* ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುವ ಭರವಸೆ

ಬೆಂಗಳೂರು: ಎಪಿಎಂಸಿ ಒಳಗೆ ಯಾವ ರೀತಿ ಸೆಸ್ ಇದೆಯೋ ಹೊರಗೂ ಅದೇ ರೀತಿಯ ನೀತಿ ರೂಪಿಸುವ ಬಗ್ಗೆ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಉಂಟಾಗಿರುವ ಗೊಂದಲಕ್ಕೆ ಶಾಶ್ವತ ಪರಿಹಾರ ಕೊಡುವುದಕ್ಕೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಎಫ್ ಕೆಸಿಸಿಐ ಸಭಾಂಗಣದಲ್ಲಿ ನಡೆದ ಎಪಿಎಂಸಿ ವರ್ತಕರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಶೀಘ್ರದಲ್ಲಿ ಕ್ಯಾಬಿನೆಟ್ ಇದ್ದು, ಇಲ್ಲಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಕೇಳಿಬಂದಿರುವ ಸಮಸ್ಯೆಗಳನ್ನು ಸಂಪುಟದ ಗಮನಕ್ಕೆ ತಂದು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಿತ್ತೇವೆ. ನಾನು ಯಾರಿಗೂ ಅಸಹಕಾರ ಕೊಡುವುದಿಲ್ಲ. ಸಹಕಾರ ಕ್ಷೇತ್ರದಲ್ಲಿ ಸಹಕಾರವನ್ನು ಕೊಡುತ್ತಾ ಬಂದಿದ್ದೇನೆಯೇ ವಿನಹ ಯಾರಿಗೂ ಸಮಸ್ಯೆ ಮಾಡುವುದು ನಮ್ಮ ಉದ್ದೇಶವಲ್ಲ ಎಂದು ತಿಳಿಸಿದರು.

ನಾನು ಸಹಕಾರ ಸಚಿವನಾದ ಮೇಲೆ ಅನೇಕ ಜಿಲ್ಲೆಗಳಿಗೆ ಪ್ರವಾಸ ಮಾಡಿದ್ದೇನೆ. ಅಲ್ಲಿ ರೈತರ ಸಹಿತ ವರ್ತಕರ ಸಮಸ್ಯೆಗಳ ಬಗ್ಗೆ ತಿಳಿದಿದ್ದೇನೆ. ಖಂಡಿತವಾಗಿಯೂ ಸರ್ಕಾರ ಸ್ಪಂದಿಸಲಿದೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

1.30 ರೂಪಾಯಿ ಇದ್ದ ಎಪಿಎಂಸಿ ಸೆಸ್ ಅನ್ನು 1 ರೂಪಾಯಿಗಳಿಗೆ ಮೊದಲು ಇಳಿಸಲಾಗಿತ್ತು. ಕೊನೆಗೆ ಎಲ್ಲರ ಬೇಡಿಕೆಗೆ ಅನುಗುಣವಾಗಿ ಮುಖ್ಯಮಂತ್ರಿಗಳು 35 ಪೈಸೆಗೆ ಇಳಿಸಿ ತೀರ್ಮಾನ ತೆಗೆದುಕೊಂಡಿದ್ದರು. ಆದರೆ, ಇದರಿಂದ ಸರ್ಕಾರಕ್ಕೆ 500 ಕೋಟಿ ರಯು. ನಷ್ಟವಾಗುತ್ತದೆ ಎಂದು ವಿರೋಧ ವ್ಯಕ್ತವಾಯಿತು. ಪುನಃ 1ರೂಪಾಯಿಗೇರಿಸುವ ತೀರ್ಮಾನವನ್ನು ಮುಖ್ಯಮಂತ್ರಿಗಳು ತೆಗೆದುಕೊಂಡಿದ್ದಾರೆ. ಆದರೆ, ಎಪಿಎಂಸಿಯನ್ನು ಮುಚ್ಚುವ ಪ್ರಶ್ನೆಯೇ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಬೇಕೆಂದೇ ಕೆಲವರಿಂದ ವಿರೋಧ
8500 ಎಕರೆ ಎಪಿಎಂಸಿ ಜಾಗವಿದೆ. ಹೀಗಾಗಿ ಇಷ್ಟು ವಿಶಾಲವಾಗಿರುವ ಎಪಿಎಂಸಿಯನ್ನು ಮುಚ್ಚುವುದಿಲ್ಲ. ಕೆಲವರು ಟಿವಿ ಮುಂದೆ ಬೇಕೆಂದೇ ವಿರೋಧ ಮಾಡುತ್ತಿದ್ದಾರೆ. ಆದರೆ, ವರ್ತಕರ ಅಹವಾಲುಗಳನ್ನು ಮುಖ್ಯಮಂತ್ರಿಗಳ ಮುಂದೆ ಪ್ರಾಮಾಣಿಕವಾಗಿಡುತ್ತೇನೆ ಎಂದು ಸಚಿವರು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ವರ್ತಕರ ಅಹವಾಲು ಸ್ವೀಕಾರ
ರೈತರ, ದಲ್ಲಾಳಿಗಳ ಹಾಗೂ ವರ್ತಕರಿಗೆ ಒಂದೇ ನಿಯಮ ಇರಲಿ. ಎಪಿಎಂಸಿ ಒಳಗೆ ಹಾಗೂ ಹೊರಗೆ ಏಕರೂಪ ಶುಲ್ಕ ನಿಗದಿ ಮಾಡಬೇಕು. ರೈತ ಹಾಗೂ ವರ್ತಕನನ್ನು ಸರಿಸಮನಾಗಿ ನೋಡಿಕೊಳ್ಳಬೇಕು. ಎಪಿಎಂಸಿ ಮೂಲಕವೇ ಖರೀದಿಗೆ ಅವಕಾಶ ಕಲ್ಪಿಸಬೇಕು. ಕಾಯ್ದೆ ತಿದ್ದುಪಡಿಯಿಂದ ರೈತರು ಹಾಗೂ ವ್ಯಾಪಾರಸ್ಥರಿಗಿಬ್ಬರಿಗೂ ತೊಂದರೆಯಾಗುತ್ತಿದೆ. ಎಪಿಎಂಸಿ ಒಳಗೊಂದು ದರ ಹೊರಗೊಂದು ದರ ಇರಬಾರದು ಎಂಬಿತ್ಯಾದಿ ಸಮಸ್ಯೆಗಳ ಬಗ್ಗೆ ವರ್ತಕರು ಸಚಿವರ ಗಮನಕ್ಕೆತಂದರು.

ಕಾಂಗ್ರೆಸ್ ಹಿರಿಯ ಮುಖಂಡರು, ವರ್ತಕರೂ ಆದ ಶಂಕರ ಮುನವಳ್ಳಿ, ಹಿರಿಯರಾದ ವೀರಣ್ಣ ಚರಂತಿಮಠ, ಬ್ಯಾಡಗಿ ಮಾಜಿ ಶಾಸಕರಾದ ಸುರೇಶ್ ಗೌಡ ಪಾಟೀಲ್, ಎಪಿಎಂಸಿ ಡೈರೆಕ್ಟರ್ ಕರೀಗೌಡ, ಎಫ್ ಕೆಸಿಸಿಐ ಅಧ್ಯಕ್ಷರಾದ ಪೆರಿಕಲ್ ಎಂ.ಸುಂದರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

By admin