ಮನುಷ್ಯ ಜಗತ್ತಿನಲ್ಲಿ ಸಬಲತೆಗಳೊಂದಿಗೆ ದುರ್ಬಲತೆಗಳ ಮಾಹಾಪೂರವೇ ಇದೆ.ಈ ಸಬಲತೆಗಳನ್ನು ಬಳಸಿಕೊಂಡು ಸಾಧನೆ ಮಾಡಿದವರ ಪೈಕಿಗಿಂತ ದುರ್ಬಲತೆಗಳನ್ನು ಮೆಟ್ಟಿನಿಂತು ಇತಿಹಾಸ ಸೃಷ್ಟಿಸಿದವರು ಮುಖ್ಯರು ಹಾಗೂ ಶ್ರೇಷ್ಠರು. ದೈಹಿಕ ನ್ಯೂನ್ಯತೆಗಳು ಮನುಷ್ಯನನ್ನು ಸಾಮಾಜಿಕ ಪರಿಸರದೊಂದಿಗೆ ಉತ್ತಮವಾಗಿ ಬೆರೆಯಲಿಕ್ಕೆ ಅವಕಾಶ ಕೊಡದೆ ಕಟ್ಟಿಹಾಕಿಬಿಡುತ್ತವೆ.ಹಾಗೆಯೇ ಮಾನಸಿಕ ನ್ಯೂನ್ಯತೆಯವರು ಸಂಪೂರ್ಣವಾಗಿ ಹೊರಗಿನ ಪ್ರಪಂಚದ ನಿಕಟ ಸಂಬಂಧವನ್ನು ಕಳೆದುಕೊಂಡಿರುತ್ತಾರೆ.ಇಂತಹವರಲ್ಲಿ ನಾವು ಸಬಲರಿಗಿಂತ ಕಡಿಮೆ ಏನಿಲ್ಲ! ಅಂಗವಿಕಲರಾದ ನಾವು ಕೂಡ ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳುವಂತಹವರೇ!  ಎಂದು ತಮ್ಮ ದುರ್ಬಲತೆಗಳನ್ನು ಬದಿಗೊತ್ತಿ ಸೃಜನಾತ್ಮಕ ಪ್ರತಿಭೆಗಳೊಂದಿಗೆ ಆಶ್ಚರ್ಯಕರ ಸಂಗತಿಗಳೊಂದಿಗೆ ಹೊರಬಂದಿದ್ದಾರೆ.ಹೀಗೆ ನೋಡಿದಾಗ ನನಗೆ ಮೈಸೂರಿನಲ್ಲಿ ಒಂದು ವಿಕಲಚೇತನರ “ಸ್ವಾಭಿಮಾನಿ ವಿಶೇಷಚೇತನ ಸ್ವ ಸಹಾಯ ಸಂಘದ” ಪರಿಚಯವಾಗುತ್ತದೆ.ಕುತೂಹಲದಿಂದ ಅವರನ್ನು ಭೇಟಿಯಾದಾಗ ಅವರಿಂದ ತಿಳಿದ ಬದುಕಿನ ಮನಕಲುಕುವ ಸನ್ನಿವೇಶಗಳು ಮತ್ತು ಅವರ ಆತ್ಮಸ್ಥೈರ್ಯದ ಬದುಕು ನನ್ನನ್ನು ನಿಬ್ಬೆರಗೊಳಿಸಿತು. “ಸ್ವಾಭಿಮಾನಿ  ವಿಶೇಷಚೇತನ ಸ್ವ ಸಹಾಯ ಸಂಘ” ಸ್ಥಾಪಿತವಾಗಿದ್ದು 13/11/2010 ನೇ ಇಸವಿಯಲ್ಲಿ ಹನ್ನೊಂದು ವರ್ಷಗಳ ಹಿಂದೆ.ಈ ಸಂಘದ‌ ಮೊದಲ ಹೆಸರು “ಸ್ವಾಭಿಮಾನಿ ವಿಕಲಚೇತನರ ಸ್ವ ಸಹಾಯ ಸಂಘ” ಎಂದು.ನಂತರ ಸ್ವತಃ ನ್ಯೂನ್ಯತೆಗಳನ್ನು ನೆನೆಯಬಾರದೆಂಬ ಮಾಹದಾಲೋಚನೆ ಯಿಂದ “ಸ್ವಾಭಿಮಾನಿ ವಿಶೇಷಚೇತನರ ಸ್ವ ಸಹಾಯ ಸಂಘ” ಎಂದು ಸಂಘದ ಸದಸ್ಯರೆಲ್ಲರೂ ತೀರ್ಮಾನಿಸಿ ಮರುನಾಮಕರಣ ಮಾಡಿಕೊಂಡಿದ್ದಾರೆ.ಇಲ್ಲೀವರೆಗೆ ಸಂಘದಲ್ಲಿ 110 ಸಭೆಗಳು ಯಶಸ್ವಿಯಾಗಿ ಜರುಗಿದೆ.ಮೊದಲನೆಯ ಸಭೆ “ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್” ಸಿದ್ಧಾರ್ಥನಗರ.ಇಲ್ಲಿ ಜರುಗುತ್ತದೆ.ಪ್ರತೀ ತಿಂಗಳ ಎರಡನೇ ಭಾನುವಾರ ಈ ಸಂಘದ ಸದಸ್ಯರು ಸಭೆ ಸೇರುತ್ತಾರೆ.ಆಗ ಸಂಘದಲ್ಲಿ ಇದ್ದವರ ಸಂಖ್ಯೆ 18.ಪ್ರಸ್ತುತ 20 ವಿಶೇಷ ಚೇತನರು ಇದ್ದಾರೆ. ಅದರಲ್ಲಿ ಒಬ್ಬರು ಮಹಿಳೆ ಶಕುಂತಲಾ ಎಂದು ಮಿಕ್ಕವರೆಲ್ಲಾ ಪುರುಷರು.ಶಕುಂತಲಾ ಎನ್ನುವವರು ಸಂಘದ ಕಾರ್ಯದರ್ಶಿಗಳು ಇವರು ಸುಮಾರು 8 ಭಾಷೆಗಳನ್ನು ಮಾತನಾಡುತ್ತಾರೆ. 6 ಭಾಷೆಗಳನ್ನು ಒದುವುದಕ್ಕೆ ಬರೆಯುವುದಕ್ಕೆ ಬರುತ್ತದೆ. ಬಾಸ್ಕೆಟ್ ಬಾಲ್,ಗುಂಡು ಎಸೆತ,ಜಾವ್ಲೀನ್,ಮತ್ತು ಪಂಜಕುಸ್ತಿಯನ್ನು ಆಡುತ್ತಾರೆ ಹಾಗೇಯೇ ಇನ್ನುಳಿದ ಕ್ರೀಡೆಗಳಲ್ಲೂ ಸ್ಪರ್ಧಿಸಲು ಯಾವುದೇ ಹಿಂಜರಿಕೆ ಮನೋಭಾವನೆ ಇವರಲ್ಲಿ ಇಲ್ಲ.ಇವರು ಕ್ರೀಡೆಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.ರಾಜ್ಯಮಟ್ಟದ ಪಂಜಕುಸ್ತಿ ಕ್ರೀಡೆಯಲ್ಲಿ ಚಿನ್ನದ ಪದಕ ವಿಜೇತರಾಗಿದ್ದಾರೆ.ಜೀವನೋಪಾಯಕ್ಕಾಗಿ ಬಟ್ಟೆಬ್ಯಾಗ್,ಕಾಗದದ ಬ್ಯಾಗ್,ಕೊಬ್ಬರಿ ಕೆತ್ತನೆ,ಮದುವೆ ಅಲಂಕಾರಿಕ ವಸ್ತುಗಳ ತಯಾರಿ.  ವಯಸ್ಸಾದವರಿಗೆ,ಕೆಲಸ ಮಾಡುತ್ತಿರುವವರಿಗೆ ಅಡುಗೆ ತಯಾರಿಸಿ ಅವರು ಇರುವಲ್ಲಿಗೇ ಹೋಗಿ ಆಹಾರ ಸರಬರಾಜು ಮಾಡುತ್ತಿದ್ದಾರೆ.ಇಷ್ಟೇಲ್ಲಾ ಕಾರ್ಯಸಾಧನೆ ಮಾಡುವ ಇವರು ವಿಶೇಷ ಚೇತನರಾಗಿದ್ದು ಸಾಮಾನ್ಯರಿಗಿಂತ ಹೆಚ್ಚಾಗಿಯೇ ಕಾರ್ಯನಿರ್ವಹಿಸುತ್ತಿರುವುದು ಗೌರವಾರ್ಹ ಸಾಧನೆಯೇ ಸರಿ.ಸಂಘದ ಅಧ್ಯಕ್ಷರಾದ ಗೀರೀಶ್ ಅವರು ಅಂಗವಿಕಲರಾಗಿದ್ದು ಹವ್ಯಾಸಿ “ಉರಗ ಸಂರಕ್ಷಕ ಹಾಗೂ ವನ್ಯಜೀವಿ ಛಾಯಾಗ್ರಾಹಕರಾಗಿದ್ದಾರೆ”.ಚೌಡಯ್ಯ ಅವರು ಅನೇಕಬಾರಿ ರಾಜ್ಯಮಟ್ಟದ ಪ್ಯಾರಾ ಒಲಂಪಿಕ್ ಗಳಲ್ಲಿ ಬೆಳ್ಳಿ ಮತ್ತು ಚಿನ್ನದ ಪದಕ ವಿಜೇತರಾಗಿದ್ದಾರೆ.ಸಂಘದ ಸದಸ್ಯರಾದ ಶಿಹಾಬುದ್ಧೀನ್, ಸಿದ್ದರಾಜು ದಿಲೀಪ್, ಗಿರೀಶ್ ಪ್ರಮುಖವಾಗಿ ಸಂಘದ ಸ್ಥಾಪನೆಯ ಸಂಧರ್ಭದಲ್ಲಿ ಇದ್ದವರು ಹಾಗೂ ಸಂಘದ ಸ್ಥಾಪನೆಗೆ ಕಾರಣಕರ್ತರು ಸಂಘವು ಮುಚ್ಚುವ ಸಂಧರ್ಭದಲ್ಲಿ ಒತ್ತಾಸೆಯಾಗಿ ನಿಂತವರು ಮತ್ತೆ ಸಂಘವನ್ನು ಪುನಶ್ಚೇತನ ಗೊಳಿಸಿದವರು.ಸಿದ್ಧರಾಜು ಅವರು ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಉಳಿದವರು ವ್ಯಾಪಾರ ಮಾಡಿಕೊಂಡು ಜೀವನವನ್ನು ಎದುರಿಸುತ್ತಿದ್ದಾರೆ.ಹಾಗೂ ಇವರೂ ಕೂಡ ಬದುಕಿನ ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಪಾಲ್ಗೊಂಡು ಸಾಧನೆಗೈದವರೇ. ವಿಕಲಚೇತನರೂ ಕೂಡ ಸಾಮಾನ್ಯರಂತೆ ಬದುಕು ಕಟ್ಟಿಕೊಳ್ಳಲು ಸ್ವಾವಲಂಬಿಯಾಗಲು ಮತ್ತು ಅವರಲ್ಲೂ ಉಳಿತಾಯ ಮನೋಭಾವನೆ ಬೆಳೆಸುವ ಉದ್ದೇಶವನ್ನು ಸಂಘವು ಧ್ಯೇಯ ವಾಕ್ಯವನ್ನಾಗಿಸಿಕೊಂಡಿದೆ.”ಸದಸ್ಯರ ಉಳಿತಾಯವೇ ಸಂಘದ ಆರ್ಥಿಕ ಮೂಲ”. ಸಂಘದ ಸದಸ್ಯರೆಲ್ಲರಿಗೂ ಪೆಟ್ಟಿಗೆ ಅಂಗಡಿ ಇಟ್ಟುಕೊಳ್ಳಲು ಮತ್ತು ವ್ಯಾಪಾರ ಮಾಡಲು ಸಂಘದಿಂದ ಉಳಿತಾಯಗಳನ್ನು ಸಂಗ್ರಹಿಸಿ ಸಾಲಕೊಡಲಾಗುತ್ತದೆ.ಪ್ರತೀ ತಿಂಗಳು ತಪ್ಪದೇ ಸಾಲವನ್ನು ಮರುಪಾವತಿ ಮಾಡುವಂತೆ ಜಾಗೃತಿ ಮೂಡಿಸಿ ಸಾಲವನ್ನು ಹಿಂಪಡೆದು  ಸಂಘದ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಿಕೊಳ್ಳುತ್ತಾರೆ.ಸಂಘದ ಸದಸ್ಯರು ಪೆಟ್ಟಿಗೆ ಅಂಗಡಿ,ಮೊಬೈಲ್ ರಿಪೇರಿ,ಚಹಾ,ಮಿನಿರಲ್ ವಾಟರ್ ಅಂಗಡಿಗಳನ್ನು ಹಾಗೂ ವ್ಯಾಪರವನ್ನು ಮಾಡುತ್ತಾರೆ.ಸಂಘದ ಕಾರ್ಯಚಟುವಟಿಕೆಯ ಬಗ್ಗೆ ಪ್ರತಿ ತಿಂಗಳಿಗೊಮ್ಮೆ ಹಾಗೂ ವರ್ಷದ ಅಂತ್ಯದಲ್ಲಿ ಲೆಕ್ಕ ಪರಿಶೋಧನೆ ಮಾಡಿಸುತ್ತಾರೆ ಮತ್ತು ಎಲ್ಲಾ ಸದಸ್ಯರ ಗಮನಕ್ಕೆ ತೆರೆದುಕೊಂಡು ಬಂದು ನಡಾವಳಿ ಪುಸ್ತಕ, ಸಭೆಪುಸ್ತಕ, ಬ್ಯಾಂಕ್ ಪಾಸ್ ಪುಸ್ತಕ ಗಳನ್ನು ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಿಕೊಂಡು ಇಷ್ಟು ವರ್ಷ ಸಂಘವು ಎಷ್ಟೋ ಸಾವಿರ ಅಡೆತೆಗಳ ನಡುವೆ ಸಾಗಿಬಂದಿರುವುದು ಮೈಸೂರಿಗರ ಹೆಮ್ಮೆಯ ವಿಷಯ ಇಡೀ ನಾಡೇ ಗೌರವಿಸುವ ಸಂಗತಿ. ನಾನು ಖುದ್ದಾಗಿ ಸಂಘದ ಕಾರ್ಯದರ್ಶಿಯವರಾದ ಶಕುಂತಲಾ ಅವರನ್ನು ಭೇಟಿಯಾಗಿ ಸಂಘದ ಇನ್ನಿತರ ವ್ಯವಸ್ಥೆ ಮತ್ತು ಸಮಸ್ಯೆಗಳ ಬಗ್ಗೆ ಕೇಳಿದಾಗ ಅವರು ಹೇಳಿದ್ದು ಹೀಗೆ.ಅಂಗವಿಕಲರು ಯಾವುದರಲ್ಲೂ ಕಡಿಮೆ ಇಲ್ಲ ಆದರೆ ಸರ್ಕಾರದಿಂದ ನಮಗೆ ಸಿಗುತ್ತಾ ಇರುವ ಸೌಲಭ್ಯ ಎರಡೇ.!ಮೊದಲನೆಯದು ‘ಪಿಂಚಣಿ’ ಇನ್ನೊಂದು ‘ಬಸ್ ಪಾಸ್’. ಇಂತಹದಕ್ಕೆ ಮಾತ್ರ ಸೀಮಿತ ಆಗಿಬಿಟ್ಟಿದೆ. ಲೋಕಮಟ್ಟದ ಉದ್ಯೋಗವಕಾಶ  ಅಂಗವಿಕಲರಿಗೆ ಬಹಳ ಕಡಿಮೆಯೇ ಇದೆ.ಜೊತೆಗೆ ವ್ಯಾಪಾರ ಆರಂಭಿಸಿದಾಗ ಹಣಕಾಸಿನ ಸಮಸ್ಯೆ ಬಂದುಬಿಡುತ್ತದೆ. ಒಂದು ಬ್ಯಾಂಕಿಗೆ ಸಾಲ ಕೇಳಲು ಹೋದಾಗ ಬ್ಯಾಂಕುಗಳು ಮುಂದೆಯೇ ಬರುವುದಿಲ್ಲ.ಅಂಗವಿಕಲರಿಗೆ ಎಂದರೆ ಸಾಲ ಕೊಡುವುದಿಲ್ಲ ನೀವು ಪುನಃ ಮರುಪಾವತಿಸುವ ಆಧಾರ ಏನಿದೆ ಎಂದು ನೂರಾರು ಕಡತಗಳು ವೈಯಕ್ತಿಕ ಮಾಹಿತಿಗಳನ್ನು ಕೇಳುತ್ತಾರೆ.ಹೇಗೋ ಒಂದಷ್ಟು ಮಾಹಿತಿಗಳನ್ನು ಒದಗಿಸಿದರೆ ಆಗಲೂ ನಮಗೆ ಸಾಲ ಕೊಡಲು ಒಪ್ಪುವುದಿಲ್ಲ.ಹೀಗಾಗಿ ತೊಂದರೆಗಳು ಬಂದದ್ದರಿಂದ ನಾವು ಸುಮ್ಮನೆ ಕೂರಲಿಲ್ಲ ಬದಲಿಗೆ ಸಂಘ ಸ್ಥಾಪನೆಯ ಬಗ್ಗೆ ಯೋಜನೆ ಹಾಕಿಕೊಂಡೋ.ಅದರಂತೆ “ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್” ಇವರ ಸಹಾಯ ಪಡೆದುಕೊಂಡು ಸಂಘ ಸ್ಥಾಪನೆ ಮಾಡಿದೆವು.ಮೊದಲು ಆರಂಭದಲ್ಲಿ ಸುಮಾರು 20 ಅಂಗವಿಕಲರು ಸಂಘದ ಸದಸ್ಯರಾದರು ಆ ನಂತರ ಸ್ವಲ್ಪ ಜನ ಬಿಟ್ಟುಹೋದರು.ನಾವು ದೂರ ಇದ್ದೇವೆ ಹಣಕಾಸಿನ ತೊಂದರೆ ಇದೆ ಹೀಗೆ ನಾನಾ ಕಾರಣಗಳನ್ನು ಕೊಟ್ಟು ಸದಸ್ಯತ್ವ ತ್ಯಜಿಸಿದರು. ಆಗ ನಾವು ಎದೆಗುಂದಲಿಲ್ಲ ಬದಲಿಗೆ ಸಂಘದ ಸದಸ್ಯರಿಗಾಗಿ ಒಬ್ಬೊಬ್ಬರನ್ನೂ ಹುಡುಕಿ ಹೊರಟೆವು ಆದರೂ ಮೊದಲಿಗೆ ಸಿಗಲಿಲ್ಲ ಹಣಕಾಸು ವ್ಯವಹಾರ ಎಂದರೆ ಸ್ವಲ್ಪ ಹಿಂದೆ ಮುಂದೆ ನೋಡುತ್ತಿದ್ದರು ಆ ನಂತರ  ನಂಬಿಕೆಯ ಮೇಲೆ ಒಬ್ಬೊಬ್ಬರಾಗಿ ಬಂದು ಸಂಘದ ಸದಸ್ಯತ್ವ ಪಡೆದುಕೊಂಡರು.ನಂತರ ನಾವು ಸಂಘದ ಆರ್ಥಿಕ ಚಟುವಟಿಕೆಯನ್ನು 100 ರೂಪಾಯಿಗಳ ಉಳಿತಾಯದಿಂದ ಆರಂಭಿಸಿ ಇವತ್ತಿಗೆ 500 ರೂಗಳ ಉಳಿತಾಯಕ್ಕೆಬಂದು ನಿಂತಿದೆ.ಈಗ ಅದೇ ಹಣವನ್ನು ಒಟ್ಟುಗೂಡಿಸಿ ಅವಶ್ಯಕತೆ ಇರುವ ನಮ್ಮ ಸಂಘದ ಸದಸ್ಯರಿಗೆ ಸಾಲದ ರೂಪದಲ್ಲಿ ಕೊಡುತ್ತೇವೆ.ಸದಸ್ಯರು ಹತ್ತುಸಾವಿರ ದಿಂದ ಹಿಡಿದು ಒಂದು ಲಕ್ಷದವರೆವಿಗೆ ಸಾಲ ಪಡೆದು ಸಂಘಕ್ಕೆ ಸೂಕ್ತ ಸಮಯಕ್ಕೆ ಮರುಪಾವತಿಸುತ್ತಾರೆ.ನಮ್ಮ ಸಂಘದ ಆರ್ಥಿಕ ಕಾರ್ಯಚಟುವಟಿಕೆ ಈ ಮಟ್ಟಕ್ಕೆ ಬಂದು ಮುಟ್ಟಿದೆ ಎನ್ನುವುದೇ ತುಂಬಾ ದೊಡ್ಡ ಸಂತೋಷ ನಮಗೆಲ್ಲರಿಗೂ.ಇದಕ್ಕೆ ನಮ್ಮ ಸಂಘದ ಎಲ್ಲಾ ಸದಸ್ಯರ ಪಾಲ್ಗೊಳ್ಳುವಿಕೆ ಬಹಳ ಇದೆ.ಸರ್ಕಾರದಿಂದ ನಮಗೆ ಸಿಗುವ ಸವಲತ್ತಿಗೆ ಸರಿಯಾದ ಮಾಹಿತಿ ಲಭ್ಯವಾಗುತ್ತಿಲ್ಲ. ಇನ್ನೊಂದು ಬಹುಮುಖ್ಯ ಸಮಸ್ಯೆ ಏನೆಂದರೆ ಸ್ಥಳಾವಕಾಶ ಕೊರತೆ. ನಾವು ಶಾಲೆಗಳಲ್ಲಿ ಇನ್ನಿತರ ಸ್ಥಳಗಳಲ್ಲಿ ಸಂಘ ಸೇರಲು ಅವಕಾಶ ಕೇಳಿದಾಗ ನಿರಾಕರಣೆ ಗಳೇ ಹೆಚ್ಚು. ಎಲ್ಲೋ ಮರದ ಕೆಳಗಡೆ ಕುಳಿತು ಸಂಘದ ಕಾರ್ಯಚಟುವಟಿಗೆ ಮುಗಿಸಿ ಎಲ್ಲರೂ ತೆರಳುತ್ತೇವೆ.ಒಂದು ದೃಷ್ಟಿಯಲ್ಲಿ ನಾವು ಕಷ್ಟಗಳನ್ನು ಎದುರಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಂಡರೂ ಇನ್ನೊಂದು ದೃಷ್ಟಿಯಲ್ಲಿ ಸಾಮಾಜಿಕವಾಗಿ,ಕೌಟುಂಬಿಕವಾಗಿ ನಾವು ದೂರಾನೇ ಉಳಿದಿದ್ದೇವೆ.ಸರ್ಕಾರದ ಪ್ರೋತ್ಸಾಹ ನಮಗೆ ಸರುಯಾದ ರೀತಿಯಲ್ಲಿ ತಲುಪುತ್ತಿಲ್ಲ.ಮಾನಸಿಕ ಮತ್ತು ದೈಹಿಕ ನ್ಯೂನ್ಯತೆ ಇರುವ ಇಬ್ಬರಿಗೂ ಸಮಾನ ಪ್ರೋತ್ಸಾಹಗಳನ್ನು ಮಾಡಬೇಕು.ಮಾನಸಿಕ ಅಸ್ವಸ್ಥರಿಗೆ ಮಾತ್ರ ಪಿಂಚಣಿ ಹೆಚ್ಚಿಸಿ ನಮನ್ನೂ ಕಡೆಗಣಿಸಿದ್ದು ತಾರತಮ್ಯ ಮಾಡಿದಂತೆ ಆಯ್ತು. ಅಕ್ಕಿಕಾರ್ಡ್ ಗೆ ,ಅಂತ್ಯೋದಯ ಕಾರ್ಡ್ ಗೆ ಅಂಗವಿಕಲರಿಗೆ ಮೀಸಲಾತಿ ಬರಬೇಕು ಅಂದರು.ಆದರೆ ಅದರ ಬಗ್ಗೆ ಯಾವುದೇ ಮಾಹಿತಿಯೂ ಇಲ್ಲ ಆದೇಶನೂ  ಇಲ್ಲ.ಗಾಡಿಗಳಿಗೆ ನಾಲ್ಕು ವರ್ಷ ನಾಲ್ಕು ನಾಲ್ಕು ಬಾರಿ ಅರ್ಜಿ ಸಲ್ಲಿಸಿದ್ದೇವೆ ಆದರೂ ಗಾಡಿ ಸೌಲಭ್ಯ ಸಿಕ್ಕದೇ ಆಯ್ಕೆಯ ವಿಚಾರದಲ್ಲಿ ವಂಚಿತರಾಗಿದ್ದೇವೆ. “ಭಿಕ್ಷೆ ಕೊಡುತ್ತಾರೋ ವಿನಃ ಸಾಲ ಕೊಡುವುದಿಲ್ಲ ಸಹಾಯ ಮಾಡುವುದಿಲ್ಲ .ಹತ್ತು ರೂ ಕೊಟ್ಟು ಟೀ ಕುಡಿದಿಕೋ ಅನ್ನುವ ಜನರಿದ್ದಾರೆ” ಬದುಕುತ್ತೀವಿ ಎಂದರೆ ಸಹಾಯ ಮಾಡುವವರಿಲ್ಲ ಹೀಗಾಗಿ ಮೊದಲು ಹೇಳಿದಂತೆ ಸಂಘ ಸ್ಥಾಪಿತವಾದರೆ ನಮಗೆ ಎಲ್ಲಾ ರೀತಿಯಲ್ಲೂ ರಕ್ಷಣೆ ಸಿಗುತ್ತದೆಂದು ಸಂಘ ಸ್ಥಾಪನೆ ಮಾಡಿಕೊಂಡೆವು.ಒಟ್ಟಿನಲ್ಲಿ ನಮ್ಮ ಸ್ವ ಸಹಾಯ ಸಂಘದ ಸದಸ್ಯರು ಸ್ವಾವಲಂಬಿಗಾಳಾಗಿ ಬದುಕಲು ಸಂಘವು ಎಲ್ಲಾ ರೀತಿಯ ಆರ್ಥಿಕ  ಸಹಾಯ ಹಾಗೂ ಮನೋಬಲ ತುಂಬುವಲ್ಲಿ ಯಶಸ್ವಿಯಾಗಿದೆ.ಪ್ರತೀ ತಿಂಗಳೂ ಅಥವಾ ಮೂರು ತಿಂಗಳಿಗೊಮ್ಮೆ ಸದಸ್ಯರೆಲ್ಲರೂ ಪ್ರವಾಸ ಹೋಗುತ್ತೇವೆ.ಪ್ರಸ್ತುತ ಸದಸ್ಯರ ಆರ್ಥಿಕ ಮಟ್ಟ ಸುಧಾರಿಸಿದೆ.ಎಲ್ಲರೂ ವ್ಯಾಪಾರ ಮಾಡಿ ಕುಟುಂಬ ನಿರ್ವಹಣೆ ಜೊತೆಗೆ ತಮ್ಮ ಮಕ್ಕಳನ್ನು ಒಳ್ಳೆಯ ಶಾಲೆಗಳಲ್ಲಿ ಸೇರಿಸಿ ಓದಿಸುತ್ತಿದ್ದೇವೆ. ಸಂಘದ ಸದಸ್ಯರ ಸಾಧನೆ ಹಾಗೂ ಕಾರ್ಯವನ್ನು ಮೆಚ್ಚಿ ಅನೇಕ ಸಂಘ ಸಂಸ್ಥೆಗಳು ಗೌರವಿಸಿವೆ ,ಪ್ರಶಸ್ತಿ ಫಲಕಗಳು ಸಂದಿವೆ ಎಂದು ಅಂಗವಿಕಲರು ವಿಶೇಷ ಚೇತನರಾಗಿ ಹೊರಹೊಮ್ಮಿರುವುದನ್ನು ಶಕುಂತಲಾ ಅವರು ಸವಿವರವಾಗಿ ವಿಷಯ ಹಂಚಿಕೊಂಡರು.ಸರ್ಕಾರವು ಇಂತಹ ಸ್ವಾಭಿಮಾನಿ ವಿಶೇಷ ಚೇತನ ಸಂಘಟನೆಗಳನ್ನು ಗುರುತಿಸಿ ಸಹಾಯ ಹಸ್ತನೀಡಬೇಕು ಹಾಗೂ ಈ ರೀತಿಯ ಸಂಘ ಸಂಸ್ಥೆಗಳು ನಿರ್ಮಾಣವಾಗಲು ಇಡೀ ಸಮಾಜವೇ ಒಗ್ಗೂಡಬೆಕು ಎನ್ನುವುದೇ ನನ್ನ ಅಭಿಪ್ರಾಯ.ನನ್ನೊಂದಿಗೆ ಸಂಘದ ಕಾರ್ಯಕಲಾಪಗಳನ್ನು ಸಮಸ್ಯೆಗಳನ್ನು ಸಾಧನೆಗಳನ್ನು ಹಂಚಿಕೊಂಡ ಸ್ವಾಭಿಮಾನಿ ವಿಶೇಷ ಚೇತನ ಸಂಘದ ಎಲ್ಲಾ ಸದಸ್ಯರಿಗೂ ನನ್ನ ಅನಂತ ನಮನಗಳು.

ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)

. ಮೈಸೂರು.

 

By admin