-ಚಿದ್ರೂಪ ಅಂತಃಕರಣ
75ನೇ ಸ್ವಾತಂತ್ರ್ಯೋತ್ಸವದ ಆಚರಣೆಯ ಸನ್ನದ್ಧಿನಲ್ಲಿ ಖಾದಿ ಗ್ರಾಮೋದ್ಯೋಗಕ್ಕೆ ಕೇಂದ್ರ ಸರ್ಕಾರ ಮಹಾ ಒಡೆತವನ್ನೇ ನೀಡಿದೆ. ಎಲ್ಲಾ ಕ್ಷೇತ್ರಗಳಲ್ಲೂ, ಎಲ್ಲಾ ಉತ್ಪನ್ನಗಳಲ್ಲೂ ಖಾಸಗಿ ಮತ್ತು ವಿದೇಶಿ ಬಂಡವಾಳಶಾಹಿಗಳ ಆಶೋತ್ತರಗಳಿಗೆ ಮಣೆಹಾಕುತ್ತಿರುವ ಕೇಂದ್ರ ಸರ್ಕಾರ ಇದೀಗ ತ್ರಿವರ್ಣ ಧ್ವಜದ ಉತ್ಪಾದನೆಯಲ್ಲೂ ಬಂಡವಾಳಶಾಹಿಗಳಿಗೆ ಲಾಭ ಮಾಡಿಕೊಟ್ಟಿದೆ. ಹೀಗೆಯೇ ಮುಂದುವರೆದರೆ ಕಾರ್ಲ್ಮಾರ್ಕ್ಸ್ನ ಸಿದ್ಧಾಂತ ಮತ್ತೆ ಎಲ್ಲೆಡೆ ಧ್ವನಿಯಾಡುತ್ತದೆ ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷ ಭುಗಿಲೇಳುತ್ತದೆ. ಎಲ್ಲೆಡೆಯ ಹೋರಾಟಗಳು ಚಳವಳಿಗಳು ಈ ತೆರನಾದ ಯಾವುದೇ ಸರ್ಕಾರದ ಅಡಿಗೆ ಕಿಚ್ಚಾಕುವುದಂತೂ ಖಂಡಿತ.
ಭಾರತದ ಧ್ವಜ ಸಂಹಿತೆ 2002 ಮತ್ತು 1971ರ ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯಿದೆಯನ್ನು ಜುಲೈ 20, 2022ರ ಆದೇಶದ ಮೂಲಕ ಹೊಸದಾಗಿ ತಿದ್ದುಪಡಿ ಮಾಡಲಾಗಿದೆ. ಈ ಹಿಂದೆ, ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾತ್ರ ತ್ರಿವರ್ಣ ಧ್ವಜವನ್ನು ಹಾರಿಸಲು ಸಮ್ಮತಿಸಲಾಗಿತ್ತು. ಆದರೀಗ ಧ್ವಜವನ್ನು ತೆರೆದ ಸ್ಥಳಗಳಲ್ಲಿ, ‘ಹರ್ ಘರ್ ತಿರಂಗ’ ಅಭಿಯಾನದೊಂದಿಗೆ ಆಗಸ್ಟ್ 13ರಿಂದ 15ರವರೆಗೆ ದೇಶದ ಪ್ರತೀ ಮನೆಯ ಮೇಲೂ ಹಗಲು – ರಾತ್ರಿ ಪೂರ್ತಿ ಧ್ವಜ ಹಾರಿಸುವ ಬದಲಾವಣೆಯನ್ನು ಮಾಡಲಾಗಿದೆ. ಈ ಮೊದಲು ಯಂತ್ರದಿಂದ ಧ್ವಜ ತಯಾರಿಸುವುದನ್ನು ಮತ್ತು ಧ್ವಜ ತಯಾರಿಕೆಯಲ್ಲಿ ಪಾಲಿಸ್ಟರ್ ಬಳಕೆಯನ್ನು ನಿಷೇಧಿಸಲಾಗಿತ್ತು. ಆದರೀಗ ಪಾಲಿಸ್ಟಾರ್ ಉತ್ಪನ್ನಕ್ಕೆ ಮತ್ತು ಯಂತ್ರಗಳಿಂದ ತಯಾರಿಸಿದ ಧ್ವಜಗಳಿಗೆ ಮಾನ್ಯತೆ ನೀಡಲಾಗಿದೆ. ಜೊತೆಗೆ ರಾಷ್ಟ್ರಧ್ವಜವನ್ನು ಕೈಯಿಂದ ನೂಲುವ ಮತ್ತು ಕೈಯಿಂದ ನೇಯ್ದ ಅಥವಾ ಯಂತ್ರದಿಂದ ತಯಾರಿಸಿದ ಹತ್ತಿ, ಪಾಲಿಸ್ಟರ್, ಉಣ್ಣೆ, ರೇಷ್ಮೆ, ಖಾದಿಯನ್ನು ಬಳಸಿ ತಯಾರಿಸಲಾಗುವುದು ಎಂದು ಆದೇಶಿಸಲಾಗಿದೆ.
ಧ್ವಜ ಸಂಹಿತೆಗೆ ಹೊಸದಾಗಿ ತಂದಿರುವ ತಿದ್ದುಪಡಿ ಉದ್ದೇಶ ಇದೀಗ ಎಲ್ಲರಿಗೂ ಅರ್ಥವಾಗಬೇಕಿದೆ. ಎಲ್ಲವನ್ನೂ ತನ್ನ ಸ್ವಂತ ಲಾಭಕಿಟ್ಟು ನೋಡುತ್ತಿರುವ ಕೇಂದ್ರ ಸರ್ಕಾರದ ಮನಸ್ಥಿತಿಯು ವ್ಯಾವಹಾರಿಕ ಕುತಂತ್ರತನ ಎಂದು. ಈ ದೃಷ್ಟಿ ಗಾಂಧಿ ಕನಸಿನ ಕೂಸಾದ ಗ್ರಾಮಸ್ವರಾಜ್ಯ ಮತ್ತು ಗುಡಿ ಕೈಗಾರಿಕೆಗಳಿಗೆ ಉತ್ತೇಜನ ಹಾಗೂ ದೇಶಿ ಉತ್ಪನ್ನದ ಬಳಕೆಗೆ ವಿರುದ್ಧ ನಿಲುವಾಗಿದೆ. ದೇಶದಲ್ಲಿ ರಾಷ್ಟ್ರಧ್ವಜ ಸಿದ್ಧಪಡಿಸೋ ಏಕೈಕ ಸಂಸ್ಥೆ ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಯಾಗಿದೆ. ಈ ಸಂಸ್ಥೆ ಮಾನಕ ಬ್ಯೂರೋದಿಂದ ಮಾನ್ಯತೆ ಪಡೆದ ದೇಶದ ಏಕೈಕ ರಾಷ್ಟ್ರದ್ವಜ ತಯಾರಿಕಾ ಸಂಸ್ಥೆ ಇದಾಗಿದ್ದು ಕರ್ನಾಟಕದಲ್ಲಿರುವುದು ಕನ್ನಡಿಗರ ಹೆಮ್ಮೆಯ ಸಂಗತಿ. ಹೀಗಿರುವಾಗ ಕೇಂದ್ರ ಸರ್ಕಾರ ಈ ಬಾರಿ ಯಾರು ಬೇಕಾದರೂ, ಯಾವ ಬಟ್ಟೆಯಲ್ಲಿ ಬೇಕಾದರೂ ರಾಷ್ಟ್ರ ಧ್ವಜವನ್ನು ಸಿದ್ಧಗೊಳಿಸಬಹುದು ಎಂದು ಕಾನೂನು ತಿದ್ದುಪಡಿ ಮಾಡಿರುವುದು ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಯ (Khadi Village Industries Institute) ಬೆಳೆವಣಿಗೆಯನ್ನು ನಾಶಪಡಿಸಿದೆ. ಹಾಗೆಯೇ ಕನ್ನಡಿಗರು ಧ್ವಜ ನಿರ್ಮಾಣದಲ್ಲಿ ನೀಡುತ್ತಿದ್ದ ಭಾರತಾಂಬೆಯ ಸೇವೆಗೂ ಪೆಟ್ಟುಕೊಟ್ಟು ಪ್ರಾದೇಶಿಕ ರಾಜಕಾರಣ ಮೆರೆದಿದೆ. 75ರ ಸಂಭ್ರಮಕ್ಕೆ ದೇಶವೇ ಸಂತೋಷ ಮತ್ತು ಕೂತೂಹಲದಲ್ಲಿ ಇರುವಾಗಲೇ ಧ್ವಜ ತಯಾರಿಕಾ ಘಟಕಕ್ಕೆ ಸಿಡಿಲು ಬಡಿದಂತಾಗಿದ್ದು; ಸರ್ಕಾರದ ಈ ನಿರ್ಧಾರದಿಂದ ಖಾದಿ ಗ್ರಾಮೋದ್ಯೋಗ ಸಂಸ್ಥೆಯು ಅಕ್ಷರಶಃ ಬೀದಿಗೆ ಬರೋ ಸ್ಥಿತಿ ನಿರ್ಮಾಣವಾಗಲಿದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗ ಒದಗಿಸಿದ್ದ ಗ್ರಾಮೋದ್ಯೋಗ ಸಂಸ್ಥೆ ಇದೀಗ ಮುಚ್ಚುವ ಆತಂಕ ಎದುರಿಸುತ್ತಿದೆ. ಇದರೊಂದಿಗೆ ಸಾವಿರಾರು ಜನರು ನಿರುದ್ಯೋಗಿಗಳಾಗುವ ಭಯದಲ್ಲಿದ್ದಾರೆ.
“ಸರ್ಕಾರದ ಮಾತು ನಂಬಿ ನಾವು ಧ್ವಜ ತಯಾರಿಸಿದ್ದೇವೆ. ಪ್ರತಿ ವರ್ಷ ಜುಲೈ ತಿಂಗಳಲ್ಲಿ 70 ರಿಂದ 80 ಲಕ್ಷ ರೂಪಾಯಿ ಧ್ವಜ ಮಾರಾಟ ಮಾಡುತ್ತಿದ್ದೆವು. ಆದರೆ ಈ ವರ್ಷ ಕೇವಲ 12 ಲಕ್ಷ ರೂಪಾಯಿ ಧ್ವಜ ಮಾರಾಟವಾಗಿದೆ. ಆದರೆ ಕೋಟ್ಯಾಂತರ ರೂಪಾಯಿ ಮೌಲ್ಯದ ಧ್ವಜಗಳ ಸಂಗ್ರಹ ಇದ್ದಲ್ಲಿಯೇ ಇದೆ. ಅವುಗಳ ಮಾರಾಟ ಹೇಗೆಂಬುದು ತೋಚದಂತಾಗಿದೆ ಎಂದು ಬೆಂಗೇರಿ ಖಾದಿ ಸಂಸ್ಥೆಯು ಸುದ್ದಿ ಮಾಧ್ಯಮವೊಂದರಲ್ಲಿ ತಮ್ಮ ದುಸ್ಥಿತಿಯನ್ನು ವ್ಯಕ್ತಪಡಿಸಿರುವುದು ವಿಷಾದನೀಯ.
ಭಾರತ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಬ್ರಿಟಿಷರನ್ನು ಭಾರತದಿಂದ ಬಹಿಷ್ಕಾರ ಹಾಕಲು ಬಳಸಿದ ಮಹಾತಂತ್ರಗಳಲ್ಲಿ ಖಾದಿ ಉದ್ಯಮ ಅಥವಾ ಸ್ವದೇಶಿ ಉತ್ಪನ್ನದ ಬಳಕೆ ಮಹತ್ವದ್ದು. ಆದರೆ ಇದೀಗ ವಿದೇಶಿ ಉತ್ಪನ್ನಗಳಿಗೆ ಮಣೆಹಾಕಿ ಖಾದಿ ಉದ್ಯಮವನ್ನು ನಿರ್ಲಕ್ಷಿಸಿ ಅದೇ ವಿದೇಶಿಗರನ್ನು ವ್ಯಾಪಾರದ ದೃಷ್ಟಿಯಿಂದ ಭಾರತಕ್ಕೆ ಮರಳಿ ಕರೆತರುತ್ತಿರುವ ಉದ್ದೇಶ ಆಜಾದೀಕಾ ಅಮೃತ ಮಹೋತ್ಸವದ ವೇಳೆಯಲ್ಲಿ ಪ್ರಮಾದವಾಗಿ ಜರಗುತ್ತಿದೆ. ಈ ಪಾಲಿಸ್ಟಾರ್ ಬಟ್ಟೆಯಲ್ಲಿ ತ್ರಿವರ್ಣ ಧ್ವಜ ತಯಾರಿಸಲು ಮತ್ತು ಧ್ವಜ ತಯಾರಿಕೆಯಲ್ಲಿ ಯಂತ್ರಗಳ ಬಳಕೆಗೆ ಕೇಂದ್ರ ಸರ್ಕಾರ ಮೇಕ್ ಇನ್ ಚೈನಾ ಕಂಪನಿಗಳಿಗೆ ಅವಕಾಶ ಮಾಡಿ ಕೊಡಲೊರಟಿರುವುದು ರಾಷ್ಟ್ರೀಯ ಗೌರವಕ್ಕೆ ಸಂಪೂರ್ಣ ವಿರುದ್ಧವಾಗಿದೆ. ನಮ್ಮ ರಾಷ್ಟ್ರ ಧ್ವಜವನ್ನು ನಮ್ಮ ದೇಶದಲ್ಲಿ ಉತ್ಪಾದಿಸದೇ ಬೇರೆಲ್ಲೋ ಉತ್ಪಾದಿಸುತ್ತಿರುವುದು ನಮ್ಮನ್ನು ಹೆತ್ತ ತಂದೆ-ತಾಯಿಗಳನ್ನು ಎಲ್ಲೋ ಅನಾಥ ಆಶ್ರಮದಲ್ಲಿಟ್ಟು ನೋಡಿಕೊಂಡಂತಾಗುತ್ತದೆ. ಇದರಿಂದ ತ್ರಿವರ್ಣ ಧ್ವಜಕ್ಕೆ ಈ ಬಾರಿ 75ನೇ ಸ್ವಾತಂತ್ರ್ಯೋತ್ಸವದ ಮಹಾ ಸುಗಳಿಗೆಯಲ್ಲಿ ಆಗುತ್ತಿರುವ ಭಾರೀ ಅವಮಾನ ಎಂದೇ ಪರಿಗಣಿಸಬಹುದು.
ಪಾಲಿಸ್ಟಾರ್ ಬಳಕೆ ಈ ದೃಷ್ಟಿಯಲ್ಲಿ ಪರಿಸರ ಸ್ನೇಹಿಯಲ್ಲ ಮತ್ತು ಸ್ವದೇಶಿ ಚಿಂತನೆಯೂ ಅಲ್ಲ. ಯಂತ್ರಗಳಿಗೆ ಮಾನ್ಯತೆ ನೀಡಿರುವುದು ಗುಡಿಕೈಗಾರಿಕೆಗಳ ಜೀವಂತಿಕೆಗೆ ಮಾರಕ ಎನ್ನುವುದು ಸರ್ಕಾರಕ್ಕೆ ಅರಿವಾಗಬೇಕಿದೆ. ಈ ವಿಚಾರವಾಗಿ ತೀವ್ರ ಚಳವಳಿಗೆ ತಲುಪಿ ಸರಿಯಾಗುವ ನಿಟ್ಟಿನಲ್ಲಿ ಹೀಗಾಗಲೇ ಹಿರಿಯ ಸಾಹಿತಿಗಳು, ಲೇಖಕರು, ಹಲವು ಸಂಘ ಸಂಸ್ಥೆಗಳು, ಯುವಕ – ಯುವತಿಯರು, ವಿದ್ಯಾರ್ಥಿಗಳು ಓಗೊಟ್ಟು ಪಣತೊಟ್ಟಿದ್ದಾರೆ. ಹೀಗಾಗಿ ಭಾರತೀಯರ ಮತ್ತು ರಾಷ್ಟ್ರೀಯ ಗೌರವದ ಹಿತದೃಷ್ಟಿಯಲ್ಲಿ ಈ ತಿದ್ದುಪಡಿಯನ್ನು ಈ ಬಾರಿಯ ಸ್ವಾತಂತ್ರ್ಯ ಆಚರಣೆಗೂ ಮುನ್ನ ಹಿಂಪಡೆದರೆ ಸರ್ವೋದಯದ ಒಳಿತೆಂದೇ ಭಾವನೆ.
ಭಾರತವನ್ನು ಈ ದಶಕದಲ್ಲಿ ಭಾರೀ ಬದಲಾವಣೆಗೆ ಒಳಪಡಿಸುತ್ತಿರುವ ಹಿನ್ನಲೆಯಲ್ಲಿ ಎಲ್ಲವೂ ಕೆಡುಕುಗಳೇ ಇವೆ ಎನ್ನುವುದು ಸರಿಯಲ್ಲ ಎಂಬುವುದು ಸಾರ್ವಜನಿಕರಿಗೂ ತಿಳಿದಿದೆ. ಸರ್ಕಾರದ ಹಿತಚಿಂತನೆಗಳಿಗೆ ದೇಶದ ಜನತೆಯ ಬೆಂಬಲವೂ ಇದೆ. ಆದರೆ ಈ ಎಲ್ಲಾ ಬೆಳೆವಣಿಗೆಗಳು ಅಥವಾ ಹೊಸ ಬದಲಾವಣೆಗಳಲ್ಲಿ ಸರ್ಕಾರದ ಸ್ವಾರ್ಥ ಮತ್ತು ನಿರಂಕುಶ ಆಡಳಿತ ಇನ್ನೊಂದು ಬಗೆಯಲ್ಲಿ ಗೋಚರಿಸುತ್ತಿರುವುದು ಸಾರ್ವಜನಿಕರ ಗ್ರಹಿಕೆಗೆ ಹೀಗಾಗಲೇ ದಕ್ಕಿದೆ. ಇದರ ಪರಿಣಾಮ ಪ್ರಜಾಪ್ರಭುತ್ವದ ಆಶೋತ್ತರಗಳಿಗೆ ಯಾರೇ ಅಡ್ಡಿಪಡಿಸಿದರೂ ದೇಶದ ಜನತೆ ಉಗ್ರವಾದ ಆಂದೋಲನಕ್ಕೆ ಸಜ್ಜಾಗುತ್ತಾರೆ ಎನ್ನುವುದಂತೂ ಸತ್ಯ. ಹಾಗಾಗಿ ಭಾರತದಂಥಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಆಡಳಿತಕ್ಕೆ ಬರುವಂತಹ ಯಾವುದೇ ಸರ್ಕಾರ ದೇಶದ ಸಾಂವಿಧಾನಿಕ ನೀತಿಗೆ ಬದ್ಧವಾಗಿದ್ದರೆ ಎಲ್ಲವೂ ಸೌಖ್ಯ.
ಚಿಮಬಿಆರ್ (ಮಂಜುನಾಥ ಬಿ.ಆರ್)
ಯುವಸಾಹಿತಿ, ಸಂಶೋಧಕ, ವಿಮರ್ಶಕ.
ಎಚ್.ಡಿ. ಕೋಟೆ, ಮೈಸೂರು.
ದೂರವಾಣಿ ಸಂಖ್ಯೆ :- 8884684726.
Gmail I’d:-manjunathabr709@gmail.com