ಚಾಮರಾಜನಗರ: ನಗರದ ರಥದ ಬೀದಿಯಲ್ಲಿ ಶ್ರೀ ವಿದ್ಯಾಗಣಪತಿ ಮಂಡಳಿಯಿಂದ ಪ್ರತಿಷ್ಠಾಪಿಸಿರುವ ಗಣೇಶ ವಿಸರ್ಜನೆ ಕಾರ್ಯಕ್ರಮವು ಇದೇ ಅಕ್ಟೋಬರ್ ೨೨ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರ ಅಧ್ಯಕ್ಷತೆಯಲ್ಲಿ ಇಂದು ವಿವಿಧ ಕೋಮುಗಳ ಮುಖಂಡರ ಸೌಹಾರ್ದ ಸಭೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಸಭೆಯಲ್ಲಿ ಮಾತನಾಡಿದ ವಿವಿಧ ಕೋಮುಗಳ ಮುಖಂಡರು ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಗಣಪತಿ ವಿಸರ್ಜನೆಗೆ ಎಲ್ಲರ ಸಹಕಾರವಿದೆ. ಅನೇಕ ವರ್ಷಗಳಿಂದ ಸೌಹಾರ್ದಯುತವಾಗಿ ನಡೆದುಕೊಂಡು ಬಂದಿದ್ದು, ಹೀಗೆಯೇ ಮುಂದುವರೆಯಲಿ ಎಂದರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಾತನಾಡಿ ಗಣಪತಿ ವಿಸರ್ಜನೆ ಶಾಂತಿಯುತವಾಗಿ ನೆರವೇರಲಿ. ವಿಸರ್ಜನೆ ಸಂದರ್ಭದಲ್ಲಿ ಆದೇಶಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಗಣಪತಿ ವಿಸರ್ಜನಾ ಸಂದರ್ಭದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಈಗಾಗಲೇ ಅಧಿಕಾರಿಗಳಿಗೂ ಅನುಸರಿಸಬೇಕಿರುವ ಕರ್ತವ್ಯಗಳ ಬಗ್ಗೆ ತಿಳಿಸಲಾಗಿದೆ. ವಿಸರ್ಜನೆ ವೇಳೆ ಎಲ್ಲರೂ ಸಹಕರಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್ ಅವರು ಮಾತನಾಡಿ ಗಣಪತಿ ವಿಸರ್ಜನೆ ಸಂಬಂಧ ಈಗಾಗಲೇ ಪೊಲೀಸ್ ಇಲಾಖೆ ವತಿಯಿಂದ ಎಲ್ಲಾ ಮುಖಂಡರ ಸಭೆ ಕರೆದು ಸುಧೀರ್ಘವಾಗಿ ಚರ್ಚಿಸಿ ಮನವಿ ಮಾಡಲಾಗಿದೆ. ಎಲ್ಲರೂ ಸಹಮತದಿಂದ ಅಭಿಪ್ರಾಯ ಸಲಹೆ ನೀಡಿದ್ದಾರೆ. ಶಾಂತಿಯುತವಾಗಿ ವಿಸರ್ಜನಾ ಕಾರ್ಯಕ್ರಮ ನಡೆಯುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಕೋರಲಾಗಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್, ತಹಶೀಲ್ದಾರರಾದ ಬಸವರಾಜು, ರವಿಶಂಕರ್, ಮಂಜುಳಾ, ಆನಂದಪ್ಪನಾಯಕ, ಜಯಪ್ರಕಾಶ್, ಮುಖಂಡರಾದ ಮನೋಜ್ ಪಟೇಲ್, ಸುರೇಶ್ ನಾಯಕ, ಶಿವು ವಿರಾಟ್, ಎಸ್. ಅಶ್ವಿನ್, ಸಿ.ಎಸ್. ಮಹೇಶ್, ಮಹಮ್ಮದ್ ಜಿಯಾವುಲ್ಲಾ, ಮಹಮ್ಮದ್ ಖಲೀಂಉಲ್ಲಾ, ಅಕ್ರಂ ಪಾಷ, ವಸೀಂಪಾಷ, ಅಪ್ಸರ್ ಪಾಷ, ನಾಗರಾಜು, ಅಯೂಬ್ ಖಾನ್, ಖಲೀಂಉಲ್ಲಾ, ಅಂತೋಣಿಯಪ್ಪ, ಅಬ್ದುಲ್ ಖಲೀಲ್, ಇತರೆ ಮುಖಂಡರು, ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಗಣಪತಿ ವಿಸರ್ಜನಾ ಹಿನ್ನೆಲೆ : ಮದ್ಯ ಮಾರಾಟ ನಿಷೇಧ: ಪಟ್ಟಣದಲ್ಲಿ ಅಕ್ಟೋಬರ್ ೨೨ರಂದು ವಿದ್ಯಾಗಣಪತಿ ಮೂರ್ತಿ ವಿಸರ್ಜನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಚಾಮರಾಜನಗರ ವ್ಯಾಪ್ತಿ ಹಾಗೂ ನಗರದ ೧೦ ಕಿ.ಮೀ ಸುತ್ತಲಿನ ವ್ಯಾಪ್ತಿಯಲ್ಲಿ ಅಕ್ಟೋಬರ್ ೨೧ರ ಸಂಜೆ ೫ ಗಂಟೆಯಿಂದ ಅಕ್ಟೋಬರ್ ೨೩ರ ಬೆಳಿಗ್ಗೆ ೬ ಗಂಟೆಯವರೆಗೆ ಮದ್ಯಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶ ಹೊರಡಿಸಿದ್ದಾರೆ.
ಗಣಪತಿ ವಿಸರ್ಜನಾ ಕಾರ್ಯಕ್ರಮ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವ ಸಲುವಾಗಿ ಚಾಮರಾಜನಗರ ವ್ಯಾಪ್ತಿ ಹಾಗೂ ನಗರದ ೧೦ ಕಿ.ಮೀ ಸುತ್ತಲ ವ್ಯಾಪ್ತಿಯಲ್ಲಿ ಮದ್ಯದಂಗಡಿಗಳನ್ನು (ಕೆ.ಎಸ್.ಬಿ.ಸಿ.ಎಲ್ ಹೊರತು ಪಡಿಸಿ) ಅಕ್ಟೋಬರ್ ೨೧ರ ಸಂಜೆ ೫ ಗಂಟೆಯಿಂದ ಅಕ್ಟೋಬರ್ ೨೩ರ ಬೆಳಿಗ್ಗೆ ೬ ಗಂಟೆಯವರೆಗೆ ಮದ್ಯದಂಗಡಿಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಈ ಅವಧಿಯಲ್ಲಿ ಯಾವುದೇ ರೀತಿಯ ಮದ್ಯಮಾರಾಟ, ಅಕ್ರಮ ಸಾಗಾಣಿಕೆ, ದಾಸ್ತಾನು ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ಆದೇಶದಲ್ಲಿ ತಿಳಿಸಿದ್ದಾರೆ.