ಬೆಂಗಳೂರು: ಬಹಳಷ್ಟು ದಿನಗಳಿಂದ ವಿದ್ಯಾರ್ಥಿಗಳು ಕಾಯುತ್ತಾ ಬಂದಿದ್ದ ಕುತೂಹಲ, ದುಗುಡ ಎಲ್ಲದಕ್ಕೂ ಎಸ್‌ಎಸ್‌ಎಲ್‌ಸಿ ನಡೆಯಲಿದ್ದು, ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಲಾಗಿದೆ ಎಂದು ಹೇಳುವ ಮೂಲಕ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್ ತೆರೆ ಎಳೆದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಿದರೆ ಮಕ್ಕಳಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುವುದರಿಂದ ನಾವು ಪರೀಕ್ಷೆ ಮಾಡದಿರುವುದೇ ಒಳೆತು ಎಂದುಕೊಂಡಿದ್ದೆವು ಆದರೆ, ಈ ನಡುವೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವುದು ಅನಿರ್ವಾಯವಾಗಿದ್ದು, ಈ ವಿಚಾರದಲ್ಲಿ ಎಲ್ಲವೂ ಸರಿ ಎಂದು ಹೇಳಲಾಗುವುದಿಲ್ಲ. ಅಸಮಾಧಾನವಂತು ಇದ್ದೇ ಇರುತ್ತದೆ. ಪರೀಕ್ಷೆ ಮಾಡಲೇಬೇಕು, ಮಾಡಲೇ ಬಾರದು ಎಂಬ ಈ ಎರಡೂ ವಿಚಾರದಲ್ಲೂ ಅಸಮಾಧಾನ ಇದ್ದೆ ಇರುತ್ತದೆ. ಮಾಡಲೇ ಬೇಕು ಎಂದು ಒಂದು ವರ್ಗದ ಜನ ಹೇಳಿದರೆ ಮಾಡಲೇ ಬಾರದು ಎಂದು ಮತ್ತೊಂದು ವರ್ಗದ ಜನ ಹೇಳುತ್ತಾರೆ. ಆದರೂ ಕೆಲವೊಮ್ಮೆ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತೆ ಎಂದರು.

ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. 8 ಲಕ್ಷ 75 ಸಾವಿರ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ತೆಗೆದುಕೊಂಡಿದ್ದಾರೆ. ಪರೀಕ್ಷೆ ಇಲ್ಲದೆ ಅವರ ಕಲಿಕಾ ಮಟ್ಟ ನಿರ್ಧಾರವಾಗೋದು ಕಷ್ಟ. ಕಳೆದ ವರ್ಷ 9 ನೇ ತರಗತಿ ಪರೀಕ್ಷೆ ನಡೆದಿಲ್ಲ. CBSE ನಲ್ಲಿ ಮೂರು ತಿಂಗೊಳಿಗೊಮ್ಮೆ ವಿದ್ಯಾರ್ಥಿಗಳ ಇವ್ಯುಲೇಶನ್ ನಡೆಯುತ್ತೆ. ನಮ್ಮಲ್ಲಿ ಆ ಪದ್ಧತಿ ಇಲ್ಲ. ಹೀಗಾಗಿ ಎರಡು ಪರೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ. ಸಮಾಜ ವಿಜ್ಞಾನ, ಗಣಿತ, ವಿಜ್ಞಾನ- ಈ ಮೂರು ವಿಷಯ ಸೇರಿ ಒಂದು ಪ್ರಶ್ನೆ ಪತ್ರಿಕೆ ಇರುತ್ತೆ. ಪ್ರಶ್ನೆಗಳು ಸರಳವಾಗಿರುತ್ತೆ. ನೇರವಾಗಿರುತ್ತೆ. ಬಹು ಆಯ್ಕೆ ಪ್ರಶ್ನೆಗಳು ಇರುತ್ತೆ ಎಂದು ಹೇಳಿದರು.
ಈ ಬಾರಿ 6 ಸಾವಿರ ಪರೀಕ್ಷಾ ಕೇಂದ್ರಗಳಿವೆ. ಕಳೆದ ವರ್ಷ ಮೂರು ಸಾವಿರ ಮಾತ್ರ ಇದ್ದವು. ಒಂದು ಡೆಸ್ಕ್ ನಲ್ಲಿ ಒಬ್ಬ ವಿದ್ಯಾರ್ಥಿಯನ್ನು ಕೂರಿಸಲಾಗುತ್ತದೆ. ಒಂದು ರೂಮ್ ನಲ್ಲಿ 10 ರಿಂದ 12 ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಆರೋಗ್ಯ ಇಲಾಖೆಯಿಂದ SOP ಬಿಡುಗಡೆ ಆಗುತ್ತೆ. ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡುತ್ತೇವೆ. ಬಿಇಒಗಳ ಮೂಲಕ ಬಹು ಆಯ್ಕೆ ಪ್ರಶ್ನೆಗಳ ಪರೀಕ್ಷೆ ಮಾಡುತ್ತಿದ್ದಾರೆ. ವಾಟ್ಸಪ್ ಮೂಲಕ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆ ಬಗ್ಗೆ ತುಂಬಾ ಚರ್ಚೆ ಆಗ್ತಿದೆ. ಕಳೆದ ವರ್ಷ ಬೇರೆ ಸವಾಲನ್ನು ಎದುರಿಸಿ ಪರೀಕ್ಷೆ ಮಾಡಿದ್ದೇವೆ. ಆದ್ರೆ ಈ ವರ್ಷ ತುಂಬಾ ಗಂಭೀರ ಪರಿಸ್ಥಿತಿ ಇದೆ. ಪರೀಕ್ಷೆ ಮಾಡಿ ಎಂದು ಒಂದು ವರ್ಗ, ಮಾಡಬೇಡಿ ಎಂಬುವುದು ಮೊತ್ತೊಂದು ವರ್ಗ ಇದೆ. ತಜ್ಞರ ಬಳಿ ಅಭಿಪ್ರಾಯ, ಪೋಷಕರ ಅಭಿಪ್ರಾಯ, ಮಕ್ಕಳ ಅಭಿಪ್ರಾಯ ಕೇಳಿದ್ದೇನೆ. ನಮ್ಮ ಇಲಾಖೆ ಜೊತೆ ಮೂರು ಸುತ್ತಿನ‌ ಸಭೆ ನಡೆಸಿದ್ದೇನೆ. ಯಾವುದೇ ನಿರ್ಧಾರ ತಗೊಂಡ್ರು, ಟೀಕೆ, ಅಸಮಾಧಾನ ಆಗುತ್ತೆ. ಮಕ್ಕಳ ಆರೋಗ್ಯ ಹಿತದೃಷ್ಟಿ, ಮಕ್ಕಳ ಮುಂದಿನ ಭವಿಷ್ಯ ಬಗ್ಗೆ ತುಂಬ ಚಿಂತನೆ ನಡೆಸಿದ್ದೇನೆ ಎಂದು ಹೇಳಿದರು.
ಈಗ ಪಿಯುಸಿ ಪರೀಕ್ಷೆ ಮಾಡದಿರುವುದಕ್ಕೆ ನಾವು ತೀರ್ಮಾನ ತೆಗೆದುಕೊಂಡಿದ್ದೇವೆ. ದ್ವಿತೀಯ ಪಿಯುಸಿ ಪರೀಕ್ಷೆ ಇಲ್ಲದೇ ಯಾವ ರೀತಿ ಗ್ರೇಡ್‌ ಕೊಡಬಹುದು ಎಂಬುದರ ಬಗ್ಗೆ ಅಸ್ಸೆಸ್‌ ಮಾಡಿದ್ದೇವೆ. ಹೀಗಾಗಿ ಯಾವರೀತಿ ನಾವು ಫಲಿತಾಂಶ ನೀಡಬೇಕು ಎಂಬ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದೇವೆ ಎಂದು ತಿಳಿಸಿದರು.
ಪರೀಕ್ಷೆ ಜುಲೈ ಮೂರನೇ ವಾರದಲ್ಲಿ ನಡೆಯಲಿದ್ದು, ಪರೀಕ್ಷೆ ನಡೆಯುವ ದಿನಾಂಕವನ್ನು 20 ದಿನಗಳ ಮೊದಲೇ ತಿಳಿಸಲಾಗುವುದು. ಜುಲೈ ಕೊನೆಯವಾರ ಅಥವಾ ಆಗಸ್ಟ್‌ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಇದೇ ಸಂದರ್ಭ ಅವರು ಹೇಳಿದರು.

By admin