು, ಪಂಚಾಯಿತಿಯಿಂದ ೨ ಬಾರಿ ನೋಟಿಸ್ ನೀಡಿದ್ದರೂ ಸಹ ಸ್ಥಳಾಂತರವಾಗಿಲ್ಲ. ಬಾರ್ ಪಕ್ಕದಲ್ಲಿ ಶಾಲೆ ಇದೆ. ಸಾರ್ವಜನಿಕರಿಗೆ ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಜನರು ಮೋಜು-ಮಸ್ತಿ ಹೆಚ್ಚಾಗಿ ಅರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ, ಸಾರ್ವಜನಿಕ ಹಿತದೃಷ್ಠಿಯಿಂದ ಬಾರ್‌ಅನ್ನು ಸ್ಥಳಾಂತರಿಸಬೇಕು ಎಂದು ಅಲ್ಕೆರೆ ಅಗ್ರಹಾರದ ಗ್ರಾಮಸ್ಥರು ಸಲ್ಲಿಸಿದ ದೂರಿಗೆ ಸ್ಪಂದಿಸಿದ ಹೆಚ್ಚುವರಿ ಜಿಲ್ಲಾಧಿಕಾರಿಯವರು ಅದಷ್ಟು ಶೀಘ್ರವಾಗಿ ಪರಿಶೀಲಿಸಿ ಸೂಕ್ತ ಕ್ರಮ ವಹಿಸುವಂತೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 
ಸುಂದರ್ ಕಲಿವೀರ್ ಎಂಬುವವರು ಅವರು ಬೇಸಿಗೆಯಲ್ಲಿ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಲಿದೆ. ವಿದ್ಯುತ್ ಸಮಸ್ಯೆ ಆಗಾಗ್ಗೆ ತಲೆದೋರುತ್ತಿದೆ ಇದರ ನಿವಾರಣೆಗಾಗಿ ಸೋಲಾರ್ ಘಟಕ ಸ್ಥಾಪಿಸಬೇಕು. ಉತ್ತಮ ಆರೋಗ್ಯಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕ ಅವಶ್ಯವಾಗಿದೆ. ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ದರಪಟ್ಟಿ ಪ್ರದರ್ಶೀಸಬೇಕು. ಇ-ಕೆವೈಸಿ ಮಾಡಿಕೊಡಲು ಸಮಯ ನಿಗದಿ ಮಾಡಿಕೊಳ್ಳಬೇಕು. ವಡ್ಡಗೆರೆಯಿಂದ ಅಲ್ಕೆರೆ ಅಗ್ರಹಾರದವರೆಗೆ ರೈತರಿಗೆ ಅನುಕೂಲವಾಗುವಂತೆ ಪ್ರತ್ಯೇಕ ಪವರ್ ಸ್ಟೇಷನ್ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದರು. ಈ ಬಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿಯವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆಗೆ ಸೂಕ್ತ  ಪರಿಹಾರ ಒದಗಿಸಲಾಗುವುದು ಎಂದರು.
ಮಲಾರಪಾಳ್ಯ ಗ್ರಾಮದ ಮಧುಮಾಲತಿ ಎಂಬುವವರು ಈ ಭಾಗದ ಗ್ರಾಮಗಳಲ್ಲಿ ಜನರು ರಸ್ತೆಪಕ್ಕದಲ್ಲಿ ಹಾಗೂ ಬಯಲು ಶೌಚ ಮಾಡುತ್ತಿದ್ದು, ಸ್ವಚ್ಚ ಭಾರತ ಮಿಷನ್ ಯೋಜನೆಯಡಿ ಪಂಚಾಯಿತಿ ವತಿಯಿಂದ ಎಲ್ಲರೂ ಶೌಚಾಲಯ ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡಬೇಕು ಎಂದು ಮನವಿ ಸಲ್ಲಿಸಿದರು. ಈ ಸಂಬಂಧ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿಯವರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಟಾಸ್ಕ್‌ಪೋರ್ಸ್ ಸಮಿತಿ ರಚಿಸಿ ಗ್ರಾಮದಲ್ಲಿ ಸಂಚರಿಸಿ ಜನರನ್ನು ಶೌಚಾಲಯ ಬಳಸುವಂತೆ ಮನವೊಲಿಸಬೇಕು ಎಂದರು.
ಸ್ತೆ ಅಭಿವೃದ್ಧಿ, ಚರಂಡಿ ಸ್ವಚ್ಚತೆ, ಗ್ರಾಮಕ್ಕೆ ಸಾರಿಗೆ ಬಸ್ ಸಂಪರ್ಕ, ಆಸ್ಪತ್ರೆ, ಅಂಗನವಾಡಿ, ಕುಡಿಯುವ ನೀರು, ರೈತ ವಿದ್ಯಾನಿಧಿ ಯೋಜನೆಯಡಿ ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ, ವಸತಿ ವ್ಯವಸ್ಥೆ, ವಿವಿಧ ನಿಗಮಗಳಿಂದ ಸಾಲ ಸೌಲಭ್ಯ ಸೇರಿದಂತೆ ಒಟ್ಟು ೫೦ಕ್ಕೂ ಹೆಚ್ಚು ಕುಂದುಕೊರತೆಗಳು ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದವು. ಎಲ್ಲರ ಸಮಸ್ಯೆಗಳನ್ನು ಆಲಿಸಿದ ಹೆಚ್ಚುವರಿ ಜಿಲ್ಲಾಧಿಕಾರಿಯವರು ತ್ವರಿತವಾಗಿ ಪರಿಹಾರ ಒದಗಿಸುವುದಾಗಿ ತಿಳಿಸಿದರು.
ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿಗಳಿಗೆ ಪ್ರಮಾಣಪತ್ರವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು. 
ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆಶ್ವಿನಿ, ಉಪಧ್ಯಕ್ಷರಾದ ಆರ್. ರಘು, ಉಪ ವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ತಹಶೀಲ್ದಾರ್ ಜಯಪ್ರಕಾಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಎಂ. ವಿಶ್ವೇಶ್ವರಯ್ಯ ಹಾಗೂ ಜಿಲ್ಲಾ, ತಾಲೂಕುಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.