ಮೈಸೂರು: ಖಡ್ಗವಾಗಲಿ ಕಾವ್ಯ ಎಂಬಂತೆ ತಮ್ಮ ಲೇಖನಿಯನ್ನೇ ಖಡ್ಗ ಮಾಡಿಕೊಂಡು ಶೋಷಕj ಸಮಾಜವನ್ನು ತಿದ್ದಿ ತೀಡಿ ಶೋಷಿತರ ಎದೆಯಲ್ಲಿ ಬೆಳಕಿನ ಕಿಡಿ ಹಚ್ಚಿದ ಜನೋಪಯೋಗಿ ಸಾಹಿತ್ಯ ಕೃಷಿಯ ಜೀವನ್ಮುಖಿ ಕವಿ ಸಿದ್ದಲಿಂಗಯ್ಯ ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ನಗರದ ಮೈಸೂರು ಕನ್ನಡ ವೇದಿಕೆ ವತಿಯಿಂದ ಮೈಸೂರಿನ ಅಗ್ರಹಾರದಲ್ಲಿರುವ ಮೈಸೂರು ಮಹಾನಗರ ಪಾಲಿಕೆ ವಲಯ ಒಂದರ ಕಚೇರಿಯ ಆವರಣದಲ್ಲಿ ಏರ್ಪಡಿಸಿದ್ದ ನಾಡು ಕಂಡ ಪ್ರಸಿದ್ಧ ಸಾಹಿತಿ, ಕವಿ, ಚಿಂತಕ, ನಾಡೋಜ ಡಾ. ಸಿದ್ದಲಿಂಗಯ್ಯ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದಲಿಂಗಯ್ಯ ಅವರು ಸಮಾಜಮುಖಿ ಸಾಹಿತ್ಯ ಕೃಷಿ ಮಾಡಿ ಜೀವನ್ಮುಖಿ ಯಾಗಿದ್ದು,ಕನ್ನಡ ನಾಡು ಎಂದೂ ಮರೆಯ ದಂಥ ಸಾಧನೆ ಮಾಡಿ ಅಕ್ಷರೈಖ್ಯರಾಗಿ ಅಮರರಾಗಿದ್ದಾರೆಂದರು.
ನಾಡಿನ ಸುಪ್ರಸಿದ್ಧ ಕವಿ ಸಾಹಿತಿ ಹೋರಾಟಗಾರ ನಾಡೋಜ ಕವಿ ಸಿದ್ಧಲಿಂಗಯ್ಯ ಅವರು ಕೇವಲ ಒಂದು ವರ್ಗದ ಕವಿಯಾಗಿರಲಿಲ್ಲ. ಸಮಗ್ರ ಕನ್ನಡಿಗರ ಕವಿಯಾಗಿದ್ದರು. ಆದ್ದರಿಂದ ಅವರನ್ನು ದಲಿತ ಕವಿ ಎನ್ನುವುದಕ್ಕಿಂತ ಕನ್ನಡದ ಸ್ವಾಭಿಮಾನಿ ಕವಿ ಎನ್ನುವುದು ಸೂಕ್ತ. ಸಿದ್ದಲಿಂಗಯ್ಯ ನವರು ಕೂಡ ಹಾಗೆಯೇ ಇದ್ದರು. ಅವರ ಬರಹಗಳಲ್ಲಿ , ಭಾಷಣಗಳಲ್ಲಿ , ನಡೆ ನುಡಿ ಗಳಲ್ಲಿ ನಾವು ಇದನ್ನೇ ಕಾಣಬಹುದಾಗಿತ್ತು. ಕನ್ನಡ ಸಾಹಿತ್ಯದ ಬಹುತೇಕ ಎಲ್ಲಾ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಸಿದ್ದಲಿಂಗಯ್ಯ ಅವರು ಕನ್ನಡ ಕಟ್ಟುವಲ್ಲಿ ಬಹುಮುಖ್ಯ ಪಾತ್ರವಹಿಸಿದ್ದರು. ಆದ್ದರಿಂದ ಅವರ ಬದುಕು ಬರಹ ಸಾಧನೆ ಸಿದ್ದಿಯನ್ನು ಸ್ಮರಿಸಲು, ಮುಂದಿನ ಪೀಳಿಗೆಗೆ ಆದರ್ಶವಾಗಿರಿಸಲು ನಮ್ಮ ಘನ ಸರಕಾರ ಸ್ಮಾರಕದಂತಹ, ಪ್ರತಿಮೆಯಂತಹ ಸ್ಥಾವರ ಗೊಳಿಸುವ ಕಾರ್ಯಮಾಡದೆ ಜಂಗಮಗೊಳಿಸುವಂತಹ ಸಾರ್ಥಕ ವಾದ ಕೆಲಸವನ್ನು ಮಾಡಬೇಕು. ಈ ನಿಟ್ಟಿನಲ್ಲಿ ಶೋಶಿ ತರಿಗೆ,ಅಸಹಾಯಕರಿಗೆ, ದೀನ ದಲಿತರಿಗೆ ಶೈಕ್ಷಣಿಕವಾಗಿ ಇವರ ಹೆಸರಿನಲ್ಲಿ ನೆರವಾಗುವಂತಹ ಕಾರ್ಯವನ್ನು ಮಾಡಲು ಪ್ರಾಧಿಕಾರದ ಮಾದರಿಯಲ್ಲಿ ಟ್ರಸ್ಟ್ ವೊಂದನ್ನು ಸ್ಥಾಪಿಸ ಬೇಕೆಂದು ಸರಕಾರಕ್ಕೆ ಮನವಿ ಮಾಡಿದರು.
ಈ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್.ಬಾಲಕೃಷ್ಣ ಅಗಲಿದ ಕವಿ ಸಿದ್ದಲಿಂಗಯ್ಯ ನವರು ಕನ್ನಡ ನಾಡು ಕಂಡಂತಹ ಮಹಾನ್ ಪ್ರತಿಭೆಯಾಗಿದ್ದು ಅವರ ಅಗಲಿಕೆ ಇಡೀ ಕನ್ನಡ ನಾಡಿಗೆ ಅಪಾರ ನಷ್ಟವಾಗಿದೆ. ಇವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಇವರು ಮಾಡಿದಂತಹ ಕನ್ನಡ ಪರ ಕೆಲಸಗಳು ಇವತ್ತಿಗೂ ಮಾದರಿಯಾಗಿವೆ. ಇಂದಿನ ಕನ್ನಡ ಪ್ರಾಧಿಕಾರದ ಅಧ್ಯಕ್ಷರು ಯಾರೆಂಬುದೇ ತಿಳಿಯದ ಹಾಗೆ ನಿಷ್ಕ್ರಿಯ ರಾಗಿದ್ದಾರೆ.ಆದರೆ ಸಿದ್ದಲಿಂಗಯ್ಯ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿ ಯಲ್ಲಿ ತಮ್ಮ ಗಟ್ಟಿ ಕೆಲಸಗಳಿಂದ, ಗಟ್ಟಿ ಧ್ವನಿಯಿಂದ ಕನ್ನಡ ವಿರೋಧಿಗಳಿಗೆ ಸಿಂಹ ಸ್ವಪ್ನವಾಗಿದ್ದರು ಎಂದು ಹೇಳಿದ ಬಾಲಕೃಷ್ಣ ರವರು ಇಂಥಹ ದಿಟ್ಟ ಹೋರಾಟಗಾರರಾದ ಸಿದ್ದಲಿಂಗಯ್ಯ ಅವರ ಸಾಹಿತ್ಯ ಸಾಧನೆಯನ್ನು ಸ್ಮರಿಸುವಂತಹ ಕೆಲಸವನ್ನೂ ಕನ್ನಡ ಅಭಿವೃದ್ಧಿಪ್ರಾಧಿಕಾರವು ಮಾಡಬೇಕಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ವೇದಿಕೆಯ ನಾಲಾಬೀದಿ ರವಿ,ಗುರುಬಸಪ್ಪ, ಗೋಪಿ,ಮದನ್, ಕನ್ನಡ ಕಾವಲು ಪಡೆಯ ಅಧ್ಯಕ್ಷ ಮೋಹನ್ ಕುಮಾರ್ ಗೌಡ ಮತ್ತಿತರರು ಉಪಸ್ಥಿತರಿ ದ್ದರು.ಪ್ರಾರಂಭದಲ್ಲಿ ಭಾಗವಹಿಸಿದ್ದವರೆಲ್ಲರೂ ಅಗಲಿದ ಕವಿ ಸಿದ್ದಲಿಂಗಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.