ಚಾಮರಾಜನಗರ: ರಾಜ್ಯಸರ್ಕಾರದ ವಿನೂತನ ಯೋಜನೆ ‘ಕಂದಾಯ ದಾಖಲೆ ಜನರ ಮನೆ ಬಾಗಿಲಿಗೆ’ ಕಾರ್ಯಕ್ರಮಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಕೂಡ್ಲೂರಿನಲ್ಲಿಂದು ಚಾಲನೆ ನೀಡಿದರು.

ಚಾಮರಾಜನಗರ ತಾಲೂಕಿನ ಕೂಡ್ಲೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿಂದು ಕಂದಾಯ ಇಲಾಖೆ ವತಿಯಿಂದ ಕಾರ್ಯಕ್ರಮ ಅಯೋಜಿಸಲಾಗಿತ್ತು.
ಇದೇ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಕಂದಾಯ ದಾಖಲೆ ಜನರ ಮನೆ ಬಾಗಿಲಿಗೆ ಕಾರ್ಯಕ್ರಮ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಜನಸಾಮಾನ್ಯರು ತಮಗೆ ಅವಶ್ಯವಾಗಿರುವ ದಾಖಲೆಗಳನ್ನು ಪಡೆಯಲು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವುದೇ ಯೋಜನೆಯ ಉದ್ದೇಶವಾಗಿದೆ ಎಂದರು.
ಸಾರ್ವಜನಿಕರು, ರೈತರಿಗೆ ದಾಖಲೆಗಳನ್ನು ನೀಡಲು ಕಾನೂನಿನಡಿ ಅವಕಾಶವಿದೆ. ಜನರಿಗೆ ಒಂದೇ ಸೂರಿನಡಿ ಆರ್.ಟಿ.ಸಿ, ಜಾತಿ ಪ್ರಮಾಣಪತ್ರ, ಆದಾಯ, ಪಿಂಚಣಿ, ಅಟ್ಲಾಸ್(ನಕ್ಷೆ), ಐ.ಎಲ್.ಆರ್ ಇನ್ನಿತರೆ ದಾಖಲೆಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಸರ್ಕಾರವು ಕಂದಾಯ ದಾಖಲೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವುದರಿಂದ ಸಾರ್ವಜನಿಕರಿಗೆ ಸಮಯ, ಶ್ರಮ ಉಳಿತಾಯವಾಗಲಿದೆ. ಜನತೆ ಯೋಜನೆಯ ಸಧ್ಭಳಕೆ ಮಾಡಿಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿಯವರು ತಿಳಿಸಿದರು.
ಕಂದಾಯ ದಾಖಲೆ ಜನರ ಮನೆ ಬಾಗಿಲಿಗೆ ಕಾರ್ಯಕ್ರಮದಡಿ ಇಂದು ಸಾಂಕೇತಿಕವಾಗಿ ದಾಖಲೆಗಳನ್ನು ಜನರ ಮನೆಮನೆಗೆ ತಲುಪಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ. ವಿತರಣೆಯಾಗಿರುವ ದಾಖಲೆಗಳಲ್ಲಿ ಯಾವುದೇ ಲೋಪ ಕಂಡುಬಂದರೆ ಮಾರ್ಚ್ ೨೧ರಿಂದ ೨೬ರವರೆಗೆ ಸಂಬಂಧಪಟ್ಟ ನಾಡಕಚೇರಿ, ಅಟಲ್ಜೀ ಜನಸ್ನೇಹಿ ಕೇಂದ್ರಗಳಲ್ಲಿ ಸರಿಪಡಿಸಿಕೊಳ್ಳಬಹುದು. ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಯೋಜನೆಯ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಮನವಿ ಮಾಡಿದರು.

ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ ಅವರು ಮಾತನಾಡಿ ಕಂದಾಯ ದಾಖಲೆ ಜನರ ಮನೆ ಬಾಗಿಲಿಗೆ ಕಾರ್ಯಕ್ರಮವನ್ನು ಇಂದು ರಾಜ್ಯಾದ್ಯಂತ ಆರಂಭಿಸಲಾಗಿದೆ. ತಾಲೂಕಿನಲ್ಲಿ ೧ ಲಕ್ಷದ ೩೫ ಸಾವಿರ ರೈತರಿದ್ದಾರೆ. ಕಚೇರಿಗೆ ರೈತರ ಅಲೆದಾಟ ತಪ್ಪಿಸಿ ಅನುಕೂಲ ಕಲ್ಪಿಸುವ ಹಿತದೃಷ್ಠಿಯಿಂದ ಗ್ರಾಮಲೆಕ್ಕಿಗರು, ಗ್ರಾಮ ಸಹಾಯಕರ ಮೂಲಕ ರೈತರ ಮನೆ ಬಾಗಿಲಿಗೆ ದಾಖಲೆಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಕೂಡ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಯೋಗೇಶ್ವರಿ, ಸದಸ್ಯರಾದ ನಾರಾಯಣಸ್ವಾಮಿ, ಮಹದೇವಸ್ವಾಮಿ, ವಿನೋದ, ಬಸಮ್ಮಣ್ಣಿ, ಚಂದ್ರು, ಮಂಜುಳ, ಕಂದಾಯ ನಿರೀಕ್ಷಕ ಧೂಳಪ್ಪ, ಗ್ರಾಮ ಲೆಕ್ಕಾಧಿಕಾರಿ ರಮೇಶ್, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ರಂಜಿತ ಇತರರು ಹಾಜರಿದ್ದರು.
ಕಾರ್ಯಕ್ರಮಕ್ಕೂ ಮೊದಲು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಕಂದಾಯ ಇಲಾಖೆಯಿಂದ ಸಿದ್ದಗೊಳಿಸಲಾಗಿರುವ ದಾಖಲೆಗಳನ್ನು ಗ್ರಾಮದ ಮನೆಮನೆಗೆ ತೆರಳಿ ಫಲಾನುಭವಿಗಳಿಗೆ ವಿತರಿಸಿದರು. ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಆಲಿಸಿದರು.