ಗುಂಡ್ಲುಪೇಟೆ : ದಲಿತ ಯುವತಿ ಎಂಬ ಕಾರಣಕ್ಕೆ ಮನೆಯಿಂದ  ಹೊರಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ  ಗುಂಡ್ಲುಪೇಟೆ ತಾಲೂಕಿನ  ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಮೂವರ ಮೇಲೆ ಜಾತಿನಿಂದನೆ ಪ್ರಕರಣ ದಾಖಲಾಗಿದೆ. ಗುಂಡ್ಲುಪೇಟೆಯ ಕಗ್ಗಳದಹುಂಡಿ ಗ್ರಾಮದ ಶಿವಾನಂದ ಎಂಬುವರ ವಿರುದ್ಧ ಸಂತ್ರಸ್ತ ಮಹಿಳೆ ಗಂಭೀರ ಆರೋಪ ಮಾಡಿದ್ದು ನ್ಯಾಯಕ್ಕಾಗಿ ತಹಸೀಲ್ದಾರ್ ಕಚೇರಿ ಮುಂಭಾಗ ಧರಣಿ ಕುಳಿತಿದ್ದರು.

ಮದುವೆಯಾಗಿ ಮೂರು ವರ್ಷ ಕಳೆದಿದೆ ಅಷ್ಟೂ ದಿನಗಳವರೆಗೂ ನನ್ನೊಟ್ಟಿಗೆ ಜೀವನ ನಡೆಸಿದ ಶಿವಾನಂದ ಕೆಲವು ದಿನಗಳಿಂದ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದುದಲ್ಲದೆ ಮನೆಯಿಂದ ಹೊರಹಾಕಿದ್ದಾರೆ. ಈಕೆ ಕೀಳು ಜಾತಿಯವಳು ಇವಳನ್ನ ವಿವಾಹವಾಗಿ ದೊಡ್ಡ ತಪ್ಪು ಮಾಡಿದ್ದೀಯ ಹೇಗಾದರು ಮಾಡಿ ಈಕೆಯನ್ನು ಹೊರಗೆ ಸಾಗಾಕಬೇಕು ಎಂಬ ದುರುದ್ದೇಶದಿಂದ ಮೈಸೂರಿನಲ್ಲಿ ಕೆಲ ತಿಂಗಳ ಕಾಲ ಪ್ರತ್ಯೇಕವಾಗಿ ಇರಿಸಿದ್ದಲ್ಲದೆ ನನ್ನ ಬಳಿಯಿದ್ದ 6 ಗ್ರಾಂ ಚಿನ್ನ 45 ಸಾವಿರ ಹಣವನ್ನ ಪಡೆದು  ನಾನಿರುವೆಡೆಗೆ ಹುಡುಕಿ ಬರಬಾರದು ಎಂಬ ಕಾರಣಕ್ಕೆ ಕ್ಷೌರಿಕನನ್ನ ಕರೆಸಿ ನನ್ನ ಕೇಶಮುಂಡನ ಮಾಡಿಸಿ ಅಪಮಾನವೆಸಗಿದ್ದಾರೆ ಈ ಹಿನ್ನೆಲೆಯಲ್ಲಿ ದಿಲೀಪ್, ಕಿರಣ್ ಮತ್ತು ಶಿವಾನಂದ  ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಸಂತ್ರಸ್ತ ಯುವತಿ ಒತ್ತಾಯಿಸಿದ್ದಾರೆ.