ಕೊರೊನಾ ಸಂಕಷ್ಟದ ನಡುವೆಯೂ ಸಿನಿಮಾವನ್ನು ಶೀಘ್ರವೇ ತೆರೆಗೆ ತರಲು ಅನಿರೀಕ್ಷಿತ ಸಿನಿಮಾ ತಂಡ ಮುಂದಾಗಿದ್ದು, ಈಗಾಗಲೇ ಮೂರು ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರದ ಮೊದಲ ಪೋಸ್ಟರ್ ನ್ನು ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಎರಡನೇ ಪೋಸ್ಟರ್ ನಟಿ  ಶ್ರೀಮತಿ ಗಿರಿಜಾ ಲೋಕೇಶ್‌, ಮೂರನೇ  ಪೋಸ್ಟರನ್ನು ಸಂಗೀತ ನಿರ್ದೇಶಕ ಗುರುಕಿರಣ್‌  ಬಿಡುಗಡೆಗೊಳಿಸಿದ್ದಾರೆ.

ಈಗಾಗಲೇ ಚಿತ್ರತಂಡ ಸಿನಿಮಾದ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿದ್ದು ಸದ್ಯದಲ್ಲಿಯೇ ಚಿತ್ರದ ಟ್ರೇಲರ್ ಬಿಡುಗಡೆಗೆ ಸಿದ್ಧತೆ ನಡೆದಿದೆ.  ಜತೆಗೆ  ಚಿತ್ರವನ್ನು ಚಿತ್ರಮಂದಿರಗಳಲ್ಲಿ ಹಾಗೂ ಓಟಿಟಿ ಪ್ಲಾಟ್‌ ಫಾರ್ಮ್‌ ಗಳಲ್ಲಿ ಬಿಡುಗಡೆ ಮಾಡುವ ತಯಾರಿಯೂ ನಡೆಯುತ್ತಿದೆ.

ಇನ್ನು ಅನಿರೀಕ್ಷಿತ ಚಿತ್ರದ ಬಗ್ಗೆ ಹೇಳಬೇಕೆಂದರೆ ಇದು ಜೀವನದ ನಿರೀಕ್ಷಿತ ತಿರುವುಗಳು ಬದುಕಿನ ಗತಿಯನ್ನೇ ಬದಲಿಸಿ, ಭಗವಂತನೂ ಕಲಿಸದ ಪಾಠವನ್ನು ಕಲಿಸಿಬಿಡುವ ಕಥೆಯಾಗಿದೆ.  ಸಣ್ಣ ಎಳೆಯೊಂದನ್ನಿಟ್ಟುಕೊಂಡು ಪ್ರೇಕ್ಷಕರ ಕುತೂಹಲವನ್ನು ಹಿಡಿದಿಟ್ಟುಕೊಂಡು ಸಾಗುವಂತೆ ಮಾಡುವ ಪ್ರಯತ್ನವನ್ನು  “ಅನಿರೀಕ್ಷಿತ” ಚಿತ್ರದ ಮೂಲಕ ನಿರ್ದೇಶಕರಾದ ಸಂತೋಷ್‌ ಕೊಡೆಂಕೇರಿ ಮಾಡಿದ್ದರೆ ಅದಕ್ಕೆ ಮಿಮಿಕ್ರಿ ದಯಾನಂದ್‌  ಜೀವ ತುಂಬಿಕೊಂಡಿದ್ದಾರೆ. ನಿರ್ದೇಶಕರಾದ ಸಂತೋಷ್‌ ಕೊಡೆಂಕೇರಿ ಚಿತ್ರದ ತಾಂತ್ರಿಕ ವಿನ್ಯಾಸದ ಜವಾಬ್ದಾರಿ ವಹಿಸಿಕೊಂಡು ಇಡೀ ಸಿನೆಮಾದ ನಿರ್ಮಾಣ ವಿನ್ಯಾಸ ವಿಭಿನ್ನವಾಗಿ ನಿರ್ವಹಿಸಿರುವುದು ವಿಶೇಷವಾಗಿದೆ.

ಬಹಳಷ್ಟು ಯಶಸ್ವೀ ಸಿನೆಮಾಗಳಿಗೆ ಸಂಗೀತ ನೀಡಿದ್ದ ಸಂಗೀತ ನಿರ್ದೇಶಕರಾದ ಗುರುಕಿರಣ್‌  ಈ ಚಿತ್ರದ ಸಂಗೀತಕ್ಕಾಗಿ ವಿಭಿನ್ನ ಶೈಲಿಯ ನಿರೂಪಣೆ ಬಳಸಿ ಇಡೀ ಚಿತ್ರದ ಕುತೂಹಲ ಮತ್ತು ಘಟನೆಗಳನ್ನು ಬೆಚ್ಚಿಬೀಳಿಸುವ ಹಾಗೂ ಮನಮಟ್ಟುವ ಭಾವುಕತೆಗಳ ಸ್ಪರ್ಶಕ್ಕೆ ತಮ್ಮದೇ ಆದ ಮಾಂತ್ರಿಕ ಸಂಗೀತದ ಸ್ಪರ್ಶ ನೀಡಿದ್ದಾರೆ. ಸಿನಿಮಾಟೋಗ್ರಾಫರ್‌ ಆಗಿ ಜೀವನ್‌ ಗೌಡ ಇರುವಷ್ಟೇ ನೆರಳು ಬೆಳಕು ಬಳಸಿಕೊಂಡು ಸಿಕ್ಕಷ್ಟೆ ವಾತಾವರಣ, ಇದ್ದಷ್ಟೇ ತಂತ್ರಜ್ಞರನ್ನು ಬಳಸಿ ಅದರಲ್ಲೂ ಯಾವುದೇ ಸಿನೆಮಾದ ಕ್ವಾಲಿಟಿಗೂ ಕಮ್ಮಿಯಿಲ್ಲದಂತೆ ತಮ್ಮ ಇತಿಮಿತಿಯಲ್ಲಿ ಚಿತ್ರೀಕರಣ ಮಾಡುವ ಮೂಲಕ ಗಮನಸೆಳೆದಿದ್ದಾರೆ.ಚಿತ್ರದ ಕಥೆಯ ಓಟ ಚಿತ್ರದ ವೇಗವನ್ನು ಪ್ರೇಕ್ಷಕನ ಹಿಡಿತಕ್ಕೆ ತಕ್ಕಂತೆ ಮಾಡುವಲ್ಲಿ  ಸಂಕಲನಕಾರ ರಘು ಯಶಸ್ವಿಯಾಗಿದ್ದಾರೆ. ಇನ್ನು ತಮ್ಮ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ನಟ, ನಿರ್ದೇಶಕರಾಗಿ ಮಿಮಿಕ್ರಿ ದಯಾನಂದ್‌  ಜೀವ ತುಂಬಿದ್ದಾರೆ.

ಇಷ್ಟೆಲ್ಲ ಆದ ಬಳಿಕ ಸಿನಿಮಾದ ಬಗ್ಗೆ ಹೇಳದೆ ಹೋದರೆ ಹೇಗೆ… ಐವತ್ತೈದು ವರ್ಷ ದಾಟಿ, ಇನ್ನೇನು ರಿಟರ್ಡ್‌ ಮೆಂಟಿಗೆ ಹತ್ತಿರವಿರುವ ಬೇಜವಾಬ್ಧಾರಿ, ಉಡಾಫೆ ಮನಸ್ಥಿತಿಯ ಪೋಲೀಸ್‌ ಕಾನ್ ಸ್ಟೇಬಲ್‌  ಒಬ್ಬ, ತನ್ನ ಬದುಕಿನ ಮಧ್ಯಂತರದಲ್ಲಿ, ತನ್ನ ಇಲಾಖೆಯ ಸೇವೆಯಲ್ಲಿರುವಾಗ ತಮ್ಮ ಸುಪರ್ಧಿಗೆ ಬರುವ ಕೇಸೊ೦ದರ ಜಾಡು ಹಿಡಿದು, ಅದರ ರಹಸ್ಯದ ಪರಿಣಾಮ

ಬೀರಿದಂತೆಲ್ಲ ಅದರೊಂದಿಗೆ ತಳುಕು ಹಾಕಿಕೊಂಡ ತನ್ನ ಜೀವನದ ಘಟನೆಗಳಿಗೆ ಹೋಲಿಕೆ ಆಗುವುದರೊಂದಿಗೆ, ತನ್ನ ಬದುಕಿನ ಘಟನೆಗಳ ಮೆಲುಕಿನೊಂದಿಗೆ ತನ್ನ ತಪ್ಪಿನ ಅರಿವಾಗಿ, ತನ್ನ ಬೇಜವಬ್ಧಾರಿತನಗಳಿಗೆ ಮತ್ತು ಉಡಾಫೆಯ ಬದುಕಿಗೆ ಭವಿಷ್ಯದಲ್ಲಿ, ಉತ್ತರ ಕಂಡು ಕೊಂಡು, ಪಶ್ಚಾತ್ತಾಪದಿ೦ದ ಪ್ರಾಯಶ್ಚಿಕ್ಕೊಳಗಾಗುವುದೇ “ಅನಿರೀಕ್ಷಿತ” ಚಿತ್ರದ ಸಾರಾಂಶವಾಗಿದೆ.

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಕೂಡ ಊಹೆಗೂ ನಿಲುಕದ ಅನಿರೀಕ್ಷಿತ ತಿರುವುಗಳು ಜೀವನದಲ್ಲಿ ಮಹತ್ತರವಾದ ತಿರುವುಗಳನ್ನು ಸೃಷ್ಠಿ ಮಾಡಿ ಬಿಡುತ್ತವೆ. ಹಾಗೆಯೇ ಅನಿರೀಕ್ಷಿತವಾದ ಸಂಭವಗಳಿಂದ, ಅನಿರೀಕ್ಷಿತ ನಿರ್ಧಾರಗಳಿಂದ ಆದ, ಅನಿರೀಕ್ಷಿತ ಬದಲಾವಣೆಯ ಮಹತ್ವದ ಸಾಧನೆಯೇ “ಅನಿರೀಕ್ಷಿತ”ಸಿನೆಮಾದ ಸೃಷ್ಠಿ.

ಅನಿರೀಕ್ಷಿತ ಲಾಕ್‌ಡೌನ್‌ ಸಮಯದಲ್ಲಿ, ಹದಿಮೂರು ಜನ ಕ್ರಿಯಾಶೀಲ ಹಾಗೂ ಪ್ರತಿಭಾವಂತರ ತ೦ಡ, ಒಂದೇ ಚಿತ್ರೀಕರಣ ಸ್ಥಳದಲ್ಲಿ, ಅದನ್ನೇ ನಾಲ್ಕು ಲೊಕೇಷನ್‌ ಗಳಂತೆ ಬಳಸಿ, ಕೇವಲ ಇಬ್ಬರೇ ಕಲಾವಿದರೊಂದಿಗೆ, ಭಾವನಾತ್ಮಕವಾದ ಮತ್ತು ತಾತ್ವೀಕವಾದ ಕಥೆಯ ಹಂದರವನ್ನು ವಿಭಿನ್ನ ಕುತೂಹಲಕಾರಿಯಾದ ನಿರೂಪಣೆಯೊಂದಿಗೆ, ಬಹಳಷ್ಟು ಬದಲಾವಣೆಯೊಂದಿಗೆ, ಹಲವಾರು ಪ್ರಯೋಗಗಳೊಂದಿಗೆ, ಲಾಕ್‌ ಡೌನ್‌ ಸಮಯದಲ್ಲೂ ಸುಮ್ಮನಿರದೆ ಸದುಪಯೋಗ ಮಾಡಿಕೊಂಡು, ಎಲ್ಲಾ ಮುನ್ನೆಚ್ಚರಿಕೆಗಳನ್ನೂ ವಹಿಸಿ, ಚಿತ್ರೀಕರಣ ಮಾಡಿ, ಸಿನೆಮಾ ನಿರ್ಮಾಣದ ಎಲ್ಲಾ ಕೆಲಸ ಮುಗಿಸಿಕೊಂಡು, ಬಿಡುಗಡೆಗೆ ಸಿದ್ಧ ಮಾಡಿರುವ ಹೊಸ ಪ್ರಯತ್ನವೇ “ಅನಿರೀಕ್ಷಿತ” ಚಿತ್ರದ ಸಾಧನೆಯೂ ಹೌದು.

ಚಿತ್ರವನ್ನು ಎಸ್‌.ಕೆ. ಟಾಕೀಸ್‌ ನಿರ್ಮಾಣ ಸಂಸ್ಥೆ  ಯಡಿ ನಿರ್ಮಾಪಕ ಶಾ೦ತ ಕುಮಾರ್‌ ನಿರ್ಮಿಸಿದ್ದು, ಸಹ-ನಿರ್ಮಾಪಕ, ನಿರ್ದೇಶಕರಾಗಿ ಸ೦ತೋಷ್‌ ಕೊಡಂಕೇರಿ, ನಟನೆ, ನಿರ್ಮಾಣ, ಕಥೆ ನಿರ್ದೇಶನವನ್ನು ಮಿಮಿಕ್ರಿ ದಯಾನಂದ್ ಮಾಡಿದ್ದಾರೆ. ಛಾಯಾಗ್ರಹಣ  ಜೀವನ್‌ ಗೌಡ, ಸಂಕಲನ ಯು ಎಂ ಎಸ್ ಅವರದ್ದಾಗಿದೆ.

 

By admin