* ರಿಂಗ್ ರಸ್ತೆ ತ್ಯಾಜ್ಯಕ್ಕೆ ಸಂಬಂಧಿಸಿದ ಮುಡಾ ಸಭೆಯಲ್ಲಿ ಸೂಚನೆ
* ಕಠಿಣ ಕಾನೂನು ನೀತಿ ಅಳವಡಿಸಲು ಸಚಿವರಾದ ಸೋಮಶೇಖರ್ ಸೂಚನೆ
* ಮೈಸೂರನ್ನು ತ್ಯಾಜ್ಯ ಮುಕ್ತ ಮಾಡೋಣ; ಉಸ್ತುವಾರಿ ಸಚಿವರು
* ನಾಳೆ ಗವರ್ನಮೆಂಟ್ ಹೌಸ್ ನಲ್ಲಿ ಸಭೆ
ಮೈಸೂರು: ಒಂದು ಬಾರಿ ನಗರವನ್ನು ಸ್ವಚ್ಛಗೊಳಿಸಿ, ನಿಗದಿತ ಪ್ರದೇಶವಲ್ಲದೆ, ಬೇರೆ ಕಡೆ ಅವೈಜ್ಞಾನಿಕವಾಗಿ ತ್ಯಾಜ್ಯ ಸುರಿಯುವ ಲಾರಿಗಳನ್ನು ಜಪ್ತಿ ಮಾಡಿ ಲಾರಿ ಮಾಲೀಕರನ್ನು ಜೈಲಿಗೆ ಕಳುಹಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಸೂಚನೆ ನೀಡಿದರು.
ಮೈಸೂರು ನಗರದ ರಿಂಗ್ ರಸ್ತೆಗೆ ಸಂಬಂಧಪಟ್ಟಂತೆ ಸ್ವಚ್ಛತೆ ಮತ್ತು ಡಬ್ರಿಸ್ ವಿಚಾರವಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವರು, ಇದೊಂದು ನಿರ್ಲಕ್ಷ್ಯ ಮಾಡುವ ಸಮಸ್ಯೆ ಅಲ್ಲ. ಬೆಂಗಳೂರಿನಲ್ಲಿ ಇಂದಿಗೂ ಈ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಬೆಂಗಳೂರು ಆದಂತೆ ಮೈಸೂರು ಆಗುವುದು ಬೇಡ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಹೀಗಾಗಿ ಕಠಿಣ ಕಾನೂನು ನೀತಿಯನ್ನು ಜಾರಿಗೊಳಿಸಬೇಕು ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಗುರುದತ್ತ ಹೆಗಡೆ ಅವರಿಗೆ ಸೂಚನೆ ನೀಡಿದರು.
ಬೆಂಗಳೂರು ನೀತಿಯೇ ಸರಿ; ಸಚಿವರ ಅಭಿಮತ
ಹೀಗೆ ಎಲ್ಲೆಂದರಲ್ಲಿ ಕಸ ಸುರಿಯುವ ಲಾರಿಗಳ ಮೇಲೆ ಬೆಂಗಳೂರಿನಲ್ಲಿ ದಂಡ ವಿಧಿಸುವ ಹಾಗೂ ಮಾಲೀಕರನ್ನು ಜೈಲಿಗೆ ಕಳುಹಿಸುವ ನೀತಿಯನ್ನು ಜಾರಿಗೆ ತಂದಿದ್ದರಿಂದ ಅಲ್ಲಿ ಈಗ ಇಂತಹ ಚಟುವಟಿಕೆಯಲ್ಲಿ ಇಳಿಮುಖವಾಗುತ್ತಿದೆ. ಇದಕ್ಕಾಗಿ ಭಯದ ವಾತಾವರಣ ನಿರ್ಮಾಣ ಮಾಡಲೇಬೇಕು. ಇದಕ್ಕೆ ಬೆಂಗಳೂರಿನ ನೀತಿಯೇ ಸರಿ. ಮೈಸೂರು ಪೊಲೀಸ್ ಆಯುಕ್ತರ ಸಹಕಾರವೂ ಇದಕ್ಕೆ ಬೇಕು. ಕಾನೂನಿನಲ್ಲಿ ಕೆಲವು ಬದಲಾವಣೆ ತರುವ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕು ಎಂದು ಸಚಿವರು ತಿಳಿಸಿದರು.
ಮೈಸೂರನ್ನು ತ್ಯಾಜ್ಯ ಮುಕ್ತ ಮಾಡೋಣ; ಸಚಿವ ಸೋಮಶೇಖರ್
ಬೆಂಗಳೂರಿನಲ್ಲಿ ಒಂದೊಂದೇ ಕಡೆ ಸರಿಮಾಡಿಕೊಂಡು ಬರಲಾಗಿತ್ತಿದ್ದು, ಒಮ್ಮೆ ಕಸ ಹೊಯ್ದ ಮೇಲೆ ಟಾರ್ಪಲ್ ಹಾಕುವುದು, ರಾಸಾಯನಿಕ ಸಿಂಪಡಣೆ ಮಾಡುವುದು ಸೇರಿದಂತೆ ಯಾವುದೇ ರೀತಿಯ ದುರ್ವಾಸನೆ ಬರದಂತೆ ತಡೆಯಲಾಗುತ್ತಿದೆ. ಹೀಗಾಗಿ ಈಗಲೇ ಎಚ್ಚೆತ್ತುಕೊಳ್ಳೋಣ. ಮೈಸೂರಿನಲ್ಲಿಯೂ ಇಂತಹ ಪ್ರಯತ್ನ ಮಾಡಿ ತ್ಯಾಜ್ಯ ಮುಕ್ತ ಮಾಡೋಣ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಡಬ್ರೀಸ್ ಫ್ಯಾಕ್ಟರಿಗಳು ಎಲ್ಲಿಲ್ಲಿ ಇವೆಯೋ ಅಲ್ಲಲ್ಲಿ ಸುತ್ತಮುತ್ತ ತಂಡವನ್ನು ನಿಯೋಜಿಸಿ ಅಕ್ರಮವಾಗಿ ತ್ಯಾಜ್ಯ ಸುರಿಯುತ್ತಿರುವವರನ್ನು ಗುರುತಿಸಬೇಕು. ಇದಕ್ಕೆ ಪೊಲೀಸ್ ಇಲಾಖೆ, ಮುಡಾ, ಕಾರ್ಪೋರೇಶನ್ ಸೇರಿ ಹಲವು ಇಲಾಖೆಗಳ ತಂಡವನ್ನು ರಚನೆ ಮಾಡಿ ನಿಯೋಜಿಸಬೇಕು ಎಂದು ಸಚಿವರಾದ ಸೋಮಶೇಖರ್ ಸೂಚನೆ ನೀಡಿದರು.
ನಾಳೆ ಗವರ್ನಮೆಂಟ್ ಹೌಸ್ ನಲ್ಲಿ ಸಭೆ
ರಿಂಗ್ ರಸ್ತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಮಂಗಳವಾರ ಬೆಳಗ್ಗೆ 9.45 ಗಂಟೆಗೆ ಗವರ್ನಮೆಂಟ್ ಹೌಸ್ ನಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವ ನಿರ್ಧಾರಕ್ಕೆ ಬರಲಾಯಿತು.
ಎಲ್ಲರೂ ಒಂದಾದರೆ ಮಾತ್ರ ಸಮಸ್ಯೆಗೆ ಪರಿಹಾರ
ನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪಾಲಿಕೆಯವರು ಒಂದಾಗಿ ಸೇರಿ ಕಾರ್ಯನಿರ್ವಹಿಸಬೇಕಿದೆ. ಒಬ್ಬರಿಗೊಬ್ಬರಿಗೆ ಸಹಕಾರ ಇಲ್ಲದಿದ್ದರೆ ಕಷ್ಟ. ರಿಂಗ್ ರಸ್ತೆ ಸುತ್ತ ಸುರಿಯಲಾಗುತ್ತಿರುವ ಕಸವನ್ನು ನಿಯಂತ್ರಣ ಮಾಡಬೇಕೆಂದರೆ
ಒಂದು ತಂಡವಾಗಿ ಕೆಲಸಮಾಡಬೇಕು. ಪಿಡಬ್ಲ್ಯುಡಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಸಂಬಂಧಪಟ್ಟವರ ಸಹಕಾರವನ್ನು ಪಡೆದುಕೊಂಡು ಸ್ವಚ್ಛತೆ ಹಾಗೂ ಡಬ್ರೀಸ್ ಗೆ ಸಂಬಂಧಪಟ್ಟಂತೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ಕೇಳಿಬಂದವು.
ಸಂಸದರಾದ ಪ್ರತಾಪ್ ಸಿಂಹ, ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್, ಶಾಸಕರಾದ ಎಲ್.ನಾಗೇದ್ರ, ತನ್ವೀರ್ ಸೇಠ್, ಮುಡಾ ಆಯುಕ್ತರಾದ ನಟೇಶ್, ಕಾರ್ಪೋರೇಶನ್ ಆಯುಕ್ತರಾದ ಗುರುದತ್ತ ಹೆಗಡೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.