ದೀಪಾವಳಿ ಹಬ್ಬವನ್ನು ಆಶ್ವಯುಜ ಮಾಸದ ಕೃಷ್ಣ ಪಕ್ಷದಲ್ಲಿ ಆಚರಿಸುತ್ತೀವಿ. ದೀಪಾವಳಿ ಅಂದರೆ ೩-೪ ದಿನದ ಹಬ್ಬ.
ತ್ರಯೋದಶಿ ದಿನ – ನೀರು ತುಂಬುವ ಹಬ್ಬ 13/11/2020
ಚತುರ್ದಶಿ ದಿನ – ನರಕ ಚತುರ್ದಶಿ ಇಂದು ಅಮಾವಾಸ್ಯೆ ಕೂಡಾ ಇದೆ – ಇಂದೆ ಧನ ಲಕ್ಷ್ಮೀ ಪೂಜೆ ಮಾಡಬೇಕು 14/11/2020
ಲಕ್ಷೀ ಪೂಜೆ ಸಮಯ
● 5:28PM TO 7:25PM
● 11:54PM TO 12:35AM ಈ ಸಮಯದಲ್ಲಿ ಲಕ್ಷೀ ಪೂಜೆ ಮಾಡಿದರೆ ತುಂಬಾ ಶ್ರೇಷ್ಠ
ಅಮಾವಾಸ್ಯೆ 15/11/2020
ಸಮಯ 14/11/2020 ರಂದು ಪ್ರಾರಂಭ(2:17PM TO 10:36AM)15/11/2020 ಬೆಳಿಗ್ಗೆ 10:36ರವರಿಗೆ ಅಮವಾಸ್ಯೆಯೂ ಇರುತ್ತದೆ…
ಆದ್ದರಿಂದ 14 ತಾರಿಖನಂದು ಲಕ್ಷೀ ಪೂಜೆ ಮಾಡಬೇಕು
ಪಾಡ್ಯ ದಿನ – ಬಲಿ ಪಾಡ್ಯಮಿ /ಬಲೀಂದ್ರನ ಪೂಜೆ 16/11/2020
ನೀರು ತುಂಬುವ ಹಬ್ಬ – 13/11/2020
ಹೆಸರೇ ಹೇಳುವಂತೆ ನೀರನ್ನು ಸಂಗ್ರಹಿಸುವ ದಿನ. ಈ ದಿನ ಸ್ನಾನದ ಮನೆ, ಬಚ್ಚಲನ್ನು ಸ್ವಚ್ಛಮಾಡಿ, ಮಾರನೆಯ ದಿನದ ಅಭ್ಯಂಜನಕ್ಕೆ ನೀರು ಹಿಡಿದು ಇಡುತ್ತಾರೆ. ಕೊಳೆಯನ್ನು ಹೋಗಿಸಿ ಮನೆಯನ್ನು ಶುಭ್ರಮಾಡುವಂತೆ , ನಮ್ಮ ಮನಸಿನಲ್ಲಿರುವ ಕೆಟ್ಟ ವಿಷಯಗಳನ್ನು ತೊಲಗಿಸಿ ನಿರ್ಮಲವಾಗಿ ಇಟ್ಟುಕೊಳ್ಳಿ ಎಂಬ ಸಂಕೇತ ಇದಾಗಿದೆ. ಹಿಂದಿನ ಕಾಲದಲ್ಲಿ ತುಂಬಿದ ಸಂಸಾರ, ಮನೆಯಲ್ಲಿ ಬಹಳ ಜನ ಇರುತ್ತಿದ್ದರು. ಎಲ್ಲರೂ ಒಂದೇ ದಿನ ಅಭ್ಯಂಜನ ಮಾಡಬೇಕಾದರೆ ಸಾಕಷ್ಟು ನೀರು ಮೊದಲೇ ಶೇಖರಿಸಿ ಇಡಬೇಕಿತ್ತು. ಅದಕ್ಕೆ ಈ ದಿನವನ್ನು ನೀರು ತುಂಬುವ ಹಬ್ಬವೆಂದು ಆಚರಿಸುವ ವಾಡಿಕೆ.
ನರಕ ಚತುರ್ದಶಿ ಹಾಗೂ ಅಮವಾಸ್ಯೆಯ ಲಕ್ಷೀ ಪೂಜೆ 14/11/2020
ದಿನ ಬೆಳಿಗ್ಗೆ ಮನೆಯವರೆಲ್ಲ ಎಣ್ಣೆ ಶಾಸ್ತ್ರ ಮಾಡಿ ಅಭ್ಯಂಜನ ಸ್ನಾನ ಮಾಡುವ ಪದ್ಧತಿ. ಶ್ರೀ ಕೃಷ್ಣನು ನರಕಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದ ನೆನಪಿನ ದಿನ. ಈ ವಿಜಯವನ್ನು ಆಚರಿಸುತ್ತೀವಿ.
ಅಮಾವಾಸ್ಯೆ.ಧನಲಕ್ಷ್ಮೀ ಪೂಜೆ
ಅಮಾವಾಸ್ಯೆ ದಿನ ಮಾಡುತಾರೆ. ಈ ಪೂಜೆಯನ್ನು ಸಾಯಂಕಾಲ ಮಾಡಬೇಕು. ದೇವರ ಮನೆ ಅಥವಾ ಪೂಜೆ ಮಾಡುವ ಸ್ಥಳವನ್ನು ರಂಗೋಲಿ ಹಾಕಿ ಅಲಂಕರಿಸಿ. ಲಕ್ಷ್ಮಿ ದೇವಿ ಫೋಟೋ , ಬೆಳ್ಳಿ ವಿಗ್ರಹ /ಪ್ರತಿಮೆ ಇಟ್ಟುಕೊಳ್ಳಿ. ಇದರ ಜೊತೆಗೆ ನಿಮ್ಮ ಮನೆಯಲ್ಲಿರುವ ದುಡ್ಡು/ಕಾಸು/ನಾಣ್ಯಗಳು ಮತ್ತು ವಡವೆ/ಆಭರಣಗಳನ್ನೂ ದೇವರ ಜೊತೆ ಇಟ್ಟು ಪೂಜೆ ಮಾಡಿ. ಮೊದಲು ಗಣಪತಿ ಪೂಜೆ, ನಂತರ ಮಹಾಲಕ್ಷ್ಮಿ ಪೂಜೆ.
ಸಕಲ ಅಷ್ಟ ಐಶ್ವರ್ಯಗಳು ಹಾಗೂ ಸಂಪತ್ತಗಳು ಕರುಣಿಸಲಿ ಎಂದು ನಾವು ಪ್ರಾರ್ಥಿಸುತ್ತೆವೆ.
ನಾವೆಲ್ಲರೂ ಈ ಲಕ್ಷೀ ಪೂಜೆಯನ್ನು ಭಕ್ತಿಯಿಂದ ಆಚರಿಸೋಣ.
ಅಮವಾಸ್ಯೆ 15/11/2020
ಅಮಾವಾಸ್ಯೆ ಮಾರನೆಯ ದಿನ ಕಾರ್ತಿಕ ಮಾಸದ ಪಾಡ್ಯ/ಪ್ರತಿಪತ್ 16/11/2020
ಈ ದಿನ ಬಲಿ ಪಾಡ್ಯಮಿ ಹಬ್ಬ. ಬಲಿ ಚಕ್ರವರ್ತಿಯು ಭೂಲೋಕ ಆಳುತ್ತಿದ್ದ ರಾಜ. ವಿಜಯಶಾಲಿಯಾದ ರಾಜನು ದೇವಲೋಕವನ್ನೂ ಗೆದ್ದುಕೊಂಡು ತನ್ನದಾಗಿಸಿಕೊಂಡನು. ಇದರಿಂದ ಇಂದ್ರಾದಿ ದೇವತೆಗಳು ದೇವಲೋಕವನ್ನು ಬಿಡುವಂತಾಯಿತು. ಅವರು ವಿಷ್ಣುವಿನಲ್ಲಿ ಮೊರೆ ಹೋದರು. ಆಗ ಶ್ರೀ ವಿಷ್ಣು ವಾಮನ ಅವತಾರ ತಾಳಿ ಬಲಿಯ ಬಳಿ ಬಂದು, ತನಗೆ ೩ ಹೆಜ್ಜೆ ಇಡುವಷ್ಟು ಜಾಗ ಕೊಡು ಎಂದು ಕೇಳಿದನು. ಒಂದು ಹೆಜ್ಜೆಯಿಂದ ಭೂಲೋಕವೆಲ್ಲ ಮುಚ್ಚಿತು, ಇನ್ನೊಂದು ಹೆಜ್ಜೆಯಿಂದ ಆಕಾಶವೆಲ್ಲ ಮುಚ್ಚಿ ಹೋಯಿತು. ಮೂರನೆಯ ಹೆಜ್ಜೆ ಎಲ್ಲಿ ಇಡಲಿ ಎಂದು ವಾಮನ ಕೇಳಲು, ಬಲಿಯು ನನ್ನ ತಲೆ ಮೇಲೆ ಇಡು ಎಂದನು. ಹೀಗ ವಿಷ್ಣುವು ಬಲಿಯ ತಲೆಯನ್ನು ಮೆಟ್ಟಿ ಅವನನ್ನು ಪಾತಾಳಕ್ಕೆ ತುಳಿದನು. ಬಲಿಯ ಧರ್ಮ ನಿಷ್ಠೆಯನ್ನು ಮೆಚ್ಚಿ ವಿಷ್ಣುವು ಅವನಿಗೆ ಪಾತಾಳದ ಅಧಿಪತ್ಯ ಕೊಟ್ಟನು. ಜೊತೆಗೆ ವರುಷಕ್ಕೆ ಒಂದು ದಿನ ಭೂಲೋಕಕ್ಕೆ ಮರಳಿ ಬಂದು, ಭೂಲೋಕವನ್ನು ಆಳುವಂತೆ ಅನುಗ್ರಹಿಸಿದನು. ಇದೆ ಬಲಿಪಾಡ್ಯಮಿ.
ಈ ದಿನ ಗೊಪೂಜೆಯೂ ನಡೆಯುತ್ತದೆ. ಮನೆಯಲ್ಲಿ ಬೆಳ್ಳಿ ಕೃಷ್ಣ, ಬೆಳ್ಳಿ ಹಸು ಪ್ರತಿಮೆಗಳಿಗೆ ಪೂಜೆ ಮಾಡುತ್ತಾರೆ & ಹಸುವಿನ ಸಗಣಿಯ ಉಂಡೆಗೆ ಚೆಂಡುಹೂವು ಇಡುತ್ತಾರೆ. ಇದು ಗಣಪತಿಯ ಸ್ವರೂಪ ಎಂದು ಭಾವಿಸುತ್ತಾರೆ. ಬಲಿ ಚಕ್ರವರ್ತಿಯ ರಾಜ್ಯವು ಐಶ್ವರ್ಯ, ಅಭಿವೃದ್ಧಿ ಹೊಂದಿತ್ತು.
ಅಂತಯೇ ನಮ್ಮ ಬಾಳಲ್ಲೂ ಲಕ್ಷ್ಮೀ ಸ್ಥಿರವಾಗಿ ನೆಲಿಸಿ, ಅಭಿವೃದ್ಧಿ ಸಿಗಲಿ ಎಂದು ಪ್ರಾರ್ಥನೆ ಮಾಡುವ ಪದ್ಧತಿ ಇದು.
ದೀಪಾವಳಿ ಹಬ್ಬದಲ್ಲಿ ನೇಮ, ಉಪವಾಸ, ವ್ರತ ಕಥೆ ಇವ್ಯಾವುದೂ ಇಲ್ಲ. ಹಾಗಾಗಿ ಇದು ಸಂತಸ, ಸಡಗರ, ಸಂಭ್ರಮದ ಹಬ್ಬ
ಬೆಳಿಗ್ಗೆ ಎದ್ದು ಅಭ್ಯಂಜನ ಸ್ನಾನ ಮಾಡಿ, ದೇವರ ಪೂಜೆ ಮಾಡಿ,ಹೊಸ ಉಡುಗೆ ಹಾಕಿಕೊಂಡು, ರುಚಿಯಾದ ಹಬ್ಬದ ಅಡಿಗೆ ಊಟ ಮಾಡಿ, ವಿಧ ವಿಧವಾದ ಪಟಾಕಿ ಹೊಡೆದು ಆನಂದಿಸುವ ಹಬ್ಬ ಇದು.
ದೀಪಾವಳಿಯ ಬೆಳಕು ಎಲ್ಲರ ಬಾಳನ್ನೂ ಪ್ರಕಾಶಗೊಳಿಸಲಿ ಎಂದು ಪ್ರಾರ್ಥಿಸುತ್ತೇವೆ.
ಲಕ್ಷೀ ಪೂಜಾ ವಿಧಾನ
ಪೂಜೆ ಎಂದರೆ ಹಲವಾರು ವಿಧಿ-ವಿಧಾನಗಳು, ಮಂತ್ರಗಳು ,ಇವುಗಳ ತಲೆ-ಬುಡ ಗೊತ್ತಿಲ್ಲ ಅಂತ ಪೇಚಾಡುತ್ತ ಇರುತ್ತಾರೆ.
ಈ ಗೊಂದಲದಲ್ಲಿ ಸಿಕ್ಕಿ ಹಾಕಿಕೊಳ್ಳ ಬೇಕಿಲ್ಲ. ಪೂಜಾ ವಿಧಾನವನ್ನು ಸರಳವಾಗಿ ವಿವರಿಸಬಹುದು. ದೇವರ ಪೂಜೆಯನ್ನು ಅತಿಥಿ ಸತ್ಕಾರಕ್ಕೆ ಹೋಲಿಸಿಕೊಳ್ಳಿ . ದೇವರು ನಿಮ್ಮ ಮನೆಗೆ ಬಂದಿರುವ ಅತಿಥಿ. ಅತಿಥಿಗಳಿಗೆ ಹೇಗೆ ಉಪಚಾರ ಮಾಡುತ್ತಿರೋ , ಹಾಗೆಯೆ ದೇವರಿಗೆ ಪೂಜೆ ರೂಪದಲ್ಲಿ ಉಪಚಾರ ಮಾಡಬೇಕು ಅಷ್ಟೆ.
ಮೊದಲು ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ ದೇವರನ್ನು ಆಹ್ವಾನ ಮಾಡುವುದು.
ಸಂಕಲ್ಪ – ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ಈ ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ, ನಕ್ಷತ್ರವನ್ನು ಹೆಸರಿಸಬೇಕು. ನೀವು ಪೂಜೆ ಮಾಡುತ್ತಿರುವ ಲಕ್ಷೀ ದೇವಿಗೆ ಭಕ್ತಿಯಿಂದ ಧ್ಯಾನ ಮಾಡಿ ಆವಾಹನೆ ಮಾಡುವುದು.
ಸಾಮಾನ್ಯವಾಗಿ ಷೋಡಶೋಪಚಾರದಿಂದ ಪೂಜೆ ಮಾಡಿ ಅಂತ ನೀವು ಕೇಳಿರಬಹುದು. ಷೋಡಶ ಅಂದರೆ 16. ಹದಿನಾರು ಬಗೆಯಿಂದ ದೇವರಿಗೆ ಉಪಚಾರ ಮಾಡಿ ಎಂದರ್ಥ. ಇವುಗಳ ವಿವರ ಕೆಳಗಿದೆ:
1.ಆವಾಹನೆ – ಅಂದರೆ ಆಹ್ವಾನ . ದೇವರನ್ನು ನಿಮ್ಮ ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ ಆಹ್ವಾನ ಮಾಡುವುದು.
2.ಆಸನ- ಅಂದರೆ ಕುಳಿತುಕೊಳ್ಳುವ ಜಾಗ . ದೇವರ ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಆಸೀನ ಮಾಡಿಸುವುದು.
3.ಪಾದ್ಯ – ಕಾಲು ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.
4.ಅರ್ಘ್ಯ – ಕೈ ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.
5.ಆಚಮನ – ಕುಡಿಯುವುದಕ್ಕೆ ನೀರು ಕೊಡುವುದು.
6.ಸ್ನಾನ – ಶುದ್ಧೋದಕ (ನೀರು) ಮತ್ತು ಪಂಚಾಮೃತದಿಂದ ಸ್ನಾನ ಮಾಡಿಸುವುದು.
7.ವಸ್ತ್ರ – ಧರಿಸಲು ಉಡುಪು ಕೊಡುವುದು . ಗೆಜ್ಜೆವಸ್ತ್ರಗಳನ್ನೂ ದೇವರಿಗೆ ಇಡುವುದು ಆಭರಣವನ್ನು (ಬಳೆ ಬಿಚ್ಚೋಲೆ )ಸಮರ್ಪಿಸುವುದು.
8.ಹರಿದ್ರ, ಕುಂಕುಮ, ಗಂಧ, ಅಕ್ಷತ – ಅರಿಶಿನ , ಕುಂಕುಮ, ಶ್ರೀಗಂಧ , ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು.
9.ಪುಷ್ಪ ಮಾಲ – ಹೂವು, ಪತ್ರೆಗಳಿಂದ ದೇವರಿಗೆ ಅಲಂಕಾರ ಮಾಡುವುದು.
10. ಅರ್ಚನೆ/ಅಷ್ಟೋತ್ತರ – ನೂರೆಂಟು ನಾಮಗಳಿಂದ ದೇವರನ್ನು ಸ್ಮರಣೆ ಮಾಡುವುದು.
11.ಧೂಪ – ಪರಿಮಳಯುಕ್ತವಾದ ಧೂಪವನ್ನು ಅರ್ಪಿಸುವುದು.
12.ದೀಪ – ದೀಪ ಸಮರ್ಪಣೆ ಮಾಡುವುದು.
13.ನೈವೇದ್ಯ, ತಾಂಬೂಲ – ದೇವರಿಗೆ ವಿಧ ವಿಧ ಭಕ್ಷ್ಯಗಳ ಭೋಜನ ಅರ್ಪಿಸುವುದು . ಊಟದ ನಂತರ ವೀಳೆಯ, ಅಡಿಕೆ, ತೆಂಗಿನಕಾಯಿ ತಾಂಬೂಲ ಕೊಡುವುದು.
14. ನೀರಾಜನ – ಕರ್ಪುರದಿಂದ ಮಂಗಳಾರತಿ ಮಾಡುವುದು.
15. ನಮಸ್ಕಾರ – ಪ್ರದಕ್ಷಿಣೆ ಮಾಡಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು.
16. ಪ್ರಾರ್ಥನೆ – ನಿಮ್ಮ ಇಷ್ಟಗಳನ್ನು ನಡೆಸಿ ಕೊಡು ಎಂದು ಗಣೇಶ ಹಾಗೂ ಲಕ್ಷೀ ದೇವಿಗೆ ಅರಿಕೆ / ಪ್ರಾರ್ಥನೆ ಮಾಡುವುದು.
ಪೂಜೆಯ ನಂತರದೇವರು ಅನುಗ್ರಹಿಸಿರುವ ಅರಿಶಿನ, ಕುಂಕುಮ, ನೈವೇದ್ಯವನ್ನು ಪ್ರಸಾದ ರೂಪವಾಗಿ ಸ್ವೀಕಾರ ಮಾಡುವುದು.
*ಹೀಗೆ ಕ್ರಮವಾಗಿ ಲಕ್ಷೀ ಪೂಜೆ ಮಾಡಿ ದೇವಿಯನ್ನು ಸಂತೃಪ್ತಿ ಪಡಿಸಿದರೆ, ಲಕ್ಷೀ ದೇವಿಯು ತನ್ನ ಕೃಪೆಯನ್ನು ನಮ್ಮ ಮೇಲೆ ಅಪಾರವಾಗಿ ಅನುಗ್ರಹಿಸುತ್ತಾಳೆ.