ಮೈಸೂರು: ಮೈಸೂರು ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕೃಷ್ಣರಾಜ ಕ್ಷೇತ್ರದ 270 ಬೂತ್ ಗಳಲ್ಲಿ ಟೋಟಲ್ ಟೆಸ್ಟಿಂಗ್ ಮತ್ತು ವ್ಯಾಕ್ಸಿನೇಷನ್ ರೆಜಿಸ್ಟ್ರೇಷನ್ – ನಿಮ್ಮ ಆರೋಗ್ಯದ ಕಡೆ ನಮ್ಮ ಹೆಜ್ಜೆ ಕಾರ್ಯಕ್ರಮಕ್ಕೆ ಜೆ.ಪಿ.ನಗರದಲ್ಲಿರುವ ಜೆ.ಎಸ್.ಎಸ್ ಪಬ್ಲಿಕ್ ಶಾಲೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ  ಶಾಸಕ ಎಸ್.ಎ ರಾಮದಾಸ್ ಮಾತನಾಡಿ ಇಡೀ ದೇಶದಲ್ಲಿಯೇ ಇಂತಹ ಅಭಿಯಾನ ನಡೆದಿಲ್ಲ ಕೆ.ಆರ್ ಕ್ಷೇತ್ರದಲ್ಲಿ ಬರುವ 270 ಬೂತ್ ಗಳಲ್ಲಿ, 100 ಕೇಂದ್ರಗಳಲ್ಲಿ ಈ ಅಭಿಯಾನ ಎರಡು ದಿನಗಳ ಕಾಲ ನಡೆಯಲಿದೆ. ಕೆ.ಆರ್ ಕ್ಷೇತ್ರವನ್ನ ಕೊರೊನಾ ಮುಕ್ತ ಮಾಡಬೇಕೆಂದು ದೊಡ್ಡ ಹೆಜ್ಜೆ ಇಟ್ಟಿದ್ದೇವೆ. ದೇಶದಲ್ಲಿ ಕೋವಿಡ್ ಪಾಸಿಟಿವಿಟಿ 5 ಕ್ಕಿಂತ ಕಡಿಮೆ ಇದ್ದಾಗ ಮೈಸೂರಿನಲ್ಲಿ 15 ಕ್ಕಿಂತ ಹೆಚ್ಚಿದೆ ಎಂದಾಗ ಆತಂಕವಾಗಿತ್ತು. ಇದಕ್ಕಾಗಿಯೇ ನಮ್ಮ ಕಚೇರಿಯಲ್ಲಿ ಪಾಲಿಕಾ ಆಯುಕ್ತರು ಹಾಗೂ ಪೊಲೀಸ್ ಅಧಿಕಾರಿಗಳೊಡನೆ ಚರ್ಚಿಸಿ ಈ ರೀತಿಯ ಅಭಿಯಾನ ಮಾಡಬೇಕು ಎಂದು ನಿರ್ಧಾರ ಮಾಡಿದೆವು. ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನ ಅಂದು ಪ್ರಧಾನಿ ಮೋದಿಯವರ ಆಶಯದಂತೆ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆಯನ್ನು ದೇಶಾದ್ಯಂತ ನೀಡಲಾಗುವುದು ಎಂದು ತಿಳಿಸಿದರು.

16 ಮತ್ತು 17 ನೆ ತಾರೀಖಿನಂದು ಬಂದು ಕೋವಿಡ್ ಟೆಸ್ಟ್ ಮಾಡಿಸಿಕೊಂಡವರು ಅಂದೇ ಲಸಿಕೆಗೆ ರಿಜಿಸ್ಟರ್ ಮಾಡಿರುತ್ತಾರೆ 21 ರಿಂದ    ಅದದೇ ಬೂತ್ ಗಳಲ್ಲಿ ಅವರುಗಳಿಗೆ ಲಸಿಕೆ ನೀಡಲಾಗುತ್ತದೆ. ಇಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿ ರಿಸಲ್ಟ್ ಬೇಗ ಕೊಡುವುದಕ್ಕೋಸ್ಕರ ನಾವು ಬೇರೆ ಜಿಲ್ಲೆಗಳಿಗೆ ಕೋವಿಡ್ ಸ್ವ್ಯಾಬ್ ಗಳನ್ನು ಕಳಿಸಲಿದ್ದೇವೆ. ಜುಲೈ 01 ವೈದ್ಯರ ದಿನದ ಮೊದಲು ಮೈಸೂರನ್ನ ಕೋವಿಡ್ ಮುಕ್ತ ಮಾಡುವತ್ತ ಹೆಜ್ಜೆ ಇಟ್ಟಿದ್ದೇವೆ ಎಂದರು.

ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು ಮಾತನಾಡಿ ಮೈಸೂರು ಜಿಲ್ಲೆ ರಾಜ್ಯದಲ್ಲಿ ಆನ್ ಲಾಕ್ ಆಗದಂತಹ 11 ಜಿಲ್ಲೆಗಳ ಪಟ್ಟಿಯ್ಲಲಿದೆ ಈ ಹಿನ್ನೆಲೆಯಲ್ಲಿ ಜಿಲ್ಲಾ ಸಚಿವರು ಹೆಚ್ಚಿನ RTPCR ಟೆಸ್ಟ್ ನಡೆಸಬೇಕು ಎಂದು ಸೂಚಿಸಿದ್ದರು, ಅದೇ ರೀತಿ ಕ್ರಮವನ್ನು ನಾವು ಕೈಗೊಂಡಿದ್ದೇವೆ. ಮೈಸೂರು ಜಿಲ್ಲೆಯಲ್ಲಿ ಪೈಲೆಟ್ ಪ್ರಾಜೆಕ್ಟ್ ಆಗಿ ಕೆ ಆರ್ ಕ್ಷೇತ್ರದಲ್ಲಿ ಮಾಡುತ್ತಿದ್ದೇವೆ ಇದರ ಬಗ್ಗೆ ಚರ್ಚಿಸಿ ಸಾಧಕ ಬಾಧಕಗಳನ್ನ ನೋಡಿಕೊಂಡು ನಂತರ ಇಡೀ ಮೈಸೂರಿಗೆ ವಿಸ್ತರಿಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಜಿಪಂ  ಸಿಇಒ ಎ.ಎಂ.ಯೋಗೀಶ್, ನಗರ ಪಾಲಿಕೆ ಆಯುಕ್ತರಾದ ಲಕ್ಷ್ಮಿಕಾಂತ್ ರೆಡ್ಡಿ, ಉಪ ವಿಭಾಗಾಧಿಕಾರಿ ಡಾ.ಎನ್.ಸಿ.ವೆಂಕಟರಾಜು, ಡಿ.ಎಚ್.ಒ ಡಾ.ಟಿ.ಅಮರ್ ನಾಥ್, ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜು, ಡಿಸಿಪಿ ಗೀತಾ ಪ್ರಸನ್ನ, ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ , ಕೆ.ಆರ್ ಪೊಲೀಸ್ ಎಸಿಪಿ ಪೂರ್ಣಚಂದ್ರ ತೇಜಸ್ವಿ, ಸ್ಥಳೀಯ ನಗರ ಪಾಲಿಕಾ ಸದಸ್ಯರು. ಭಾಜಪಾ ನಗರಾಧ್ಯಕ್ಷರಾದ ಶ್ರೀ ವತ್ಸ,  ಕೆ.ಆರ್ ಕ್ಷೇತ್ರದ ಭಾಜಪಾ ಅಧ್ಯಕ್ಷರಾದ ಎಂ.ವಡಿವೇಲು, ಮುಖಂಡರಾದ ಸಂತೋಷ್ ಶಂಭು, ಜೆ ನಾಗೇಂದ್ರ ಕುಮಾರ್, ಓಂ ಶ್ರೀನಿವಾಸ್,  ಹೇಮಂತ್ ಕುಮಾರ್, ದೇವರಾಜೇ ಗೌಡರು, ವಿವಿಧ ಸಂಘ ಸಂಸ್ಥೆಗಳ ಸ್ವಯಂಸೇವಕರು ಇದ್ದರು.

 

By admin