ಚಾಮರಾಜನಗರ: ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ಎಲ್ಲರೂ ಈ ಹಿಂದಿನಂತೆ ಸಾಮರಸ್ಯ, ಸೌಹಾರ್ದತೆಯಿಂದ ಒಟ್ಟಾಗಿ ನಡೆದುಕೊಂಡು ಹೋಗುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದರು.
ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ಕುಡಿಯುವ ನೀರಿನ ಸಂಬಂಧ ಇತ್ತೀಚೆಗೆ ಉಂಟಾದ ಬಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಹೆಗ್ಗೋಠಾರ ಗ್ರಾಮದಲ್ಲಿ ಇಂದು ಆಯೋಜಿಸಲಾಗಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಹಿಂದಿನ ಕಾಲದಿಂದಲೂ ಗ್ರಾಮದ ಎಲ್ಲ ಕೋಮಿನ ಜನರು ಒಟ್ಟಾಗಿ ಸಾಮರಸ್ಯದಿಂದ ಬಾಳ್ವೆ ನಡೆಸುತ್ತಿದ್ದೀರಿ. ಗೌರವಕ್ಕೆ ಧಕ್ಕೆ ಬರದ ಹಾಗೆ ಎಲ್ಲರೂ ನಡೆದುಕೊಳ್ಳಬೇಕು. ಪರಸ್ಪರ ಸೌಹಾರ್ದಯುತವಾಗಿ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಇರಬೇಕು. ಹಿರಿಯರ ಮಾರ್ಗದರ್ಶನ ಎಲ್ಲರಿಗೂ ಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಮೇಲು ಕೀಳು ಭಾವನೆ ಯಾರಿಗೂ ಬೇಡ. ಎಲ್ಲ ಸಮುದಾಯದವರು ಒಟ್ಟಾಗಿ ನಡೆಯಬೇಕಿದೆ. ಇದಕ್ಕೆ ಪೂರಕವಾಗಿ ಜಿಲ್ಲಾಡಳಿತ ಎಲ್ಲ ಸಹಾಯ ಸಹಕಾರ ನೀಡಲಿದೆ. ಗ್ರಾಮದ ದೇವಾಲಯದ ವಿಷಯದಲ್ಲಿಯೂ ಸಹ ಯಾವುದೇ ತಾರತಮ್ಯ ಮಾಡಬಾರದು. ಇತರೆ ಸಮುದಾಯಗಳಿಗೆ ಯಾವ ರೀತಿ ಅವಕಾಶ ಗೌರವ ನೀಡಲಾಗುತ್ತಿದೆಯೋ ಅದೇ ರೀತಿ ದೇವಾಲಯ ವಿಚಾರದಲ್ಲಿಯೂ ಸಮಾನವಾಗಿ ನಡೆದುಕೊಳ್ಳಬೇಕು. ಗೌರವಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕು ಎಂದರು.
ಬಿನ್ನಾಭಿಪ್ರಾಯಗಳನ್ನು ಮರೆತು ಊರಿನಲ್ಲಿ ಎಲ್ಲ ಕೋಮಿನವರು ಒಂದೇ ಎನ್ನುವ ರೀತಿ ಇರಬೇಕು. ಸಮಾಜ ಬದಲಾವಣೆಗೆ ಮೊದಲು ನಾವು ಬದಲಾಗಬೇಕು. ಆಗ ಮಾತ್ರ ಸುಧಾರಣೆ ಕಾಣಬಹುದು. ಪರಸ್ಪರ ಗೌರವಿಸಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ತಿಳಿಸಿದರು.
ಇದೇ ವೇಳೆ ಗ್ರಾಮದ ವಿವಿಧ ಸಮುದಾಯಗಳ ಮುಖಂಡರು ಮಾತನಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ. ಉದೇಶ, ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದೀಪ, ಗ್ರೇಡ್-೨ ತಹಶೀಲ್ದಾರ್ ಭಾರತಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕರಾದ ಮಲ್ಲಿಕಾರ್ಜುನ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ, ಇತರರು ಉಪಸ್ಥಿತರಿದ್ದರು.
